Advertisement

ನಿಯೋಗಕ್ಕೆ ಹಿಂಸೆ ದರ್ಶನ : ಕಾಶ್ಮೀರದಲ್ಲಿ ಕಲ್ಲುತೂರಾಟ, ಹಿಂಸಾಚಾರ

10:05 AM Nov 01, 2019 | Hari Prasad |

ಶ್ರೀನಗರ/ಹೊಸದಿಲ್ಲಿ: ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ನೈಜ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಐರೋಪ್ಯ ಒಕ್ಕೂಟದ ಸಂಸದರ ನಿಯೋಗವು ಕಣಿವೆ ರಾಜ್ಯಕ್ಕೆ ಆಗಮಿಸಿದ ದಿನವೇ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿದೆ.

Advertisement

ರಾಜ್ಯದ ಹಲವೆಡೆ ಕಲ್ಲುತೂರಾಟ, ಘರ್ಷಣೆಗಳು ನಡೆದಿದ್ದು, ಉಗ್ರರಿಂದ ಗುಂಡಿನ ದಾಳಿಯಾದ ಘಟನೆಯೂ ನಡೆ ದಿದೆ. ಅಲ್ಲದೆ, ಮೊನ್ನೆಯವರೆಗೂ ತೆರೆದಿದ್ದ ಬೆರಳೆಣಿಕೆಯ ಅಂಗಡಿ ಮುಂಗಟ್ಟುಗಳು ಕೂಡ ಮಂಗಳವಾರ ಬಾಗಿಲು ಮುಚ್ಚಿದ್ದು ಅಚ್ಚರಿ ಮೂಡಿಸಿದೆ.

ಐರೋಪ್ಯ ಒಕ್ಕೂಟದ 23 ಸಂಸದರನ್ನು ಭದ್ರತಾ ಪಡೆಗಳ ಬೆಂಗಾವಲು ಮೂಲಕ ಬುಲೆಟ್‌ ಪ್ರೂಫ್ ವಾಹನದಲ್ಲಿ ಕಣಿವೆ ರಾಜ್ಯಕ್ಕೆ ಕರೆದೊಯ್ಯಲಾಯಿತು. ಜಮ್ಮು- ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮುಖ್ಯಸ್ಥರು ಈ ನಿಯೋಗಕ್ಕೆ ರಾಜ್ಯದ ಸ್ಥಿತಿ ಕುರಿತು ವಿವರಣೆ ನೀಡಿದರು. ಬಳಿಕ ತಂಡವು, ಹೊಸದಾಗಿ ಚುನಾಯಿತರಾದ ಪಂಜಾಯತ್‌ ಸದಸ್ಯರು, ಕೌನ್ಸಿಲರ್‌ಗಳು ಸೇರಿದಂತೆ ಸಾರ್ವಜನಿಕರನ್ನು ಪಂಚತಾರಾ ಹೋಟೆಲ್‌ವೊಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು. ದಾಲ್‌ ಸರೋವರದಲ್ಲಿ ಸಂಸದರ ನಿಯೋಗವು ಬೋಟಿಂಗ್‌ ಕೂಡ ನಡೆಸಿತು.

ಭೇಟಿಗೂ ಮುನ್ನ ಘರ್ಷಣೆ: ನಿಯೋಗದ ಭೇಟಿ ದಿನವೇ ಅಂದರೆ ಮಂಗಳವಾರ ಶ್ರೀ ನಗರ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನಾಕಾರರು ಮತ್ತು ಭದ್ರತಾಪಡೆಗಳ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಶ್ರೀನಗರದ 5 ಕಡೆ ಜನರು ರಸ್ತೆ ತಡೆ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನಗಳ ಸಂಚಾರವೂ ವಿರಳವಾಗಿತ್ತು. ಕಳೆದ ಕೆಲ ದಿನಗಳಿಂದ ಬೀದಿಬದಿಯಲ್ಲಿ ವ್ಯಾಪಾರ ಆರಂಭಿಸಿದ್ದ ಕೆಲವು ವರ್ತಕರು ಮಂಗಳವಾರ ಅಂಗಡಿಗಳನ್ನು ತೆರೆಯಲೇ ಇಲ್ಲ. 10ನೇ ತರಗತಿಯ ಪರೀಕ್ಷೆಗಳು ನಡೆಯುತ್ತಿರುವ ಕಾರಣ, ಆತಂಕಕ್ಕೊಳಗಾದ ಹೆತ್ತವರು ತಮ್ಮ ಮಕ್ಕಳ ಬರುವಿಕೆಗಾಗಿ ಪರೀಕ್ಷಾ ಹಾಲ್‌ಗ‌ಳ ಹೊರಗೆ ಕಾಯುತ್ತಿದ್ದುದು ಕಂಡುಬಂತು.

ಈ ನಡುವೆ, ಕಾಶ್ಮೀರದ ಸ್ಥಿತಿ ಕುರಿತು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಕಣಿವೆ ರಾಜ್ಯದ ಜನರು ವ್ಯಾಪಕವಾಗಿ ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಭಾರತ ಸರಕಾರವು ಅವರ ಹಕ್ಕುಗಳನ್ನು ಪುನಸ್ಥಾಪಿಸುವ ಕೆಲಸ ಮಾಡಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.

