Advertisement

ಎಲ್ಲರ ಚಿತ್ತ 15ರ ಫಲಿತಾಂಶದತ್ತ..!

04:04 PM May 13, 2018 | Team Udayavani |

ರಾಯಚೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಶನಿವಾರ ನಡೆದ ಮತದಾನ ಪ್ರಕ್ರಿಯೆ ಜಿಲ್ಲೆಯ ಕೆಲವೆಡೆ ಬಿಟ್ಟರೆ ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿ ನಡೆದಿದ್ದು, ಶೇ……. ರಷ್ಟು ಮತದಾನವಾಗಿದೆ. ಕೆಂಡದಂತೆ ಶಾಖ ಹೊರಸೂಸುವ ಮೂಲಕ ಪ್ರಚಾರ ಕಾರ್ಯಕ್ಕೆ ಅಡ್ಡಿಯಾಗಿದ್ದ ಸೂರ್ಯ, ಶನಿವಾರ ತಂಪಾಗಿದ್ದರಿಂದ ಮತದಾನಕ್ಕೆ ಅನುಕೂಲವಾಯಿತು. ಮಸ್ಕಿ, ಸಿಂಧನೂರಿನ ಕೆಲವೆಡೆ ಸಣ್ಣ ಪ್ರಮಾಣದ ಮಳೆಯಾದರೂ ಮತದಾನಕ್ಕೆ ಅಡ್ಡಿಯಾಗಿಲ್ಲ.

Advertisement

ಬೆಳಗ್ಗೆ ಏಳು ಗಂಟೆಗೆ ಜಿಲ್ಲೆಯ 1,805 ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಮತದಾನ ಶುರುವಾಯಿತು. ನಂತರ ಕೆಲವೆಡೆ
ಇವಿಎಂ, ವಿವಿ ಪ್ಯಾಟ್‌ಗಳು ಕೈಕೊಟ್ಟಿದ್ದರಿಂದ ಮತದಾನಕ್ಕೆ ಕೆಲಕಾಲ ಅಡಚಣೆಯಾಯಿತು. ನಗರದ ದುದಬಿನ್‌ ಠಾಕರ್ಸಿ ಶಾಲೆಯ ಮತಗಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಇವಿಎಂ ಸ್ಥಗಿತಗೊಂಡಿತ್ತು. ನಗರದ ಅರಬ್‌ ಮೊಹಲ್ಲಾದ ಪಿಂಕ್‌ ಮತಗಟ್ಟೆ, ಮಂಗಳವಾರ ಪೇಟೆ, ಮಸ್ಕಿ ಕ್ಷೇತ್ರದ ಹಿರೇಬೇರಿಗೆ, ತಿಮ್ಮಾಪುರ, ಮಾನ್ವಿ ಕ್ಷೇತ್ರದ ಜಕ್ಕಲದಿನ್ನಿ, ತಾಲೂಕಿನ ಮನ್ಸಲಾಪುರದ ಮತಗಟ್ಟೆಯಲ್ಲಿನ ಇವಿಎಂ ಕೈ ಕೊಟ್ಟಿದ್ದರಿಂದ ಮತದಾನ ವಿಳಂಬವಾಗಿ ಆರಂಭವಾಯಿತು.

ಬೆಳಗ್ಗೆ 9ಕ್ಕೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ .10ರಷ್ಟು ಮತದಾನವಾಗಿತ್ತು. ಬೆಳಗ್ಗೆ 11ಕ್ಕೆ ಶೇ.37.18ರಷ್ಟು ಆದರೆ, ಮಧ್ಯಾಹ್ನ 3ಕ್ಕೆ ಶೇ.46.75ರಷ್ಟು ಪ್ರಮಾಣದಲ್ಲಿ ಮತದಾನ ನಡೆಯಿತು. ಸಂಜೆ ಐದು ಗಂಟೆ ವೇಳೆಗೆ ಶೇ.57.07ರಷ್ಟು ಮತದಾನವಾಗಿತ್ತು. ಸಂಜೆ ಮತದಾನ ಮತ್ತೆ ಚುರುಕಾಯಿತು.

