Advertisement

ಪರೀಕ್ಷೆ ಬಂತು ಪರೀಕ್ಷೆ; ಇವತ್ತಿಂದಾನೇ ರೆಡಿ ಆಗಿ…ಮಕ್ಕಳನ್ನು ಹೆದರಿಸಬೇಡಿ…

01:25 PM May 13, 2020 | mahesh |

ಎಂದೋ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿವೆ. ಪರೀಕ್ಷೆ ದಿನಾಂಕ ಘೋಷಣೆಯಾಗುವ ಮುನ್ನವೇ ಹೆದರಿಕೆ ಶುರುವಾಗಿದೆ; ಮಕ್ಕಳಿಗಲ್ಲ, ಅಮ್ಮಂದಿರಿಗೆ! ಮಗ/ ಮಗಳು ಇಷ್ಟು ದಿನ ಏನೂ ಓದದೆ ಕಾಲ ಕಳೆದಿದ್ದಾರೆ. ತರಗತಿಯಲ್ಲಿ ಕಲಿತದ್ದನ್ನೆಲ್ಲ ಈ ವೇಳೆಗೆ ಮರೆತು ಬಿಟ್ಟಿದ್ದಾರೇನೋ ಅಂತ, ಅಮ್ಮಂದಿರಿಗೆ ಆತಂಕ- ಒತ್ತಡ ಪ್ರಾರಂಭವಾಗಿದೆ. “ಅಷ್ಟೆಲ್ಲ ಹೆದರುವ ಅಗತ್ಯವಿಲ್ಲ. ಇದುವರೆಗೆ ಓದಿದ್ದನ್ನು ಮನನ ಮಾಡಿಕೊಳ್ಳಲು, ಮಕ್ಕಳಿಗೆ ನೆರವಾಗಿ. ಆರಾಮಾಗಿ ಪರೀಕ್ಷೆ ಎದುರಿಸಲು ಅವರನ್ನು ಸಜ್ಜುಗೊಳಿಸಿ’ ಎಂದು ಕಿವಿಮಾತು ಹೇಳುತ್ತಲೇ, ಕೆಲವೊಂದು ಸಲಹೆಗಳನ್ನೂ ನೀಡಲಾಗಿದೆ.

