Advertisement

ಪರಿಸರ ಪ್ರೇಮಿಗಳನ್ನು ಕರೆಯುತ್ತಿದೆ ಮಣಿಪಾಲದ ವೃಕ್ಷೋದ್ಯಾನ

11:45 PM May 04, 2019 | sudhir |

ಉಡುಪಿ: ಸಾಲುಮರದ ತಿಮ್ಮಕ್ಕನ ಹೆಸರಿನ ಮಣಿಪಾಲದ ವೃಕ್ಷೋದ್ಯಾನ ಇನ್ನಷ್ಟು ನವೀಕರಣಗೊಂಡು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಈ ಭಾಗಕ್ಕೆ ಪ್ರವಾಸಕ್ಕೆಂದು ಬರುವವರಿಗೂ ಇದು ಹೊಸ ಆಕರ್ಷಣೆಯಾಗಿದೆ.

Advertisement

1 ಕೋ.ರೂ. ಖರ್ಚು
ಒಟ್ಟು 6.5 ಎಕ್ರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಿದ್ದು ಒಂದು ವರ್ಷದ ಹಿಂದೆ ಉದ್ಘಾಟನೆಗೊಂಡಿತ್ತು. ಸುಮಾರು 1 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇನ್ನೂ ಆರೇಳು ಎಕ್ರೆ ಅರಣ್ಯ ಇಲಾಖೆ ಭೂಮಿ ಯಲ್ಲಿ ಇದನ್ನು ವಿಸ್ತರಿಸಿ ಮಂಗಳೂರಿನ ಪಿಲಿಕುಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಅವಕಾಶಗಳಿವೆ.

ಏನೇನಿದೆ?
ಮಚ್ಚಾನ್‌ ಪೋಸ್ಟ್‌, ಗಜೆಬೊ/ ಪೆರಗೊಲಾ, ಆ್ಯಂಪಿಥಿಯೇಟರ್‌, ಸೆಲ್ಫಿ
ಝೋನ್‌, ಆಸನ ರಚಿಸಿದ್ದು ಪ್ರವಾಸಿಗರು ಇದರಿಂದ ಖುಷಿಪಡಬಹುದು. ಜಿಪ್‌ಲೈನರ್‌ನ್ನು ಹೆಚ್ಚು ಆನಂದಿಸುವವರು ಮಕ್ಕಳು. ಕೃತಕ ಸಣ್ಣ ಜಲಪಾತ ರಚಿಸಲಾಗಿದೆ. ಒಂದು ಬೋರ್‌ವೆಲ್‌ ಇದ್ದು ಶುಚಿತ್ವ ಕಾಪಾಡಲು ಸುಸಜ್ಜಿತ ಶೌಚಾಲಯಗಳಿವೆ. ಪ್ಲಾಸ್ಟಿಕ್‌ ಇಲ್ಲಿ ನಿಷೇಧಿಸಬೇಕಾದ ಅಗತ್ಯವಿದೆ.

ಬಸ್‌ ಸಂಪರ್ಕದ ಕೊರತೆ
ಮಣಿಪಾಲ ಬಸ್‌ ನಿಲ್ದಾಣದಿಂದ ಟ್ಯಾಪ್ಮಿ, ವೃಕ್ಷ ಉದ್ಯಾನವನಕ್ಕೆ 5.5 ಕಿ.ಮೀ. ದೂರ ಇದೆ. ಇಲ್ಲಿಗೆ ಹೋಗಬೇಕಾದರೆ ಸ್ವಂತ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನ ಹೊಂದಿರಬೇಕು. ಶಿವಳ್ಳಿ ಕೈಗಾರಿಕಾ ಪ್ರಾಂಗಣದ ಬಳಿ ಟ್ಯಾಪ್ಮಿ ತಿರುವಿನಿಂದ ರಿಕ್ಷಾ ಸಿಗುತ್ತದೆಯಾದರೂ ದುಬಾರಿ. ಮಣಿಪಾಲದಿಂದಲೂ ರಿಕ್ಷಾ ದುಬಾರಿ. ಮಣಿಪಾಲದಿಂದ ಕೈಗಾರಿಕಾ ಪ್ರಾಂಗಣ, ಟ್ಯಾಪ್ಮಿ ಮೂಲಕ ಪರ್ಕಳ ಮತ್ತು ಆತ್ರಾಡಿಗೆ ತೆರಳುವ ರಸ್ತೆ ಇದ್ದು ಈ ಮಾರ್ಗವಾಗಿ ಬಸ್‌ ಹಾಕಿದರೆ ಅನುಕೂಲವಾಗಬಹುದು.

