Advertisement

ಹಳೆ ಯೋಜನೆಗಳಿಗೆ ಮರುಜೀವದ ನಿರೀಕ್ಷೆ

09:22 PM Mar 04, 2020 | Lakshmi GovindaRaj |

ಹಾಸನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಿರುವ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಜನರು ಹೊಸ ಯೋಜನೆಗಳ ನಿರೀಕ್ಷೆಗಳಿಗಿಂತ ಹಳೇ ಯೋಜನೆಗಳಿಗೆ ಮರುಜೀವ ನೀಡಿ ಅನುದಾನ ನೀಡಿದರೆ ಸಾಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಹಿಂದಿನ ಎರಡು ಬಜೆಟ್‌ಗಳಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಗೆ ಬಹಳಷ್ಟು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಬಜೆಟ್‌ ನಂತರವೂ ಕೆಲವು ಮಹತ್ವದ ಯೋಜನೆಗಳಿಗೆ ಮಂಜೂರಾತಿ ನೀಡಿದ್ದರು. ಆ ಯೋಜನೆಗಳು ಮುಂದುವರಿಯಲು ಅನುದಾನ ಬಿಡುಗಡೆಯಾಗುತ್ತಿಲ್ಲ.

Advertisement

ಬಿಜೆಪಿ ಸರ್ಕಾರ ಹಾಸನ ಜಿಲ್ಲೆಯ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲೆಯ ಜೆಡಿಎಸ್‌ ಶಾಸಕರು ಕಳೆದ 6 ತಿಂಗಳನಿಂದಲೂ ಆರೋಪ ಮಾಡುತ್ತಲೇ ಬಂದಿದ್ದಾರೆ. ಈ ಆರೋಪಗಳಿಗೆ ಬಜೆಟ್‌ನಲ್ಲೂ ಇಂಬು ನೀಡುವಂತೆ ಹಾಸನ ಜಿಲ್ಲೆಯನ್ನು ಮುಖ್ಯಮಂತ್ರಿಯವರು ಕಡೆಗಣಿಸಬಹುದು ಎಂಬ ಆತಂಕ ಕಾಡುತ್ತಿದೆ. ಆದರೂ ಜೆಡಿಎಸ್‌ ಶಾಸಕರ ಆರೋಪಕ್ಕೆ ಎದಿರೇಟು ನೀಡುವಂತೆ ಹಾಸನ ಜಿಲ್ಲೆಗೆ ಕೆಲವು ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿಯವರು ಪ್ರಕಟಿಸಬಹುದೆಂಬ ಸಣ್ಣ ನಿರೀಕ್ಷೆ ಜಿಲ್ಲೆಯ ಜನರದ್ದು.

ಚನ್ನಪಟ್ಟಣ ಕೆರೆ ಅಭಿವೃದ್ಧಿ: ರಾಜ್ಯದಲ್ಲಿ ಜೆಡಿಎಸ್‌ – ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಹೋದರ, ಪ್ರಭಾವಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಅವರು ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿ ಹಾಗೂ ಸೌಂದಯೀಕರಣ ಯೋಜನೆಗೆ ಆಸಕ್ತಿ ತೋರಿದರು. ಜಿಲ್ಲಾ ಉಸ್ತುವಾರಿ ಸಚಿವರಾಗುವುದಕ್ಕೂ ಮೊದಲು ಹಾಸನ ಬಸ್‌ ನಿಲ್ದಾಣದ ಪಕ್ಕ, ಹೊಸ ನ್ಯಾಯಾಲಯ ಸಂಕೀರ್ಣದ ಎದುರು ಇರುವ ಚನ್ನಪಟ್ಟಣ ಕೆರೆ ಅಭಿವೃದ್ಧಿಪಡಿಸಲು ಬೆಂಗಳೂರಿನಿಂದ ಅಧಿಕಾರಗಳ ದಂಡು ಕಟ್ಟಿಕೊಂಡು ಸ್ಥಳ ಪರಿಶೀಲನೆ ನಡೆಸಿ ಅಂತಿಮವಾಗಿ ಕೆರೆ ಅಭಿವೃದ್ಧಿ ಹಾಗೂ ಸೌಂದಯೀìಕರಣದ 144 ಕೋಟಿ ರೂ. ಯೋಜನೆ ರೂಪಿಸಿದರು.

