Advertisement

ದುಡ್ಡಿನ ಗಿಡ ಮತ್ತು ಕಲ್ಯಾಣ ಯೋಜನೆಗಳ ಖರ್ಚು

06:17 AM Aug 24, 2018 | |

ದೊಡ್ಡ ಮೊತ್ತವನ್ನು ಒಳಗೊಂಡಿರುವ ರೈತರ ಸಾಲಮನ್ನಾ ಬೇಡಿಕೆ ಹಾಗೂ ಇನ್ನಿತರ ನಿರಂತರ ಹಣಕಾಸು ಬೇಡಿಕೆಗಳ ಹಿನ್ನೆಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು (ಅಷ್ಟು ಸುಲಭವಾಗಿ ಹಣ ಹಂಚಲು)””ನಾನೇನು ದುಡ್ಡಿನ ಗಿಡ ನೆಟ್ಟಿದ್ದೇನೆಯೇ?” ಎಂದು ಕೆಲ ದಿನಗಳ ಹಿಂದೆ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಮುಖ್ಯಮಂತ್ರಿಗಳು ಆಡಿದ ಮಾತುಗಳು ಮತ್ತು ಆ ಮಾತುಗಳು ಪ್ರತಿಬಿಂಬಿಸುವ ವಾಸ್ತವ ಸತ್ಯ ನಿಜಕ್ಕೂ ಅರ್ಥ ಮಾಡಿ ಕೊಳ್ಳಬೇಕಾದದ್ದು. ಗಂಭೀರವಾದದ್ದು ಮತ್ತು ದೇಶದ ವಿಶಾಲ ಆರ್ಥಿಕತೆಯ ಹಿನ್ನೆಲೆಯಲ್ಲಿ ಜನಹಿತದಿಂದ ಕೂಡಿದ್ದು ಎಂದೇ ಭಾವನೆ.

Advertisement

ಮೊದಲು ಅವರು ಹೇಳಿದ ಮಾತುಗಳನ್ನು ಅರ್ಥ ಮಾಡಿ ಕೊಳ್ಳೋಣ. ಅವರು ಸೂಚಿಸಿದ್ದೆಂದರೆ ಬಹುಶಃ ವಿಪರೀತವೆನಿಸ ಬಹುದಾದ ಸಾಲಮನ್ನಾ ಅಥವಾ ಸಾಮಾಜಿಕ ಕಲ್ಯಾಣ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಪ್ರಸ್ತುತದಲ್ಲಿ ಇಲ್ಲ ಎನ್ನುವುದು. ಅಂತಹ ವಿಪರೀತ ರೀತಿಯಲ್ಲಿ ಬರುತ್ತಿರುವ ಬೇಡಿಕೆ ಗಳನ್ನು ಈಡೇರಿಸಲು ವ್ಯಾವಹಾರಿಕವಾದ ಸರಕಾರಿ ಆರ್ಥಿಕ ವ್ಯವಸ್ಥೆಯಿಂದ ಸಾಧ್ಯವೇ ಇಲ್ಲ. ಕೆಲವೊಮ್ಮೆ ಫೆಂಟಾಸ್ಟಿಕ್‌ ಆಗಿರುವಂತೆ ಅನಿಸುತ್ತಿರುವ ಸದ್ಯದ ಬೇಡಿಕೆಗಳನ್ನು ಪೂರೈಸಲು ಫೆಂಟಾಸ್ಟಿಕ್‌ ಆಗಿರುವಂತಹ ಆರ್ಥಿಕ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಅಂದರೆ ಮರಗಳ ಮೇಲೆ ಎಲೆ ಬೆಳೆಯುವ ರೀತಿಯಲ್ಲಿ ಹಣಕಾಸು ಪೂರೈಕೆ ಇದ್ದರೆ ಮಾತ್ರ ಸಾಧ್ಯ.
