Advertisement

ಮಲ್ಪೆ ಬಂದರು ಕನಸು ಸಾಕಾರಗೊಳ್ಳಲಿ; ಮರಳು ಸಮಸ್ಯೆ ಬಗೆಹರಿಯಲಿ

09:40 AM Jul 29, 2019 | keerthan |

ಸಾಮಾನ್ಯವಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಬರುವುದೇ ಕಡಿಮೆ. ನಮ್ಮ ಅದೃಷ್ಟವೋ ಎಂಬಂತೆ ಎರಡೂ ಕಡೆ ಬಿಜೆಪಿ ಸರಕಾರ ಬಂದಿದೆ. ಜತೆಗೆ ಕರಾವಳಿಯ ಎರಡೂ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ 12 ಹಾಗೂ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಜನಪ್ರತಿನಿಧಿಗಳಿದ್ದಾರೆ. ಕಳೆದ ವರ್ಷ ರಾಜ್ಯ ಸರಕಾರದ ಸಹಕಾರವಿಲ್ಲ ಎನ್ನುತ್ತಿದ್ದರು ನಮ,¾ ಜನಪ್ರತಿನಿಧಿಗಳು. ಈಗ ಆ ಸಬೂಬು ಹೇಳದೇ ನನೆಗುದಿಗೆ ಬಿದ್ದಿರುವ ಜನರಿಗೆ ಪ್ರಯೋಜನಕಾರಿಯಾಗುವ ಹಲವು ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ಜನಪ್ರತಿನಿಧಿಗಳೂ ತಮ್ಮದೇ ಸರಕಾರದ ಬೆನ್ನುಬಿದ್ದು ಯೋಜನೆ ಕಾರ್ಯಗತಗೊಳಿಸುವ ಮೂಲಕ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬೇಕು.

Advertisement

ಆಯುಷ್ಮಾನ್‌ ಭಾರತ್‌
ಆಯುಷ್ಮಾನ್‌ ಭಾರತ್‌ ಕೇಂದ್ರ ಸರಕಾರದ ಯೋಜನೆ. ಆದರೂ ರಾಜ್ಯ ಸರಕಾರ ಆರೋಗ್ಯ ಸಂಬಂಧಿ ತನ್ನ ಯೋಜನೆಯನ್ನು ವಿಲೀನಗೊಳಿಸಿ ನಿಯಮಾವಳಿಗಳನ್ನು ರೂಪಿಸಿದೆ. ಹಾಗಾಗಿ ಮೊದಲೆರಡು ವಿಭಾಗಗಳ ರೋಗಿಗಳು ಸರಕಾರಿ ಆಸ್ಪತ್ರೆಗೆ ಹೋಗಿ, ಅಲ್ಲಿ ಸೇವೆ ಸಿಗದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಯನ್ನು ಬಳಸಬಹುದು. ಮೂರನೆಯ ವಿಭಾಗದಲ್ಲೂ ಕೆಲವು ರೋಗಗಳಿಗೆ ನೇರ ಖಾಸಗಿ ಆಸ್ಪತ್ರೆಗೆ ಬರುವ ಸೌಲಭ್ಯವಿಲ್ಲ. ಮುಂದೆ ಎರಡೂ ಸರಕಾರಗಳು ಒಟ್ಟಾಗಿ ಇದನ್ನು ಸರಿಪಡಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕಿದೆ.

ರಾ.ಹೆ. ಮೇಲ್ದರ್ಜೆ
ಎಲ್ಲ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮಾರ್ಪಡಿಸುವುದಾಗಿ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಭರವಸೆ ನೀಡಿತ್ತು. ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿ ಭೂಸ್ವಾಧೀನ ಇತ್ಯಾದಿ ಕೆಲಸಗಳನ್ನು ರಾಜ್ಯ ಸರಕಾರ ಬೇಗ ಪೂರೈಸಿ, ರಾಷ್ಟ್ರೀಯ ಹೆದ್ದಾರಿ ಯೋಜನೆ ಜಾರಿಗೆ ವೇಗ ಒದಗಿಸಬೇಕು.

