Advertisement

ಕಷ್ಟಗಳನ್ನು ಎದುರಿಸೋಣ; “ಓಡಬೇಡಿ ತಿರುಗಿ ನಿಂತು ಎದುರಿಸಿರಿ’ಎಂಬುದು ಜೀವನೋತ್ಸಾಹದ ಮಂತ್ರ

04:04 PM Mar 26, 2021 | Team Udayavani |

ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಪರ್ಯಟನೆ ಮಾಡುತ್ತಿದ್ದ ಸಂದರ್ಭವದು. ಒಂದು ದಿನ ಕಾಶಿಯ ದೇವಾಲಯವೊಂದರ ಪ್ರಾಂಗಣದಿಂದ ಹೊರಟಿದ್ದರು.

Advertisement

ತುಂಟ ಕೋತಿಗಳ ಹಿಂಡೊಂದು ಅವರನ್ನು ಅಟ್ಟಿಸಿಕೊಂಡು ಬಂದಿತು. ಅವರು ಆದಷ್ಟು ವೇಗವಾಗಿ ಓಡಿದರು.

ಕೋತಿಗಳೂ ಸಹ ವೇಗವಾಗಿ ಸ್ವಾಮೀಜಿಯವರ ಬೆನ್ನು ಬಿಡದೇ ಅವರ ಹಿಂದೆಯೇ ಓಡಿಸಿಕೊಂಡು ಹೋದವು. ಸ್ವಾಮೀಜಿ ವೇಗವಾಗಿ ಓಡಿದಂತೆಲ್ಲ, ಕೋತಿಗಳೂ ವೇಗವಾಗಿ ಅವರನ್ನು ಬೆನ್ನಟ್ಟಿದವು. ಅವರಿಗೆ ಸುಸ್ತಾಯಿತು. ಏನು ಮಾಡಬೇಕೆಂದು ತೋಚಲಿಲ್ಲ.

ಆಗ ಆ ಕಡೆ ಹೋಗುತ್ತಿದ್ದ ವೃದ್ಧ ಸನ್ಯಾಸಿಯೊಬ್ಬರು ಕೂಗಿ, ಓಡಬೇಡಿರಿ, ತಿರುಗಿ ನಿಂತು ಎದುರಿಸಿರಿ’ ಎಂದು ಹೇಳಿದರು. ಆ ಕೂಗನ್ನು ಕೇಳಿದೊಡನೆ ಸ್ವಾಮೀಜಿಗೆ ಮಿಂಚಿನ ಸಂಚಲನವಾದಂತಾಯಿತು. ತತ್‌ಕ್ಷಣ ತಿರುಗಿ ನಿಂತರು. ಆಗ ಕೋತಿಗಳು ಕಕ್ಕಾಬಿಕ್ಕಿಯಾಗಿ, ಹೆದರಿ ಪಲಾಯನ ಮಾಡಿದವು.ಆಗ ಸ್ವಾಮೀಜಿ ಜೋರಾಗಿ ನಕ್ಕರು.

ಇದೊಂದು ಘಟನೆ ಮಾತ್ರವಲ್ಲ. ಪ್ರತಿಯೊಬ್ಬರ ಬದುಕಿಗೆ ಒಂದು ರೀತಿಯಲ್ಲಿ ಪ್ರೇರಣಾ ಬಿಂದು, ಜೀವನ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಓಡಬೇಡಿ, ಎದುರಿಸಿ’ ಎಂಬುದು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾದ ಜೀವನ ಸೆಲೆ.

Advertisement

ಪ್ರಕೃತಿಯೂ ಕೂಡ ಇಂತಹ ಅನೇಕ ಜೀವನ ಪಾಠವನ್ನು,ಚೈತನ್ಯ ಶಕ್ತಿಯನ್ನು ನಮಗೆ ನೀಡುತ್ತಲೇ ಇರುತ್ತದೆ. ಹರಿಯುವ ನದಿ ಸಲಿಲವಾಗಿ ಶರಧಿಯನ್ನು ಸೇರಲು ಸಾಧ್ಯವೇ ಇಲ್ಲ. ನಡುವೆ ಅನೇಕ ಬಂಡೆಗಳನ್ನು ಹಾದು, ಗಿಡಗಂಟಿಗಳನ್ನು ಸೀಳಿಕೊಂಡು, ಅಡ್ಡಬಂದಿರುವ ಅಡೆತಡೆಗಳನ್ನು ಹಿಮ್ಮೆಟ್ಟಿ,ಅಂಕುಡೊಂಕಾಗಿ ಹೊಸ ಮಾರ್ಗದಲ್ಲಿ ಹರಿದ ಅನಂತರವೇ ಶರಧಿಯನ್ನು ಸೇರುವುದು. ತನ್ನ ಹರಿವಿಗೆ ಅರ್ಥ ಕಂಡುಕೊಳ್ಳುವುದು. ನದಿ ಹೊಸ ಮಾರ್ಗದ ಹರಿವಿನಿಂದ ಯಶಸ್ವಿಯಾಗಿ ಕಡಲನ್ನು ಸೇರುವಂತೆಯೇ, ನಾವೂ ಕೂಡ ಜೀವನವೆಂಬ ನದಿಯ ಹರಿವಿನಲ್ಲಿ ನಮ್ಮನ್ನು ಬೆಂಬತ್ತಿದ ಸಮಸ್ಯೆಗಳನ್ನು ಎದುರಿಸಿ,ಧೃತಿಗೆಡದೆ ಮುನ್ನುಗ್ಗಿ, ಕಷ್ಟಗಳಿಗೆ ತಿರುಗಿ ನಿಂತು ಸುಖ, ನೆಮ್ಮದಿಯೆಂಬ ಸಾಗರವನ್ನು ತಲುಪಬೇಕು.

