Advertisement

ಕೋಲ್‌ ನಾಟಕ; ನ.1 ರಿಂದ ಹೆಚ್ಚುವರಿ ಕಲ್ಲಿದ್ದಲು ಪೂರೈಕೆ

06:00 AM Oct 25, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕ್ಷೀಣಿಸಿದ್ದು, ವಿದ್ಯುತ್‌ ಉತ್ಪಾದನೆ ಕುಸಿರುವುದು ನಿಜ. ಆದರೆ ಸದ್ಯದಲ್ಲೇ ನಿತ್ಯ ಸುಮಾರು 9000 ಟನ್‌ ಹೆಚ್ಚುವರಿ ಕಲ್ಲಿದ್ದಲು ಪೂರೈಕೆ ನಿರೀಕ್ಷೆಯಿದ್ದು, ಪರಿಸ್ಥಿತಿ ಸುಧಾರಿಸಲಿದೆ. ಹೀಗಿದ್ದರೂ ಪರಿಸ್ಥಿತಿಯ ಲಾಭ ಪಡೆದು ಕೃತಕ ಅಭಾವ ಸೃಷ್ಟಿಸಿ ವಿದ್ಯುತ್‌ ಖರೀದಿ ನಡೆಸುವ ಹುನ್ನಾರ ನಡೆದಿದೆಯೇ ಎಂಬ ಪ್ರಶ್ನೆ ಮೂಡಿದೆ.

Advertisement

ಏಕೆಂದರೆ ಸಿಂಗರೇಣಿ ಕೊಲಿರೀಸ್‌ ಕಂಪೆನಿ ಲಿಮಿಟೆಡ್‌ (ಎಸ್‌ಸಿಸಿಎಲ್‌)ನೊಂದಿಗೆ ಇತ್ತೀಚೆಗೆ ಹೊಸ ಒಡಂಬಡಿಕೆಯಾಗಿದ್ದು, ನವೆಂಬರ್‌ 1ರಿಂದ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಯಾಗಲಿದೆ. ಇನ್ನೊಂದೆಡೆ ಒಡಿಶಾದ ಮಹಾನದಿ ಕೋಲ್‌ಫೀಲ್ಡ್‌ ಲಿಮಿಟೆಡ್‌ (ಎಂಸಿಎಲ್‌)ನಿಂದ ಅ.27ರಿಂದ ಎರಡು ರೇಕ್‌ (ಒಂದು ರೇಕ್‌ನಲ್ಲಿ 3,500 ಟನ್‌ ಕಲ್ಲಿದ್ದಲು) ಪೂರೈಕೆಯಾಗಲಿದೆ. ಸದ್ಯ ಬೇಡಿಕೆಯ ಬಹುಪಾಲು ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಮಾಸಾಂತ್ಯದಿಂದ ಪರಿಸ್ಥಿತಿ ಸುಧಾರಿಸಲಿದೆ. ಹೀಗಿರುವಾಗ ಲೋಡ್‌ ಶೆಡ್ಡಿಂಗ್‌ನ ಪ್ರಸ್ತಾಪವಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ರಾಜ್ಯದಲ್ಲಿ ಸದ್ಯ ಬೇಡಿಕೆ ಪ್ರಮಾಣ 8500 ಮೆಗಾವ್ಯಾಟ್‌ನಿಂದ 9000 ಮೆಗಾವ್ಯಾಟ್‌ನಷ್ಟಿದೆ. ಬಹುಪಾಲು ಇಷ್ಟೇ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿರುವುದರಿಂದ ತೊಂದರೆ ಅಷ್ಟಾಗಿ ಕಾಣುತ್ತಿಲ್ಲ. ಹಾಗಿದ್ದರೂ ತಾತ್ಕಾಲಿಕವಾಗಿ ತಲೆದೋರುವ ಸಣ್ಣ ಪ್ರಮಾಣದ ಅಭಾವವನ್ನು ಅನಿಯಮಿತ ಲೋಡ್‌ ಶೆಡ್ಡಿಂಗ್‌ ಮೂಲಕ ನಿಯಂತ್ರಿಸಲಾಗುತ್ತಿದೆ ಎನ್ನಲಾಗಿದೆ.

