Advertisement

ಕರಾವಳಿಗೆ ಮುಂಗಾರು; ಈ ಬಾರಿ ಉತ್ತಮ ಮಳೆ ನಿರೀಕ್ಷೆ

11:21 AM Jun 15, 2019 | keerthan |

ಮಂಗಳೂರು: ರಾಜ್ಯ ಕರಾವಳಿಗೆ ಮುಂಗಾರು ಪ್ರವೇಶಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಡಿಕೆಯಂತೆ ಜೂ.1ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುತ್ತದೆ. ಇದಾಗಿ ಒಂದೆರಡು ದಿನಗಳ ಬಳಿಕ ರಾಜ್ಯ ಕರಾವಳಿಯನ್ನು ಸ್ಪರ್ಶಿಸುತ್ತದೆ. ಈ ಬಾರಿ ಕೇರಳ ತೀರಕ್ಕೆ ಜೂ.9ಕ್ಕೆ ಮುಂಗಾರು ಆಗಮಿಸಿತ್ತು. ಆದರೆ “ವಾಯು’ ಚಂಡಮಾರುತದ ಪರಿಣಾಮ ಕರ್ನಾಟಕ ಕರಾವಳಿಗೆ ಮುಂಗಾರು ಅಪ್ಪಳಿಸುವಲ್ಲಿ ಒಂದು ವಾರ ತಡವಾಯಿತು.

Advertisement

ಕರಾವಳಿಯಲ್ಲಿ ಈ ಬಾರಿಯ ಪೂರ್ವ ಮುಂಗಾರು ದುರ್ಬಲ ವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 227.1 ಮಿ.ಮೀ. ವಾಡಿಕೆ ಮಳೆ ಯಲ್ಲಿ ಕೇವಲ 77.6 ಮಿ.ಮೀ. ಮಳೆ ಬಂದು ಶೇ.66 ಮಳೆ ಕೊರತೆ, ಉಡುಪಿ ಜಿಲ್ಲೆಯಲ್ಲಿ 227.3 ಮಿ.ಮೀ. ವಾಡಿಕೆ ಮಳೆಯಲ್ಲಿ 14.4 ಮಿ.ಮೀ. ಮಳೆ ಸುರಿದು ಶೇ.94 ಮಳೆ ಕೊರತೆ ಕೊಡಗು ಜಿಲ್ಲೆಯಲ್ಲಿ ಶೇ.48 ಮಳೆ ಕೊರತೆ ಉಂಟಾಗಿದೆ.

ದ. ಭಾರತದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿರಲಿದ್ದು, ಶೇ.93ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಉತ್ತಮವಾಗಿತ್ತು. ಜೂ.1ರಿಂದ ಸೆಪ್ಟಂಬರ್‌ ಕೊನೆಯವರೆಗೆ 3,551 ಮಿ.ಮೀ. ಮಳೆ ಸುರಿದು ಶೇ.3ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಕೊಂಚ ಕಡಿಮೆ ಮಳೆಯಾಗಿದ್ದು, 3,784 ಮಿ.ಮೀ. ಮಳೆ ಸುರಿದು ಶೇ.7 ಮಳೆ ಕೊರತೆ ಇತ್ತು.

ಸಾಧಾರಣ ಮಳೆ: ಕರಾವಳಿಯಲ್ಲಿ 2 ದಿನಗಳಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ತುಸು ಬಿಡುವು ನೀಡಿತ್ತು. ಮಂಗಳೂರು ನಗರದಲ್ಲಿ ಶುಕ್ರವಾರ ಬಿಟ್ಟು ಬಿಟ್ಟು ಮಳೆಯಾಗಿದೆ. ಉಡುಪಿ ಜಿಲ್ಲೆಯ ಮಣಿಪಾಲ, ಕುಂದಾಪುರ, ಕುಂಭಾಸಿ, ಕಾರ್ಕಳ, ಪಡುಬಿದ್ರಿ, ಕಾಪು, ಕೊಲ್ಲೂರು, ಕೋಟೇಶ್ವರದಲ್ಲಿ ಸಾಧಾರಣ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next