Advertisement

ಪ್ರತಿ’ಪರ್ವ’ರಸೋದಯ

09:59 AM Jan 06, 2020 | mahesh |

ಕನ್ನಡ ಸಾರಸ್ವತ ಲೋಕದಲ್ಲಿ ಚಿಂತನೆಯ ಹೊಸ ಅಲೆಯನ್ನು ಎಬ್ಬಿಸಿದ “ಪರ್ವ’ ಕಾದಂಬರಿ ರಚನೆಯಾಗಿ ನಲ್ವತ್ತು ವರ್ಷಗಳಾದವು

Advertisement

ವೇದಾಂತ ದರ್ಶನದಲ್ಲಿ ಅಧಿಭೂತ, ಅಧಿದೈವ ಮತ್ತು ಅಧ್ಯಾತ್ಮಗಳೆಂಬ ಮೂರು ಸ್ತರಗಳ ವಿವೇಚನೆ ಉಂಟು. ಅಧಿಭೂತ ವಾಸ್ತವ ಜಗತ್ತನ್ನು ಕುರಿತದ್ದಾದರೆ, ಅಧಿದೈವವು ಶ್ರದ್ಧೆ-ನಂಬಿಕೆಗಳ ವಲಯದ್ದು. ಅಧ್ಯಾತ್ಮವಾದರೋ ಕೇವಲ ಸ್ವಸಂವೇದನೆಯ ಸ್ತರ. ಇದು ಅಪ್ಪಟವಾಗಿ ಸಾರ್ವತ್ರಿಕಾನುಭವದ ನೆಲೆ. ಇದನ್ನು ದರ್ಶನಶಾಸ್ತ್ರಗಳ ವಲಯದಲ್ಲಿ ಬ್ರಹ್ಮಾನುಭೂತಿ ಎಂದೂ ಕಾವ್ಯಶಾಸ್ತ್ರದ ಚೌಕಟ್ಟಿನಲ್ಲಿ ರಸಾನುಭೂತಿ ಎಂದೂ ಗುರುತಿಸಿಕೊಳ್ಳಬಹುದು. ಯಾವುದೇ ಕಲಾಕೃತಿಯಲ್ಲಿ ಈ ಮೂರರ ಸಂಮ್ಮಿಶ್ರಣ ಇರಬಹುದಾದರೂ ಅಧ್ಯಾತ್ಮದ ಅಂಶ ಹೆಚ್ಚಿದಷ್ಟೂ ಅದಕ್ಕೆ ಮಿಗಿಲಾದ ಬೆಲೆ. ಅಂದರೆ, ರಸಸ್ಫೂರ್ತಿಯೇ ಕೃತಿಯ ಮಹತ್ವಕ್ಕೆ ಒರೆಗಲ್ಲು.

ಈ ನಿಟ್ಟಿನಿಂದ ಕಂಡಾಗ ಎಸ್‌. ಎಲ್‌. ಭೈರಪ್ಪನವರ ಉದಕೃತಿ ಪರ್ವ ಮೇಲ್ನೋಟಕ್ಕೆ ಅಪ್ಪಟ ವಾಸ್ತವವನ್ನು (ಅಧಿಭೂತವನ್ನು) ಅವಲಂಬಿಸಿ ಪುರಾಣ ಭಂಜನೆಯತ್ತ ಸಾಗುವ- ಅರ್ಥಾತ್‌, ಅಧಿದೈವವನ್ನು ನಿರಾಕರಿಸುವ ಯತ್ನವೆಂಬಂತೆ ತೋರುತ್ತದೆ. ಆದರೂ ಅದು ಪ್ರಧಾನವಾಗಿ ಅಧ್ಯಾತ್ಮದಲ್ಲಿ ನೆಲೆನಿಂತ ಕಾದಂಬರಿ. ಈ ಕಾರಣದಿಂದಲೇ ಅದು ಕೇವಲ ಮಹಾಭಾರತದ ಕಾಲದಲ್ಲಿ ಇದ್ದಿರಬಹುದಾದ ಜನಜೀವನದ ಬಾಹ್ಯ ವಿವರಗಳಲ್ಲಿ ಕಳೆದುಹೋಗದೆ, ನಮ್ಮೆಲ್ಲರೊಳಗೂ ಅನುದಿನ ಸಾಗುತ್ತಿರುವ ಭಾವಗಳ ತುಮುಲವನ್ನು ಅನ್ಯಾದೃಶವಾಗಿ ಪ್ರತಿಬಿಂಬಿಸಿದೆ. ಅಷ್ಟೇ ಅಲ್ಲ, ಈ ಎಲ್ಲ ಭಾವಸಂಕ್ಷೊàಭೆಯನ್ನು ಅದೊಂದು ಬಗೆಯ ಹದದಿಂದ ಪರಿಭಾವಿಸಿದಾಗ ಅದು ನಮ್ಮ ನೆಮ್ಮದಿಗೇ ಕಾರಣವಾಗುವುದು ಎಂಬ ಸತ್ಯವನ್ನೂ ಅನುಭವಸಿದ್ಧವಾಗಿ ಸಾಕ್ಷಾತ್ಕರಿಸುತ್ತದೆ. ಆದುದರಿಂದಲೇ ಪರ್ವಕ್ಕೆ ಅರ್ಹವಾದ ಜನಪ್ರಿಯತೆ ಸಂದಿದೆ, ಮತ್ತಿದು ಇನ್ನಷ್ಟೂ ಕಾಲಗಳವರೆಗೂ ಉಳಿಯುವುದರಲ್ಲಿ ಸಂದೇಹ ಕಾಣದು.