ಸೌರಶಕ್ತಿ ಮೂಲದಿಂದ ನಿತ್ಯ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸರಾಸರಿ 2,500 ಮೆಗಾವ್ಯಾಟ್‌ನಿಂದ 3,000 ಮೆಗಾವ್ಯಾಟ್‌ ವಿದ್ಯುತ್‌ ಪೂರೈಕೆಯಾಗುತ್ತಿದೆ. ಹಾಗಾಗಿ ಹಗಲು ಹೊತ್ತಿನಲ್ಲಿ ಪೂರೈಕೆಗೆ ತೊಂದರೆ ಇಲ್ಲ. ಸಂಜೆ 6ರಿಂದ ಮರುದಿನ ಬೆಳಗ್ಗೆ 10 ಗಂಟೆವರೆಗೆ ವಿದ್ಯುತ್‌ ಪೂರೈಸುವುದು ಸವಾಲು. ಈ ಅವಧಿಯಲ್ಲಿ ಉಷ್ಣ ವಿದ್ಯುತ್‌ ಹಾಗೂ ಜಲವಿದ್ಯುತ್‌ ಉತ್ಪಾದಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಉಷ್ಣ ವಿದ್ಯುತ್‌ ಕ್ಷೀಣಿಸಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಪೂರೈಕೆ ಹೆಚ್ಚಾಗಲಿದೆ ಎಂದು ಇಂಧನ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನೊಂದೆಡೆ ವಿದ್ಯುತ್‌ ಕಡಿತಕ್ಕೆ ಅವಕಾಶವಿಲ್ಲದಂತೆ ಪರಿಸ್ಥಿತಿ ನಿಭಾಯಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಹೀಗಿರುವಾಗ ಲೋಡ್‌ ಶೆಡ್ಡಿಂಗ್‌ನ ಅನಿವಾರ್ಯತೆ ಇದ್ದಂತೆ ಕಾಣುತ್ತಿಲ್ಲ. ಹಾಗಿದ್ದರೂ ಲೋಡ್‌ ಶೆಡ್ಡಿಂಗ್‌ ವಿಚಾರ ಮುನ್ನೆಲೆಗೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಕಲ್ಲಿದ್ದಲು ಕೊರತೆ ಕಾರಣಕ್ಕೆ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಪ್ರಯತ್ನ ನಡೆದಿದೆಯೇ ಎಂಬ ಶಂಕೆಯನ್ನೂ ಮೂಡಿಸದೆ ಇರಲಾರದು.