ಆದರೆ ಸದ್ಯದಲ್ಲಿ ಆ ರೀತಿಯ ಮಂತ್ರ ಅಥವಾ ದುಡ್ಡಿನಗಿಡ ಯಾರ ಬಳಿಯೂ ಇಲ್ಲ. ಹೀಗೆ ಮುಖ್ಯಮಂತ್ರಿಗಳು ಹೇಳಿರುವುದರ ಅರ್ಥವೆಂದರೆ ವಿಪರೀತವೆನಿಸುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಈಗ ಸಾಧ್ಯವಿಲ್ಲ. ಅದನ್ನೇ ಅವರು ರೂಪಕವೊಂದರ ಮೂಲಕ ಹೇಳಿದ್ದು. ಸರಳವಾದ ಅರ್ಥವೆಂದರೆ ರಾಜ್ಯದ ಹಣ ಕಾಸಿನ ಸ್ಥಿತಿಯನ್ನು, ಆಯವ್ಯಯ ಗಳನ್ನು ವಾಸ್ತವಿಕತೆಯ ಆಧಾರದ ಮೇಲೆ ಹಾಸಿಗೆ ಇರುವಷ್ಟು ಉದ್ದ ಮಾತ್ರ ಕಾಲು ಚಾಚಿ ನಿಭಾಯಿ ಸಬೇಕಾಗುತ್ತದೆ. ಬೇಡಿಕೆ ಗಳನ್ನು ಪೂರೈಸಲು ಸರ್ಕಾರಗಳಿಗೂ ಒಂದು ಮಿತಿ ಇರುತ್ತದೆ. ತಾತ್ವಿಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಗಳೆರಡೂ “ವೆಲ್‌ ಫೇರ್‌ ಸ್ಟೇಟ್‌’ಗಳೆಂದು ವ್ಯಾಖ್ಯಾನಿಸಲ್ಪ ಟ್ಟಿದ್ದರೂ ಕೂಡ ಸರ್ಕಾರ ಗಳು ತಮ್ಮ ಆರ್ಥಿಕ ಮಿತಿಗಳ ಸೀಮೆ ಗಳನ್ನು ಮೀರಲಾಗುವುದಿಲ್ಲ. ಬಹುಶಃ ಸನ್ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದು ಇದು. ಆರ್ಥಿಕ ಶಿಸ್ತನ್ನು ಮಿರಲಾಗುವುದಿಲ್ಲ ಎನ್ನುವ ಸರಳ ಮಾತು. ಕೇಂದ್ರ ಸರಕಾರವನ್ನು ಮತ್ತು ಬೇರೆ ಬೇರೆ ರಾಜ್ಯ ಸರ್ಕಾರಗಳನ್ನು ಮತ್ತು ಅವು ಸಾಮಾಜಿಕ ಭದ್ರತೆಗಾಗಿ ವ್ಯಯಿಸುತ್ತಿರುವ ಹಣವನ್ನು ಗಮನಿಸಿದಾಗ ಅನಿಸುವುದೆಂದರೆ ಬಹುಶಃ ಅನ್ಯ ಮುಖ್ಯ ಮಂತ್ರಿಗಳಿಂದ ಅಥವಾ ಕೇಂದ್ರ ಸರ್ಕಾರದಿಂದಲೂ ಇಂತಹ ಮಾತು ಮುಂದಿನ ದಿನಗಳಲ್ಲಿ ಬಂದರೂ ಆಶ್ಚರ್ಯ ಇಲ್ಲ. ಇದೇ ಶಬ್ದಗಳಲ್ಲಿ ಬರದಿದ್ದರೂ ಬೇರೆ ಶಬ್ದಗಳಲ್ಲಿ ಬರಬಹುದು. ವಿಷಯ ಒಂದೇ. ಅರ್ಥ ಒಂದೇ.