Advertisement

ಮೊನ್ನೆ ಬೆಳಗ್ಗೆ ಒಂದು ಫೋನು- “ಮೇಡಂ, ಇನ್ನೇನು ಎಸ್ಸೆಸ್ಸೆಲ್ಸಿ ಎಕ್ಸಾಂ ಡೇಟ್ಸ… ಅನೌನ್ಸ್ ಆಗತೆ. ನಮ್ಮ ಹುಡುಗನಿಗೆ ಒಂದೆರಡು ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳಿ ಪ್ಲೀಸ್‌…’
“ಮ್ಯಾಮ್, ನಿಮ್ಮ ಮಗ ತುಂಬಾ ಜಾಣ. ಎಲ್ಲಾ ಬರತ್ತೆ ಅವನಿಗೆ’- ನನ್ನ ಮಾತನ್ನು ಮಧ್ಯದಲ್ಲೇ ತುಂಡರಿಸುತ್ತಾ, “ಅಯ್ಯೋ ಏನ್‌ ಜಾಣನೋ ಏನೋ. ಈ ಲಾಕ್‌ಡೌನ್‌ ಆದಾಗಿಂದ ಶಾಲೆ, ಓದು, ಬರಹ ಒಂದೂ ಇಲ್ಲ. ಮೂರು ಹೊತ್ತೂ ವಿಡಿಯೋ ಗೇಮ್ಸ, ವಾಟ್ಸಾಪ್‌ ಚಾಟಿಂಗು. ಸ್ಕೂಲಿನಲ್ಲಿ ಇಡೀ ವರ್ಷ ಓದಿದ್ದೆಲ್ಲಾ ಮರೆತು ಬಿಟ್ಟಿದಾನೆ. ಹೇಗೆ ಎಕ್ಸಾಂ ಬರೀತಾನೋ, ಆ ದೇವರಿಗೇ ಗೊತ್ತು. ಸಿಕ್ಕಾಪಟ್ಟೆ ಭಯವಾಗ್ತಿದೆ ನಂಗೆ…’- ನುಡಿದಳು ಆಕೆ. ಒಂದು ಕ್ಷಣ ನಗು ಬಂದರೂ, ಅಯ್ಯೋ ಎನಿಸಿ ಸುಮ್ಮನಾದೆ. ಮಕ್ಕಳಿಗೆ ಪರೀಕ್ಷೆ ಬಂತೆಂದರೆ, ತಾಯಂದಿರಿಗೆ ಭಯ ಸಾಮಾನ್ಯ. ಒಳ್ಳೆಯ ಪಿ.ಯು. ಕಾಲೇಜು ಸಿಕ್ಕರೆ ಮಾತ್ರ ಒಳ್ಳೆಯ ಎಂಜಿನಿಯರಿಂಗ್‌ ಅಥವಾ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಸಿಗುತ್ತದೆ ಎಂಬ ದೂರಾಲೋಚನೆ. “ನೌಕರಿಗಾಗಿಯೇ ಓದು’ ಎಂಬಂತೆ ಆಗಿ ಹೋಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯನ್ನು, ರಾತ್ರೋ  ರಾತ್ರಿ ಬದಲಾಯಿ ಸಲಂತೂ ಸಾಧ್ಯವಿಲ್ಲ. ಅದಕ್ಕೆ, ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳುವುದೊಂದೇ ಮಾರ್ಗ. ಮೊದಲೇ ಪರೀಕ್ಷೆಯ ಸಿದ್ಧತಾ ಸಮಯ ಕಡಿಮೆ ಇದೆ. ಇಂಥ ಸಮಯದಲ್ಲಿ ಇಲ್ಲದ್ದನ್ನು ಕಲ್ಪಿಸಿಕೊಂಡು ಒ¨ªಾಡುವುದರಲ್ಲಿ ಅರ್ಥವಿಲ್ಲ. ಈ ಸಮಯದಲ್ಲಿ ತಾಯಂದಿರು ಪಾಲಿಸಬೇಕಾದ ಕೆಲವು ಸಲಹೆಗಳು ಹೀಗಿವೆ.

1. ಒತ್ತಡ ಹೇರದಿರಿ
ಈಗಿನ ಮಕ್ಕಳು ವಾಸ್ತವವಾದಿಗಳು. ಅವರನ್ನು ಮುಂದೆ ಕೂಡಿಸಿಕೊಂಡು, ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳಿಕೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ ಹೇಳಿ. ಖಂಡಿತಾ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೊಂದು ಕಿವಿಮಾತು: ಶಿಕ್ಷಕರನ್ನು, ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಮೂದಲಿಸಬೇಡಿ. ಮಕ್ಕಳು ಯಾವ ವಿಷಯದ ಶಿಕ್ಷಕರನ್ನು  ದ್ವೇಷಿಸುತ್ತಾರೋ, ಆ ವಿಷಯವನ್ನೂ ಇಷ್ಟಪಡುವುದಿಲ್ಲ ಎಂಬ ಸತ್ಯ ನಿಮಗೆ ತಿಳಿದಿರಲಿ.

2. ಓದಲು ಸೂಕ್ತ ವಾತಾವರಣ ಕಲ್ಪಿಸಿ
ನೀವು ಟಿ.ವಿ. ನೋಡುತ್ತಲೋ, ಮೊಬೈಲ್‌ನಲ್ಲಿ ಚಾಟ್‌ ಮಾಡುತ್ತಲೋ ಇರುವಾಗ, ಮಕ್ಕಳು ಓದುತ್ತಾ ಇರಲಿ ಎಂಬ ಆಪೇಕ್ಷೆಯೇ ತಪ್ಪು. ಓದಿನಲ್ಲಿ ಅವರು ಆಸಕ್ತಿ ತೋರಿಸದಿದ್ದರೆ
ನಿಂದಿಸುವುದು, ಅಥವಾ ದೈಹಿಕವಾಗಿ ದಂಡಿಸುವುದನ್ನು ಮಾಡಬೇಡಿ. ಬೇರೆಯವರೊಂದಿಗೆ ಹೋಲಿಸಿ ಮೂದಲಿಸಲು ಹೋಗದಿರಿ. ಹದಿಹರಯದ ಮಕ್ಕಳು, ಒಮ್ಮೆ ಹಠಕ್ಕೆ ಬಿದ್ದರೆ,
ಆನಂತರದಲ್ಲಿ ಅವರನ್ನು ತಿದ್ದುವುದು ತುಂಬಾ ಕಷ್ಟ.