ಮರಳು ಸಮಸ್ಯೆ
ಮರಳು ಸಮಸ್ಯೆಗೆ ರಾಜ್ಯ ಸರಕಾರ ಕೇಂದ್ರ ಸರಕಾರವನ್ನು ಬೆಟ್ಟು ಮಾಡುತ್ತಿತ್ತು. ಇದೇ ಕಾರಣದಿಂದ ಕರಾವಳಿಯ ಜನರು ಒಂದು ವರ್ಷ ಮರಳಿಲ್ಲದೇ ಸಮಸ್ಯೆ ಪಟ್ಟರು. ಕೇಂದ್ರ ಸರಕಾರದಿಂದ ಎಲ್ಲ ಕ್ಲಿಯರೆನ್ಸ್‌ ಮಾಡಿದ ಬಳಿಕವೂ ರಾಜ್ಯದಿಂದ ಸ್ಪಂದನ ಸಿಗಲಿಲ್ಲ ಎಂಬ ಆರೋಪವಿದೆ. ಆ ಸಮಸ್ಯೆಗೆ ಶೀಘ್ರ ಗತಿಯಲ್ಲಿ ಇತಿ ಶ್ರೀ ಹಾಡಬೇಕು.

ಮಲ್ಪೆ ಬಂದರಿನ 4ನೇ ಹಂತ
ಮಲ್ಪೆ ಬಂದರಿನ 4ನೇ ಹಂತದ ಯೋಜನೆ ಜಾರಿಗೊಳ್ಳಬೇಕು. ಪಡುಕರೆ ಬಳಿ ಯೋಜನೆ ಕಾರ್ಯಗತ ಗೊಳ್ಳಬೇಕೆನ್ನುವಾಗ ಆಕ್ಷೇಪಣೆ ವ್ಯಕ್ತವಾಯಿತು. ಟೆಬಾ¾ ಪರಿಸರದಲ್ಲೂ ಜಾರಿಗೊಳಿಸಲೂಬಹುದು. ಹಿಂದೆ ಕೇಂದ್ರ- ರಾಜ್ಯ ಸರಕಾರಗಳು 75:25 ಅನುಪಾತದ ಅನುದಾನದಲ್ಲಿ ಯೋಜನೆಯನ್ನು ಜಾರಿಗೊಳಿಸಬೇಕಿತ್ತು. ಬಳಿಕ 50:50 ಎಂದಾಯಿತು. ಈಗ 40:60 ರ ನಿಯಮಾವಳಿ ಇದೆ. ಯಾವುದೋ ಆದಷ್ಟು ಬೇಗ ಜಾರಿಗೊಳ್ಳಬೇಕು.

Advertisement

ಸಾಗರ್‌ಮಾಲಾ ಯೋಜನೆ
ಪ್ರವಾಸೋದ್ಯಮಕ್ಕೆ ನೆರವಾಗುವ ಸಾಗರ್‌ಮಾಲಾ ಯೋಜನೆಗೆ ಕೇಂದ್ರ ಸರಕಾರದಿಂದ 450 ಕೋ.ರೂ. ಮಂಜೂರಾಗಿದ್ದರೂ ಅಧಿಕಾರಿಗಳ ಔದಾಸೀನ್ಯದಿಂದ ವಾಪಸು ಹೋಗಿದೆ ಎನ್ನಲಾಗುತ್ತಿದೆ. ಇದರಲ್ಲಿ ಬೀಚ್‌ಗಳ ಅಭಿವೃದ್ಧಿಯೂ ಆಗಬೇಕಿತ್ತು. ಪ್ರವಾಸೋದ್ಯಮಕ್ಕೆ ನೆರವಾಗುವ ಯೋಜನೆಯ ಅನುದಾನವನ್ನು ಮತ್ತೆ ತರಿಸಿ ಜಾರಿಗೊಳಿಸಬೇಕು.

ಸಿಆರ್‌ಝಡ್‌ ಸರಳ
ಸಿಆರ್‌ಝಡ್‌ ನಿಯಮದಿಂದ ಅನೇಕರು ಮನೆ ಕಟ್ಟುವ ಅವಕಾಶದಿಂದಲೂ ವಂಚಿತರಾಗಿದ್ದರು. ಮರಳುಗಾರಿಕೆಗೂ ಅಡ್ಡಿಯಾಗಿತ್ತು. ಈಗಲೂ ಕೇವಲ ಮೀನುಗಾರಿಕೆಗೆ ಅಡ್ಡಿಯಾಗಿದ್ದರೆ ಮಾತ್ರ ಅಂತಹ ಸ್ಥಳದಲ್ಲಿ ತುಂಬಿರುವ ಮರಳನ್ನು ತೆಗೆಯಬಹುದು ಎಂಬ ನಿಯಮವಿದೆ. ಇಂತಹ ಕಠಿನ ನಿಯಮವನ್ನು ಪರಿಸರಕ್ಕೆ ಯಾವುದೇ ನಷ್ಟವಾಗದಂತೆ ಕೊಂಚ ಸರಳಗೊಳಿಸಬೇಕು.

