Advertisement

ಕೋವಿಡ್‌ ಅವ್ಯವಹಾರ ತನಿಖೆಯಾಗಲಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಆಗ್ರಹ

05:33 PM Aug 06, 2020 | sudhir |

ಬಾಗಲಕೋಟೆ: ಕೋವಿಡ್ ನಂತಹ ಕಠಿಣ ಸಂದರ್ಭದಲ್ಲೂ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೋವಿಡ್‌ನ‌ ವಿವಿಧ ಸಾಮಗ್ರಿ ಖರೀದಿ ಭ್ರಷ್ಟಾಚಾರದ ಕುರಿತು ಕೂಡಲೇ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲದಿದ್ದರೆ ವಿಧಾನಸಭೆಯಲ್ಲಿ ಹೋರಾಟ ನಡೆಸುತ್ತೇವೆ. ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ನಮ್ಮ ದೇಶದೊಂದಿಗೆ ವೈರತ್ವ ಸಾಧಿಸುತ್ತಿದೆ. ಆದರೂ, ಅದೇ ದೇಶದಿಂದ ಹೆಚ್ಚಿನ ಬೆಲೆಗೆ ಪಿಪಿಇ ಕಿಟ್‌ ಖರೀದಿಸಲಾಗಿದೆ. ಕೋವಿಡ್‌ ನಿಯಂತ್ರಣದಲ್ಲಿ ಕೇಂದ್ರ-ರಾಜ್ಯ ಸರ್ಕಾರ ಸಂಪೂರ್ಣ
ವಿಫಲವಾಗಿವೆ ಎಂದು ಆರೋಪಿಸಿದರು.

ಕೇಂದ್ರ-ರಾಜ್ಯ ಸರ್ಕಾರಕ್ಕೆ ಕೇವಲ ಕಣ್ಣು-ಕಿವಿ ಅಷ್ಟೇ ಅಲ್ಲ. ಹೃದಯವೂ ಇಲ್ಲ. ಕೊರೊನಾ ನಿಯಂತ್ರಣಕ್ಕಾಗಿ ಸರ್ವ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಯಾವುದೇ ಸಲಹೆ ಪರಿಗಣಿಸಿಲ್ಲ. ವಿವಿಧ ಸಾಮಗ್ರಿ ಖರೀದಿ ಭ್ರಷ್ಟಾಚಾರದ ಕುರಿತು ವಿಧಾನಸಭೆಯ
ಸಾರ್ವಜನಿಕ ಲೆಕ್ಕ ಪರಿಶೀಲನೆ ಸಮಿತಿಯಿಂದ ದಾಖಲೆ ಪರಿಶೀಲನೆಗೆ ಮುಂದಾದರೆ, ಸರ್ಕಾರ ಅದನ್ನು ತಡೆಯಿತು. ಭ್ರಷ್ಟಾಚಾರವೇ ನಡೆದಿಲ್ಲ ಎಂದರೆ, ಅದನ್ನು ತಡೆದಿದ್ದು ಏಕೆ? ಎಂದು ಪ್ರಶ್ನಿಸಿದರು. ಕೊರೊನಾ ನಿಯಂತ್ರಣ, ಚಿಕಿತ್ಸೆಗಾಗಿ ಸರ್ಕಾರ ಒಟ್ಟು 4167 ಕೋಟಿ ಮೊತ್ತದ ವಿವಿಧ ಸಾಮಗ್ರಿ ಖರೀದಿಸಿದೆ. ಆದರೂ, ಭ್ರಷ್ಟಾಚಾರ ನಡೆಸಿಲ್ಲ ಎಂದು ಹೇಳುತ್ತಿದೆ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕರಿಗೆ ನೋಟಿಸ್‌ ಕೊಡಲಾಗಿದೆ. 130 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷ ಬಿಜೆಪಿಯ ಇಂತಹ ನೋಟಿಸ್‌ಗೆ ಹೆದರುವುದಿಲ್ಲ ಎಂದರು.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರು ಬೆಡ್‌ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವರು ಬೀದಿಯಲ್ಲೇ ಸಾಯುತ್ತಿದ್ದಾರೆ. ಆದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಬೆಡ್‌ ಸಮಸ್ಯೆ ನೀಗಿಸಿ, ಜನರಿಗೆ ಸರಿಯಾದ ಚಿಕಿತ್ಸೆ ಕೊಡುತ್ತಿಲ್ಲ. ಕೋವಿಡ್ ವಾರಿಯರ್‌
ಗಳೇ ವೆಂಟಿಲೇಟರ್‌ ಇಲ್ಲದೇ ಸಾವನ್ನಪ್ಪಿದ್ದಾರೆ. ಕೇವಲ 350 ರೂ. ಇದ್ದ ಪಿಪಿಇ ಕಿಟ್‌, ಒಮ್ಮೆಲೇ 2 ಸಾವಿರ ಹೇಗಾಯಿತು. 500 ಎಂಎಲ್‌ ಸ್ಯಾನಿಟೈಸರ್‌ ಗೆ ಕೇವಲ 80ರಿಂದ 100 ರೂ. ಇದೆ. ಆದರೆ, 600 ರೂ. ನೀಡಿ ಖರೀದಿಸಿದ್ದು ಭ್ರಷ್ಟಾಚಾರ ಅಲ್ಲವೇ ಎಂದು
ಪ್ರಶ್ನಿಸಿದರು.

