Advertisement

Modi-Xi ಭೇಟಿಯತ್ತ ಕಣ್ಣು: ಜೊಹಾನ್ಸ್‌ಬರ್ಗ್‌ ತಲುಪಿದ ಪ್ರಧಾನಿ ಮೋದಿ

10:44 PM Aug 22, 2023 | Team Udayavani |

ನವದೆಹಲಿ/ಜೊಹಾನ್ಸ್‌ಬರ್ಗ್‌: ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ 2020ರಲ್ಲಿ ಉಂಟಾಗಿದ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವೆ ಹದಗೆಟ್ಟಿರುವ ಸಂಬಂಧದ ನಡುವೆಯೂ ಎರಡೂ ದೇಶಗಳ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಆ.22ರಿಂದ 24ರ ವರೆಗೆ ನಡೆಯಲಿರುವ ಬ್ರಿಕ್ಸ್‌ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜೊಹಾನ್ಸ್‌ಬರ್ಗ್‌ ತಲುಪಿದ್ದಾರೆ. 2019ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಕ್ಸ್‌ ರಾಷ್ಟ್ರಗಳ ಸಮ್ಮೇಳನದಲ್ಲಿ ಒಕ್ಕೂಟದ ನಾಯಕರು ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದಾರೆ.

Advertisement

ಮುಂದಿನ ತಿಂಗಳು ನವದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ20 ರಾಷ್ಟ್ರಗಳ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಹಾಗೂ ಎರಡೂ ರಾಷ್ಟ್ರಗಳ ನಡುವಿನ ಗಡಿ ತಂಟೆ ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ, ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಆದರೆ, ಯಾವ ರೀತಿಯಲ್ಲಿ ಚೀನಾ ಅಧ್ಯಕ್ಷರ ಜತೆಗೆ ಮಾತುಕತೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಮೋಹನ್‌ ಕ್ವಾಟ್ರಾ ತಿಳಿಸಿದ್ದಾರೆ. 2022ರ ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆದ ಜಿ20 ಸಮಾವೇಶದಲ್ಲಿ ಮೋದಿ ಮತ್ತು ಜಿನ್‌ಪಿಂಗ್‌ ಮಾತುಕತೆ ನಡೆಸಿದ್ದರು. ಆಗ ಸಂಬಂಧವನ್ನು ಉತ್ತಮಗೊಳಿಸುವುದರ ಚರ್ಚೆಗಳಾಗಿದ್ದವು.

ಪ್ರಮುಖವಾದದ್ದು:
ಇಡೀ ಸಮ್ಮೇಳನ ರಷ್ಯಾ-ಉಕ್ರೇನ್‌, ಭಾರತ-ಚೀನಾ ನಡುವಿನ ಬಿಗುವಿನ ಸ್ಥಿತಿಯ ಹಿನ್ನೆಲೆಯಲ್ಲಿ ಬಹಳ ಮಹತ್ವ ಪಡೆದಿದೆ. ಇಲ್ಲಿ ಏನು ಬೆಳವಣಿಗೆಗಳಾಗುತ್ತವೆ ಎಂಬ ಆಧಾರದಲ್ಲೇ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ20 ಸಮಾವೇಶಕ್ಕೆ ಕ್ಷಿ ಜಿನ್‌ಪಿಂಗ್‌ ಬರುತ್ತಾರೋ, ಇಲ್ಲವೋ ಎನ್ನುವುದು ಖಚಿತವಾಗುತ್ತದೆ.
ಸ್ಥಳೀಯ ಕರೆನ್ಸಿ ಬಳಕೆಗೆ ಆದ್ಯತೆ: ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಡುಕೊಳ್ಳುವಿಕೆಗೆ ಡಾಲರನ್ನೇ ಗರಿಷ್ಠ ಬಳಸಲಾಗುತ್ತದೆ. ಅದರ ಬದಲು ಸ್ಥಳೀಯ ಕರೆನ್ಸಿಗೆ ಆದ್ಯತೆ ಕೊಡಬೇಕೆನ್ನುವುದು ಭಾರತದ ವಾದವಾಗಿದೆ. ಈಗಾಗಲೇ ಭಾರತ-ಯುಎಇ ನಡುವೆ ರುಪಾಯಿ-ದಿರ್ಹಾಮ್‌ನಲ್ಲಿ ವಹಿವಾಟು ನಡೆಸಲು ಒಪ್ಪಂದವಾಗಿದೆ.

ಬಂಧನ ಭೀತಿ: ಪುಟಿನ್‌ ಗೈರು
ಪ್ರಸಕ್ತ ಸಾಲಿನ ಸಮ್ಮೇಳನಕ್ಕೆ ಜೊಹಾನ್ಸ್‌ಬರ್ಗ್‌ಗೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತೆರಳುತ್ತಿಲ್ಲ. ಉಕ್ರೇನ್‌ನಲ್ಲಿ ಮಕ್ಕಳ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಕೋರ್ಟ್‌ ಪುಟಿನ್‌ ವಿರುದ್ಧ ಬಂಧನದ ವಾರಂಟ್‌ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಅದ್ಧೂರಿ ಸ್ವಾಗತ
ಜೊಹಾನ್ಸ್‌ಬರ್ಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳವಾರ ಅದ್ಧೂರಿ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಲ್ಲಿ ಆ ದೇಶದ ಉಪಾಧ್ಯಕ್ಷ ಪೌಲ್‌ ಮಶಾತಿಲೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ವಿಮಾನ ನಿಲ್ದಾಣದ ಇಕ್ಕೆಲೆಗಳಲ್ಲಿಯೂ ಕೂಡ ಭಾರತೀಯ ಮೂಲದವರು ಪ್ರಧಾನಿಯವರನ್ನು ಕಂಡು ಪುಳಕಗೊಂಡರು. ಪ್ರಧಾನಿಯವರಿಗೆ ದಕ್ಷಿಣ ಆಫ್ರಿಕಾದ ಆರ್ಯ ಸಮಾಜದ ಅಧ್ಯಕ್ಷೆ ಆರತಿ ನಾನಕ್‌ಚಂದ್‌ ಶಾನಂದ್‌ ರಾಖೀ ಕಟ್ಟಿದ್ದಾರೆ. ಬಳಿಕ ಅವರು 2025ರಲ್ಲಿ ನಿರ್ಮಾಣ ಪೂರ್ಣಗೊಳ್ಳಲಿರುವ ಸ್ವಾಮಿ ನಾರಾಯಣ ಮಂದಿರದ ಮಾದರಿ ವೀಕ್ಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next