Advertisement

Ram Mandir: ಕೋಟಿ ಕನಸುಗಳ ನಿರೀಕ್ಷೆ ಸಾಕಾರ- ಇಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ

12:07 AM Jan 22, 2024 | Team Udayavani |

ಅಯೋಧ್ಯೆ: ಶ್ರೀರಾಮ ಮಂದಿರ ಉದ್ಘಾಟನೆಯ ಅಂತಿಮ ಕಾಲಘಟ್ಟಕ್ಕೆ ಭರತಖಂಡ ಕಾಲಿಟ್ಟಿದೆ. ಶ್ರೀ ರಾಮಲಲ್ಲಾ ತನ್ನ ಜನ್ಮಭೂಮಿಯಲ್ಲೇ ತಲೆಎತ್ತಿರುವ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಡುವ ಶುಭದಿನವಿದು.

Advertisement

ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರ ಮಧ್ಯಾಹ್ನ 12.15ರಿಂದ 12.45ರ ಅಭಿಜಿನ್‌ ಮುಹೂರ್ತದಲ್ಲಿ ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ ಜರಗಲಿದೆ. ಇದು ವಿಗ್ರಹ ಪ್ರತಿಷ್ಠಾ ಪನೆಯ ಅಂತಿಮ ಹಂತವಷ್ಟೇ. ಅದಕ್ಕಿಂತ ಮುಂಚೆಯೇ ಹಲವು ಕ್ರಿಯಾವಿಧಿಗಳು ಆರಂಭವಾಗಿರುತ್ತವೆ. ಪ್ರಾಣ ಪ್ರತಿಷ್ಠಾ ಪನೆಯ ನಂತರವೂ ಕ್ರಿಯಾವಿಧಿಗಳು ಮುಂದುವರಿಯುತ್ತವೆ. ಸೋಮ ವಾರದ ಧಾರ್ಮಿಕ ವಿಧಿಗಳು ಹೀಗಿವೆ…

 ಪ್ರಾಣ ಪ್ರತಿಷ್ಠಾಪನೆ ಅಂದರೇನು?

ಬರೀ ಕಲ್ಲಾಗಿರುವ ವಿಗ್ರಹವನ್ನು ಶಿಲ್ಪಿಯೊಬ್ಬ ಕೆತ್ತಿ ಅದಕ್ಕೊಂದು ರೂಪ ನೀಡುತ್ತಾನೆ. ಆ ರೂಪಕ್ಕೆ ನಿರ್ದಿಷ್ಟ ದೇವಶಕ್ತಿಯ ಚೈತನ್ಯವನ್ನು ತುಂಬುವುದೇ ಪ್ರಾಣಪ್ರತಿಷ್ಠಾಪನೆ. ಸೋಮವಾರ ಬಾಲರಾಮನ ವಿಗ್ರಹಕ್ಕೆ ರಾಮನ ಚೈತನ್ಯ ತುಂಬುವ ಪ್ರಕ್ರಿಯೆ ನಡೆಯಲಿದೆ.

ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ಸೇರಿ ಐವರು ಮಾತ್ರ

Advertisement

ಸೋಮವಾರ ಪ್ರಾಣ ಪ್ರತಿಷ್ಠಾಪನೆಯ ವೇಳೆ ಗರ್ಭಗುಡಿಯಲ್ಲಿ ಕೇವಲ ಐವರು ಮಾತ್ರ ಇರಲಿದ್ದಾರೆ! ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌, ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಮತ್ತು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಇರಲಿದ್ದಾರೆ. ಈ ಐವರ ಸಮ್ಮುಖದಲ್ಲಿ ಅರುಣ್‌ ಯೋಗಿರಾಜ್‌ ಕೆತ್ತಿದ ಮೂರ್ತಿಯ ಕಣ್ಣಿಗೆ ಕಟ್ಟಲಾಗಿರುವ ಪಟ್ಟಿಯನ್ನು ತೆಗೆಯಲಾಗುತ್ತದೆ.

 ಮಂದಿರ ನಿರ್ಮಾಣ ಸಾಗಿಬಂದ ಹಾದಿ

2019: ನ.9 ವಿವಾದಿತ ಭೂಮಿ ರಾಮಲಲ್ಲಾಗೆ ಸೇರಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು.