Advertisement

ಆಹ್ವಾನ ವಾಪಸ್‌: ಐರೋಪ್ಯ ಒಕ್ಕೂಟದ ನಿಯೋಗದ ಜೊತೆಗೆ ಭಾರತಕ್ಕೆ ತೆರಳಲು ತಮಗೂ ಆಹ್ವಾನ ಬಂದಿತ್ತು. ಆದರೆ, “ತಮಗೆ ಮುಕ್ತವಾಗಿ ಸಂಚರಿಸಿ ಜನರೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡಬೇಕು. ಜನರೊಂದಿಗೆ ಮಾತನಾಡುವಾಗ ನನ್ನ ಜೊತೆಗೆ ಭದ್ರತಾ ಪಡೆ ಅಥವಾ ಪೊಲೀಸರು ಇರಬಾರದು’ ಎಂಬ ಕೋರಿಕೆ ಸಲ್ಲಿಸಿದ ನಂತರ, ಆಹ್ವಾನವನ್ನು ವಾಪಸ್‌ ಪಡೆಯಲಾಯಿತು ಎಂದು ಯುಕೆ ಹಿರಿಯ ಸಂಸದ ರೊಬ್ಬರು ಆರೋಪಿಸಿದ್ದಾರೆ.

ನಿಯೋಗಕ್ಕೆ ಅವಕಾಶ: ವಿಪಕ್ಷಗಳ ಕಿಡಿ
ಐರೋಪ್ಯ ಒಕ್ಕೂಟದ ನಿಯೋಗದ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟ ಬೆನ್ನಲ್ಲೇ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. “ಕೆಲವೊಂದು ಪಕ್ಷಗಳು ಹಾಗೂ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿರುವ ಐರೋಪ್ಯದ ಸಂಸದರನ್ನು ಕಾಶ್ಮೀರಕ್ಕೆ ಭೇಟಿ ನೀಡಲು ಅನುವು ಮಾಡಲಾಗಿದೆ. ಸರಕಾರವೇ ಈಗ ನಮ್ಮ ಆಂತರಿಕ ವಿಚಾರವನ್ನು ಅಂತಾ ರಾಷ್ಟ್ರೀಕರಣಗೊಳಿಸುತ್ತಿದೆ.

ಇದೊಂದು ರಾಷ್ಟ್ರೀಯ ಮುಜುಗರದ ಸಂಗತಿ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಆನಂದ್‌ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್‌, ಪ್ರಿಯಾಂಕಾ ವಾದ್ರಾ ಕೂಡ ಸರಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಐರೋಪ್ಯ ನಿಯೋಗಕ್ಕೆ ಕೆಂಪು ಹಾಸು ಹಾಸಿರುವ ಸರಕಾರ, ನಮಗೂ ಕಾಶ್ಮೀರ ಭೇಟಿಗೆ ಅವಕಾಶ ನೀಡಲಿ ಎಂದು ಸಿಪಿಐ ನಾಯಕರು ಹೇಳಿದ್ದಾರೆ.

5 ಕಾರ್ಮಿಕರ ಹತ್ಯೆ
ಕಣಿವೆ ರಾಜ್ಯದಲ್ಲಿ ವಲಸಿಗರ ಮೇಲೆ ದಾಳಿ ಮುಂದುವರಿದಿದ್ದು, ಉಗ್ರರು ಮಂಗಳವಾರ ಕುಲ್ಗಾಂ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಲ ಮೂಲದ ಐವರು ಕಾರ್ಮಿಕರನ್ನು ಹತ್ಯೆಗೈದಿದ್ದಾರೆ. ಕಾರ್ಮಿಕರಿದ್ದ ಬಾಡಿಗೆ ಮನೆಗೆ ನುಗ್ಗಿ, ಅವರನ್ನು ಹೊರಗೆಳೆದು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಈ ಮೂಲಕ ಕಳೆದ 15 ದಿನಗಳಲ್ಲಿ ಒಟ್ಟು 11 ವಲಸಿಗರನ್ನು ಕೊಂದಂತಾಗಿದೆ.

ಬಿಜೆಪಿಯ ರಾಷ್ಟ್ರೀಯವಾದವೇ ವಿಚಿತ್ರವಾಗಿದೆ. ಐರೋಪ್ಯದ ಸಂಸದರು ಕಾಶ್ಮೀರಕ್ಕೆ ಭೇಟಿ ಕೊಡಬಹುದು ಮತ್ತು ಆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಹುದು. ಆದರೆ, ಭಾರತೀಯ ಸಂಸದರನ್ನು ಮಾತ್ರ ಏರ್‌ಪೋರ್ಟ್‌ನಿಂದ ವಾಪಸ್‌ ಕಳುಹಿಸಲಾಗುತ್ತದೆ
– ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

ಕಾಶ್ಮೀರ ಸಹಜ ಸ್ಥಿತಿಗೆ ಬಂದಿದೆ. ಅಲ್ಲಿಗೆ ತೆರಳದಂತೆ ವಿಪಕ್ಷಗಳನ್ನು ಯಾರೂ ತಡೆದಿಲ್ಲ. ಅಲ್ಲಿನ ಸ್ಥಿತಿ ಕುರಿತ ಸತ್ಯ ಹೊರಬಂದರೆ ತಮ್ಮ ಪ್ರಯತ್ನಗಳೆಲ್ಲ ವಿಫ‌ಲವಾಗುತ್ತದೆ ಎಂಬ ಹತಾಶೆಯಿಂದ ವಿಪಕ್ಷಗಳು ಐರೋಪ್ಯ ನಿಯೋಗವನ್ನು ವಿರೋಧಿಸುತ್ತಿವೆ.
– ಶಹನವಾಜ್‌ ಹುಸೇನ್‌, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next