ಇಂತಹ ಮಾತುಗಳು ಬರುತ್ತಿರುವ ದೇಶದ ರಾಜಕೀಯ ಹಿನ್ನೆಲೆಯನ್ನು ನಾವು ಗಮನಿಸಿಕೊಳ್ಳಬೇಕು. ದೇಶ ತನ್ನನ್ನು ತಾನು ವೆಲ್‌ಫೇರ್‌ ಸ್ಟೇಟ್‌, ಅಂದರೆ “ಕಲ್ಯಾಣರಾಜ್ಯ’ ಎಂದು ಕರೆದು ಕೊಂಡಿದ್ದು ಹೌದು, ಸಂವಿಧಾನದಲ್ಲಿ ಅಡಕವಾಗಿರುವ ಡೈರೆಕ್ಟಿವ್‌ ಪ್ರಿನ್ಸಿಪಲ್ಸ್‌ ಆಫ್ ಸ್ಟೇಟ್‌ ಪಾಲಿಸಿ ಈ ಕುರಿತು ಒತ್ತು ನೀಡುತ್ತದೆ. ಅದೇನೆಂದರೆ ಸರಕಾರಗಳ ಮುಖ್ಯ ಉದ್ದೇಶ ಅಶಕ್ತರ, ದುರ್ಬಲರ, ಸಾಮಾಜಿಕವಾಗಿ ಹಿಂದುಳಿದಿರುವವರ, ಮಹಿಳೆ ಯರ, ಮಕ್ಕಳ ಮತ್ತು ವಿಶೇಷ ಅವಶ್ಯಕತೆ ಇರುವವರ ಕಲ್ಯಾಣ. ಒಟ್ಟಾರೆಯಾಗಿ ಸರ್ಕಾರಗಳ ಗುರಿ ಒಂದು ಇಕ್ವಿಟೆಬಲ್‌, ಜಸ್ಟ್‌ ಮತ್ತು ಫೇರ್‌ ಆದ ಸಮಾಜವನ್ನು ಸೃಷ್ಟಿಸುವುದು. ನಿರ್ದೇಶಕ ತತ್ವಗಳು ಸ್ಥೂಲವಾಗಿ ಒಂದು ಸುಂದರ ಸಮಾಜವನ್ನು ಕಟ್ಟಲು ಮಾರ್ಗದರ್ಶನ ನೀಡುತ್ತವೆ. ಆದರೆ ಪ್ರಶ್ನೆ ಎಂದರೆ ಇಂದು ವಿಷಯಗಳು ನಿರ್ದೇಶಕ ತತ್ವಗಳನ್ನೂ ಮೀರಿ ಬಹಳ ಮುಂದೆ ಹೋಗಿವೆ. ಸ್ವಾತಂತ್ರಾ ನಂತರದ ಮೊದಲಿನ ವರ್ಷಗಳಲ್ಲಿ ಹಾಗೇನೂ ಆಗಿರಲಿಲ್ಲ. ಉದಾಹರಣೆಗೆ ಅಂಬೇಡ್ಕರ್‌ ರಿಸರ್ವೆà ಶನ್‌ ಬೇಡಿಕೆಯನ್ನು ಕೂಡ ತುಂಬ ಎಚ್ಚರದಿಂದ, ಕೇವಲ 
ಒಳ್ಳೆಯ ಸಮಾಜವನ್ನು ಕಟ್ಟುವ ಉದ್ದೇಶದಿಂದ ನಿರೂಪಿಸಿದ್ದರು. ಆದರೆ ಕ್ರಮೇಣ, ಅಂದರೆ ಎಪ್ಪತ್ತನೆಯ ದಶಕದಲ್ಲಿ ರಾಜಕೀಯ ಮೌಲ್ಯಗಳ ಅಧಃಪತನವಾಗುತ್ತಾ ಹೋದಂತೆ “ಕಲ್ಯಾಣರಾಜ್ಯ’ದ ಕಲ್ಪನೆ ರಾಜಕೀಕರಣಗೊಳ್ಳಲು ಆರಂಭವಾಯಿತು ಎಂದೇ ಭಾವನೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮೊದಲು ಇಂತಹ ಕೆಲಸ ಆರಂಭವಾಗಿದ್ದು ಸೀರೆ ಮತ್ತು ಸ್ಟೀಲ್‌ ಪಾತ್ರೆಗಳನ್ನು ಚುನಾವಣಾ ಪೂರ್ವದಲ್ಲಿ ಹಂಚುವುದರ ಮೂಲಕ. ಕ್ರಮೇಣ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಾನವನ್ನು ಬೇರೆ ಪಕ್ಷಗಳು ಆಕ್ರಮಿಸಲು ಪ್ರಯತ್ನಿಸುತ್ತ ಹೋದಂತೆ ಸಮಾಜಕಲ್ಯಾಣ ಕಾರ್ಯಕ್ರಮ ಗಳು ವೇಗ ಪಡೆದುಕೊಂಡವು. 80ರ ದಶಕದ ಕೊನೆಯ ಭಾಗದಲ್ಲಿಯಂತೂ ಇಂತಹ ಪ್ರಯತ್ನಗಳು ಶಿಖರವನ್ನೇರಲು ಆರಂಭಿಸಿದವು. ಅಂದರೆ ಸರ್ಕಾರಗಳು ಎಲ್ಲ ರೀತಿಯ ಭಾಗ್ಯಗಳನ್ನು ಎಲ್ಲ ರೀತಿಯ ಜನರಿಗೆ ಉಚಿತವಾಗಿ, ಧಾರಾಳವಾಗಿ, ಉದಾರವಾಗಿ ಹಂಚಲು ಆರಂಭಿಸಿದವು. ಆಗ ಆರಂಭವಾಗಿದ್ದು ಇಂದು ಎಂತಹ ಸ್ಥಿತಿಗೆ ಹೋಗಿದೆಯೆಂದರೆ ಬಹುಶಃ ಈಗ ಪ್ರಸ್ತುತದಲ್ಲಿರುವ ಎಲ್ಲ ಕಲ್ಯಾಣ ಯೋಜನೆಗಳ, ಭಾಗ್ಯಗಳ ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಹುಡುಗಿಯಾದರೆ ಹುಟ್ಟಿನಿಂದಲೇ ಆರಂಭವಾಗಿ ಗರ್ಭಿಣಿಯಾಗುವುದರಿಂದ ಹಿಡಿದು ಜೀವನ ಪೂರ್ತಿ ಭಾಗ್ಯಗಳಿವೆ. ನಂತರ ಪ್ರತ್ಯೇಕವಾಗಿ ಪ್ರತಿಯೊಂದು ಜಾತಿಯನ್ನೂ, ಧರ್ಮವನ್ನೂ, ಒಳ ಗುಂಪುಗಳನ್ನೂ, ಟ್ರೆçಬಲ್‌ಗ‌ಳನ್ನೂ, ಎಲ್ಲರನ್ನೂ ಒಳಗೊಳ್ಳುವ ಭಾಗ್ಯಗಳಿವೆ. ಈ ಭಾಗ್ಯಗಳು ನಿಜವಾಗಿ ಅವಶ್ಯಕತೆ ಇದ್ದವರಿಗೆ ತಲುಪುತ್ತವೆೆಯೋ ಇಲ್ಲವೋ ಎನ್ನುವ ಪ್ರಶ್ನೆ ಕೂಡ ಆಗಾಗ ಕೇಳಿ ಬರುತ್ತದೆ. ಅನ್ನಭಾಗ್ಯದಿಂದ ಟಿವಿ ಭಾಗ್ಯ, ಕಂಪೂಟ್ಯರ್‌ ಭಾಗ್ಯಗಳವರೆಗೂ ಭಾಗ್ಯಗಳಿವೆ. ಯಾವ ಪಕ್ಷವೂ, ಸರ್ಕಾರವೂ ಬಹುಶಃ ಇದಕ್ಕೆ ಹೊಸದೇನೂ ಅಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಈ ಆಟದಲ್ಲಿ ತೊಡಗಿ ಕೊಂಡವುಗಳೇ! ಮತಗಳಿಗಾಗಿ ಜನರನ್ನು ಓಲೈಸಲು ಇನ್ನೂ ಏನೇನು ಮಾಡಬಹುದು ಎಂಬುದೇ ಬಹುಶಃ ಈಗಲೂ ಹಲವು ಪಕ್ಷಗಳ ತಲೆ ಕೊರೆಯುವ ವಿಷಯ.