3. ಆಹಾರವೂ ಮುಖ್ಯವೇ
ಮಕ್ಕಳ ಊಟ, ತಿಂಡಿಗೆ ಒಂದೇ ಸಮಯವನ್ನು ಫಿಕ್ಸ್ ಮಾಡಿ. ಆದಷ್ಟು ಆರೋಗ್ಯಪೂರ್ಣ ಆಹಾರ ಕೊಡಿ. ಕರಿದ ತಿನಿಸುಗಳು, ತಣ್ಣನೆಯ ಪದಾರ್ಥಗಳು ಬೇಡ. ಆರೋಗ್ಯ ಕೈಕೊಟ್ಟರೆ  ತುಂಬಾ ಕಷ್ಟ ಮಕ್ಕಳು ಊಟ ಮಾಡುವುದಕ್ಕಿಂತ ಮೊದಲು ಎರಡು, ಮೂರು ಗಂಟೆ  ಓದುವ ಹಾಗೆ ಅವರ ವೇಳಾಪಟ್ಟಿ ಇರಲಿ. ಸಾಮಾನ್ಯವಾಗಿ, ಊಟದ ನಂತರ ಜೀರ್ಣವ್ಯೂಹಕ್ಕೆ
ಹೆಚ್ಚಿನ ಪ್ರಮಾಣದ ರಕ್ತಪರಿಚಲನೆ ಆಗುವುದರಿಂದ, ಓದಿದ್ದನ್ನು ಗ್ರಹಿಸಲು ಮೆದುಳಿಗೆ ಸಹಜವಾಗಿಯೇ ಕಷ್ಟವಾಗುತ್ತದೆ.

Advertisement

4. ವೆಬ್‌ಸೈಟ್‌ ಸಹಾಯ ಪಡೆಯಿರಿ
ಹಳೆಯ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ಕಡಿಮೆ ಸಮಯದಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲು ಸಹಾಯಕಾರಿ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟಿನಲ್ಲಿ, ಕಳೆದ
ವರ್ಷಗಳ ಪ್ರಶ್ನೆಪತ್ರಿಕೆಗಳಷ್ಟೇ ಅಲ್ಲದೇ, ಪೂರ್ತಿ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳೂ ಇರುತ್ತವೆ. ಅದನ್ನೊಮ್ಮೆ ನೋಡಲು ಹೇಳಿ. ಖಂಡಿತಾ ಉಪಯೋಗವಾಗುತ್ತದೆ.

5. ಮನನ ಮಾಡಲು ಹೇಳಿ
ಮುಖ್ಯವಾದ ವಿಷಯಗಳನ್ನು ಈಗ ಮತ್ತೂಮ್ಮೆ ನೋಟ್ಸ… ಮಾಡಿಟ್ಟುಕೊಳ್ಳಲು ಅಥವಾ ಹೈಲೈಟರಿನಿಂದ ಮಾರ್ಕ್‌ ಮಾಡಿಕೊಳ್ಳಲು ಹೇಳಿ. ಕೊನೆಯ ಗಳಿಗೆಯ ರಿವಿಷನ್ನಿಗೆ ಅದು ಸಹಾಯಕಾರಿ.

