Advertisement

ಮಂಗಳ ಸಂಧ್ಯಾ

05:55 PM Jun 06, 2019 | Team Udayavani |

ಎಲ್ಲರ ಜೀವನದಲ್ಲೂ ಒಂದು ಸಮಯ ಹೀಗೂ ಬರುತ್ತದೆ. ಅದನ್ನು ನಾವು ಜೀವನಪೂರ್ತಿ ಮರೆಯಲು ಇಚ್ಛೆ ಪಡುವುದಿಲ್ಲ. ಅದನ್ನು ಒಂದು ಸುಂದರ ನೆನಪುಗಳನ್ನಾಗಿಸಿ ಮನಸ್ಸಿನ ಯಾವುದಾದರೂ ಮೂಲೆಯಲ್ಲಿ ಭದ್ರವಾಗಿ ಬಚ್ಚಿಡಲು ಬಯಸುತೇ¤ವೆ. ಅಂತಹ ಕೆಲವು ಸುಂದರ ನೆನಪುಗಳ ಕುರಿತಾಗಿ ಬರೆಯಲು ಹೊರಟಿರುವೆ, ಏನು ಬರೆಯುವುದು? ಹೇಗೆ ಬರೆಯುವುದು? ಇದರ ಶೀರ್ಷಿಕೆ ಏನು? ಒಂದೂ ಗೊತ್ತಿಲ್ಲ. ಬರೆಯುತ್ತ ಬರೆಯತ್ತ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬ ಆಶಯ.

Advertisement

ನಾನು ಹೇಳಲು ಬಯಸುತ್ತಿರುವುದು ನಾನು ಕಳೆದ ನನ್ನ ಕಾಲೇಜ್‌ ಲೈಫ್ನ ಬಗ್ಗೆ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಬೇಜಾರಾಗಿದ್ದ ಜೀವನದಲ್ಲಿ ಖುಷಿಯ ಕ್ಷಣಗಳನ್ನು ತಂದ ಆ ದಿನಗಳ ಕುರಿತಾಗಿ. ಜೀವನದ ಎಲ್ಲಾ ಘಟ್ಟಗಳನ್ನು ಕಳೆದು ನಿರುತ್ಸಾಹದಿಂದ ಸಾಗುತ್ತಿದ್ದ ಜೀವನಕ್ಕೆ ಪುನರ್‌ ಉತ್ಸಾಹ ನೀಡಿದ್ದೇ ಆ ಕ್ಷಣಗಳು.

ಲೈಫ್ ಸೆಟ್‌ ಮಾಡಲು ನಿರಂತರ ಶ್ರಮ ಮಾಡಿ ಸ್ವಲ್ಪ ದುಡ್ಡು ಮಾಡಬೇಕೆಂಬ ಬಯಕೆ ನನ್ನಲ್ಲಿತ್ತು, ಆ ಹೊತ್ತಿನಲ್ಲಿ ಮನೆಯವರ ಒತ್ತಾಯದಿಂದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿಗೆ ಸೇರಿದೆ. ದುಡಿಯುವ ಈ ಸಮಯದಲ್ಲಿ ಇವೆಲ್ಲ ಬೇಕಿತ್ತಾ ನನಗೆ ಎಂದು ಭಾವಿಸುತ್ತಿದ್ದರೂ, ದುಡ್ಡಿಗಿಂತ ಮಿಗಿಲಾದದ್ದು ಇದೆ ಎಂದು ತೋರಿಸಿಕೊಟ್ಟ ದಿನಗಳವು.