ಅದಕ್ಕೆ 2019 -20 ನೇ ಸಾಲಿನಲ್ಲಿ 33 ಕೋಟಿ ರೂ. ಮಂಜೂರು ಮಾಡಿಸಿ ಉಳಿದ ಅನುದಾನವನ್ನು ಮುಂದಿನ ವರ್ಷಗಳಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪಡೆಯುವುದಕ್ಕೆ ಸರ್ಕಾರದಿಂದ ಅನುಮೋದನೆಯನ್ನೂ ಕೊಡಿಸಿದ್ದರು. ಆದರೆ ಆ ಯೋಜನೆಯ ಟೆಂಡರ್‌ ಪ್ರಕ್ರಿಯೆ ಆರಂಭದ ವೇಳೆಗೆ ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ಪತನವಾಯಿತು. ಈಗ ಆ ಯೋಜನೆ ಮಾರ್ಪಾಡು ಮಾಡುವ ಪ್ರಯತ್ನ ನಡೆದಿದೆ. ಆದರೆ ಮೂಲ ಯೋಜನೆ ಅನುಷ್ಠಾನವಾಗಲೇಬೇಕು ಎಂದು ಪಟ್ಟು ಹಿಡಿದಿರುವ ರೇವಣ್ಣ ಅವರು ಪ್ರಭಾವ ಬೀರಿ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿಸಿಯಾರೇ ಎಂಬ ನಿರೀಕ್ಷೆಯಿದೆ.

ವಿಮಾನ ನಿಲ್ದಾಣ: ಹಾಸನ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆ ಆಗಿತ್ತು. ಈಗಾಗಲೇ (ವಿಸ್ತೃತ ಯೋಜನಾ ವರದಿ)ಡಿಪಿಆರ್‌ ಸಿದ್ಧವಾಗಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಆ ಯೋಜನೆಯನ್ನು ರದ್ದುಪಡಿಸುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಘೋಷಣೆ ಆದೀತು ಎಂಬ ಅಶಾಭಾವ ಜಿಲ್ಲೆಯ ಜನರದ್ದಾಗಿದೆ.

Advertisement

ತೋಟಗಾರಿಕೆ ಕಾಲೇಜು: ಹಾಸನ ತಾಲೂಕು ಸೋಮನಹಳ್ಳಿ ಕಾವಲ್‌ನಲ್ಲಿರುವ ತೋಟಗಾರಿಕೆಗೆ ಸೇರಿದ 350 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣ ಮಾಡಲು ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಮಂಜೂರಾತಿ ನೀಡಿತ್ತು. ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪನೆಗೆ 65 ಕೋಟಿ ರೂ. ಮಂಜೂರಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೋಟಗಾರಿಕೆ ಕಾಲೇಜು ನಿರ್ಮಾಣಕ್ಕೆ ತಡೆ ನೀಡಿದೆ. ಆ ಯೋಜನೆಗೆ ಬಜೆಟ್‌ನಲ್ಲಿ ಮರುಜೀವ ಸಿಕ್ಕೀತೆ ಎಂಬ ನಿರೀಕ್ಷೆಯಿದೆ.

ಕೆರೆಗಳ ಅಭಿವೃದ್ಧಿ: ಹಾಸನ ನಗರದ ಸುತ್ತಮುತ್ತ ಐದಾರು ಮಹತ್ವದ ಕೆರೆಗಳಿಗೆ ಆ ಕೆರೆಗಳ ಅಭಿವೃದ್ಧಿಯಾಗಬೇಕು ಎಂಬುದು ಪರಿಸರವಾದಿಗಳ ಬಹುದಿನಗಳ ಬೇಡಿಕೆ. ಇದಕ್ಕೆ ಪೂರಕವಾಗಿ ಸ್ಥಳೀಯ ಶಾಸಕ ಪ್ರೀತಂ ಜೆ.ಗೌಡ ಅವರು ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮಂಜೂರಾಗಿರುವ 144 ಕೋಟಿ ರೂ.ಗಳನ್ನು ಈ ಕೆರೆಗಳ ಅಭಿವೃದ್ಧಿ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ಬಳಸಲು ಮುಂದಾಗಿದ್ದಾರೆ. ಚನ್ನಪಟ್ಟಣ ಕೆರೆ ಮೂಲ ಯೋಜನೆಯಂತೆ ಅಭಿವೃದ್ಧಿಯಾದರೆ ಹಾಸನದ ಹುಣಸಿನಕೆರೆ, ಸತ್ಯಮಂಗಲ ಕೆರೆ, ಬೂವನಹಳ್ಳಿ ಕೆರೆ, ಗವೇನಹಳ್ಳಿ ಕೆರೆ ಹಾಗೂ ತೇಜೂರು ಕೆರೆ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಹಾಸನದ ನಾಗರೀಕರ ನಿರೀಕ್ಷೆ.

ಗೊರೂರಿನಲ್ಲಿ ಉದ್ಯಾನವನ: ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗದ ವಿಶಾಲ ಪ್ರದೇಶದಲ್ಲಿ ಆಕರ್ಷಕ ಉದ್ಯಾನವನ ನಿರ್ಮಾಣಕ್ಕೆ ಹಿಂದಿನ ಸರ್ಕಾರದಲ್ಲಿ ನೀಲ ನಕ್ಷೆ ಸಿದ್ಧವಾಗಿತ್ತು. ಈಗ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗಬೇಕು ಎಂಬುದು ಜಿಲ್ಲೆಯ ಜನರ ಆಶಯ. ಈ ಯೋಜನೆ ಮಂಜೂರಾಗಿ ಅನುಷ್ಠಾನಗೊಂಡರೆ ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುತ್ತದೆ. ಹಾಸನ – ಕೊಡಗು ನಡುವೆ ಸಂಚರಿಸುವ ಪ್ರವಾಸಿಗರು ಗೊರೂರು ಹೇಮಾವತಿ ಜಲಾಶಯದತ್ತ ಗಮನ ಹರಿಸಬಹುದು. ಹಾಗಾಗಿ ಇದೊಂದು ಬಹು ನಿರೀಕ್ಷಿತ ಯೋಜನೆ.

ರಣಘಟ್ಟ ಯೋಜನೆ: ಹಳೆಬೀಡಿನ ದ್ವಾರಸಮುದ್ರ ಕೆರೆಗೆ ನೈಸರ್ಗಿಕವಾಗಿ ನೀರು ಹರಿದು ಬರುವ ರಣಘಟ್ಟ ನಾಲಾ ನಿರ್ಮಾಣ ಯೋಜನೆಗೆ ಹಿಂದಿನ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಘೋಷಣೆಯಾಗಿತ್ತು. ಆದರೆ ಇದುವರೆಗೂ ಆ ಯೋಜನೆಗೆ ಚಾಲನೆ ಸಿಕ್ಕಿಲ್ಲ. ಈ ಬಜೆಟ್‌ನಲ್ಲಿಯೂ ಅನುದಾನ ಘೋಷಣೆ ಮಾಡಿ ಯೋಜನೆಗೆ ಚಾಲನೆ ನೀಡುವ ಘೋಷಣೆ ಬಜೆಟ್‌ನಲ್ಲಿ ಘೋಷಣೆಹಾಗಬಹುದು.

