Advertisement

ಪ್ರತಿ ವ್ಯಕ್ತಿಗೂ ಗುಣಮಟ್ಟದ ಕಾನೂನು ಕಾನೂನು ಖಾತ್ರಿಪಡಿಸಿ

09:28 AM Oct 25, 2021 | Team Udayavani |

ಕಲಬುರಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಾನೂನು ನೆರವು ಪಡೆಯುವಂತೆ ಆಗಬೇಕು. ಜನರು ಕಾನೂನು ನೆರವಿನಲ್ಲಿ ನಂಬಿಕೆ ಇಡುವಂತೆ ಆಗಬೇಕು. ಇದಕ್ಕಾಗಿ ಗುಣಮಟ್ಟದ ಕಾನೂನು ಖಾತ್ರಿ ಪಡಿಸುವ ಕಾರ್ಯವಾಗಬೇಕಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಉದಯ ಯು. ಲಲಿತ್‌ ಹೇಳಿದರು.

Advertisement

ನಗರದ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ರವಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಪ್ಯಾನ್‌-ಇಂಡಿಯಾ ಪ್ರಚಾರ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿದ್ದ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಹಕ್ಕುಗಳು ಮತ್ತು ಅರ್ಹತೆ ನೀಡುವಿಕೆಯ ವಾಸ್ತವೀಕರಣ-2030 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಾನೂನು ಅರಿವಿನ ಕೊರತೆ ಹಾಗೂ ಕಳಪೆ ಗುಣಮಟ್ಟದ ನೆರವು ಸೇರಿದಂತೆ ಹಲವು ಕಾರಣಗಳಿಂದ ಬಹುಪಾಲು ಜನಸಾಮಾನ್ಯರು ಉಚಿತ ಕಾನೂನು ನೆರವು ಸೇವೆ ಬಳಸಿಕೊಳ್ಳುತ್ತಿಲ್ಲ. ಆದ್ದರಿಂದ ಜನತೆ ಕಾನೂನು ನೆರವು ವ್ಯವಸ್ಥೆಯಲ್ಲಿ ನಂಬಿಕೆ ಇಡಲು ಗುಣಮಟ್ಟದ ಕಾನೂನು ನೆರವು ಖಚಿತಪಡಿಸಬೇಕೆಂದು ಸಲಹೆ ನೀಡಿದರು.

ದೇಶದಲ್ಲಿ ಹೆಚ್ಚಿನ ಜನ ಉಚಿತ ಕಾನೂನು ಸಹಾಯದ ಬಗ್ಗೆ ತಿಳಿದಿರುವುದಿಲ್ಲ. 100 ಕ್ರಿಮಿನಲ್‌ ಕೇಸ್‌ಗಳಲ್ಲಿ ಕೇವಲ ಒಂದು ಪ್ರತಿಶತ ಜನ ಮಾತ್ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಚೇರಿಗಳಿಂದ ಕಾನೂನು ನೆರವು ಪಡೆಯುತ್ತಾರೆ. ಅಂದರೆ ಉಳಿದ ಶೇ.99ರಷ್ಟು ಜನರಿಗೆ ಕಾನೂನು ನೆರವು ಬೇಡವೇ? ಇದಕ್ಕೆ ಉಚಿತ ಕಾನೂನು ನೆರವು ಸಾಂವಿಧಾನಿಕ ಹಕ್ಕು ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಅಥವಾ ಬಹುಶಃ ಅವರಿಗೆ ಕಾನೂನಿನ ನೆರವಿನಲ್ಲಿ ವಿಶ್ವಾಸವಿರುವುದಿಲ್ಲ ಎಂದ ಅವರು, ಇದು ಹೆಚ್ಚು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಕಾನೂನು ನೆರವಿನಲ್ಲಿ ಸಾರ್ವಜನಿಕರಿಗೆ ವಿಶ್ವಾಸವಿಲ್ಲದಿದ್ದರೆ, ನಾವು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ನೆರವನ್ನು ಖಚಿತಪಡಿಸಿಕೊಳ್ಳಬೇಕು. ಮೇಲಾಗಿ ಬಡವರಿಗೆ ಉಚಿತ ಕಾನೂನು ನೆರವು ಎಂದರೆ ಕಳಪೆ ಕಾನೂನು ನೆರವು ಎಂದಲ್ಲ. ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ನೀಡಲಾಗುವ ನೆರವು ಉತ್ತಮ ಗುಣಮಟ್ಟದ ಕೂಡಿರಬೇಕೆಂದು ಕರೆ ನೀಡಿದರು.