ಪರ್ವದಂಥ ಮಹಾಕಾದಂಬರಿಯ ಸ್ವಾರಸ್ಯಸ್ಥಾನಗಳು ನೂರಾರು. ದ್ವಾಪರ-ಕಲಿಗಳ ಯುಗಸಂಧಿಯಲ್ಲಿ ಮೂಲಕಥೆಯು ಹೆಪ್ಪುಗಟ್ಟಿದ ಕಾರಣ ಆ ಇತಿವೃತ್ತಕ್ಕಿರುವ ಸಂಕೀರ್ಣತೆ ಅನುಪಮ. ಯಾವುದೇ ಸಂಸ್ಕೃತಿಯಲ್ಲಿ ಯುಗಸಂಧಿಯ ಸಮಸ್ಯೆಗಳು ಅನಂತಪ್ರಕಾರದವು. ಇಲ್ಲಿ ಇಡಿಯ ಮಾನವ ಸಮುದಾಯವೇ ತನ್ನ ವ್ಯಷ್ಟಿ-ಸಮಷ್ಟಿ ಸ್ತರಗಳಲ್ಲಿ ಭಾವ-ಬುದ್ಧಿಗಳ ಎಣೆಯಿಲ್ಲದ ಹೊಯ್ದಾಟವನ್ನು ಅನುಭವಿಸುತ್ತದೆ. ಕೇವಲ ಆರ್ಷಪ್ರತಿಭೆಯ ಮಹಾಕವಿ ಮಾತ್ರ ಇದನ್ನು ಸಾಹಿತ್ಯಕೃತಿಯ ರೂಪದಲ್ಲಿ ಸಮರ್ಥವಾಗಿ ಕಟ್ಟಿಕೊಡಬಲ್ಲ. ಇದಕ್ಕೆ ಅಪಾರವಾದ ಸಹಾನುಭೂತಿಯೂ ಅದಕ್ಕೆ ಹೆಗಲೆಣೆಯಾದ ತಾಟಸ್ಥ್ಯವೂ ಬೇಕು. ಇವಕ್ಕೆ ಪುಟವೀಯುವಂತೆ ಸಮೃದ್ಧವಾದ ಲೋಕಾನುಭವ ಮತ್ತು ಪರಿಪಕ್ವವಾದ ಪಾಂಡಿತ್ಯಗಳಿದ್ದರೆ ಹೇಳಲೇಬೇಕಿಲ್ಲ. ಅಂಥ ಶಕ್ತಿಸಂಪನ್ನರು ಭೈರಪ್ಪನವರು.

