Advertisement

ನೆರೆ ಪೀಡಿತ ಗ್ರಾಮಗಳ ಸ್ಥಳಾಂತರ; ಇನ್ನೂ ಸಿಗದ ಸಹಕಾರ

02:42 PM Apr 27, 2022 | Team Udayavani |

ಬೆಳಗಾವಿ: ನದಿ ತೀರದ ಗ್ರಾಮಗಳ ಸ್ಥಳಾಂತರದ ಪ್ರಸ್ತಾಪ, ಕೂಗು ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಮತ್ತೆ ಕೇಳಿ ಬರುತ್ತಿದೆ. 2005ರಿಂದ ಇದುವರೆಗೆ ಮೂರು ಬಾರಿ ಬಂದ ಭೀಕರ ಪ್ರವಾಹದಿಂದಾಗಿ ಗ್ರಾಮಗಳ ಸ್ಥಳಾಂತರ ಬಗ್ಗೆ ಬಲವಾದ ಕೂಗಿದೆ. ಆದರೆ ಯಾವ ವರ್ಷದಲ್ಲೂ ಈ ಕೂಗಿಗೆ ಗಟ್ಟಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ ಎಂಬುದು ಅಷ್ಟೇ ಸತ್ಯ.

Advertisement

ಗ್ರಾಮಗಳ ಸ್ಥಳಾಂತರ ಬೇಡಿಕೆ ಹೊಸದೇನಲ್ಲ. ಆದರೆ ಸ್ಥಳಾಂತರದ ವಿಷಯದಲ್ಲಿ ಇರುವ ಗೊಂದಲ, ಸರಕಾರದ ಉದಾಸೀನ ಹಾಗೂ ಕೆಲವೆಡೆ ಗ್ರಾಮಸ್ಥರ ಅಸಹಕಾರ ಈ ಬೇಡಿಕೆ ಸದಾ ಜೀವಂತವಾಗಿರುವಂತೆ ಮಾಡಿವೆ. ಮಳೆಗಾಲದ ಆರಂಭ ಹಾಗೂ ನದಿಗಳ ಒಳಹರಿವು ಹೆಚ್ಚಳ ಗ್ರಾಮಸ್ಥರ ಸ್ಥಳಾಂತರದ ಕೂಗು ನೆನಪು ಮಾಡಿಕೊಡುತ್ತವೆ. ಜೊತೆಗೆ ಸರಕಾರದ ವಿಳಂಬ ನೀತಿ ಆಕ್ರೋಶಕ್ಕೂ ಕಾರಣವಾಗುತ್ತಿದೆ.

ಹಾಗೆ ನೋಡಿದರೆ ಗ್ರಾಮಗಳ ಸ್ಥಳಾಂತರ ಅಂದುಕೊಂಡಷ್ಟು ಸರಳವಾಗಿಲ್ಲ. ಸರಕಾರ ಹಾಗೂ ಗ್ರಾಮಗಳ ಜನರ ನಡುವಿನ ಪರಸ್ಪರ ಸಹಕಾರದ ಕೊರತೆ ಎದ್ದುಕಾಣುತ್ತಿದೆ. ಪರಿಣಾಮ ಕೆಲವು ಕಡೆ ಗ್ರಾಮಗಳ ಸ್ಥಳಾಂತರ ಮಾಡಿದ್ದರೂ ಜನರು ಅಲ್ಲಿಂದ ಕದಲಿಲ್ಲ. ತಮ್ಮ ಮನೆ ಹಾಗೂ ಹೊಲಗಳಿಗೆ ಪರಿಹಾರ ಪಡೆದುಕೊಂಡಿದ್ದರೂ ಗ್ರಾಮಸ್ಥರು ತಮ್ಮ ಮೂಲ ಹಳ್ಳಿಯನ್ನು ಬಿಟ್ಟು ಹೋಗಿಲ್ಲ. ಅಷ್ಟೇ ಅಲ್ಲ ಪ್ರವಾಹ ಬಂದು ಮನೆಗಳಿಗೆ ಹಾನಿಯಾದಾಗ ಸರಕಾರವನ್ನು ದೂಷಿಸುವದನ್ನೂ ಬಿಟ್ಟಿಲ್ಲ.