2020: ಸಂಸತ್‌ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನಿರ್ಮಾಣ ಘೋಷಣೆ

2020: ಆ.5ರಂದು ಪ್ರಧಾನಿ ಮೋದಿಯಿಂದ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

2021: ಜ.15ರಿಂದ ದೇಶಾದ್ಯಂತ ಮಂದಿರಕ್ಕೆ ದೇಣಿಗೆ ಸಂಗ್ರಹ ಕಾರ್ಯ ಆರಂಭ

2021: ಜನವರಿಯಲ್ಲಿ ಮಂದಿರ ನಿರ್ಮಾಣ ಸ್ಥಳದಲ್ಲಿ ಉತ್ಖನನ ಆರಂಭ

2021: ಸೆಪ್ಟೆಂಬರ್‌ನಲ್ಲಿ ಮಂದಿರ ಅಡಿಪಾಯದ ಕಾಮಗಾರಿ ಆರಂಭ

2022: ತ್ವರಿತಗತಿಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ಟ್ರಸ್ಟ್‌ನಿಂದ ಘೋಷಣೆ

2022: ಜನವರಿಯಲ್ಲಿ ಮಂದಿರದ ಕಂಬಗಳು, ಬೀಮ್‌ ಅಳವಡಿಕೆ

2023: ಡಿಸೆಂಬರ್‌ನಲ್ಲಿ ನೆಲಮಹಡಿ ಮತ್ತು ಮೊದಲ ಮಹಡಿ ನಿರ್ಮಾಣ ಪೂರ್ಣ

2024: ಜ.22ರಂದು ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ

70 ವರ್ಷಗಳ ಬಳಿಕ ಮುಖ್ಯ ಮಂದಿರಕ್ಕೆ ತೆರಳಿದ ರಾಮಲಲ್ಲಾ!

ಬರೋಬ್ಬರಿ 70 ವರ್ಷಗಳ ಬಳಿಕ ರಾಮ್‌ಲಲ್ಲಾ ತನ್ನ ಟೆಂಟ್‌ ಬಿಟ್ಟು ಹೊಸ ಮಂದಿರ ಪ್ರವೇಶಿಸಿದ್ದಾನೆ. 1949ರಿಂದ ಅಯೋಧ್ಯೆಯ ತಾತ್ಕಾಲಿಕ ಮಂದಿರದಲ್ಲಿ ರಾಮಲಲ್ಲಾನನ್ನು ಪೂಜಿಸಲಾಗುತ್ತಿತ್ತು. ಈ ವಿಗ್ರಹದ ಎತ್ತರ ಕೇವಲ 6 ಇಂಚು. ಮುಷ್ಟಿಗಾತ್ರವೆಂದು ಹೇಳಬಹುದು! 70 ವರ್ಷಗಳಿಂದ ಪೂಜೆ, ನೈವೇದ್ಯಗಳನ್ನು ಸ್ವೀಕರಿ ಸುತ್ತ ತಾತ್ಕಾಲಿಕ ಮಂದಿರದಲ್ಲಿದ್ದ, ಈ ಪುಟ್ಟ ವಿಗ್ರಹವನ್ನು ಈಗ ನೂತನ ಗರ್ಭಗುಡಿಗೆ ಸ್ಥಳಾಂತರಿ ಸಲಾಗಿದೆ. ಭಾನುವಾರ ರಾತ್ರಿ 8 ಗಂಟೆಗೆ ಶಯನ ಆರತಿ ನೆರವೇ ರಿಸಿ, ಅನಂತರ ರಾಮಲಲ್ಲಾ ಹಾಗೂ ಅದಕ್ಕಿಂತ ಪುಟ್ಟದಾಗಿರುವ ಲಕ್ಷ್ಮಣ, ಭರತ, ಶತ್ರುಘ್ನ, ಹನು ಮಂತನ ವಿಗ್ರಹಗಳನ್ನು ನೂತನ ರಾಮಮಂದಿರದ ಗರ್ಭಗುಡಿಗೆ ಸ್ಥಳಾಂತರಿಸಲಾಗಿದೆ.

ನೂತನ ಗರ್ಭಗುಡಿಯಲ್ಲಿ ಈಗಾಗಲೇ 51 ಇಂಚಿನ, ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಮುಂಭಾಗದಲ್ಲೇ ಹಿಂದಿನ ರಾಮಲಲ್ಲಾ ಹಾಗೂ ಸಹೋದರರ ವಿಗ್ರಹಗಳನ್ನು ಇಡಲಾಗುತ್ತದೆ. ಮುಂದೆ ಇದೇ ಜಾಗದಲ್ಲಿ ಈ ಮೂರ್ತಿಗಳಿಗೆ ಪೂಜೆ ಸಲ್ಲಲಿದೆ. ದೊಡ್ಡ ವಿಗ್ರಹಗಳ ಜೊತೆಗೆ ಹಳೆಯ ವಿಗ್ರಹಗಳ ದರ್ಶನವೂ ಭಕ್ತರಿಗೆ ಲಭ್ಯವಾಗಲಿದೆ.

