Advertisement

ಮಾಸಾಂತ್ಯಕ್ಕೆ ವಿಸ್ತರಣೆ? ಖಾಲಿ ಇರುವ ಸ್ಥಾನಗಳಷ್ಟೇ ಭರ್ತಿ ಮಾಡುವ ಸಂಭವ

01:32 AM Apr 18, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಸಚಿವಾಕಾಂಕ್ಷಿಗಳಿಗೆ ಶೀಘ್ರವೇ ಸಿಹಿ ಸುದ್ದಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಮಾಸಾಂತ್ಯದಲ್ಲೇ ವಿಸ್ತರಣೆಯಾಗುವ ಸಾಧ್ಯತೆ ಇದೆ.

Advertisement

ವಿಜಯನಗರ ಜಿಲ್ಲೆಯ ಹೊಸಪೇಟೆ ಯಲ್ಲಿ ರವಿವಾರ ರಾಜ್ಯ ಕಾರ್ಯಕಾರಿಣಿ ಮುಗಿದ ಬಳಿಕ ಪಕ್ಷದ ಕೋರ್‌ ಕಮಿಟಿ ಸಭೆ ನಡೆಸಲಾಗಿದೆ. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಅವರು ಉಳಿದುಕೊಂಡಿರುವ ಹೊಟೇಲ್‌ನಲ್ಲಿಯೇ ಪ್ರತ್ಯೇಕವಾಗಿ ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ವಿಸ್ತೃತವಾಗಿ ಇಬ್ಬರೂ ಚರ್ಚಿಸಿದ್ದಾರೆ. ಪ್ರಸ್ತುತ ಐದು ಸ್ಥಾನಗಳು ಖಾಲಿ ಇದ್ದು, ಹದಿನೈದಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚಿದೆ ಎಂಬ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಪುನಾರಚನೆಗೆ ನಡ್ಡಾ ಒಪ್ಪಿಲ್ಲ ಎನ್ನಲಾಗಿದ್ದು, ಸದ್ಯಕ್ಕೆ ಖಾಲಿ ಇರುವ ಸ್ಥಾನಗಳನ್ನಷ್ಟೇ ಭರ್ತಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಮುಖವಾಗಿ ಚುನಾವಣ ವರ್ಷವಾಗಿರುವುದರಿಂದ ಸಂಪುಟ ಪುನಾರಚನೆ ಅತ್ಯಂತ ಸೂಕ್ಷ್ಮವಾಗಿದ್ದು, ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಪುನಾರಚನೆಗೆ ಕೈ ಹಾಕುವುದು ಕೂಡ ಕಷ್ಟದ ಕೆಲಸ ಎಂಬ ಅಭಿಪ್ರಾಯ ವ್ಯಕ್ತ ವಾಗಿದೆ. ಚುನಾವಣೆ ದೃಷ್ಟಿಯಿಂದ ಜಾತಿ ಮತ್ತು ಪ್ರಾದೇಶಿಕತೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಅನುಕೂಲವಾಗುವಂತೆ ನೋಡಿ ಕೊಂಡು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎ. 22 ಅಥವಾ 25ರಂದು ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ನಾಯಕರಿಗೆ
ನಡ್ಡಾ ಸೂಚನೆ ಏನು?
1ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್‌ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಿ.
2ಆರೋಪಗಳ ಬಗ್ಗೆ ಮೌನ ವಾಗಿದ್ದರೆ, ಅವು ಸತ್ಯ ಎಂಬ ಭಾವನೆ ಜನರಲ್ಲಿ ಬರುತ್ತದೆ. ಹಾಗಾಗಿ ಎಲ್ಲ ನಾಯಕರೂ ಸಕ್ರಿಯರಾಗಿ ಕಾಂಗ್ರೆಸ್‌ ವಿರುದ್ಧ ತಿರುಗಿ ಬೀಳಬೇಕು.

3ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಸೂಕ್ತ ದಾಖಲೆ ಗಳನ್ನು ಹುಡುಕಿ ಬಿಡುಗಡೆ ಮಾಡಿ ಕಾಂಗ್ರೆಸ್‌ನ ನೈತಿಕ ಶಕ್ತಿಯನ್ನು ಕುಂದುವಂತೆ ಮಾಡಬೇಕು. 4ಇತರ ರಾಜ್ಯಗಳಂತೆ ಕರ್ನಾಟಕ ದಲ್ಲಿಯೂ ಕಾಂಗ್ರೆಸ್‌ ಅಸ್ತಿತ್ವ ಕಳೆದು ಕೊಳ್ಳುವಂತೆ ಮಾಡಬೇಕು.

Advertisement

ಟಾರ್ಗೆಟ್‌ 150
ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಕೋರ್‌ ಕಮಿಟಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದ್ದು, ಸರಕಾರದ ವಿರುದ್ಧ ಕಾಂಗ್ರೆಸ್‌ ಮಾಡುತ್ತಿರುವ “40 ಪರ್ಸೆಂಟ್‌ ಕಮಿಷನ್‌’ ಅಪಪ್ರಚಾರಕ್ಕೆ ಎಲ್ಲರೂ ತಕ್ಕ ತಿರುಗೇಟು ನೀಡುವಂತೆ ನಡ್ಡಾ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಬಿಜೆಪಿ ಇದುವರೆಗೂ ಅಧಿಕಾರ ನಡೆಸಿದ ಬಹುತೇಕ ರಾಜ್ಯಗಳಲ್ಲಿ ಮತ್ತೆ ಅಧಿಕಾರ ಹಿಡಿದಿದೆ. ಕರ್ನಾಟಕದಲ್ಲಿ ಮಾತ್ರ ಈ ಹಿಂದೆ ಅಧಿಕಾರದಲ್ಲಿದ್ದು ಪುನರಾಯ್ಕೆಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಈಗಿನಿಂದಲೇ “ಟಾರ್ಗೆಟ್‌ 150′ ಗುರಿ ಇಟ್ಟುಕೊಂಡು ಈಗಿಂದಲೇ ಎಲ್ಲ ನಾಯಕರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ನಡ್ಡಾ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೊಮ್ಮಾಯಿ ಆಡಳಿತಕ್ಕೆ ನಡ್ಡಾ ಮೆಚ್ಚುಗೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಾರ್ಯಕಾರಿಣಿಯಲ್ಲಿ ರಾಜ್ಯ ಸರಕಾರದ ಆಡಳಿತ ವೈಖರಿಯನ್ನು ಹೊಗಳಿದ ಅವರು, ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next