ವಾರ ಕಳೆದರೂ ವರದಿ ಬರ್ತಿಲ್ಲ: ಕೋವಿಡ್ ತಪಾಸಣೆಗೆ ರ್ಯಾಪಿಟ್‌ ಕಿಟ್‌ಗಳೂ ಇಲ್ಲ. ಆರ್‌ಟಿಪಿಸಿಆರ್‌ನಿಂದ 24 ಗಂಟೆಯಲ್ಲಿ ರ್ಯಾಪಿಡ್‌ ಕಿಟ್‌ನಿಂದ ಅರ್ಧ ಗಂಟೆಯಲ್ಲಿ ಕೋವಿಡ್ ವರದಿ ಕೊಡಬೇಕು. ಆದರೆ, ಒಂದೊಂದು ವಾರ ಕಳೆದರೂ,
ವರದಿ ಬರುತ್ತಿಲ್ಲ. ಇದು ಕೋವಿಡ್ ವಿಸ್ತರಣೆಗೂ ಕಾರಣವಾಗಿದೆ ಎಂದರು.

Advertisement

ಕೋವಿಡ್ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಕಾರ್ಯಕ್ಕೆ ಕಾಂಗ್ರೆಸ್‌ ಎಲ್ಲ ರೀತಿಯ ಸಹಕಾರ ನೀಡಿತ್ತು. ಆದರೆ ಇಂತಹ ಸಂಕಷ್ಟದಲ್ಲೂ ಭ್ರಷ್ಟಾಚಾರ ನಡೆಸುತ್ತಿದ್ದು, ಇದಕ್ಕೆ ಸಹಕಾರ ಕೊಡಲು ಸಾಧ್ಯವಿಲ್ಲ. ಕೂಡಲೇ ಹಾಲಿ ನ್ಯಾಯಮೂರ್ತಿಗಳಿಂದ
ತನಿಖೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ತಿಂಗಳಿಂದ ನಡೆಯುವ ಅಧಿವೇಶನದಲ್ಲಿಯೇ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ಕೋರ್ಟ್‌ಗೂ ದಾಖಲೆ ನೀಡಲಿದ್ದೇವೆ ಎಂದರು.

ಶ್ವೇತಪತ್ರ ಹೊರಡಿಸಲಿ: ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿತು. ಈ ಹಣ ಎಲ್ಲಿದೆ, ಯಾರಿಗೆ ಎಷ್ಟು ಕೊಡಲಾಗಿದೆ ಎಂಬುದರ ಶ್ವೇತಪತ್ರ ಹೊರಡಿಸಬೇಕು. ಕೇವಲ 1.80 ಲಕ್ಷ ಕೋಟಿ ಮಾತ್ರ ನಿಜವಾದ ಪ್ಯಾಕೇಜ್‌. ಉಳಿದದ್ದು ಸಾಲ
ಕೊಡಲಾಗುತ್ತಿದೆ. ಸಾಲ ಕೊಟ್ಟರೆ ಅದು ಸಹಾಯಧನದ ಪ್ಯಾಕೇಜ್‌ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಕೋವಿಡ್ ವಿರುದ್ಧ ಹೋರಾಟ ನಡೆಸಿದ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಹೋರಾಟ ನಡೆಸಿದರೂ, ಕನಿಷ್ಠ ಸೌಜನ್ಯಕ್ಕಾಗಿ ಅವರೊಂದಿಗೆ ಚರ್ಚೆಯೂ ನಡೆಸಲಿಲ್ಲ. ಇಂತಹ ಹೃದಯ-ಕರುಣೆ ಇಲ್ಲದ ಸರ್ಕಾರಕ್ಕೆ ಮುಂದೆ ಜನರೇ ತಕ್ಕ ಪಾಠ
ಕಲಿಸುತ್ತಾರೆ ಎಂದರು.

ಕೋವಿಡ್ ಸೋಂಕಿತರಿಗೆ ನೆರವಾಗಿ ಕಾಂಗ್ರೆಸ್‌ ನಿಂದ ಆರೋಗ್ಯ ಸಹಾಯವಾಣಿ ಆರಂಭಿಸಲಾಗಿದೆ. ಯಾರೇ ಶಂಕಿತರು, ಸೋಂಕಿತರು ಇದ್ದರೆ ಅವರಿಗೆ ಸೋಂಕಿನ ಕುರಿತು ತಿಳಿವಳಿಕೆ ಹೇಳುವ ಜತೆಗೆ ಅವರ ಚಿಕಿತ್ಸೆಗೆ ನೆರವಾಗಲು ನಮ್ಮ ಪಕ್ಷದ 18 ವರ್ಷದಿಂದ 40 ವರ್ಷದ ಕಾರ್ಯಕರ್ತರು ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ವಿಪ ಸದಸ್ಯ ಆರ್‌.ಬಿ. ತಿಮ್ಮಾಪುರ,
ಮಾಜಿ ಸಚಿವರಾದ ಎಚ್‌.ವೈ. ಮೇಟಿ, ಉಮಾಶ್ರೀ, ಅಜಯಕುಮಾರ ಸರನಾಯಕ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಮಾಜಿ ಶಾಸಕ ಜೆ.ಟಿ. ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ, ಸತೀಶ ಬಂಡಿವಡ್ಡರ, ವಿನಯ ತಿಮ್ಮಾಪುರ, ರಾಜು ಮನ್ನಿಕೇರಿ, ನಾಗರಾಜ ಹದ್ಲಿ, ಎಂ.ಎಲ್‌.
ಶಾಂತಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next