 ಧಾರ್ಮಿಕ ಕಾರ್ಯಕ್ರಮಗಳಿಗೆ ಮೂರು ತಂಡಗಳು

ರಾಮ ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಮೂರು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡದಲ್ಲಿ ಹಿರಿಯ ಧಾರ್ಮಿಕ ವಿದ್ವಾಂಸ ಸ್ವಾಮಿ ಗೋವಿಂದ ದೇವ್‌ ಗಿರಿ ಇರಲಿದ್ದಾರೆ. ಎರಡನೇ ತಂಡದಲ್ಲಿ ಕಾಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ, ಮೂರನೇ ತಂಡದಲ್ಲಿ ಕಾಶಿಯಿಂದ ಆಗಮಿಸಿದ 21 ಮಂದಿ ಹಿರಿಯ ವಿದ್ವಾಂಸರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಉದ್ಘಾಟನೆ ಬಳಿಕ ಮಂದಿರಕ್ಕೆ ಪುಷ್ಪವೃಷ್ಟಿ

ಉದ್ಘಾಟನೆಯ ಬಳಿಕ ಸೇನಾ ಹೆಲಿಕಾಪ್ಟರ್‌ ಮೂಲಕ ರಾಮ ಮಂದಿರದ ಮೇಲೆ ಪುಷ್ಪವೃಷ್ಟಿ ಮಾಡಲಾಗುತ್ತದೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸಲಿರುವುದರಿಂದ ಅವರ ಭದ್ರತಾ ವ್ಯವಸ್ಥೆಗೆ ತೊಂದರೆಯಾಗದಂತೆ ಪುಷ್ಪವೃಷ್ಟಿ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇಂದು ಅಯೋಧ್ಯೆಯಲ್ಲಿ ಅನುರಣಿಸಲಿದೆ “ಮಂಗಳ ಧ್ವನಿ”

ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಆರಂಭವಾಗುವ ಮುನ್ನ 2 ಗಂಟೆಗಳ ಕಾಲ ಕರ್ನಾಟಕದ ವೀಣೆ ಸೇರಿದಂತೆ  ದೇಶದ ಸುಮಾರು 50ರಷ್ಟು ಸಾಂಪ್ರದಾಯಿಕ ಸಂಗೀತ ವಾದ್ಯಗಳು ರಾಮಮಂದಿರದಲ್ಲಿ ಅನುರಣಿಸಲಿವೆ.

ಅಯೋಧ್ಯೆಯ ಖ್ಯಾತ ಕವಿ ಯತೀಂದ್ರ ಮಿಶ್ರಾ ನೇತೃತ್ವದಲ್ಲಿ “ಮಂಗಳ ಧ್ವನಿ’ ಎಂಬ ಹೆಸರಿನಲ್ಲಿ ಈ ಭಾವ-ಭಕ್ತಿ ಪರವಶತೆಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಬೆಂಬಲದೊಂದಿಗೆ ಇದನ್ನು ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಈ ಸಂಗೀತ ವಾದ್ಯಗಳ ರಸದೌತಣ ಆರಂಭವಾಗಲಿದ್ದು, 2 ಗಂಟೆಗಳ ಕಾಲ ನಡೆಯಲಿದೆ. ಕರ್ನಾಟಕದ ವೀಣೆ, ಉತ್ತರಪ್ರದೇಶದ ಪಖವಾಜ್‌, ಕೊಳಲು ಮತ್ತು ಢೋಲಕ್‌, ಪಂಜಾಬ್‌ನ ಅಲ್ಗೊಜಾ, ಮಹಾರಾಷ್ಟ್ರದ ಸುಂದರಿ, ಒಡಿಶಾದ ಮರ್ದಾಲಾ, ಮಧ್ಯಪ್ರದೇಶದ ಸಂತೂರ್‌, ಮಣಿಪುರದ ಪಂಗ್‌, ಅಸ್ಸಾಂನ ನಗಾಡ ಮತ್ತು ಕಾಳಿ, ಛತ್ತೀಸ್‌ಗಡದ ತಂಬೂರ, ದೆಹಲಿಯ ಶಹನಾಯ್‌, ರಾಜಸ್ಥಾನದ ರಾವಣಹತ, ಪಶ್ಚಿಮ ಬಂಗಾಳದ ಶ್ರಿಖೋಲ್‌ ಮತ್ತು ಸರೋದ್‌, ಆಂಧ್ರಪ್ರದೇಶದ ಘಾಟಂ, ಜಾರ್ಖಂಡ್‌ನ‌ ಸಿತಾರ್‌, ಗುಜರಾತ್‌ನ ಸಂತಾರ್‌, ಬಿಹಾರದ ಪಖವಾಜ್‌, ಉತ್ತರಾಖಂಡದ ಹುಡ್ಕಾ, ತಮಿಳುನಾಡಿನ ನಾಗಸ್ವರಂ, ತವಿಲ್‌, ಮೃದಂಗಗಳ ವಾದ್ಯಗಳು ದೇಗುಲನಗರಿಯಲ್ಲಿ ಮಾರ್ದನಿಸಲಿವೆ.