2019ರಲ್ಲಿ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಪ್ರವಾಹದಿಂದ ಉಂಟಾದ ಅವಾಂತರವನ್ನು ಯಾರೂ ಮರೆತಿಲ್ಲ. ಜಿಲ್ಲೆಯ ಪ್ರವಾಹಕ್ಕೆ ಹೆದರಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮೂರು ಬಾರಿ ಜಿಲ್ಲೆಗೆ ಓಡೋಡಿ ಬಂದಿದ್ದರು. ರಾಮದುರ್ಗ ತಾಲೂಕಿನಲ್ಲಿ ಪ್ರವಾಸ ಮಾಡಿದ ಯಡಿಯೂರಪ್ಪ ಆಗ ನದಿ ತೀರದ ಗ್ರಾಮಗಳ ಜನರು ಸ್ಥಳಾಂತರಕ್ಕೆ ಒಪ್ಪಿದರೆ ಸರಕಾರ ಅಂತಹ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಮೂಲಭೂತ ಸೌಲಭ್ಯಗಳೊಂದಿಗೆ ಸ್ಥಳಾಂತರ ಮಾಡಲು ಬದ್ಧವಿದೆ ಎಂದು ಭರವಸೆ ನೀಡಿದ್ದರು. ಆಗ ನದಿ ತೀರದ ಜನರಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿದ್ದವು.

ಸುರೇಬಾನ ಗ್ರಾಮದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಮ್ಮ ನೆರವಿಗೆ ನಿಂತಿವೆ. ಯಾವುದೇ ಕಾರಣಕ್ಕೂ ಆತಂಕ ಪಡುವದು ಬೇಡ. ನಮಗೆ ಸ್ವಲ್ಪ ಕಾಲಾವಕಾಶ ಕೊಡಿ, ನಿಮಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ನಿಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತೇವೆ ಎಂದು ಸಂತ್ರಸ್ತರಿಗೆ ಅಭಯ ನೀಡಿದ್ದರು.

Advertisement

ಆದರೆ ಮಳೆ ಹಾಗೂ ಪ್ರವಾಹ ಮರೆಯಾಗುತ್ತಿದ್ದಂತೆ ಸ್ಥಳಾಂತರದ ಮಾತುಗಳು ಸಹ ಮರೆಯಾದವು. ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಹಾಗೂ ಗ್ರಾಮಸ್ಥರಿಂದ ಮನವಿಗಳು ಸಲ್ಲಿಕೆಯಾದರೂ ಅದರಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಕೊರೊನಾ ಹಾವಳಿಯಲ್ಲಿ ಅದರ ಪ್ರಕ್ರಿಯೆಗಳೇ ನಡೆಯಲಿಲ್ಲ.

ಈಗಿನ ಮಾಹಿತಿಯ ಪ್ರಕಾರ ಗೋಕಾಕ, ಮೂಡಲಗಿ, ರಾಮದುರ್ಗ, ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕುಗಳಲ್ಲಿ 25 ಕ್ಕೂ ಹೆಚ್ಚು ಗ್ರಾಮಗಳ ಸ್ಥಳಾಂತರ ಆಗಬೇಕಿದೆ. ಅದಕ್ಕೆ ಸಾವಿರಾರು ಕೋಟಿ ಬೇಕು. ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ಹಳ್ಳಿಗಳ ಸ್ಥಳಾಂತರ ಅಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ನದಿ ತೀರದ ಗ್ರಾಮಗಳ ಜನರು ಪ್ರವಾಹದ ಜೊತೆ ಜೀವನ ನಡೆಸುವದು ಅನಿವಾರ್ಯವಾಗಿದೆ.

ಸ್ಥಳಾಂತರದ ಅನುಮಾನ: ಜಾಗ ಗುರುತಿಸಿ, ಹಣ ಖರ್ಚು ಮಾಡಿ ಹೊಸ ಗ್ರಾಮಗಳ ನಿರ್ಮಾಣ ಮಾಡಿದರೂ ನದಿ ತೀರದ ಮುಳುಗಡೆ ಗ್ರಾಮಗಳ ಜನರು ಸ್ಥಳಾಂತರವಾಗುವುದಿಲ್ಲ ಎಂಬ ಅನುಮಾನ ಸರಕಾರಕ್ಕಿದೆ. ಪ್ರವಾಹದ ಕಾರಣ ಈ ಹಿಂದೆ ಅಥಣಿ, ರಾಮದುರ್ಗ ತಾಲೂಕುಗಳಲ್ಲಿ ನಿರ್ಮಾಣ ಮಾಡಿರುವ ನವ ಗ್ರಾಮಗಳಿಗೆ ಜನರು ಸ್ಥಳಾಂತರವಾಗದೇ ಇರುವುದು ನಮ್ಮ ಕಣ್ಣಮುಂದೆ ಇರುವುದರಿಂದ ಸಹಜವಾಗಿಯೇ ಸರಕಾರ ಮತ್ತೆ ಹೊಸ ಗ್ರಾಮಗಳ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದೆ.