ಜೀವನದ ಪಯಣದಲಿ ಅನೇಕ ಸಮಸ್ಯೆಗಳು ನಮ್ಮ ಬೆನ್ನಟ್ಟುತ್ತವೆ. ಕಷ್ಟ ಕಾರ್ಪಣ್ಯಗಳು ನಮ್ಮನ್ನು ಸದಾ ಅಟ್ಟಿಸಿಕೊಂಡು ಬರುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ನಾವು ವೇಗವಾಗಿ ಓಡಲು ಪ್ರಾರಂಭಿಸುತ್ತೇವೆ. ಅವು ಬೆಂಬಿಡದೆ ಕಾಡಿದಾಗ ಜೀವನ’ ಎಂಬ ಓಟದಲ್ಲಿ ಬಳಲಿ ಬೆಂಡಾಗುತ್ತೇವೆ. ಬೆನ್ನಟ್ಟಿದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ದಾರಿ ಕಾಣದಷ್ಟು ಬಸವಳಿಯುತ್ತೇವೆ. ಆಗ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬಂತೆ, ನಮ್ಮನ್ನು ಬೆಂಬತ್ತಿರುವ ಸಮಸ್ಯೆಯನ್ನು ಎದುರಿಸಲೆಂದೇ ಏನಾದರೂ ಒಂದು ಸಕಾರಾತ್ಮಕ ಶಕ್ತಿ ಮಿಂಚಿನಂತೆ ಬರಲೂಬಹುದು.

ಮಿಂಚಂತೆ ಬಂದ ಸಮಸ್ಯಾ ಪರಿಹಾರ ಸೂತ್ರಗಳನ್ನು ಬಿಗಿದಪ್ಪಿಕೊಳ್ಳಬೇಕು. ಸಮಸ್ಯೆಗೆ ಬೆನ್ನು ಹಾಕಿ ಓಡದೆ, ಸೆಡ್ಡು ಹೊಡೆದು ನಿಲ್ಲಬೇಕು. ಬಂದಿರುವ ಅಡೆತಡೆಗಳ ನಿವಾರಣೆಗಾಗಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.ಆಗ ಮಾತ್ರ ಕತ್ತಲಾಗಿ ಬೆದರಿಸಿದ ಕಷ್ಟಗಳು ಮಾಯವಾಗಿ, ಭರವಸೆ ಎಂಬ ಬೆಳಕು ಮೂಡುತ್ತದೆ.

ಕಷ್ಟಗಳಿಂದ ಅತೀ ಹೆಚ್ಚು ಪೆಟ್ಟು ತಿಂದು, ಅದಕ್ಕೆ ಹೆದರಿ ಕಂಗಾಲಾಗದೆ, ಎದುರಿಸಿ ಮುನ್ನಡೆದವರು ಸಮಾಜದಲ್ಲಿ ಮುಂದೆ ಕುಗ್ಗದೇ ಯಶಸ್ವಿ ವ್ಯಕ್ತಿಯಾಗಬಲ್ಲರಲ್ಲದೆ, ಇತರರಿಗೆ ಮಾದರಿಯಾಗಬಲ್ಲರು. “ಓಡಬೇಡಿ ತಿರುಗಿ ನಿಂತು ಎದುರಿಸಿರಿ’ ಎಂಬುದು ನಮಗೆ ಜೀವನೋತ್ಸಾಹದ ಮಂತ್ರವಾಗಿ ಯಶದ ನಗೆ ಬೀರುವಂತಾಗಬೇಕು.

ಭಾರತಿ ಎ., ಕೊಪ್ಪ, ಸಹಶಿಕ್ಷಕಿ, ಸ.ಕಿ.ಪ್ರಾ. ಶಾಲೆ, ಸಣ್ಣಕೆರೆ, ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next