Advertisement

ಬಾಲ್ಯ ವಿವಾಹ-ದೇವದಾಸಿ ಪದ್ದತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಲು ನ್ಯಾ|ಬಿ. ವೀರಪ್ಪ ಸಲಹೆ

03:53 PM Sep 25, 2022 | Team Udayavani |

ಯಾದಗಿರಿ: ಸರ್ಕಾರ ಬಡವರ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಬಡ ಜನರಿಗೆ ಅವುಗಳ ಲಾಭ ಸಕಾಲಕ್ಕೆ ಸಿಗುವಂತಾಗಲಿ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ನ್ಯಾ| ಅಲೋಕ್‌ ಅರಾಧೆ ಹೇಳಿದರು.

Advertisement

ಇಲ್ಲಿನ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಸೇವೆಗಳ ಬೃಹತ್‌ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಡಳಿತದಿಂದ ಈಗಾಗಲೇ ಹಲವು ಯೋಜನೆಗಳ ಅಡಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಜನ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ಕಲ್ಪಿಸುವಂತೆ ಸಲಹೆ ನೀಡಿದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಾಧಿಧೀಶರಾದ ನ್ಯಾ| ಬಿ. ವೀರಪ್ಪ ಅವರು ಮಾತನಾಡಿ, ಬಾಲ್ಯ ವಿವಾಹ ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಇದಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಸಮಾಜದಲ್ಲಿರುವ ಈ ಸಮಸ್ಯೆ ಹೋಗಲಾಡಿಸಲು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಯೋಧರಂತೆ ಜನರನ್ನು ಎಚ್ಚರಗೊಳಿಸುವ ಕಾರ್ಯ ಮಾಡಬೇಕು. ಅನಿಷ್ಠ ಪದ್ಧತಿಗಳು ಸಮಾಜದಿಂದ ಕಿತ್ತೂಗೆಯಲು ಹಿರಿಯ ನಾಗರಿಕರು, ಮಹಿಳೆಯರು, ನ್ಯಾಯವಾದಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಯಾದಗಿರಿ ಆಡಳಿತಾತ್ಮಕ ನ್ಯಾಯಾಧಿಧೀಶರಾದ ನ್ಯಾ| ಶಿವಶಂಕರ ಅಮರಣ್ಣನವರ್‌ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಏರ್ಪಡಿಸಲಾದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಇದೇ ರೀತಿ ಜಿಲ್ಲೆಯ ತಾಲೂಕು, ಹೋಬಳಿ ಹಾಗೂ ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಜನರಿಗೆ ಸೌಲಭ್ಯ ಸಿಗಬೇಕೆಂದು ಹೇಳಿದರು.

Advertisement

ಉಚ್ಚ ನ್ಯಾಯಾಲಯದ ನ್ಯಾಯಾಧಿಧೀಶರಾದ ಪಿ.ಎಸ್‌. ದಿನೇಶ ಕುಮಾರ ಮಾತನಾಡಿ, ನ್ಯಾಯ ಪ್ರಕ್ರಿಯೆಗಳು ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಈ ಕಾರ್ಯಕ್ರಮ ಹೆಚ್ಚು ಅನುಕೂಲವಾಗಿದೆ. ಬಾಲ್ಯ ವಿವಾಹ ಪೀಡಿತ ಮಹಿಳೆ ಮುತ್ತವ್ವ ಬೆಳಗಾವಿ ಹಾಗೂ ದೇವದಾಸಿ ಅನಿಷ್ಠ ಪದ್ಧತಿಯಿಂದ ಬಳಲಿದ ಗೌರಮ್ಮ ಅವರ ಅಭಿಪ್ರಾಯ ಮನ ಮುಟ್ಟುವಂತಿದ್ದು, ಈ ಸಮಸ್ಯೆಗಳ ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಮಾತನಾಡಿದರು. ಬಾಲ ಕಾರ್ಮಿಕ ಪದ್ಧತಿ ವಿರೋಧಿ ಹಾಗೂ ದೇವದಾಸಿ ಪದ್ಧತಿ ವಿರುದ್ಧ ಅರಿವು ಮೂಡಿಸುವ ಪೋಸ್ಟರ್‌ ಗಳನ್ನು ನ್ಯಾಯಾಧೀಶರು ಬಿಡುಗಡೆಗೊಳಿಸಿದರು.

ಜಿಲ್ಲೆಯ 13 ಜನ ಹಿರಿಯ ನ್ಯಾಯವಾದಿಗಳಿಗೆ, ಕಾನೂನು ಅರಿವು ಮೂಡಿಸುತ್ತಿರುವ 6 ಜನ ಸಮಾಜ ಸೇವಕರಿಗೆ, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗುರುಮಠಕಲ್‌ ಪೊಲೀಸ್‌ ಇನ್ಸ್‌ಪೆàಕ್ಟರ್‌ ದೌಲತ್‌ ಎನ್‌.ಕೆ. ಹಾಗೂ ಯಾದಗಿರಿ ನಗರ ಪೊಲೀಸ್‌ ಠಾಣೆಯ ಮುಖ್ಯಪೇದೆ ಗಣೇಶ ಅವರನ್ನು ಸನ್ಮಾನಿಸಲಾಯಿತು. ಉಚ್ಚ ನ್ಯಾಯಾಲಯದ ರೆಜಿಸ್ಟ್ರಾರ್‌ ಜನರಲ್‌ (ಐ/ಸಿ) ಮುರಳಿಧರ್‌ ಪೈ.ಬಿ., ಸದಸ್ಯ ಕಾರ್ಯದರ್ಶಿ ಜಯಶಂಕರ, ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ನ್ಯಾಯಾಧೀಶರಾದ ಬಿ. ನಂದಕುಮಾರ, ನ್ಯಾಯಾಧೀಶರಾದ ಸಾಹೀಲ್‌ ಅಹ್ಮದ್‌ ಕುನ್ನಿಭಾವಿ, ಮೋಹನ್‌ ರಾವ್‌ ನಲವಡೆ, ಜಿಪಂ ಸಿಇಒ ಅಮರೇಶ ನಾಯ್ಕ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಸಿ.ಎಸ್‌. ಮಾಲಿಪಾಟೀಲ್‌, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next