ಇಲ್ಲಿ ಒಂದು ಮಾತು ಒಪ್ಪಿಕೊಳ್ಳಬೇಕು. ಹಲವೊಮ್ಮೆ ನಿಜವಾಗಿಯೂ ಭಾಗ್ಯಗಳು ಸಾಮಾಜಿಕ ಪರಿವರ್ತನೆಯ ಉಪಕರಣಗಳಾಗಿವೆ. ಉದಾಹರಣೆಗೆ ಅನ್ನಭಾಗ್ಯದಿಂದ ಕೋಟ್ಯಂತರ ಬಡವರಿಗೆ ಸಹಾಯವಾಗಿದೆ. ಇನ್ನಿತರ ಕೆಲವು ಭಾಗ್ಯಗಳಿಂದಲೂ. ಆದರೆ ಕೊಟ್ಟು ಕೊಟ್ಟು ಸರಕಾರಗಳ ಪರಿಸ್ಥಿತಿ ಏನಾಗಿದೆ ಎಂದರೆ ಹಲವೊಮ್ಮೆ ಅವುಗಳ ಬಳಿ ಈಗ ಹಿಂದಿನಿಂದ ಬಂದ ಯೋಜನೆ ಗಳನ್ನು ಮುಂದುವರಿಸಲು ಹಾಗೂ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಣವೇ ಇಲ್ಲದಂತಾಗಿದೆ. ಸರಕಾರಗಳಿಗೆ ಇಂದು ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿದೆಯಾದರೂ ಅವುಗಳ 
ಹೆಚ್ಚಿನ ಪಾಲು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಖರ್ಚಾಗಿ ಹೋಗುತ್ತದೆ. ಹೀಗಾಗಿ ನಿಜವಾಗಿ ಸರಕಾರಗಳ ಬಳಿ ಅಭಿವೃದ್ಧಿಗಾಗಿ ಅಂದರೆ ದೇಶವನ್ನು ಆಧುನಿಕಗೊಳಿಸಲು, ಯುವಜನತೆಗೆ ಕೌಶಲ್ಯ ತರಬೇತಿ ನೀಡಲು, ಕುಡಿಯಲು ಮತ್ತು ಕೃಷಿಗೆ ನೀರು ಒದಗಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರೇಲ್ವೆ ಸಂಪರ್ಕ ಕಲ್ಪಿಸಲು, ಇತ್ಯಾದಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣತೊಡಗಿ ಸಲು ಹಣಕಾಸಿನ ತೀವ್ರ ಮುಗ್ಗಟ್ಟಿದೆ ಎಂದೇ ಅನಿಸಿಕೆ. ಆಸ್ಪತ್ರೆಗಳು, ಕಾಲೇಜುಗಳು, ರಸ್ತೆಗಳ ನಿರ್ಮಾಣ, ಜಲಾನಯನ ಅಭಿವೃದ್ಧಿ ಯೋಜನೆಗಳು ಬಹುಶಃ ಹಿಂದೆ ಬೀಳುತ್ತಿರುವಂತೆ ಕೂಡ ಅನಿಸುತ್ತಿದೆ. ಇದಕ್ಕೆ ಕಾರಣವೆಂದರೆ ಬಹುಶಃ ವಿಪರೀತ ಮುಂದೆ ಹೋಗಿರುವ ಕಲ್ಯಾಣ ಕಾರ್ಯಕ್ರಮಗಳು. ದುಃಖದ ವಿಷಯವೆಂದರೆ ಈಗೀಗ ಜನತೆಗೆ ಸರಕಾರಗಳಿಂದ ಪಡೆಯುವುದೂ ಒಂದು ಮಜವೇ ಆಗಿ ಹೋದಂತೆ ಅನಿಸುತ್ತಿರುವುದು. ಒಂದು ರೀತಿಯಲ್ಲಿ ಸರಕಾರಗಳು ಹರಿದು ತಿನ್ನಬಹುದಾದ ವ್ಯವಸ್ಥೆಯೆಂದೇ ಕೆಲವು ಭಾಗ್ಯಗಳ ಫ‌ಲಾನುಭವಿಗಳು ಭಾವಿಸಿದಂತೆಯೂ ಇದೆ.

