Advertisement

ಶಿಕ್ಷಕರ ನೇಮಿಸಿ ಗಡಿಯಂಚಿನ ಕನ್ನಡ ಶಾಲೆ ಉಳಿಸಿ

07:26 AM Feb 22, 2019 | Team Udayavani |

ಹನೂರು(ನಡುಮಲೆ ಶ್ರೀ ಮಹದೇಶ್ವರ ವೇದಿಕೆ): ಗಡಿಯಂಚಿನ ಕನ್ನಡ ಶಾಲೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿನ ಶಾಲೆಗಳಿಗೆ ಏಕ ಉಪಾಧ್ಯಾಯರನ್ನು ನೇಮಿಸುವ ಬದಲು ಇಬ್ಬರು ಉಪಾಧ್ಯಾಯರನ್ನು ನೇಮಿಸಿ ಶಾಲೆಗಳ ಸುಧಾರಣೆಗೆ ಕ್ರಮವಹಿಸಬೇಕು ಎಂದು ಹನೂರು ತಾಲೂಕು ಚೊಚ್ಚಲ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪೊ›.ಕೇಶವನ್‌ ಪ್ರಸಾದ್‌ ಸಲಹೆ ನೀಡಿದರು. 

Advertisement

ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಕಸಾಪ ಹನೂರು ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಚೊಚ್ಚಲ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕೇಶವನ್‌ ಪ್ರಸಾದ್‌ ಮಾತನಾಡಿದರು.

ಸವಾಲು ಸ್ವೀಕರಿಸಿ: ಕನ್ನಡ ಕೇವಲ ಭಾಷೆಯಲ್ಲ. ಅದು ಐದು ಕೋಟಿ ಕನ್ನಡಿಗರು ಮತ್ತು ವಿಶಾಲ ಕರ್ನಾಟಕವನ್ನು ಪ್ರತಿನಿಧಿಸುವ ಒಂದು ಮಾಂತ್ರಿಕ ನುಡಿಯಾಗಿದೆ. ಕನ್ನಡಿಗರು ಹೃದಯವಂತರು ಮತ್ತು ಭಾವುಕ ಜೀವಿಗಳಾಗಿದ್ದು, ಅನ್ಯಭಾಷಿಕರಿಗೆ ದೊಡ್ಡತನ ಪ್ರದರ್ಶಿಸಲು ಹೋಗಿ ಅನ್ಯಭಾಷಿಕರ ಬಣ್ಣದ ಮಾತುಗಳಿಗೆ ಮಾರುಹೋಗಿ ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತಾಗಿದ್ದೇವೆ.

ನಮ್ಮ ಧಾರಾಳತನ ದುರುಳತನವಾಗಿ ಪರಿಣಮಿಸಿದ್ದು, ಈ ಮೂಲಕ ನಮ್ಮ ಅಸ್ತಿತ್ವಕ್ಕೆ ಧಕ್ಕೆ  ತಂದುಕೊಳ್ಳುತ್ತಿದ್ದೇವೆ. ಹೀಗಾಗಿ ಕನ್ನಡಿಗರು ಜಾಗೃತರಾಗುವುದು ಅನಿವಾರ್ಯವಾಗಿದೆ. ಕರ್ನಾಟಕ-ಕನ್ನಡ ಮತ್ತು ಕನ್ನಡಿಗರು ಹಲವಾರು ಸಮಸ್ಯೆ ಎದುರಿಸುತ್ತಿದ್ದು ಅವುಗಳನ್ನು ಸವಾಲನ್ನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ನೆಲ-ಜಲ ರಕ್ಷಣೆ ಹೊಣೆ: ಕಾವೇರಿ ನದಿ ನೀರು ಹಂಚಿಕೆ ದೊಡ್ಡ ಸವಾಲಾಗಿದ್ದು, ಕರ್ನಾಟಕ ಮತ್ತು ತಮಿಳುನಾಡು ಅನೇಕ ದಶಕಗಳಿಂದ ಹೋರಾಟ ಮಾಡುತ್ತಿವೆ. ಮಳೆಗಾಲದಲ್ಲಿ ಯಥೇತ್ಛವಾದ ನೀರು ಸಮುದ್ರದ ಪಾಲಾಗುತ್ತಿದ್ದು ಬಳಕೆಗೆ ಲಭಿಸುತ್ತಿಲ್ಲ. ಈ ನೀರನ್ನುಬಳಕೆ ಮಾಡಿಕೊಂಡು ಕೆರೆ ಕಟ್ಟೆ ತುಂಬಿಸಿಕೊಳ್ಳಬೇಕು.

Advertisement

ಕರ್ನಾಟಕದ ಅರಣ್ಯದಲ್ಲಿ ದೊರೆಯುವ ಉತ್ಪನ್ನಗಳಲ್ಲಿ ಜೀವ ರಕ್ಷಕ ಗುಣಗಳಿದ್ದು, ಅವುಗಳನ್ನು ಸಂಗ್ರಹಿಸಿ ನೆರೆಯ ರಾಜ್ಯಗಳಿಗೆ ಮಾರುತ್ತಿದ್ದೇವೆ. ಬಳಿಕ ಅಲ್ಲಿಂದ ತಯಾರಾದ ಉತ್ಪನ್ನಗಳನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸುತ್ತಿದ್ದೇವೆ. ಅದರ ಬದಲು ಸ್ಥಳೀಯವಾಗಿಯೇ ಉಪಯುಕ್ತವಾದ ಆಹಾರ ಪದಾರ್ಥ ಮತ್ತು ಔಷಧ ಸಿದ್ಧಪಡಿಸುವ ಉದ್ದಿಮೆ ಪ್ರಾರಂಭಿಸಬೇಕು. ಈ ಮೂಲಕ ನಿರುದ್ಯೋಗ ನಿವಾರಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ಬಳಸಿ: ಭಾರತ ವಿಶ್ವದಲ್ಲಿಯೇ ಅತ್ಯಂತ ಸಂಪದ್ಭರಿತ ರಾಷ್ಟ್ರವಾಗಿದ್ದು, ಇಲ್ಲಿನ ಪ್ರಕೃತಿದತ್ತವಾದ ಸೌರಶಕ್ತಿಯನ್ನು ಬಳಕೆ ಮಾಡಿಕೊಂಡು ವಿದ್ಯುತ್‌ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯುವಶಕ್ತಿ ಮತ್ತು ಚಿಂತಕರು ಮುಂದಾಗಬೇಕು ಎಂದು ತಿಳಿಸಿದರು.