Advertisement

9000 ಟನ್‌ ಪೂರೈಕೆ
ಎಸ್‌ಸಿಸಿಎಲ್‌ನೊಂದಿಗಿನ ಹೊಸ ಒಡಂಬಡಿಕೆ ಸೇರಿದಂತೆ ಹಿಂದಿನ ಒಪ್ಪಂದಗಳ ಪ್ರಕಾರ ಮಾಸಾಂತ್ಯದಿಂದ ಕಲ್ಲಿದ್ದಲು ಪೂರೈಕೆ ಕನಿಷ್ಠ 9000 ಟನ್‌ ಹೆಚ್ಚಾಗುವ ನಿರೀಕ್ಷೆ ಇದೆ. ಕಲ್ಲಿದ್ದಲು ಗಣಿಗಳಿರುವ ಪ್ರದೇಶಗಳಲ್ಲಿ ಮಳೆ ನಿಂತಿದ್ದು, ಗಣಿಗಾರಿಕೆ ಉತ್ತಮವಾಗಿ ನಡೆದಿರುವುದರಿಂದ ಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ತಾತ್ಕಾಲಿಕವಾಗಿ ಎದುರಾಗಿರುವ ಕೊರತೆ ನಿಭಾಯಿಸಿದರೆ ಮುಂದೆ ಪರಿಸ್ಥಿತಿ ಸುಧಾರಿಸಲಿದೆ. ನಿರೀಕ್ಷೆಯಂತೆ ಕಲ್ಲಿದ್ದಲು ಪೂರೈಕೆಯಾದರೆ ಲೋಡ್‌ ಶೆಡ್ಡಿಂಗ್‌ ಅನಿವಾರ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ಗೆ ಕಲ್ಲಿದ್ದಲು?
ಕೇಂದ್ರ ಸರ್ಕಾರವು ಕಲ್ಲಿದ್ದಲು ಪೂರೈಕೆಯಲ್ಲಿ ತಾರತಮ್ಯ ತೋರುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಆರೋಪಿಸಿದ್ದರು. ಮಹಾರಾಷ್ಟ್ರದಲ್ಲಿರುವ ಡಬ್ಲೂéಸಿಎಲ್‌ ಸಂಸ್ಥೆ ನಿತ್ಯ ಗಣಿಗಾರಿಕೆ ನಡೆಸಿ 18 ರೇಕ್‌ ಕಲ್ಲಿದ್ದಲು ತೆಗೆದರೆ ಅದರಲ್ಲಿ 14 ರೇಕ್‌ ಗುಜರಾತ್‌, ಗೋವಾ ಇತರೆ ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಪೂರೈಕೆಯಾಗಲಿದೆ. ಕರ್ನಾಟಕಕ್ಕೆ ಕೇವಲ ಒಂದು ರೇಕ್‌ ವಿತರಣೆಯಾಗುತ್ತಿದೆ. ಇದರಿಂದಾಗಿಯೇ ಕಲ್ಲಿದ್ದಲು ಕೊರತೆಯುಂಟಾಗಿ ದಾಸ್ತಾನು ಇಲ್ಲದಂತಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಲ್ಲಿದ್ದಲು ಸುಧಾರಿಸಲಿರುವ ಅಂಶಗಳು
– ಬಳ್ಳಾರಿಯ ಬಿಟಿಪಿಎಸ್‌ ಮೂರನೇ ಘಟಕ ಹಾಗೂ ವೈಟಿಪಿಎಸ್‌ನ ಎರಡು ಘಟಕಗಳಿಗೆ “ಇಂಧನ ಪೂರೈಕೆ ಒಪ್ಪಂದ’ದಡಿ (ಎಫ್ಎಸ್‌ಎ) ಕಲ್ಲಿದ್ದಲು ಪೂರೈಕೆ ಸಂಬಂಧ ಎಸ್‌ಸಿಸಿಎಲ್‌ ಸಂಸ್ಥೆಯೊಂದಿಗೆ ಕಳೆದ ಅ.10ರಂದು ಒಡಂಬಡಿಕೆಯಾಗಿದೆ. ಅದರಂತೆ ವಾರ್ಷಿಕವಾಗಿ ವೈಟಿಪಿಎಸ್‌ಗೆ 53 ಲಕ್ಷ ಟನ್‌ ಹಾಗೂ ಬಿಟಿಪಿಎಸ್‌ಗೆ 23 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಬೇಕಿದೆ. ಆದರೆ ಕಲ್ಲಿದ್ದಲು ಪೂರೈಕೆಗೆ ರೈಲ್ವೆ ವ್ಯಾಗನ್‌ ವ್ಯವಸ್ಥೆಗಾಗಿ ಮುಂಚಿತವಾಗಿಯೇ ಕಲ್ಲಿದ್ದಲು ಪೂರೈಕೆ ಪ್ರಮಾಣದ ವಿವರ ಸಲ್ಲಿಸಬೇಕು. ಇತ್ತೀಚೆಗೆ ಒಡಂಬಡಿಕೆಯಾಗಿರುವುದರಿಂದ ವಿವರ ಸಲ್ಲಿಸಿದೆ. ಹಾಗಾಗಿ ನವೆಂಬರ್‌ ಆರಂಭದಿಂದ ಹೆಚ್ಚುವರಿ ಪೂರೈಕೆ ಆರಂಭವಾಗುವ ನಿರೀಕ್ಷೆ ಇದೆ.
– ಒಡಿಶಾದ ಮಹಾನದಿ ಕೋಲ್‌ಫೀಲ್ಡ್‌$Õ ಲಿಮಿಟೆಡ್‌ನಿಂದ (ಎಂಸಿಎಲ್‌) ನಿತ್ಯ ಒಂದು ರೇಕ್‌ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ತಲ್‌ಶೇರ್‌ನಲ್ಲಿ ಸದ್ಯ 60,000 ಟನ್‌ ಕಲ್ಲಿದ್ದಲು ದಾಸ್ತಾನು ಇದ್ದು, ನ.3ರೊಳಗೆ 14 ರೇಕ್‌ ಪೂರೈಕೆಯಾಗಬೇಕಿದೆ. ಹಾಗಾಗಿ ಒಡಿಶಾದಿಂದ ರೈಲು, ಹಡಗಿನಲ್ಲಿ ಆಂಧ್ರದ ಕೃಷ್ಣಪಟ್ಟಣಂಗೆ  ತಲುಪಿ ನಂತರ ರೈಲಿನಲ್ಲಿ ರಾಯಚೂರಿಗೆ ಪೂರೈಕೆಯಾಗಲಿದೆ. ಹಾಗಾಗಿ ಅ.27ರಿಂದ ನಿತ್ಯ ಎರಡು ರೇಕ್‌ ಪೂರೈಕೆ ನಿರೀಕ್ಷೆ ಇದ್ದು, ಆರ್‌ಟಿಪಿಎಸ್‌ನಲ್ಲಿ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ.
– ಒಡಂಬಡಿಕೆ ಪ್ರಕಾರ ಎಸ್‌ಸಿಸಿಎಲ್‌ ನಿಂದ ಶೇ.100ರಷ್ಟು ಕಲ್ಲಿದ್ದಲು ಪೂರೈಸಿದರೆ ನಿತ್ಯ 7.5 ರೇಕ್‌ ಕಲ್ಲಿದ್ದಲು (ಒಂದು ರೇಕ್‌ನಲ್ಲಿ 3,500 ಟನ್‌ ಕಲ್ಲಿದ್ದಲು) ಪೂರೈಸಬೇಕು. ಆದರೆ ಸದ್ಯ 4- 5 ರೇಕ್‌ ಪೂರೈಕೆಯಾಗುತ್ತಿದೆ. ಇದು ಸದ್ಯದಲ್ಲೇ 6 ರೇಕ್‌ ಬರುವ ನಿರೀಕ್ಷೆ ಇದ್ದು, ಪರಿಸ್ಥಿತಿ ನಿಭಾಯಿಸಬಹುದಾಗಿದೆ.
– ಮಹಾರಾಷ್ಟ್ರದ ವೆಸ್ಟರ್ನ್ ಕೋಲ್‌ಫೀಲ್ಡ್‌ ಲಿಮಿಟೆಡ್‌ (ಡಬ್ಲೂéಸಿಎಲ್‌) ಸಂಸ್ಥೆಯು ಒಪ್ಪಂದದ ಪ್ರಮಾಣದಲ್ಲಿ ಆರು ಲಕ್ಷ ಟನ್‌ ಕಲ್ಲಿದ್ದಲು ಬಾಕಿ ಉಳಿಸಿಕೊಂಡಿದೆ. ಸದ್ಯ ಒಂದು ರೇಕ್‌ ಕಲ್ಲಿದ್ದಲು ಪೂರೈಕೆಯಾಗುತ್ತಿದ್ದು, ಇನ್ನೊಂದು ರೇಕ್‌ ಕಲ್ಲಿದ್ದಲು ಪೂರೈಕೆಯಾದರೂ ಪರಿಸ್ಥಿತಿ ಸುಧಾರಿಸಲಿದೆ. ಇದಕ್ಕಾಗಿ ಪ್ರಯತ್ನ ನಡೆದಿದೆ.

