Advertisement

ಕೈಯೊಳಗಿನ ಅಸಮಾಧಾನದ ಸತ್ಯಶೋಧ

08:39 AM Jul 19, 2019 | Suhan S |

ಧಾರವಾಡ: ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಗುರುವಾರ ಜರುಗಿದ ಕೆಪಿಸಿಸಿ ಸತ್ಯಶೋಧನಾ ಸಮಿತಿ ಸಭೆಯಲ್ಲಿ ಕೈ ಕಾರ್ಯಕರ್ತರು ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಗದ್ದಲ ಉಂಟಾದ ಘಟನೆ ನಡೆದಿದೆ.

Advertisement

ಸಮಿತಿ ಸದಸ್ಯರಾದ ಬಸವರಾಜ ರಾಯರೆಡ್ಡಿ, ಸುದರ್ಶನ, ವೀರಕುಮಾರ ಪಾಟೀಲ ಅವರ ಸಮ್ಮುಖ ನಡೆದ ಸಭೆಯಲ್ಲಿ ಮಾಧ್ಯಮಗಳ ಪ್ರವೇಶ ಕಂಡು ವೇದಿಕೆ ಕಾರ್ಯಕ್ರಮದ ರೂಪುರೇಷೆಯನ್ನೇ ಬದಲಾವಣೆ ಮಾಡಲಾಯಿತು.

ಬಸವರಾಜ ರಾಯರಡ್ಡಿ ಅವರು ಭಾಷಣ ಮಾಡುವಾಗ ಶಿವಶಂಕರ ಹಂಪಣ್ಣವರ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ಮಾಧ್ಯಮಗಳ ಎದುರು ಮತ್ತಷ್ಟು ಮುಜುಗರಕ್ಕೆ ಒಳಗಾಗದಂತೆ ಮಾಡಲು ತಮ್ಮ ಭಾಷಣದ ಬಳಿಕ ಕಾರ್ಯಕರ್ತರ ಅಭಿಪ್ರಾಯ ತಿಳಿಯಲು ಬೇರೆ ಕೊಠಡಿಗೆ ಸಭೆ ಸೀಮಿತ ಮಾಡಲಾಯಿತು.

ಈ ಮೂಲಕ ಮಾಧ್ಯಮಗಳನ್ನು ದೂರವಿಟ್ಟು ವಿಧಾನಸಭಾ ಕ್ಷೇತ್ರವಾರು ಮಾಹಿತಿ ಪಡೆಯಲು ಮುಂದಾದ ಸಮಿತಿಯ ತೀರ್ಮಾನಕ್ಕೆ ಪಕ್ಷದ ಮುಖಂಡ ಇಮ್ರಾನ್‌ ಕಳ್ಳಿಮನಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತ್ಯೇಕದ ಬದಲು ಎಲ್ಲರನ್ನೂ ಒಟ್ಟಾಗಿ ಕರೆದು ಚರ್ಚಿಸಿದರೆ ಸಮಸ್ಯೆ ತಿಳಿಯುತ್ತದೆ. ಇದೇ ರೀತಿಯಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೈ ತಪ್ಪುವಂತೆ ಮಾಡಲಾಗಿತ್ತು ಎಂದು ದೂರಿದರು. ಆಗ ಕೆಲವರು ಜಾತಿ ಬಗ್ಗೆ ಮಾತನಾಡುವುದು ಬೇಡ ಎಂದ ಕಾರಣಕ್ಕೆ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿತ್ತು. ಮತ್ತೆ ಎಲ್ಲರನ್ನೂ ಸಮಾಧಾನಪಡಿಸಿ ಸಭೆ ಆರಂಭಿಸಲಾಯಿತು.

ಇದಾದ ಬಳಿಕವೂ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹ ಮಾಡುವಾಗ ಮತ್ತೆ ಇಮ್ರಾನ್‌ ಕಳ್ಳಿಮನಿ ಅವರು ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತಿದ್ದಂತೆ ಇಡೀ ಸಭೆಯಲ್ಲಿ ಮತ್ತೆ ಗೊಂದಲ ಉಂಟಾಯಿತು. ಆಗ ಇಮ್ರಾನ್‌ ಅವರನ್ನು ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಸೇರಿದಂತೆ ಇತರರು ತೀವ್ರ ತರಾಟೆಗೆ ತೆಗೆದುಕೊಂಡರು. ಪರಸ್ಪರ ಮಾತಿನ ಚಕಮಕಿ ಉಂಟಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಆಗ ಮಧ್ಯಪ್ರವೇಶಿಸಿ ರಾಯರಡ್ಡಿ ಸಮಾಧಾನ ಮಾಡಿದರೂ ಫಲಕಾರಿ ಆಗಲಿಲ್ಲ. ಜಾತಿ ವಿಷಯ ಬಂದಾಗ ನಮಗೆ ಮೊದಲು ಜಾತಿ ನಂತರ ಪಕ್ಷ. ಜಾತಿ ವಿಷಯವಾಗಿ ಯಾರೇ ಮಾತನಾಡಿದರೂ ಕೇಳುವುದಿಲ್ಲ ಎಂದು ಇಮ್ರಾನ್‌ ಮೇಲೆ ಕೈ ಮಾಡಲು ಮುಂದಾಗಿದ್ದರು. ಆಗ ಕೆಲವರು ಮಧ್ಯೆ ಪ್ರವೇಶಿಸಿ ಇಮ್ರಾನ್‌ ಕಳ್ಳಿಮನಿ ಅವರನ್ನು ಸಭೆಯಿಂದ ಹೊರತರುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next