ರೈಲ್ವೇ ಕಾಮಗಾರಿ
ರೈಲ್ವೇ ಕಾಮಗಾರಿಯಲ್ಲೂ ಕೆಲವೆಡೆ ರಾಜ್ಯದ ಇಲಾಖೆಗಳ ಸಹಯೋಗ ಅತಿ ಅಗತ್ಯ. ಉದಾಹರಣೆಗೆ ರೈಲ್ವೇ ಮೇಲ್ಸೇತುವೆ ನಿರ್ಮಿಸುವಾಗ ರಾಜ್ಯ ಸರಕಾರದ ಅಧೀನ ಇಲಾಖೆಗಳು ಅನುಮತಿ ಕೊಡಬೇಕು. ಮಣಿಪಾಲದಿಂದ ಉಡುಪಿಗೆ ಬರುವಾಗ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದರೂ ಮಧ್ಯೆ ಸಿಗುವ ಮೇಲ್ಸೇತುವೆ ಇನ್ನೂ ವಿಸ್ತರಣೆಯಾಗಿಲ್ಲ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ. ಇದನ್ನು ಸರಿಪಡಿಸಬೇಕು.

ಕೇಂದ್ರೀಯ ವಿದ್ಯಾಲಯ
ಕೇಂದ್ರ ಸರಕಾರದಿಂದ ಮಂಜೂರಾದ ಕೇಂದ್ರೀಯ ವಿದ್ಯಾಲಯಕ್ಕೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಸಿಕ್ಕಿಲ್ಲ. ರಾಜ್ಯ ಸರಕಾರ ಸ್ಥಳ ಕೊಡಲಿಲ್ಲ ಎಂಬ ಕಾರಣಕ್ಕೆ ತಡವಾಗಿತ್ತು. ಈಗ ಜಾಗ ಮಂಜೂರಾಗಿದೆ. ಈಗಲಾದರೂ ಕೆಲಸ ಮುಂದುವರಿಯಬೇಕು.

ಇಎಸ್‌ಐ ಆಸ್ಪತ್ರೆ
ಸಂಸದರು ಹಿಂದಿನ ಚುನಾವಣೆಯಲ್ಲಿ ಇಎಸ್‌ಐ ಆಸ್ಪತ್ರೆಯನ್ನು ತರುವುದಾಗಿ ಹೇಳಿದ್ದರು. ಆಸ್ಪತ್ರೆಗೆ ಬೇಕಾದ ಸ್ಥಳವನ್ನು ರಾಜ್ಯ ಸರಕಾರ ಮಂಜೂರು ಮಾಡದೆ ತೊಂದರೆಯಾಯಿತು ಎಂದೂ ಸಂಸದರು ಹೇಳಿದ್ದರು. ಈಗ ಹಾಗೆ ಸಬೂಬು ಹೇಳುವಂತಿಲ್ಲ. ತಮ್ಮದೇ ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಸ್ಥಳ ಮಂಜೂರಾತಿಯೊಡನೆ ಇಎಸ್‌ಐ ಆಸ್ಪತ್ರೆ ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.