ಆ ವರ್ಷವೇ ಹೊಸತಾಗಿ ಪ್ರಾರಂಭವಾದ ಸಂಜೆ ಕಾಲೇಜಿನ ಮೊದಲ ದಿನ, ಈಗಲೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದಿನದ ಎಲ್ಲಾ ಜಂಜಾಟಗಳನ್ನು ಮುಗಿಸಿ, ಇಲ್ಲದ ಮನಸ್ಸಿನಲ್ಲಿ ಕಾಲೇಜಿನ ಗೇಟಿನ ಎದುರು ಬಂದು ನಿಂತೆ. ಏನೋ ದೇಶದ ಗಡಿಯಲ್ಲಿ ನಿಂತ ಭಾವ. ಒಳಗೆ ಕಾಲಿಡಲು ಒಂದಿನಿತೂ ಧೈರ್ಯ ಇರಲಿಲ್ಲ. ಕಟ್ಟಿಂಗ್‌ ಪ್ಲೆಯರ್‌, ಸೂðಡ್ರೈವರ್‌ ಹಿಡಿಯುವ ಕೈಯಲ್ಲಿ ಇನ್ನು ಪೆನ್ನು, ರಬ್ಬರು ಹಿಡಿಯುವ ತಾಕತ್ತು ಇರಲಿಲ್ಲ. ಪುಸ್ತಕಗಳ ಕಂತೆ, ಎಕ್ಸಾಮ್‌, ಅಸೈನ್‌ಮೆಂಟ್‌ ಎಂಬ ಶಬ್ದಗಳು ಮನಸ್ಸಿನಲ್ಲಿ ಪುನಃ ಪುನಃ ಕೇಳಲು ಪ್ರಾರಂಭಿಸಿದಾಗ ಮನಸ್ಸಿನಾಳದಲ್ಲಿ ಬಾಂಬುಗಳು ಸ್ಫೋಟಗೊಳ್ಳುವಂತೆ ಭಾಸವಾಗುತ್ತಿತ್ತು.

ಅಷ್ಟರ ಹೊತ್ತಿಗೆ ಹತ್ತಿರದಲ್ಲಿ ನನ್ನಂತೆಯೇ ಹೆದರುತ್ತಿರುವ ಒಬ್ಬನನ್ನು ಕಂಡದ್ದೇ ಹೋಗಿ ಮಾತಾಡಿಸಿದೆ. ನನ್ನ ಹೆದರಿಕೆಯ ಪಾಲನ್ನು ಅವನಿಗೂ ಸ್ವಲ್ಪ ಕೊಟ್ಟೆ. ಅವನ ಮನಸ್ಥಿತಿ ಅರಿತು ನಮ್ಮನ್ನು ನಾವು ಸಮಾಧಾನಿಸಿಕೊಂಡು ಒಳಗೆ ನಡೆಯುವ ಸಾಹಸ ಮಾಡಿದೆವು. ಮೊಂಡು ಧೈರ್ಯದಿಂದ ಕ್ಯಾಂಪಸ್ಸಿನೊಳಗೆ ಹೆಜ್ಜೆ ಹಾಕಿದೆವು. ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದ ವಿಶ್ವವಿದ್ಯಾನಿಲಯ ಕಾಲೇಜಿನ ಕಟ್ಟಡ, ಅದರ ದಪ್ಪ ಗೋಡೆಗಳು, ಕಂಬಗಳು, ಕೆಂಪುಬಣ್ಣ, ಗಂಟೆ ಶಬ್ದ ಎಲ್ಲಾ ನಮ್ಮ ಮನಸ್ಥಿತಿಯನ್ನು ಕುಗ್ಗಿಸುವಲ್ಲಿ ಹೆಚ್ಚು ಶ್ರಮ ಪಡಲಿಲ್ಲ. ನಾವು ನಡೆಯುತ್ತ ಬಂದು ಒಂದು ಕೊಠಡಿಗೆ ಬಂದು ತಲುಪಿದೆವು, ಒಳಗೆ ನೋಡುವಾಗ ನಮ್ಮಂಥ ವ್ಯಾಕುಲ ಮುಖಗಳನ್ನು ಕಂಡು ನಮ್ಮಂತೆ ಇನ್ನೂ ಹಲವರು ಇದ್ದಾರೆ ಎಂದು ನಮಗೆ ಸ್ವಲ್ಪಮಟ್ಟಿಗೆ ಖುಷಿಯಾಯಿತು. ಅಷ್ಟರಲ್ಲಿ ಓರ್ವ ಅಧ್ಯಾಪಕರು ಬಂದು ನಮ್ಮೆಲ್ಲರ ಪರಿಚಯ ಮಾಡಿಕೊಂಡರು ಹಾಗೂ ಕಾಲೇಜಿನ ಬಗ್ಗೆ, ನಮ್ಮ ಭವಿಷ್ಯದ ಬಗ್ಗೆ, ಮಾಹಿತಿಗಳನ್ನು ನಿರಂತರ ಮೂರು ಗಂಟೆ ನೀಡಿದರು. ಕೇಳಲು ಎಲ್ಲವೂ ಹೊಸತನ. ಆದರೆ, ಈ ಬೆಂಚು-ಡೆಸ್ಕಾಗಳು ನನ್ನ ಬೆನ್ನಿಗೆ ಒಳ್ಳೆಯ ಕೆಲಸ ಕೊಟ್ಟಿತು. ಕೈ ಕಾಲುಗಳು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿತು. ಮೊದಲ ದಿನವೇ ಹೀಗಾದಾಗ ಇನ್ನೂ ಮುಂದಿನ ದಿನಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರಕಿತು. ಹಾಗೂ ಹೀಗೂ ಆ ದಿನ ಕಳೆಯಿತು.