 ಆಹ್ವಾನಿತರಿಗೆ ಜನ್ಮಭೂಮಿಯ ಮಣ್ಣು, ಲಡ್ಡು ಉಡುಗೊರೆ

ಮಂದಿರ ಉದ್ಘಾಟನೆಗೆ ಆಗಮಿಸಿರುವ ಎಲ್ಲಾ ಆಹ್ವಾನಿತರಿಗೂ ಮಂದಿರ ಟ್ರಸ್ಟ್‌ ವತಿಯಿಂದ ರಾಮ ಜನ್ಮಭೂಮಿಯ ಪವಿತ್ರ ಮೃತ್ತಿಕೆ ತುಂಬಿರುವ ಪೊಟ್ಟಣ ವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಮಂದಿರ ನಿರ್ಮಾಣವಾಗಿರುವ ಭೂಮಿಯ ಈ ಮಣ್ಣು ಶುಭದ ಸಂಕೇತವಾಗಿದ್ದು, ಎಲ್ಲರ ನಿವಾಸಗಳಲ್ಲೂ ಇದನ್ನು ಕೊಂಡೊಯ್ದು ಪೂಜಿಸಲಿ ಎಂಬ ಕಾರಣಕ್ಕೆ ಇದನ್ನು ಕೊಡಲಾಗುತ್ತಿದೆ. ಜತೆಗೆ ಶುದ್ಧ ದೇಸಿ ತುಪ್ಪದಿಂದ ಮಾಡಿದ ಮೋತಿಚೂರ್‌ ಲಡ್ಡುಗಳನ್ನೂ ನೀಡು ವುದಾಗಿ ಟ್ರಸ್ಟ್‌ ಹೇಳಿದೆ. ಮೋದಿ ಅವರಿಗೆ ಮಂದಿರದ 15 ಮೀ. ಎತ್ತರವಿರುವ ಪ್ರತಿಕೃತಿಯನ್ನು ಸೆಣಬಿನ ಬ್ಯಾಗ್‌ನಲ್ಲಿಟ್ಟು ಕೊಡುವುದಾಗಿ ಟ್ರಸ್ಟ್‌ ತಿಳಿಸಿದೆ.

 ಐತಿಹಾಸಿಕ ಛಾಪು ಮೂಡಿಸುವ ಸಮಾರಂಭ

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗಾಗಿ ನೀವು(ಪ್ರಧಾನಿ ಮೋದಿ) ಕಠಿಣ ಅನುಷ್ಠಾನವನ್ನು ಕೈಗೊಂಡಿದ್ದೀರಿ. ಪವಿತ್ರ ಸಂಕೀರ್ಣದಲ್ಲಿ ನೀವು ಕೈಗೊಳ್ಳುವ ಆರತಿ ಹಾಗೂ ಧಾರ್ಮಿಕ ಕ್ರಿಯೆಗಳು ನಮ್ಮ ವಿಶಿಷ್ಟವಾದ ನಾಗರಿಕತೆಯ ಪ್ರಯಾಣದಲ್ಲಿ ಐತಿಹಾಸಿಕ ಛಾಪು ಮೂಡಿಸಲಿದೆ.