ಅ. 24ರ ಬುಧವಾರ ರಾತ್ರಿ 7ರ ಸ್ಥಿತಿಗತಿ
ಕೇಂದ್ರ ಸರ್ಕಾರದಿಂದ ಹಂಚಿಕೆಯಡಿ ಪೂರೈಕೆ- 1930
ಮೆಗಾವ್ಯಾಟ್‌ ಅಸಂಪ್ರದಾಯಿಕ ಮೂಲದ ವಿದ್ಯುತ್‌- 811
ಮೆಗಾವ್ಯಾಟ್‌ ಕೆಪಿಸಿಎಲ್‌ ಉಷ್ಣ ವಿದ್ಯುತ್‌- 1640
ಮೆಗಾವ್ಯಾಟ್‌ ಕೆಪಿಸಿಎಲ್‌ ಜಲವಿದ್ಯುತ್‌- 2467
ಮೆಗಾವ್ಯಾಟ್‌ ಯುಪಿಸಿಎಲ್‌ ಉಷ್ಣ ಸ್ಥಾವರ- 1110
ಮೆಗಾವ್ಯಾಟ್‌ ಜಿಂದಾಲ್‌ ಸ್ಥಾವರ- 600 ಮೆಗಾವ್ಯಾಟ್‌
ಒಟ್ಟು ಪೂರೈಕೆ+ ಉತ್ಪಾದನೆ= 8558 ಮೆಗಾವ್ಯಾಟ್‌
ಒಟ್ಟು ಬೇಡಿಕೆ- 8865 ಮೆಗಾವ್ಯಾಟ್‌
ಕಲ್ಲಿದ್ದಲು ದಾಸ್ತಾನು ಪ್ರಮಾಣ
ಆರ್‌ಟಿಪಿಎಸ್‌- 00
ಬಿಟಿಪಿಎಸ್‌- 36,000 ಟನ್‌
ವೈಟಿಪಿಎಸ್‌- 40,000 ಟನ್‌

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next