ಕಥಾವಿಶ್ಲೇಷಣೆಯ ವಿಶಿಷ್ಟ ಮಾದರಿ
ಕೇವಲ ದಿಗªರ್ಶಕವಾಗಿ ಪರ್ವವು ವಿವೇಚಿಸುವ ಸಮಸ್ಯೆಗಳಲ್ಲೊಂದಾದ ಹುಟ್ಟನ್ನು ಗಮನಿಸಬಹುದು. ಇಲ್ಲಿ ಕ್ಷೇತ್ರ-ಬೀಜಗಳ ಮೇಲು-ಕೀಳುಗಳನ್ನು ಕುರಿತಂತೆ, ಅಕ್ರಮ-ಅವ್ಯವಸ್ಥೆಗಳನ್ನು ಕುರಿತಂತೆ ವಿಸ್ತೃತವಾದ ಚಿಂತನೆಯಿದೆ. ಇದೆಲ್ಲ ಕಥೆಯಾಗಿ, ಕಲೆಯಾಗಿ ಪರಿಣಮಿಸಿರುವುದು ಗಮನಾರ್ಹ. ಒಂದು ತಲೆಮಾರಿನ ಸರಿ ಮತ್ತೂಂದು ತಲೆಮಾರಿಗೆ ತಪ್ಪಾಗುವ ವಿಲಕ್ಷಣ ಸ್ಥಿತಿ ಯುಗ ಸಂಧಿಯದು. ಕನ್ಯೆಯ ಮಗನಾಗಿ ಕಾನೀನನೆನಿಸಿದ ಕೃಷ್ಣದ್ವೆ„ಪಾಯನ ಇಡಿಯ ಸಮಾಜದ ಮನ್ನಣೆ ಗಳಿಸಿದ ಭಗವಾನ್‌ ವೇದವ್ಯಾಸರಾದರೆ, ಅಂಥ ಮತ್ತೂಬ್ಬ ಕಾನೀನ ಕರ್ಣ, ಸಮಾಜದ ತಿರಸ್ಕಾರಕ್ಕೆ ಅಂಜಿ, ಹುಟ್ಟುವಾಗಲೇ ತನ್ನ ತಾಯಿಯಿಂದ ದೂರವಾಗುತ್ತಾನೆ. ನಿರ್ವೀರ್ಯನಾದ ಪತಿ ತನ್ನ ಪತ್ನಿಯರಿಗೆ ಸಮರ್ಥರಿಂದ ಸಂತಾನವನ್ನು ಗಳಿಸಿಕೊಟ್ಟರೆ ಅದು ನಿಯೋಗವೆಂಬ ಶಾಸ್ತ್ರೀಯವಾದ ಆಚರಣೆಯಾಗುತ್ತಿತ್ತು. ಇದು ಅಲ್ಪಕಾಲದಲ್ಲಿಯೇ ವ್ಯಭಿಚಾರವೆಂಬ ಆಕ್ಷೇಪಕ್ಕೆ ತುತ್ತಾಗುತ್ತದೆ. ಅಷ್ಟೇಕೆ, ತನ್ನ ಮಲತಮ್ಮ ವಿಚಿತ್ರವೀರ್ಯನ ವಿಧವೆಯರಿಗೆ ನಿಯೋಗದ ಮೂಲಕ ಸಂತಾನವಾಗುವಂತೆ ಮಾಡಿಸಿದ ಭೀಷ್ಮನೇ ದುರ್ಯೋಧನನ ಅಪಪ್ರಚಾರಕ್ಕೆ ಬಲಿಯಾಗಿ ಈ ಪದ್ಧತಿ ಶಾಸ್ತ್ರಸಮ್ಮತವೇ ಎಂದು ಖಚಿತಪಡಿಸಿಕೊಳ್ಳಲು ವ್ಯಾಸರ ಬಳಿಗೆ ಧಾವಿಸುತ್ತಾನೆ. ವಿಪರ್ಯಾಸವೇನೆಂದರೆ, ವಿಚಿತ್ರವೀರ್ಯನ ವಿಧವೆಯರಿಗೆ ನಿಯೋಗದ ಮೂಲಕ ಪಾಂಡು-ಧೃತರಾಷ್ಟ್ರರನ್ನು ಕರುಣಿಸಿದವನೇ ವ್ಯಾಸ!

