ಕುಂದಾಪುರ: ಕಾಂಗ್ರೆಸ್ನವರು ಮನೆ ಮನೆಗೆ ಭೇಟಿ ನೀಡಿ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದಾರೆ. ಕಾರ್ಡ್ನಲ್ಲಿರುವಂತದ್ದು ದೊರೆಯುವ ಯಾವುದೇ ಗ್ಯಾರಂಟಿ ಇಲ್ಲ. ಐದು ಬಾರಿ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಿದ ನೀವು ಈ ಬಾರಿ ನನಗಿಂತಲೂ ಹೆಚ್ಚು ಮತಗಳ ಅಂತರದಿಂದ ಕಿರಣ್ ಕೊಡ್ಗಿ ಅವರು ಗೆಲ್ಲುವಂತೆ ಮಾಡಿಕೊಡಿ. ನಿಮ್ಮ ಸೇವೆಗೆ ನಾವಿಬ್ಬರೂ ಜತೆಯಾಗಿ ಇರುತ್ತೇವೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಕೋಟತಟ್ಟು ಪಡುಕೆರೆ ಅರಮ ದೇವಸ್ಥಾನ ಬಳಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈವರೆಗೆ ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ. ಚುನಾವಣೆಯಲ್ಲಿ ಭರವಸೆಗಳನ್ನು ನೀಡುವುದು ಗೊತ್ತಿದೆ. ಆದರೆ ಜನರನ್ನು ಮರುಳು ಮಾಡುವ ಬಣ್ಣದ ಸುಳ್ಳಿನ ಗ್ಯಾರಂಟಿ ಕಾರ್ಡ್ ನೀಡುವುದು ನೋಡಿರಲಿಲ್ಲ. ಕಾರ್ಡ್ ವಿತರಣೆಗೆ ಬಂದಾಗ ಆಧಾರ್, ಫೋನ್ ನಂಬರ್ ಸಂಗ್ರಹಿಸುತ್ತಿದ್ದು ಇದು ಕಾಂಗ್ರೆಸ್ನ ಕುತಂತ್ರ, ಇದಕ್ಕೆ ಮರುಳಾಗಬೇಡಿ. ಅದರಲ್ಲಿ ಸರಕಾರದ ಸೀಲ್, ಸಚಿವರ, ಅಧಿಕಾರಿಗಳ ಸಹಿ ಇಲ್ಲ ಎಂದರು.
ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಹಾಲಾಡಿ ಶ್ರೀನಿವಾಸ ಶೆಟ್ಟರ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಅವಕಾಶ ನೀಡಿ. ಜನರ ಪ್ರೀತಿ, ವಿಶ್ವಾಸಕ್ಕೆ ಯಾವುದೇ ಚ್ಯುತಿ ಆಗದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
Related Articles
ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷ ಹಾಗೂ ಸ್ವತ್ಛ ಆಡಳಿತಕ್ಕೆ ಪ್ರಾಮಾಣಿಕರ ಆಯ್ಕೆ ನಮ್ಮ ಆದ್ಯತೆಯಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಕುಂದಾಪುರ ಪ್ರಭಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ಭಾಗವಹಿಸಿದ್ದರು.
ಎಲ್ಲೆಡೆಯಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಚೆಂಡೆವಾದನ, ಪುಷ್ಪವೃಷ್ಟಿ ಮೂಲಕ ಕಿರಣ್ ಕೊಡ್ಗಿ ಅವರನ್ನು ಬರಮಾಡಿಕೊಳ್ಳಲಾಯಿತು.