Advertisement

ಮರುದಿನ ಅಂತೂ ಕಾಲೇಜು ಹೋಗುವ ಪ್ರಶ್ನೆಯೇ ಇರಲಿಲ್ಲ. ಸಂಜೆ ಕೆಲಸ ಮುಗಿದ ನಂತರ ಚಹಾ ಕುಡಿಯಲು ಹೊಟೇಲಿನಲ್ಲಿ ಕೂತೆ, ಆಗ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದದ್ದು ಕಾಲೇಜಿನ ನನ್ನ ಮೊದಲ ದಿನದ ಫ್ರೆಂಡ್‌. ಅವನು ತನ್ನ ಕೆಲಸ ಮುಗಿಸಿ ಕಾಲೇಜಿಗೆ ಹೊರಟಿದ್ದ ನನ್ನನ್ನು ನೋಡಿ ಕಾಲೇಜಿಗೆ ಒಟ್ಟಿಗೆ ಹೋಗುವ ನಿರ್ಧಾರ ಕೈಗೊಂಡನು. ನನಗೆ ಏನು ಹೇಳಬೇಕೆಂದು ತೋಚದೆ ಅವನ ಜೊತೆಗೆ ಕಾಲೇಜಿಗೆ ಬಂದೆನು.

ಇದು ನನ್ನ ಕಾಲೇಜಿನ ಎರಡನೇ ದಿನ. ಬೆಂಚ್‌-ಡೆಸ್ಕಾಗಳ ನಡುವೆ ಪುನಃ ನನ್ನನ್ನು ನಾನು ಕಟ್ಟಿಕೊಂಡು ಕೂತೆನು. ಹೊಸ ಪೆನ್ನು, ಹೊಸ ಬುಕ್ಕು, ಹೊಸ ಬ್ಯಾಗುಗಳೊಂದಿಗೆ ಹೊಸ ಸಹಪಾಠಿಗಳು, ಹೊಸ ಅಧ್ಯಾಪಕರು. ಎಲ್ಲಾ ಹೊಸತನಗಳೊಂದಿಗೆ ನನ್ನ ಜೀವನ ಒಂದು ಹೊಸ ತಿರುವು ಪಡೆದುಕೊಂಡಿತು. ಅಂದಿನಿಂದ ಪ್ರಾರಂಭವಾದ ನನ್ನ ಕಾಲೇಜು ಲೈಫ್ ನನ್ನೆಲ್ಲಾ ಜೀವನದ ತೊಂದರೆಗಳಿಗೆ, ಕಷ್ಟಗಳಿಗೆ, ಬೇಜಾರಿಗೆ, ಜವಾಬ್ದಾರಿಗಳಿಗೆ ಉತ್ತಮ ಔಷಧವಾಯಿತು. ಮೂರು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ನಾನು ಕಳೆದುಕೊಂಡಿದ್ದ ಸಂತೋಷದ ಕ್ಷಣಗಳು ಇಲ್ಲಿ ಸಿಕ್ಕಿದವು.