ತಹಶೀಲ್ದಾರ್‌ಗೆ ದಿಗ್ಬಂಧನ: ಲಿಂಗಸುಗೂರು ತಾಲೂಕಿನ ನಡುಗಡ್ಡೆ ಕಡದರಗಡ್ಡಿ ಗ್ರಾಮಸ್ಥರು ಸೇತುವೆ ನಿರ್ಮಾಣಕ್ಕೆ
ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿ ಚುನಾವಣೆ ಬಹಿಷ್ಕರಿಸಿದ್ದರು. 399 ಮತಗಳಿದ್ದು, ಕೃಷ್ಣಾ ನದಿ ಉಕ್ಕಿ ಬಂದರೆ ಸಂಚಾರ ಕಡಿತಗೊಳ್ಳುತ್ತದೆ. ಸೇತುವೆ ನಿರ್ಮಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಫಲ ಕೊಟ್ಟಿಲ್ಲ. ಹೀಗಾಗಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರು. ಈ ವೇಳೆ ಮನವೊಲಿಕೆಗೆ ತೆರಳಿದ್ದ ತಹಶೀಲ್ದಾರರಿಗೇ ದಿಗ್ಬಂಧನ ಮಾಡಿ ಗ್ರಾಮಸ್ಥರು ಕೂಡಿ ಹಾಕಿದ್ದರು. ಅಧಿಕಾರಿಗಳು ಬಲವಂತವಾಗಿ ಗ್ರಾಪಂನ ಮೂವರು ಗುತ್ತಿಗೆ ನೌಕರರಿಂದ ಹಕ್ಕು ಚಲಾಯಿಸಿದ್ದರು.

ಇದರಿಂದ ಕುಪಿತಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ
ಮುಖಂಡರೊಬ್ಬರು ತೆರಳಿ ಅಧಿಕಾರಿಯನ್ನು ಬಿಡಿಸಿಕೊಂಡು ಬರುವಂತಾಯಿತು.

Advertisement

ಮಹಿಳೆಯರಿಗೆಂದು ವಿಶೇಷವಾಗಿ ನಿರ್ಮಿಸಿದ್ದ ಕೆಲ ಪಿಂಕ್‌ ಸಖೀ ಮತಗಟ್ಟೆಗಳ ಸಿಬ್ಬಂದಿ ಗೊಂದಲಕ್ಕೆ ಬಿದ್ದ ಕಾರಣ ಮತದಾನ ಪ್ರಕ್ರಿಯೆ ವಿಳಂಬವಾಯಿತು. ಎಲ್ಲರೂ ಮಹಿಳಾ ಸಿಬ್ಬಂದಿಯಾಗಿದ್ದು, ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಕೆಲ ಪಕ್ಷಗಳ ಮುಖಂಡರು ದೂರಿದರು. ಆದರೆ, ನಾವು ಜಿಲ್ಲಾಡಳಿತ ನಿರ್ದೇಶನ ನೀಡಿದ ರೀತಿಯಲ್ಲೇ ಕೆಲಸ ಮಾಡುತ್ತಿದ್ದೇವೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು. ಇಲ್ಲಿ ಪುರುಷರಿಗೂ ಹಕ್ಕು ಚಲಾಯಿಸಲು ಅವಕಾಶ ನೀಡಿದ್ದರಿಂದ ಸಮಸ್ಯೆಯಾಯಿತು.

ಸಿಂಧನೂರು ತಾಲೂಕಿನ ಸಿದ್ರಾಂಪುರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆಯಿತು. ಈ ವೇಳೆ ಸೋಮನಗೌಡ, ಶಿವನಗೌಡ ಎನ್ನುವವರಿಗೆ ಗಾಯಗಳಾಗಿವೆ. ನಗರದ ಅರಬ್‌ಮೊಹಲ್ಲಾದ ಮತಗಟ್ಟೆಯಲ್ಲೂ ಕಾಂಗ್ರೆಸ್‌ ಮುಖಂಡರು ಮತ್ತು ಪಕ್ಷೇತರ ಅಭ್ಯರ್ಥಿ ಗೋರಮ್‌ ಮಾಸೂಮ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ವಾತಾವರಣ ತಿಳಿಗೊಳಿಸಿದ್ದಾರೆ.