6. ಮನಸ್ಸಿಗೆ ವಿಶ್ರಾಂತಿ ಬೇಕು
ಓದುವಾಗ ಮೊಬೈಲ್‌ ಅಥವಾ ಲ್ಯಾಪ್‌ ಟಾಪ್‌, ಮಕ್ಕಳಿಂದ ದೂರ ಇರಲಿ. ಓದಿನ ಮಧ್ಯದಲ್ಲಿ ಸುಸ್ತಾದರೆ, ಕಣ್ಣುಮುಚ್ಚಿ ಒಂದೆರಡು ನಿಮಿಷ ದೀರ್ಘ‌ವಾಗಿ ಉಸಿರಾಡುವಂತೆ ಹೇಳಿ.
ನಿಧಾನಗತಿಯ, ದೀರ್ಘ‌ವಾದ ಉಸಿರಾಟದಿಂದ, ಮೆದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸಿಗುತ್ತದೆ. ಅದರಿಂದ ದೇಹದ ಚೈತನ್ಯ ಮರಳುತ್ತದೆ. ಓದಿ ಬೇಜಾರಾದಲ್ಲಿ, ಅವರಿಷ್ಟದ ಸಂಗೀತ ಆಲಿಸಲು ಹೇಳಿ. ಸಂಗೀತ, ದಣಿದ ಮನಸ್ಸಿಗೆ ಟಾನಿಕ್‌. ಓದಿನ ನೆಪದಲ್ಲಿ ಮಕ್ಕಳು ತಡರಾತ್ರಿಯವರೆಗೂ ಎಚ್ಚರವಿರದಂತೆ ನೋಡಿಕೊಳ್ಳಿ. ಒಳ್ಳೆಯ ಓದಿಗೆ ಮತ್ತು ಗ್ರಹಣಶಕ್ತಿಗೆ, ಸರಿಯಾದ ಪ್ರಮಾಣದ ನಿದ್ರೆ ಬಹು ಅವಶ್ಯ.

7. ಆನ್‌ಲೈನ್‌ ಪಾಠ
ಅಷ್ಟಾಗಿಯೂ, ಮಕ್ಕಳಿಗೆ ಏನಾದರೂ ಶಿಕ್ಷಕರ ಸಹಾಯ  ಬೇಕಾದಲ್ಲಿ, ಆನ್‌ಲೈನ್‌ನಲ್ಲಿ ಒಂದೆರಡು ಕ್ಲಾಸ್‌ ಕೊಡಿಸಬಹುದಾ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈ. ಎಸ್‌.ವಿ. ದತ್ತ ಅವರಂಥ ಅನುಭವಿ ಮೇಸ್ಟ್ರೆಗಳು ಗಣಿತ, ವಿಜ್ಞಾನದ ವಿಷಯಗಳ ಪಾಠ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಇದರ ಲಾಭ ಪಡೆಯಬಹುದು.

8 . ಪರೀಕ್ಷೆ ದಿನಕ್ಕೆ ಟಿಪ್ಸ್
ಪರೀಕ್ಷೆ ಬರೆಯುವಾಗ ಸಮಾಧಾನಚಿತ್ತವಿರಲಿ. ಪ್ರಶ್ನೆಗಳಿಗೆ ಅಂಕಗಳನ್ನು ನೋಡಿ ಉತ್ತರಿಸುವುದು ಬಹಳ ಮುಖ್ಯ. ಒಂದು ಅಂಕದ ಪ್ರಶ್ನೆಗೆ ಪೇಜುಗಟ್ಟಲೇ ಉತ್ತರವನ್ನು ಬರೆದರೆ, ಆಮೇಲೆ ಸಮಯ ಸಾಲದೇ ಹೋಗಬಹುದು ಎಂದು ತಿಳಿಹೇಳಿ. ಕೊನೆಯದಾಗಿ, ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲನ್ನು ಮಾಡದಂತೆ ಮಕ್ಕಳನ್ನು ಎಚ್ಚರಿಸಿ. ಒಂದುವೇಳೆ ಸಿಕ್ಕುಬಿದ್ದರೆ, ಮೂರು ವರ್ಷ ಡಿಬಾರ್‌ ಆಗಬೇಕಾಗುತ್ತದೆ. ಪರಿಶ್ರಮದ ಹೊರತಾಗಿಯೂ ಅವರು ಕಡಿಮೆ ಅಂಕ ತಗೆದರೆ, ಅದರಲ್ಲಿ ಅವರ ತಪ್ಪಿಲ್ಲ ಎಂದು ಬೆನ್ನು ತಟ್ಟಿ. ಮುಂದಿನ ಹೆಜ್ಜೆಗೆ ಹುರಿದುಂಬಿಸಿ. ಪರೀಕ್ಷೆಯ ಭಯ ಮಕ್ಕಳನ್ನು ಭೂತದಂತೆ ಕಾಡದಿರಲು, ಸೂಕ್ತ ಮಾರ್ಗದರ್ಶನ ಮಾಡಿ.

– ದೀಪಾ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next