ಗಂಗೊಳ್ಳಿ – ಕೋಡಿ ಸಂಪರ್ಕ ಸೇತುವೆ
ಗಂಗೊಳ್ಳಿಯಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಕೋಡಿ-ಗಂಗೊಳ್ಳಿ ಸೇತುವೆ ಬೇಡಿಕೆ ಬಹಳ ವರ್ಷಗಳಿಂದ ಮರಿಚೀಕೆಯಾಗಿದೆ. ಸೇತುವೆಯಾದಲ್ಲಿ ಕೇವಲ 15 ನಿಮಿಷಗಳಲ್ಲಿ ಕುಂದಾಪುರದಿಂದ ಗಂಗೊಳ್ಳಿಗೆ ಸಾಗಬಹುದು. ಜತೆಗೆ ಮೀನುಗಾರಿಕೆ ಚಟುವಟಿಕೆಗೂ ಅನುಕೂಲವಾಗಲಿದ್ದು, ಜನರಿಗೂ ಪ್ರಯೋಜನವಾಗಲಿದೆ. ಆದರೆ ಈಗ 20 ಕಿ.ಮೀ. ಸುತ್ತುಬಳಸಿ 45 ನಿಮಿಷ ಸಂಚರಿಸಬೇಕಾಗಿದೆ. ಹಿಂದೆ ಇದೇ ಕ್ಷೇತ್ರದ ಸಂಸದರಾಗಿದ್ದ ಬಿ.ಎಸ್‌. ಯಡಿಯೂರಪ್ಪ ಈಗ ಮುಖ್ಯಮಂತ್ರಿ. ಅವರ ಪುತ್ರ ಬಿ.ವೈ. ರಾಘವೇಂದ್ರ ಸಂಸದರು. ಕೋಡಿ ಭಾಗವನ್ನೊಳಗೊಂಡ ಕುಂದಾಪುರ ಹಾಗೂ ಗಂಗೊಳ್ಳಿ ಪ್ರದೇಶವನ್ನೊಳಗೊಂಡ ಬೈಂದೂರು ಕ್ಷೇತ್ರಗಳೆರಡರಲ್ಲೂ ಬಿಜೆಪಿ ಶಾಸಕರೇ ಇರುವುದರಿಂದ ಈ ಸೇತುವೆ ಬೇಡಿಕೆ ಈಡೇರಬೇಕು.

ಬಂದರುಗಳ ಅಭಿವೃದ್ಧಿಗೆ ಮರುಜೀವ
ಕುಂದಾಪುರ ತಾಲೂಕಿನ ಬಹುಭಾಗ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದು, ಕೋಡಿ, ಗಂಗೊಳ್ಳಿ, ಮರವಂತೆ, ಕೊಡೇರಿ, ಉಪ್ಪುಂದ, ಶಿರೂರು ಭಾಗದಲ್ಲಿ ಬಂದರುಗಳಿವೆ. ಆದರೆ ಅಭಿವೃದ್ಧಿಯಾಗಿಲ್ಲ. ತಾಲೂಕು ಕೇಂದ್ರಕ್ಕೆ ಹತ್ತಿರವಾದ ಕೋಡಿಯಲ್ಲಿ ಸುಸಜ್ಜಿತ ಬಂದರು ಇಲ್ಲ. ಜಿಲ್ಲೆಯಲ್ಲೇ ಹೆಚ್ಚಿನ ಮೀನುಗಾರಿಕೆ ನಡೆಯುವ ಎರಡನೇ ಬಂದರು ಎಂಬ ಹೆಗ್ಗಳಿಕೆ ಹೊಂದಿದ‌ ಗಂಗೊಳ್ಳಿಯಲ್ಲಿ ಎರಡನೇ ಹಂತದ ಬಂದರು ಕಾಮಗಾರಿ ಅನುಷ್ಠಾನವಾಗಿಲ್ಲ. ರಾಜ್ಯದ ಬೇರೆಲ್ಲೂ ಇಲ್ಲದ ಹೊರ ಬಂದರು ಮರವಂತೆಯಲ್ಲಿದೆ; ಆದರೆ ಸುಸಜ್ಜಿತವಾಗಿಲ್ಲ. ಕೊಡೇರಿಯಲ್ಲಿಯೂ ಬಂದರು ಕಾಮಗಾರಿ ಪೂರ್ಣಗೊಂಡಿಲ್ಲ. ಇದರತ್ತ ಗಮನಹರಿಸಬೇಕಿದೆ.

ಅನುಷ್ಠಾನಕ್ಕೆ ಯತ್ನ
ಇನ್ನೂ ವಿಶ್ವಾಸ ಮತ ನಡೆದು ಮಂತ್ರಿಮಂಡಲ ರಚನೆಯಾಗಬೇಕಿದೆ. ಸಚಿವರ ನೇಮಕವಾದ ಬಳಿಕ ಸಂಬಂಧಪಟ್ಟ ಸಚಿವರ ಬಳಿ ಮಾತನಾಡಿ ರಾಜ್ಯ ಸರಕಾರದ ಸಹಕಾರದಲ್ಲಿ ಆಗಬೇಕಾದ ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ವಥಾ ಪ್ರಯತ್ನಿಸುತ್ತೇನೆ.
ಶೋಭಾ ಕರಂದ್ಲಾಜೆ, ಸಂಸದರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next