 ದ್ರೌಪದಿ ಮುರ್ಮು, ರಾಷ್ಟ್ರಪತಿ  (ಮೋದಿಯವರಿಗೆ ಬರೆದ ಪತ್ರದಲ್ಲಿ)

ಶ್ರೀರಾಮನ ಆಗಮನವನ್ನು ಎಲ್ಲರೂ ಸಂಭ್ರಮಿಸೋಣ

ಅಯೋಧ್ಯೆಗೆ ಶ್ರೀರಾಮನು ಮರಳಿ ಬರುತ್ತಿದ್ದಾನೆ. ಈ ಸಂಭ್ರಮವನ್ನು ನಾವೆಲ್ಲರೂ ಒಂದಾಗಿ ಆಚರಿಸೋಣ. ಪ್ರಭು ಶ್ರೀರಾಮನ ಆದರ್ಶಗಳು, ಬೋಧನೆಗಳು ನಮ್ಮ ಬಾಳಿಗೆ ಬೆಳಕಾಗಲಿ. ಶಾಂತಿ, ಸಮೃದ್ಧಿ, ಸೌಹಾರ್ದತೆಯೆಡೆಗೆ ಸಾಗೋಣ. ಜೈ ಹಿಂದ್‌, ಜೈ ಮಾರಿಷಿಯಸ್‌.

 ಪ್ರವಿಂದ್‌ ಕುಮಾರ್‌ ಜುಗ್ನೌತ್‌, ಮಾರಿಷಿಯಸ್‌ ಪ್ರಧಾನಿ

 ಸನಾತನ ಸಂಸ್ಕೃತಿಯ ಇತಿಹಾಸದಲ್ಲೇ ಸುವರ್ಣಾಧ್ಯಾಯ

ಮಾನವ ನಾಗರಿಕತೆ ಮತ್ತು ಸನಾತನ ಸಂಸ್ಕೃತಿಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಸುದೀರ್ಘ‌ 500 ವರ್ಷಗಳ ನಂತರ ಮರ್ಯದಾ ಪುರೋಷತ್ತಮ ಪ್ರಭು ಶ್ರೀರಾಮಲಲ್ಲಾ ತಮ್ಮ ಜನ್ಮಸ್ಥಳವಾ¨ ಅಯೋಧ್ಯಾಧಾಮದ ಶ್ರೀರಾಮ ಮಂದಿರದಲ್ಲಿ ನೆಲೆಸುತ್ತಿದ್ದಾರೆ. ನಾವೆಲ್ಲರೂ ಈ ಕ್ಷಣಕ್ಕೆ ಸಾಕ್ಷಿಯಾಗೋಣ.

ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಸಿಎಂ

 ರಾಮಲಲ್ಲಾ ಹಣೆಗೆ ಪ್ರತಿ ವರ್ಷ ಸೂರ್ಯ ತಿಲಕ

ಪ್ರತಿ ವರ್ಷ ರಾಮನವಮಿ ದಿನ ಸೂರ್ಯ ರಶ್ಮಿ ರಾಮಲಲ್ಲಾನ ಹಣೆಗೆ ಸ್ಪರ್ಶಿಸುವಂತೆ “ಸೂರ್ಯ ತಿಲಕ’ದ ವಿಶೇಷ ವ್ಯವಸ್ಥೆ ಮಾಡಿದ್ದೇವೆ. 3ನೇ  ಮಹಡಿಯಲ್ಲಿ ಆಫ್ಟಿಕಲ್‌ ಲೆನ್ಸ್‌ ಇರಿಸಲಾಗುತ್ತದೆ. ಇದು ಪೈಪ್‌ಗ್ ಲ್ಲಿ ಇರಿಸಲಾದ ಪ್ರತಿಫ‌ಲಕಗಳ ಮೂಲಕ ಸೂರ್ಯ ಕಿರಣವನ್ನು ನೆಲಮಹಡಿಗೆ ಸಾಗಿಸುತ್ತದೆ.

ಆರ್‌.ಧರ್ಮರಾಜು,  ಸಿಬಿಆರ್‌ಐ ಮುಖ್ಯ ವಿಜ್ಞಾನಿ

 ಭೂಲೋಕದ ಸ್ವರ್ಗಕ್ಕೆ ಬಂದಿರುವ ಖುಷಿ

ಅಯೋಧ್ಯೆ ಈಗ ಭೂಲೋಕದ ಮತ್ತೂಂದು ಸ್ವರ್ಗ ಎಂದರೆ ತಪ್ಪಾಗಲಾರದು. ಇಲ್ಲಿನ ವ್ಯವಸ್ಥೆ ನಿಜಕ್ಕೂ ಅದ್ಭುತವಾಗಿದೆ. ಅರುಣಾಚಲ ಪ್ರದೇಶದಿಂದ ಒಟ್ಟು ನಾಲ್ವರು ಧಾರ್ಮಿಕ ಮುಂದಾಳುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ಹರ್ಷದ ಸಂಗತಿ.