Advertisement

ಇದು ಕೇವಲ ಒಂದು ಕುಟುಂಬದ, ಒಂದು ಪಂಗಡದ ಹುಟ್ಟಿಗೆ ಸೀಮಿತವಲ್ಲ. ಬೇರೆ ಬೇರೆ ವರ್ಣಗಳ, ಬೇರೆ ಬೇರೆ ಜಾತಿಗಳ ಹುಟ್ಟಿಗೂ ವ್ಯಾಪಿಸಿದೆ. ಇದೇ ವರ್ಣಸಂಕರದ ಸಮಸ್ಯೆ. ಬ್ರಾಹ್ಮಣಬೀಜಕ್ಕೆ ಹುಟ್ಟಿದ ದ್ರೋಣನಿಗೆ ಕ್ಷಾತ್ರಕರ್ಮದ ಸಾಂಕರ್ಯ ಬರುತ್ತದೆ. ಅವನ ಮಗ ಅಶ್ವತ್ಥಾಮನಿಗೆ ಬ್ರಾಹ್ಮಣ್ಯವೇ ದಕ್ಕದಂಥ ಸ್ಥಿತಿ ಬರುತ್ತದೆ. ಅರಮನೆಯ ದಾಸಿಯರಿಗೆ ದೊರೆಗಳ ಮೂಲಕ ಉಂಟಾದ ಅಕ್ರಮ ಸಂತಾನವೆಲ್ಲ ಸಕ್ರಮವೆನಿಸಿಕೊಂಡು ಆಳುವವರ ಊಳಿಗಕ್ಕೆ ಸಜ್ಜಾಗುತ್ತದೆ. ಇಂಥ ದುಡಿಮೆಯ ವರ್ಗವನ್ನು ಪ್ರಭುಗಳು ತಮ್ಮ ಅನುಕೂಲ ಕಂಡಂತೆ ಒಡಹುಟ್ಟಿದವರೆಂದು ಸುಮ್ಮಾನದಿಂದ ಕಾಣುವುದೂ ಊಳಿಗದವರೆಂದು ದುಮ್ಮಾನದಿಂದ ದೂರುವುದೂ ವಿರಳವಲ್ಲ. ಇದೇ ಬಗೆಯಾದದ್ದು ಅನುಲೋಮ-ಪ್ರತಿಲೋಮ ವಿವಾಹಗಳ ವೈಕಟ್ಯ, ಆರ್ಯ-ದಸುÂಗಳ ಸಂಘರ್ಷ, ಬಹುಪತಿತ್ವ ಮತ್ತು ಬಹುಪತ್ನಿàತ್ವಗಳ ತುಮುಲ. ಹೀàಗೆ ಪರ್ವ ಹುಟ್ಟೊಂದನ್ನು ಬೆನ್ನಟ್ಟಿ ಅದೆಷ್ಟು ಭಾವಗಳ ಬುಗ್ಗೆಗಳನ್ನು ಉಕ್ಕೇರಿಸುತ್ತದೆ !

ಇಂಥ ಮಹಾಕೃತಿಗೆ ಇದೀಗ ನಲವತ್ತರ ಪ್ರಾಯ. ಮಾನವನ ಜೀವನದಲ್ಲಿ ನಲವತ್ತರ ವಯಸ್ಸಿಗೊಂದು ವೈಶಿಷ್ಟ್ಯವಿದೆ. ಇದು ಆತನ ಪ್ರಜ್ಞೆ-ಪಾಟವಗಳು ಹದವನ್ನು ಮುಟ್ಟಿದ ಸಂಕೇತವೂ ಹೌದು. ಹೀಗಾಗಿ, ಪರ್ವದ ಪಕ್ವತೆಯನ್ನೂ ಅದರೊಡನೆ ನಮಗಾಗುತ್ತಿರುವ ರಸಾನುಭವವನ್ನೂ ವಿವೇಚಿಸುವ ಕಾರ್ಯ ಈಚೆಗೆ ಸಂಪನ್ನಗೊಂಡಿತು. ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಇತ್ತೀಚೆಗೆ ಆಯೋಜಿಸಿದ ರಾಷ್ಟ್ರಸ್ತರದ ವಿಚಾರಗೋಷ್ಠಿಯಲ್ಲಿ ದೇಶದ ಅನೇಕ ವಿದ್ವಾಂಸರು ಪರ್ವವನ್ನು ಕುರಿತ ತಮ್ಮ ವಿಶ್ಲೇಷಣೆಗಳನ್ನು ಮಂಡಿಸಿದರು. ಹೊಸ ಪೀಳಿಗೆಯ ಓದುಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡದ್ದೊಂದು ವಿಶೇಷ.

ಶತಾವಧಾನಿ ಆರ್‌. ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next