ಇನ್ನು ಕ್ಲಾಸ್‌ಮೇಟ್‌ಗಳ ಬಗ್ಗೆ ಹೇಳುವುದೇ ಬೇಡ. ನಾವು ಪಂಚಪಾಂಡವರು. ನಮ್ಮ 5 ಜನರ ಗುಂಪು ಕಾಲೇಜಿನ ಐವತ್ತು ಜನಗಳಿಗೆ ಸಮ, ಎಂದು ಇಡೀ ಕಾಲೇಜು ಮಾತನಾಡತೊಡಗಿತು. ಒಬ್ಬ ಕಲಾವಿದ, ಒಬ್ಬ ಕವಿ, ಒಬ್ಬ ಗಲಾಟೆ ವೀರ ಇನ್ನೊಬ್ಬ ಅಂತೂ ನಮ್ಮೆಲ್ಲರ ಬಾಸ್‌. ನಾವು ಮಾಡದ ಕೆಲಸವೇ ಇಲ್ಲ. ಕಾಲೇಜಿನ ಎಲ್ಲಾ ರಂಗ ಕ್ಷೇತ್ರಗಳಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದೆವು. ಇಡೀ ಕಾಲೇಜಿನಲ್ಲಿ ಕಡಿಮೆ ಸ್ಟ್ರೆಂತ್‌ ಹೊಂದಿದ್ದ ನಾವು ಎಲ್ಲರಿಗೂ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದೆವು. ಜೀವನದಲ್ಲೇ ಸೇrಜ್‌ ಹತ್ತದ ನಾವು ಈ ಮೂರು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ನೀಡಿದೆವು. ನನ್ನ ಮುಖಕ್ಕೆ ಬಣ್ಣ ಹಚ್ಚುವುದಲ್ಲದೆ ಬೇರೆಯವರಿಗೂ ಬಣ್ಣ ಹಚ್ಚಿದೆ. ಆಟೋಟಗಳಲ್ಲಿ ಎಲ್ಲರ ಕೇಂದ್ರಬಿಂದು ಆಗಿದ್ದೆವು. ನಮ್ಮ ಕಾಲೇಜ್‌ನ ಮ್ಯಾಗಜಿನ್‌ಗೂ ನಮ್ಮ ಬಾಪುವಿನಿಂದ ಹೆಸರು ಸಿಕ್ಕಿತ್ತು. ಮಂಗಳ ಸಂಧ್ಯಾ. “ಅಹ್‌ ನನಗೂ ನನ್ನ ಶೀರ್ಷಿಕೆ ಸಿಕ್ಕಿತು’

ಕಾಲೇಜು ಜೀವನದ ಮೂರು ವರ್ಷಗಳಲ್ಲಿ ಹಲವಾರು ಸಿಹಿ-ಕಹಿ ಅನುಭವಗಳನ್ನು ಕೂಡ ಅನುಭವಿಸಿದ್ದೇವೆ. ಎಲ್ಲ ಅನುಭವಗಳೂ ಕೂಡ ನಮಗೆ ಒಂದು ಜೀವನ ಪಾಠ ಎಂದೇ ಭಾವಿಸಿದ್ದೇನೆ. ಕಾಲೇಜು ಜೀವನದ ಮರೆಯಲಾಗದ ಘಳಿಗೆ ಎಂದರೆ ನಾನು ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ನೇಮಕಗೊಂಡಿದ್ದು. ನಾನು ಸಂಧ್ಯಾ ಕಾಲೇಜಿನ ಇತಿಹಾಸದಲ್ಲಿ ವಿದ್ಯಾರ್ಥಿ ಸಂಘದ ಪ್ರಥಮ ವಿದ್ಯಾರ್ಥಿ ನಾಯಕನಾಗಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎಂದೆನಿಸುತ್ತದೆ. ಅದೇ ರೀತಿಯಾಗಿ ನಮ್ಮ ಬ್ಯಾಚ್‌ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಥಮ ಬ್ಯಾಚ್‌ ಎನ್ನುವುದು ಇನ್ನೊಂದು ಹಿರಿಮೆಯ ಸಂಗತಿ. ಇವೆಲ್ಲದರ ಜೊತೆಗೆ ಹಿರಿಮೆಗೆ ಇನ್ನೊಂದು ಗರಿ ಎಂಬಂತೆ ನನ್ನ ಸಹಪಾಠಿ ಸಹನಾಳೊಂದಿಗೆ ಕಾಲೇಜಿನ ಬೆಸ್ಟ್‌ ಔಟ್‌ಗೊಯಿಂಗ್‌ ಸ್ಟೂಡೆಂಟ್‌ ಎಂದು ಗುರುತಿಸಲ್ಪಟ್ಟಿದ್ದು. ಒಂದು ವೇಳೆ ನಾನು ಮೊದಲ ದಿನದ ಅನುಭವದಿಂದ ಕಾಲೇಜಿಗೆ ಹೋಗದೇ ಇರುವ ನಿರ್ಧಾರ ತೆಗೆದುಕೊಂಡಿದ್ದರೆ ನನ್ನ ಬದುಕಿನ ಈ ಅವಿಸ್ಮರಣಿಯ ಕ್ಷಣಗಳನ್ನು ನಾನು ಕಳೆದುಕೊಳ್ಳುತ್ತಿದ್ದೆ.

ಉಲ್ಲಾಸ್‌ ಕುಮಾರ್‌
ಅಂತಿಮ ಬಿ.ಎ., ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next