ಮೊಗಿ ಒರಿ,  ಅರುಣಾಚಲದ ಧಾರ್ಮಿಕ ಮುಖಂಡ

 9999 ವಜ್ರಗಳಲ್ಲಿ ಮಂದಿರದ ಪ್ರತಿರೂಪ: ಫೋಟೋ ವೈರಲ್‌

ಗುಜರಾತ್‌ನ ಸೂರತ್‌ ಮೂಲದ ಕಲಾವಿದರೊಬ್ಬರು 9,999 ಪುಟ್ಟ-ಪುಟ್ಟ ವಜ್ರಗಳನ್ನು ಬಳಸಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ಪ್ರತಿರೂಪವನ್ನು ತಯಾರಿಸಿ ದ್ದಾರೆ. ಈ ಫೋಟೋ ಜಾಲ ತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ಕಪ್ಪು ಬೇಸ್‌ ಶೀಟ್‌ನ ಮೇಲೆ ಮಂದಿರ ಚಿತ್ರಣವನ್ನು ತಯಾರಿಸಲಾಗಿದ್ದು, ಮಂದಿರ ಮಾತ್ರವಲ್ಲದೇ, ಜೈಶ್ರೀ ರಾಮ್‌ ಎಂಬ ಬರಹ, ಶ್ರೀರಾಮನ ಚಿತ್ರವನ್ನೂ ವಜ್ರಗಳಿಂದ ರೂಪಿಸಲಾ ಗಿದೆ. ಇನ್ನು ಇದೇ ಸೂರತ್‌ನಿಂದಲೇ ರಾಮ ಮಂದಿರ, ಶ್ರೀರಾಮ, ರಾಮಾಯಣ ಕಥೆ ಇರುವಂಥ ಸೀರೆಯೊಂದನ್ನು ತಯಾರಿಸಿಲಾಗಿದ್ದು, ಸೀತಾದೇವಿಗಾಗಿ ಆ ಸೀರೆಯನ್ನು ರಾಮ ಮಂದಿರಕ್ಕೆ ಕಳುಹಿಸಿಕೊಡಲು ಸಿದ್ಧತೆ ನಡೆಸಲಾಗಿದೆ.

 ಇಂದು ಅಯೋಧ್ಯೆಯ 100 ದೇಗುಲಗಳಲ್ಲಿ ಬೆಳಗಲಿದೆ 10 ಲಕ್ಷ ರಾಮಜ್ಯೋತಿ

ಮಂದಿರದಲ್ಲಿ ಪ್ರಾಣಪ್ರತಿಷ್ಠೆ ನಡೆದ ಬಳಿಕ ಅಯೋಧ್ಯೆಯ 100 ಪ್ರಮುಖ ದೇಗುಲಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 10 ಲಕ್ಷ ರಾಮ ಜ್ಯೋತಿಗಳನ್ನು ಬೆಳಗಿಸಲು ಎಲ್ಲ ಸಿದ್ಧತೆ ನಡೆದಿದೆ. ಅದರ ಹೊರತಾಗಿ ನಗರದ ಅಂಗಡಿ- ಮುಂಗಟ್ಟುಗಳ ಮುಂದೆ, ಧಾರ್ಮಿಕ ಕ್ಷೇತ್ರಗಳಲ್ಲಿ, ಮನೆಗಳಲ್ಲಿ- ಅಂಗಳಗ ಳಲ್ಲೂ ಕೋಟ್ಯಂತರ ರಾಮಜ್ಯೋತಿಗಳು ಬೆಳಗಲಿವೆ. ಪ್ರಧಾನಿ ಮೋದಿ ಅವರು ದೇಶಾದ್ಯಂತ ರಾಮಜ್ಯೋತಿಗಳನ್ನು ಬೆಳಗಿಸಲು ಕರೆ ನೀಡಿದ್ದು, ಅಯೋಧ್ಯೆ ಮಾತ್ರವಲ್ಲದೇ ದೇಶದ ಎಲ್ಲಡೆಯೂ ರಾಮಜ್ಯೋತಿ ಪ್ರಜ್ವಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next