ಹಳೇಬೀಡು ಪಪಂ: ಐತಿಹಾಸಿಕ ಹಳೆಬೀಡು ಗ್ರಾಮದಲ್ಲಿ ವಿಶ್ವ ವಿಖ್ಯಾತ ಹೊಯ್ಸಳರ ಕಾಲದ ದೇವಾಲಯವಿದೆ. ಈ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ. ಹಳೇಬೀಡು ಪಟ್ಟಣದ ಸ್ವರೂಪ ಪಡೆದಿದೆ. ಆದರೆ ಗ್ರಾಮ ಪಂಚಾಯಿತಿ ಆಡಳಿತವಿರುವ ಹಳೆಬೀಡನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಸ್ಥಳೀಯ ಶಾಸಕ ಕೆ.ಎಸ್‌.ಲಿಂಗೇಶ್‌ ಅವರ ಒತ್ತಾಯಕ್ಕೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಸಕಾರಾತ್ಮಕ ಸ್ಪಂದನೆ ನೀಡಿದ್ದರು. ಬಜೆಟ್‌ನಲ್ಲಿ ಹಳೆಬೀಡು ಪಟ್ಟಣ ಪಂಚಾಯಿತಿ ಘೋಷಣೆ ಆಗುವ ನಿರೀಕ್ಷೆಯಿದೆ.

ಅರಸೀಕೆರೆಗೇನಾದರೂ ಸಿಕ್ಕೀತೆ?: ಅರಸೀಕೆರೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆ ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ನಿಕಟಪೂರ್ವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಯೋಜನೆಗೆ ಚಾಲನೆ ಸಿಕ್ಕಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಘೋಷಣೆಯಾದೀತೇ ಎಂಬ ಆಶಯವಿದೆ. ಹಾಗೆಯೇ ಅರಸೀಕೆರೆಯಲ್ಲಿರುವ ಉಪ ಕಾರಾಗೃಹ ಶಿಥಿಲಾವಸ್ಥೆಯಲ್ಲಿದ್ದು, ಮರುನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲ ಘೋಷಣೆಯಾಗಿದ್ದ 30 ಕೋಟಿ ರೂ. ಯೋಜನೆಗೆ ಮರುಜೀವ ಸಿಕ್ಕಬಹುದೇ ಎಂಬ ಕಾತುರವಿದೆ.

ಕಾಚೇನಹಳ್ಳಿ ಏತನ ನೀರಾವರಿ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವಿವಾದಾತ್ಮಕ ಯೋಜನೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತಕ್ಕೆ ಕಳೆದ ಬಜೆಟ್‌ನಲ್ಲಿ 100 ಕೋಟಿ ರೂ. ಘೋಷಣೆಯಾಗಿತ್ತು. ಈ ಬಾರಿಬಜೆಟ್‌ನಲ್ಲಿ ಈ ಯೋಜನೆ ಪ್ರಸ್ತಾಪವಾಗಬಹುದು ಎಂಬ ನಿರೀಕ್ಷೆಯಿದೆ. ಹೀಗೆ ಹೊಸ ಯೋಜನೆಗಳ ನಿರೀಕ್ಷೆಗಿಂತ ಈಗಾಗಲೇ ರೂಪುಗೊಂಡಿರುವ, ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿರುವ ಅಭಿವೃದ್ಧಿ ಯೋಜನೆಗಳಿಗೆ ಮರುಜೀವ ನೀಡಿ 2020 -21ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಘೋಷಣೆಯಾದರೆ ಸಾಕು. ಅದೇ ಬಿಜೆಪಿ ಸರ್ಕಾರದ ಬಹುದೊಡ್ಡ ಕೊಡುಗೆ ಎಂಬುದು ಜಿಲ್ಲೆಯ ಜನರ ಅಭಿಮತ.

Advertisement

Udayavani is now on Telegram. Click here to join our channel and stay updated with the latest news.

Next