2005 ರಲ್ಲಿ ಇದೇ ರೀತಿ ಭೀಕರ ಪ್ರವಾಹ ಬಂದೆರಗಿದಾಗ ಸರಕಾರ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತೀರದ 75 ಕ್ಕೂ ಹೆಚ್ಚು ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಯೋಜನೆ ರೂಪಿಸಿತ್ತು. ಆದರೆ ಆಗ ನದಿ ತೀರದ ಜನರಿಂದ ಇದಕ್ಕೆ ನಿರೀಕ್ಷಿತ ಸಹಕಾರ ಸಿಕ್ಕಿರಲಿಲ್ಲ. ಕೆಲವು ಹಳ್ಳಿಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭಿಸಿ ಸುರಕ್ಷಿತ ಸ್ಥಳಗಳಲ್ಲಿ ಹೊಸ ಮನೆಗಳನ್ನು ನಿರ್ಮಾಣ ಮಾಡಿದರೂ ಬಹುತೇಕ ಜನ ಅಲ್ಲಿಗೆ ಹೋಗಲೇ ಇಲ್ಲ. ಇದರಿಂದ ಹಳ್ಳಿಗಳ ಸ್ಥಳಾಂತರ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣವಾಗಲೇ ಇಲ್ಲ. ಕೆಲವು ಹಳ್ಳಿಗಳಲ್ಲಿ ಸೇತುವೆಗಳನ್ನು ಎತ್ತರಮಾಡಿ ಸ್ಥಳಾಂತರ ಪಟ್ಟಿಯಿಂದ ಅವುಗಳನ್ನು ಕೈಬಿಡಲಾಯಿತು.

2019 ರಲ್ಲಿ ಪ್ರವಾಹ ಬಂದಾಗ ಸಾಕಷ್ಟು ಹಾನಿಯಾಗಿದೆ. ಇದೇ ಕಾರಣದಿಂದ ಆಗ 15 ಕ್ಕೂ ಹೆಚ್ಚು ಗ್ರಾಮಗಳ ಸ್ಥಳಾಂತರದ ಬಗ್ಗೆ ಚಿಂತನೆ ಮಾಡಲಾಗಿತ್ತು. ಇದಾದ ಬಳಿಕ ಆರು ಹಳ್ಳಿಗಳಿಗೆ ಸ್ಥಳಾಂತರದ ಬದಲು ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಯಿತು. ಈಗ ಹಂಪಿಹೋಳಿ, ಮಾರಡಗಿ, ಸುರೇಬಾನ, ಮನಿಹಾಳ ಸೇರಿದಂತೆ ಆರು ಗ್ರಾಮಗಳ 9 ಕಿ ಮೀ ವ್ಯಾಪ್ತಿಯಲ್ಲಿ 126 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸರಕಾರ ಅನುಮೋದನೆ ನೀಡಿದೆ. –ಮಹದೇವಪ್ಪ ಯಾದವಾಡ, ಶಾಸಕರು, ರಾಮದುರ್ಗ

ನದಿ ತೀರದಲ್ಲಿರುವ ಗ್ರಾಮಗಳ ಸ್ಥಳಾಂತರ ಮಾಡುವ ಇಚ್ಛಾಶಕ್ತಿ ಸರಕಾರಕ್ಕೆ ಇಲ್ಲ. ಪ್ರತಿ ವರ್ಷ ನದಿಗಳ ಪ್ರವಾಹದಿಂದ ಸಾಕಷ್ಟು ಹಾನಿಯಾಗುತ್ತಿದ್ದರೂ ಅಲ್ಪಸ್ವಲ್ಪ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. 2019 ರಲ್ಲಿ ಭೀಕರ ಪ್ರವಾಹ ಬಂದಾಗ ಸರಕಾರ ರಾಮದುರ್ಗ ಸೇರಿದಂತೆ ನದಿ ಪಾತ್ರದ ತಾಲೂಕುಗಳಲ್ಲಿ ಗ್ರಾಮಗಳ ಸ್ಥಳಾಂತರದ ಭರವಸೆ ನೀಡಿತ್ತು. ಆದರೆ ಎಲ್ಲಿಯೂ ಗ್ರಾಮಗಳ ಸ್ಥಳಾಂತರಕ್ಕೆ ಜಾಗ ಹುಡುಕುವ ಪ್ರಕ್ರಿಯೆ ನಡೆದೇ ಇಲ್ಲ. ಅಶೋಕ ಚಂದರಗಿ, ಸಾಮಾಜಿಕ ಹೋರಾಟಗಾರರು

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next