Advertisement

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮಾತನಾಡಿ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಓದುವ ವಿದ್ಯಾರ್ಥಿಗಳು ಸಮಾಜಕ್ಕೆ ಸೇವೆ ನೀಡಬೇಕೆಂದು ಅಂತಿಮ ವರ್ಷದಲ್ಲಿ ಗ್ರಾಮೀಣ ಸೇವೆ ಸಲ್ಲಿಸುತ್ತಾರೆ. ಅದೇ ರೀತಿಯಾಗಿ ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ಹಳ್ಳಿಗಳ ಜನರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಕಾನೂನು ಕಾಲೇಜುಗಳು ತಲಾ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಕಾನೂನು ಅರಿವು ಮೂಡಿಸಬೇಕೆಂದು ಹೇಳಿದರು.

ಇದನ್ನೂ ಓದಿ: ಇಂದಿನಿಂದ ಕಿರಿಯರೂ ಬರ್ತಾರೆ ಶಾಲೆಗೆ

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕಾನೂನು ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಕಾನೂನು ಸೇವೆಗಳ ಕ್ಲಿನಿಕ್‌ಗಳು, ಕ್ಲಿನಿಕ್‌ಗಳ ಪ್ರಮಾಣಿತ ಕಾರ್ಯಚರಣೆ ವಿಧಾನ ಕುರಿತ ಮಾರ್ಗದರ್ಶಿ, ಜನ ಸಾಮಾನ್ಯರಿಗಾಗಿ ಕಾನೂನು ಮಾಹಿತಿ-ವರ್ಣಚಿತ್ರದ ಕಿರು ಕಾದಂಬರಿಯ 2ನೇ ಆವೃತ್ತಿಯ ಪುಸ್ತಕ ಬಿಡುಗಡೆ ಮಾಡಿದರು.

ವೇದಿಕೆ ಮೇಲೆ ಕರ್ನಾಟಕ ಹೈಕೋರ್ಟ್‌ ನ್ಯಾಯಾ ಧೀಶರಾದ ಕೃಷ್ಣ ಎಸ್‌.ದೀಕ್ಷಿತ್‌, ಆರ್‌.ದೇವದಾಸ್‌, ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವಲಗಿ ಇದ್ದರು. ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಂಕರೇಗೌಡ, ಕಲಬುರಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್‌ಗ‌ಳಾದ ವಿಜಯ ಮತ್ತು ಶ್ರೀನಿವಾಸ ಸುವರ್ಣ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಧಿಧೀಶ ಕೆ. ಸುಬ್ರಹ್ಮಣ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಚೌಗುಲೆ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಜಿಲ್ಲಾ ಪಂಚಾಯಿತಿ ಸಿಇಒ ದಿಲೀಷ್‌ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ್‌ ಲೋಖಂಡೆ, ನಗರ ಉಪ ಪೊಲೀಸ್‌ ಆಯುಕ್ತ ಅಡ್ಡೂರು ಶ್ರೀನಿವಾಸಲು ಹಾಗೂ ಕಲಬುರಗಿ ಹೈಕೋರ್ಟ್‌ ಪೀಠದ ಹಿರಿಯ ಅಧಿಕಾರಿಗಳು, ಬಾರ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ವಕೀಲರು, ಕಾನೂನು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ದೇಶದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್‌, ಐಐಟಿ ಸೇರಿದಂತೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಮತ್ತು ಶ್ರೇಷ್ಠತೆಯಿಂದ ಹೆಸರು ಮಾಡಿವೆ. ಇದೇ ರೀತಿಯಾಗಿ ಸರ್ಕಾರದ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಾಧಾನ್ಯತೆ ಸಿಗಬೇಕು. -ಉದಯ ಯು.ಲಲಿತ್, ನ್ಯಾಯಮೂರ್ತಿ, ಸುಪ್ರೀಂಕೋರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next