ಅಚ್ಚರಿಗಳ ಬಗ್ಗೆ ತಿಳಿಯಿರಿ
ಇರುವೆಗಳು ಎಷ್ಟೇ ಎತ್ತರದಿಂದ ಬಿದ್ದರೂ ಸಾಯುವುದಿಲ್ಲವಂತೆ. ಚೇಳು
ಅಗತ್ಯವಿದ್ದಾಗ ಒಂದು ವಾರ ಉಸಿರಾಡದೆ ಇರುತ್ತದೆ, ಒಂದು ವರ್ಷ ಆಹಾರವಿಲ್ಲದೆಯೂ ಬದುಕಬಲ್ಲದು. ಶಾರ್ಕ್‌ ಮೀನಿಗೆ ಕ್ಯಾನ್ಸರ್‌ ಸಹಿತ ಯಾವುದೇ ಕಾಯಿಲೆ ಬರೋದಿಲ್ಲ ಇಂತಹ ಅಪೂರ್ವ ಮಾಹಿತಿಗಳನ್ನು ಫ‌ಲಕಗಳ ಮೂಲಕ ಪ್ರಚುರಪಡಿಸಲಾಗುತ್ತದೆ.

Advertisement

ಪ್ರವೇಶದ ಅವಧಿ
ನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರವರೆಗೆ ಪ್ರವೇಶದ ಅವಧಿ. ಈಗ ಮಕ್ಕಳಿಗೆ ರಜೆ ಇರುವ ಕಾರಣ ಎಪ್ರಿಲ್‌ – ಮೇ ತಿಂಗಳಲ್ಲಿ ವಾರದ ಎಲ್ಲ ದಿನಗಳೂ ತೆರೆದಿರುತ್ತದೆ. ಉಳಿದ ಅವಧಿಯಲ್ಲಿ ಸೋಮವಾರ ನಿರ್ವಹಣೆಗೋಸ್ಕರ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.

ಶುಲ್ಕ
ಉದ್ಯಾನವನ ಪ್ರವೇಶಿಸುವವರಿಗೆ ದೊಡ್ಡವರಿಗೆ 20 ರೂ., ಮಕ್ಕಳಿಗೆ 10 ರೂ. ನಿಗದಿಪಡಿಸಲಾಗಿದೆ.

ಸ್ವಾವಲಂಬಿ ಉದ್ಯಾನವನ
1 ವರ್ಷದಲ್ಲಿ ಭೇಟಿ ನೀಡಿದ ಜನರ ಶುಲ್ಕದಿಂದ 10 ಲ.ರೂ. ಸಂಗ್ರಹ ವಾಗಿದೆ. ಈ ಎಪ್ರಿಲ್‌ ತಿಂಗಳಿನಲ್ಲೇ 1.45 ಲ.ರೂ. ಸಂಗ್ರಹವಾಗಿದೆ.
ವರ್ಷಕ್ಕೆ 8 ಲ.ರೂ. ನಿರ್ವಹಣಾ ಖರ್ಚು ಇದೆ. ಇದನ್ನು ಸ್ವಾವಲಂಬಿಯಾಗಿ ರೂಪಿಸುವ ಗುರಿ ಅರಣ್ಯ ಇಲಾಖೆಯದ್ದು. ಸರಾಸರಿ ದಿನಕ್ಕೆ 200 ಜನರು
ಬರುತ್ತಿದ್ದಾರೆ.

