Advertisement

ದೇಶದ ಪ್ರಗತಿಗೆ ಉದ್ಯಮಿಗಳ ಪಾತ್ರ ಮಹತ್ವದ್ದು

01:12 PM May 03, 2022 | Team Udayavani |

ದಾವಣಗೆರೆ: ದೇಶದ ಆರ್ಥಿಕತೆಯಲ್ಲಿ ಉದ್ದಿಮೆದಾರರ ಪಾತ್ರ ಪ್ರಮುಖವಾದದ್ದು ಎಂದು ಲೀಡ್‌ ಬ್ಯಾಂಕ್‌ ಮಾರ್ಗದರ್ಶಿ ವ್ಯವಸ್ಥಾಪಕ ಸುಶೃತ್‌ ಡಿ. ಶಾಸ್ತ್ರಿ ಹೇಳಿದರು.

Advertisement

ನಗರದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸೆಮಿನಾರ್‌ ಹಾಲ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್‌), ಧಾರವಾಡ ಮತ್ತು ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕಿಂಗ್‌ ವ್ಯವಸ್ಥೆಯ ನೀತಿ ನಿಯಮಗಳು, ಅವಶ್ಯಕತೆಗೆ ಅನುಸಾರವಾಗಿ ಸಾಲ ಪಡೆಯಬೇಕು ಎಂದರು. ಉತ್ತಮ ಯೋಜನಾ ವರದಿಗಳ ಕುರಿತು ಹಾಗೂ ಉದ್ಯಮದಾರರಾಗುವ ಹಂತದಲ್ಲಿ ಎದುರಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗಿರೀಶ್‌ ಕೆ.ಎನ್. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಉದ್ಯಮವನ್ನು ಸ್ಥಾಪಿಸುವುದಷ್ಟೇ ಅಲ್ಲದೆ ಉದ್ಯಮ ಕುರಿತು ಸಂಪೂರ್ಣ ಜ್ಞಾನ ಹೊಂದುವುದು ಅತ್ಯಂತ ಮುಖ್ಯ. ಉದ್ಯಮದ ಮಾರುಕಟ್ಟೆ ವ್ಯಾಪ್ತಿ, ಹಣಕಾಸಿನ ಸೌಲಭ್ಯ, ಸಂಪನ್ಮೂಲಗಳ ಸರಿಯಾದ ಬಳಕೆ ಬಗ್ಗೆ ಅರಿವು ಇರಬೇಕು. ಕಾಲಕ್ಕನುಗುಣವಾಗಿ ತಾಂತ್ರಿಕವಾಗಿ ಉನ್ನತೀಕರಣಗೊಂಡಲ್ಲಿ ಮಾತ್ರ ಯಶಸ್ವಿ ಉದ್ಯಮದಾರರಾಗಲು ಸಾಧ್ಯ ಎಂದರು.

ಶ್ರೀ ಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆ ಕಾರ್ಯದರ್ಶಿ ಪ್ರವೀಣಕುಮಾರ ಎಸ್‌. ಮಾತನಾಡಿ, ಮೊದಲು ಸಣ್ಣ ಪ್ರಮಾಣದಲ್ಲಿ ಉದ್ಯಮ ಸ್ಥಾಪಿಸಬೇಕು. ಛಲ ಬಿಡದೆ ಸತತ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ಉದ್ಯಮದಲ್ಲಿ ಯಶಸ್ಸು ಗಳಿಸಬಹುದು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಸಿಡಾಕ್‌ನ ಜಂಟಿ ನಿರ್ದೇಶಕ ಆರ್‌.ಪಿ. ಪಾಟೀಲ್‌, ಸಿಡಾಕ್‌ ಸಂಸ್ಥೆಯ ಕಾರ್ಯವೈಖರಿ, ಕಾರ್ಯಕ್ರಮಗಳು ಹಾಗೂ ತರಬೇತಿ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ದಾವಣಗೆರೆ ಜನಶಿಕ್ಷಣ ಸಂಸ್ಥೆಯ ನಿವೃತ್ತ ನಿರ್ದೇಶಕ ಮುಕುಂದಪ್ಪ ಬಿ. ಅವರು ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮವನ್ನು ಯಾವ ರೀತಿಯಲ್ಲಿ ಪ್ರಾರಂಭಿಸಬೇಕು. ಉದ್ಯಮ ಆರಂಭಿಸಲು ಇರುವಂತಹ ಅವಕಾಶಗಳನ್ನು ಗುರುತಿಸುವುದು ಹೇಗೆ, ಸವಾಲುಗಳನ್ನು ಎದುರಿಸುವ ಬಗೆ, ಸರ್ಕಾರಿ ಯೋಜನೆಗಳ ಮತ್ತು ವಿವಿಧ ಇಲಾಖೆಗಳ ಬಗ್ಗೆ ತಿಳಿಸಿದರು.

Advertisement

ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಪ್ರಭಾರಿ ವ್ಯವಸ್ಥಾಪಕ ಶಾಂತರಾಜು, ತರಬೇತುದಾರ ಬಸವರಾಜ ಜಿ.ಬಿ., ವಿನಯ ಜಿ.ಕೆ. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next