Advertisement

ಕಚೇರಿಗೆ ಕೊಟ್ಟಿದ್ದ ಪೀಠೊಪಕರಣ ಮನೆಗೆ ಸಾಗಿಸಿದ ಆಂಧ್ರ ಮಾಜಿ ಸ್ಪೀಕರ್‌!

09:44 AM Aug 24, 2019 | mahesh |

ಹೈದರಾಬಾದ್‌: ಅಧಿಕಾರದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಹೊಸತೇನಲ್ಲ. ಅಧಿಕಾರ ಇಲ್ಲದಿದ್ದರೂ ಇನ್ನೂ ಸರಕಾರಿ ಬಂಗಲೆಯಲ್ಲೇ ವಾಸ ಮಾಡುವುದು, ಸರಕಾರದ ಸೊತ್ತುಗಳನ್ನು ಮನೆಗೆ ಸಾಗಿಸುವುದು ಇದ್ದೇ ಇದೆ. ಇಂಥದ್ದೇ ಒಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದ ಮಾಜಿ ಸ್ಪೀಕರ್‌, ಟಿಡಿಪಿ ಪಕ್ಷದ ಹಿರಿಯ ನಾಯಕ ಕೊಡೇಲ ಶಿವಪ್ರಸಾದ್‌ ಸ್ಪೀಕರ್‌ ಕಚೇರಿಯಲ್ಲಿದ್ದ ಪೀಠೊಪಕರಣಗಳನ್ನು ಮನೆಗೆ ಸಾಗಿಸಿ ಸುದ್ದಿಯಾಗಿದ್ದಾರೆ.

Advertisement

ಆದರೂ ಶಿವಪ್ರಸಾದ್‌ ಧಿಮಾಕಿನಿಂದ ಹೇಳಿಕೆ ನೀಡಿದ್ದು, ಬೇಕಾದರೆ ಅವರು ತೆಗೆದುಕೊಂಡು ಹೋಗಲಿ, ಇಲ್ಲದಿದ್ದರೆ ಬೆಲೆ ಎಷ್ಟೆಂದರೆ ನಾನೇ ಕೊಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು 2014ರ ಹೊತ್ತಿನಲ್ಲಿ. ಆಂಧ್ರ ವಿಭಜನೆಯಾದ ಬಳಿಕ ಕಚೇರಿ ಪೀಠೊಪಕರಣಗಳನ್ನು ಹಂಚಲಾಗಿತ್ತು. ಆಂಧ್ರಕ್ಕೆ ಸೇರಿದ ವಸ್ತುಗಳನ್ನು ವಿಜಯವಾಡಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಸ್ಪೀಕರ್‌ ಕಚೇರಿಯ ಅಮೂಲ್ಯ ಪೀಠೊಪಕರಣಗಳನ್ನು ಶಿವಪ್ರಸಾದ್‌ ಸೀದ ಮನೆಗೆ ಸಾಗಿಸಿದ್ದಾರೆ. ಅಂದು ಕೊಟ್ಟಿದ್ದ ಪೀಠೊಪಕರಣಗಳು ಕಾಣುತ್ತಿಲ್ಲ ಎಂಬುದು ಇತ್ತೀಚಿಗೆ ವೈಎಸ್‌ಆರ್‌ ಕಾಂಗ್ರೆಸ್‌ ಸರಕಾರದ ಅರಿವಿಗೆ ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಶಿವಪ್ರಸಾದ್‌ ಮನೆಯಲ್ಲಿರುವುದು ಗೊತ್ತಾಗಿದೆ. ಜತೆಗೆ ಅವರು ಎ.ಸಿ., ಫ್ಯಾನ್‌ಗಳನ್ನು ಪುತ್ರ, ಪುತ್ರಿಯರ ಮನೆಗೂ ಕೊಟ್ಟಿದ್ದಾಗಿ ಹೇಳಲಾಗಿದೆ. ಕಚೇರಿ ಪೀಠೊಪಕರಣ ತೆಗೆದುಕೊಂಡು ಹೋದ ಬಗ್ಗೆ ಸದ್ಯ ಹೊಸ ಸ್ಪೀಕರ್‌ ತಮಿನೇನಿ ಸೀತಾರಾಂ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next