ಮಹದೇಶ್ವರ ಕಾರ್ಖಾನೆ ಉಳಿಸಿಕೊಳ್ಳಲಾಗಲಿಲ್ಲ: ಸುಮಾರು 50 ವರ್ಷಗಳ ಹಿಂದೆ ಚಿಕ್ಕಮರಿಗೌಡ ಮತ್ತು ಸಮಕಾಲೀನರು ಕೊಳ್ಳೇಗಾಲದ ಕುಂತೂರಿನಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಮನೆ-ಮನೆ, ಹಳ್ಳಿ-ಹಳ್ಳಿ ಸುತ್ತಾಡಿ 10 ರೂಪಾಯಿ ಷೇರು ಸಂಗ್ರಹಿಸುವ ಮೂಲಕ ಮಹದೇಶ್ವರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ಆದರೆ, ಮುಂದಿನ ದಿನಗಳಲ್ಲಿ ಖೋಡೆ ಎನ್ನುವ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಲಾಯಿತು.

ಬಳಿಕ ಕಾರ್ಖಾನೆ ಸ್ಥಗಿತವಾಯಿತು. ಅಂತಿಮವಾಗಿ ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಉದ್ಯಮಿಯೋರ್ವ ಆ ಕಾರ್ಖಾನೆ ಖರೀದಿಸಿ ಆಧುನೀಕರಣಗೊಳಿಸಿ ಇಂದು ಹೆಚ್ಚಿನ ಲಾಭದಲ್ಲಿ ನಡೆಸುತ್ತಿದ್ದಾರೆ.ಹಲವಾರು ಕನ್ನಡಿಗರಿಗೆ ಉದ್ಯೋಗ ನೀಡಬಹುದಾದಂತಹ ಒಂದು ಕಾರ್ಖಾನೆ ಉಳಿಸಿಕೊಳ್ಳಲು ಸಾಧ್ಯವಾಗದೆ ನಮ್ಮ ನೆಲ-ಜಲದಲ್ಲಿ ಅನ್ಯ ಭಾಷಿಗನೊಬ್ಬ ಲಾಭ ಪಡೆಯುತ್ತಿರುವುದು ತೋರಾ ವಿಷಾದನೀಯ ಎಂದು ಸಮ್ಮೇಳನಾಧ್ಯಕ್ಷ ಪ್ರೊ. ಕೇಶವನ್‌ ತಿಳಿಸಿದ‌ರು.

ಪ್ರವಾಸಿತಾಣ ಹೊಗೇನಕಲ್‌ ಅಭಿವೃದ್ಧಿಪಡಿಸಿ: ಹೊಗೇನಕಲ್‌ ಗಡಿ ವಿವಾದ ಮುಗಿದ ಅಧ್ಯಯವಾಗಿದ್ದು, ಅದು ಕರ್ನಾಟಕಕ್ಕೆ ಸೇರಿದ್ದಾಗಿದೆ. ಆದರೆ, ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡಿಗರಾದ ನಾವು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವಲ್ಲಿ ಎಡವಿದ್ದೇವೆ ಎಂದು ಸಮ್ಮೇಳನಾಧ್ಯಕ್ಷ ಪೊ›.ಕೇಶವನ್‌ ಪ್ರಸಾದ್‌ವಿಷಾದಿಸಿದರು.

ಗಡಿ ಭಾಗದ ಹೊಗೇನಕಲ್‌ ಸಮಸ್ಯೆ 1956ರಲ್ಲಿಯೇ ಬಗೆಹರಿದಿದೆ. ಈ ಭಾಗದಲ್ಲಿನ ಸುಂದರ ಪ್ರಕೃತಿ ತಾಣಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಆಕರ್ಷಿತರಾದ ತಮಿಳು ಭಾಷಿಗರು ಅಲ್ಲಿಯೇ ವಾಸ್ತವ್ಯ ಹೂಡಿ ಕಾಡಂಚಿನ ಭೂಮಿಯನ್ನು ಅಕ್ರಮವಾಗಿ ಉಳುಮೆ ಮಾಡುತ್ತಾ ಪ್ರವಾಸಿಗರಿಗೆ ಊಟ- ತಿಂಡಿ, ನೀರು ವಸತಿ ನೀಡುತ್ತಾ ಕಾಯಂ ಆಗಿ ಉಳಿದರು.

ಬಳಿಕ ಉಳುವವನಿಗೆ ಭೂ ಒಡೆತನ ನೀಡಿದ್ದರಿಂದ ಇಲ್ಲಿಯೇ ವಾಸವಾದರು. ಆದರೆ, ಇಂದು ತಮಿಳುನಾಡಿಗೆ ಸೇರಿದ್ದು ಎಂದು ಸ್ವಯಂ ಘೋಷಿಸಿಕೊಳ್ಳುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಪ್ರವಾಸಿತಾಣವನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next