ಜ್ಞಾನ ವೃದ್ಧಿ
ಇಲ್ಲಿನ ಅನೇಕ ಮಾಹಿತಿಗಳ ಫ‌ಲಕಗಳು ಆಗಂತುಕರಿಗೆ ಜ್ಞಾನವನ್ನು ತರುತ್ತದೆ. ಇಲ್ಲಿ ಬಂದರೆ ಒಂದು ವಿಷಯಜ್ಞಾನ ಪಡೆದರೂ ನಮ್ಮ ಪ್ರಯತ್ನ ಸಾರ್ಥಕ.
– ಕ್ಲಿಫ‌ರ್ಡ್‌ ಲೋಬೋ, ವಲಯ ಅರಣ್ಯಾಧಿಕಾರಿ, ಉಡುಪಿ

ಭವಿಷ್ಯದ ಯೋಜನೆ
ವಾಕಿಂಗ್‌ ಪಾತ್‌, ಸಣ್ಣ ಮಟ್ಟದ ಅರಣ್ಯ ಪ್ರದೇಶ, ಪರಿಸರಜ್ಞಾನ ಹೆಚ್ಚಿಸುವುದು ಸೇರಿದಂತೆ ಮಕ್ಕಳಿಂದ ಹಿಡಿದು ಹಿರಿಯವರ ವರೆಗಿನವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದೇವೆ. ಮುಂದೆ ಸಾಹಸ ಕ್ರೀಡೆ, ಅರಣ್ಯ, ಪ್ರಕೃತಿಗೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನದ‌ಂತಹ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. ಇದು ಸ್ವಾವಲಂಬಿಯಾಗಿ ನಡೆಯಲಿದೆ.
-ಪ್ರಭಾಕರನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ.

ಮಾಹಿತಿ ಕಣಜ
ಉದ್ಯಾನವನವನ್ನು ನೈಸರ್ಗಿಕ ಮಾಹಿತಿಯ ಕಣಜದಂತೆ ರೂಪಿಸಲಾಗಿದೆ. ರಾಷ್ಟ್ರ ವೃಕ್ಷ ಆಲ, ರಾಜ್ಯ ವೃಕ್ಷ ಶ್ರೀಗಂಧದ ಸಸಿಗಳನ್ನು ನೆಡಲಾಗಿದೆ. ಇದರ ಜತೆಗೆ ಆಮೆ, ಮುಂಗುಸಿ, ಮೊಸಳೆ ಇತ್ಯಾದಿಗಳ ಆಕೃತಿ ಜತೆಗೆ ಇವುಗಳೆಲ್ಲದರ ವಿಶಿಷ್ಟವಾದ ಮಾಹಿತಿಯನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಫ‌ಲಕದಲ್ಲಿ ಬರೆಸಿ ಹಾಕಲಾಗುತ್ತಿದೆ. ಇದುವರೆಗೆ ಇಲ್ಲಿ ಅಕೇಶಿಯಾ ಮರಗಳಿದ್ದರೂ ಈಗ ಪಶ್ಚಿಮಘಟ್ಟದಲ್ಲಿರುವ ಸಸ್ಯಪ್ರಭೇದಗಳನ್ನು ನೆಡಲಾಗಿದೆ. ಕ್ರಮೇಣ ಉತ್ತಮ ಜಾತಿಯ ಗಿಡಗಳನ್ನು ನೆಡುವ ಗುರಿ ಇರಿಸಿಕೊಳ್ಳಲಾಗಿದೆ. ಗಿಡಮೂಲಿಕೆಗಳ ಮಹತ್ವ ಸಾರುವ ಋಷಿ ಆಕೃತಿ ಇದ್ದು ಇದರ ಸುತ್ತಲೂ ಗಿಡಗಳನ್ನು ನೆಟ್ಟು ಋಷಿ ವನ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next