ಮತದಾರರಿಗೆ ಹಣ ಹಂಚಿಕೆ ಆರೋಪದಡಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಹಾಗೂ ತಾಪಂ ಸದಸ್ಯೆ ಬಸಮ್ಮ ಯಾದವ್‌ ವಿರುದ್ಧ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ದೇವದುರ್ಗ ತಾಲೂಕಿನ ಸಾಸಿವೆಗೇರಾ, ಧನಸಿಂಗ್‌ ನಾಯಕ್‌ ತಾಂಡಾ, ನಾಮನಾಯಕ ತಾಂಡಾ, ಧರ್ಮನಾಯಕ ತಾಂಡಾ ಸೇರಿ ವಿವಿಧ ತಾಂಡಾಗಳಿಂದ ಮಹಾರಾಷ್ಟ್ರದ ಪುಣೆಗೆ ವಲಸೆ ಹೋಗಿದ್ದ ಸುಮಾರು 250ಕ್ಕೂ ಅಧಿಕ ಜನರನ್ನು ವಾಹನಗಳ ಮೂಲಕ ಕರೆತಂದು ಹಕ್ಕು ಚಲಾಯಿಸಲಾಗಿದೆ.

ಫೋಟೋ-ವಿಡಿಯೋ ವೈರಲ್‌: ಹಕ್ಕು ಚಲಾಯಿಸಿದ ನಂತರ ಗೌಪ್ಯತೆ ಕಾಯ್ದುಕೊಳ್ಳದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣ ನಡೆದಿದೆ. ಮಾನ್ವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ| ತನುಶ್ರೀ ಹಾಗೂ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದ್ದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಯಾವ ನಾಯಕರು ಎಲ್ಲಿ ಹಕ್ಕು ಚಲಾವಣೆ ..? 
ರಾಯಚೂರು: ಜಿಲ್ಲೆಯ ಸಾಮಾನ್ಯ ಮತದಾರರು ಮಾತ್ರವಲ್ಲದೇ ಗಣ್ಯರು, ಜನಪ್ರತಿನಿಧಿಗಳು, ಮುಖಂಡರು
ಕೂಡ ತಮ್ಮ ಹಕ್ಕು ಚಲಾಯಿಸಿದರು.  ದೇವದುರ್ಗ ಕ್ಷೇತ್ರದ ರಾಜಕೀಯ ಶಕ್ತಿ ಕೇಂದ್ರ ಎಂದೇ ಹೆಸರಾದ ಅರಕೇರಾದಲ್ಲಿ ನಾಲ್ವರು ಪ್ರಮುಖರು ಮತ ಚಲಾಯಿಸಿದರು. ಈ ಕ್ಷೇತ್ರದ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಅಲ್ಲದೇ ಸಂಸದ ಬಿ.ವಿ.ನಾಯಕ ಅಲ್ಲಿಯೇ ಮತ ಚಲಾಯಿಸಿದರು. ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೈಯ್ಯದ್‌ ಯಾಸಿನ್‌ ಮಂಗಳವಾರಪೇಟೆ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. 

ರಾಯಚೂರು ಗ್ರಾಮೀಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವಿ ಪಾಟೀಲ್‌ ಅವರು ಗುಂಜಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ವಿಧಾನ ಪರಿಷತ್‌ ಸದಸ್ಯ ಎನ್‌. ಎಸ್‌ ಬೋಸರಾಜ ನಗರದ ಕೆಇಬಿ ಶಾಲೆಯಲ್ಲಿ ಮತದಾನ ಮಾಡಿದರು. ಉಳಿದಂತೆ ಕಣದಲ್ಲಿರುವ 79 ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಹಕ್ಕು ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next