ಭಾಗ್ಯಗಳು ಬೇಡೆಂದೇನೂ ಅಲ್ಲ. ಬಡವರ, ದೀನದಲಿತರ, ಮಹಿಳೆಯರ, ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿ ಸರಕಾರಗಳ ಜವಾಬ್ದಾರಿಯೇ ಸರಿ. ಆದರೆ ಸರ್ಕಾರಗಳು ಸಾಂಸ್ಥಿಕವಾದ ವ್ಯವಸ್ಥೆಗಳು. ಅವು ಆರ್ಥಿಕ ಜವಾಬ್ದಾರಿಯನ್ನು ಮತ್ತು ಮಿತಿಗಳನ್ನು ಹೊಂದಿರುತ್ತವೆ. ಮನಸ್ಸು ಬಂದಂತೆ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ಈ ವಿಷಯವನ್ನು ಜನತೆ ಕೂಡ ಅರ್ಥಮಾಡಿಕೊಳ್ಳಬೇಕು. ಇಲ್ಲವಾದರೆ ಇದು ಲೋಭಿಯೊಬ್ಬ ಎಲ್ಲ ಬಂಗಾರದ ಮೊಟ್ಟೆಗಳನ್ನು ತಾಯಿ ಕೋಳಿಯಿಂದಲೇ ಒಮ್ಮೆಲೇ ಹೊರತೆಗೆಯಲು ಪ್ರಯತ್ನಿಸಿದ ಕಥೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಸಮಗ್ರವಾಗಿ ಕಲ್ಯಾಣ ಯೋಜನೆ
ಗಳ ಕುರಿತು, ಭಾಗ್ಯಗಳ ಕುರಿತು, ಸಾಲಮನ್ನಾಗಳ ಕುರಿತು ಮತ್ತೂಮ್ಮೆ ಯೋಚಿಸಬೇಕಿದೆ. 
ಯೋಚಿಸದಿದ್ದರೆ ರಾಜ್ಯಗಳಿಗೆ, ದೇಶಕ್ಕೆ ಅಭಿವೃದ್ಧಿ ಯೋಜನೆಗಳಿಗೇ ಹಣವೇ ಇಲ್ಲದೆ ಬೊಕ್ಕಸ ದಲ್ಲಿರುವ ಹಣವೆಲ್ಲ ಕಲ್ಯಾಣ ಯೋಜನೆಗಳಿಗೆ ಖರ್ಚಾಗಿ ಹೋಗಿ ಜಾಗತಿಕ ಮಟ್ಟದಲ್ಲಿ ನಮ್ಮ ಬೆಳವಣಿಗೆಯೇ ಕುಸಿಯಬಹುದು. ಪಕ್ಷಗಳು ಕೇವಲ ಸರ್ಕಾರಿ ವೆಚ್ಚದಲ್ಲಿ ಜನಪ್ರಿಯತೆ ಗಳಿಸಲು ಸ್ಪರ್ಧಿಸಿದರೆ ಆ ಕಾಂಪಿಟಿಟಿವ್‌ ಪಾಪ್ಯೂಲಿಸಂನಿಂದಾಗಿ ಇಡೀ  ದೇಶವೇ ಹಣಕ್ಕಾಗಿ “ದುಡ್ಡಿನ ಮರ’ ನೆಡುವ ಪರಿಸ್ಥಿತಿ ಬಂದೀತು!
* ಡಾ. ರಾಮಚಂದ್ರ ಹೆಗಡೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next