Advertisement

ಬಿದ್ದು ಪೆಟ್ಟು ಮಾಡಿಕೊಂಡ ಎಸ್‌.ಜಾನಕಿ

09:38 AM May 06, 2019 | Lakshmi GovindaRaj |

ಮೈಸೂರು: ಗಾನಕೋಗಿಲೆ ಎಸ್‌.ಜಾನಕಿ ಅವರು ಮೈಸೂರಿನ ಸ್ನೇಹಿತರ ಮನೆಯಲ್ಲಿ ಹೊಸ್ತಿಲು ದಾಟುವಾಗ ಜಾರಿ ಬಿದ್ದು ಸೊಂಟದ ಮೂಳೆ ಮುರಿದ ಪರಿಣಾಮ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈಗ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ಹದಿನೈದು ದಿನಗಳ ಹಿಂದೆ ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದ ಜಾನಕಿ, ವಾರದ ಹಿಂದೆ ಮನೆಯ ಕೊಠಡಿಯಲ್ಲಿ ನಡೆಯುವಾಗ ಹೊಸ್ತಿಲು ಎಡವಿ ಜಾರಿ ಬಿದ್ದಿದ್ದರಿಂದ ಸೊಂಟದ ಮೂಳೆ ಮುರಿದಿತ್ತು. ಮೈಸೂರು-ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ದಾಖಲಿಸಲಾಗಿತ್ತು.

ತಕ್ಷಣವೇ ಆಸ್ಪತ್ರೆಯ ತಜ್ಞ ವೈದ್ಯರು ಸೊಂಟದ ಭಾಗದಲ್ಲಿ ಫ್ರಾಕ್ಚರ್‌ ಕಂಡು ಬಂದ ಹಿನ್ನೆಲೆಯಲ್ಲಿ ಸಣ್ಣಮಟ್ಟದ ಶಸ್ತ್ರಚಿಕಿತ್ಸೆ ಮಾಡಿದ್ದರು. ಶುಕ್ರವಾರ ಸಂಜೆ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದೆ. ಮನೆಯ ಹೊಸ್ತಿಲು ದಾಟುವಾಗ ಜಾರಿ ಬಿದ್ದಿದ್ದೆ. ತುಂಬಾ ನೋವಾಯ್ತು ಆಗ. ನಂತರ ಆಸ್ಪತ್ರೆಗೆ ಕರೆದುಕೊಂಡು ಬಂದು ಆಪರೇಷನ್‌ ಮಾಡಿಸಿದ್ದಾರೆ.

ಹಳೇದು ಮುರಿದು ಹೋಯ್ತು, ಇಲ್ಲಿ ಅದೇನೋ ಬದಲಾಯಿಸಿದ್ದಾರೆ ಎಂದು ಶಸ್ತ್ರಚಿಕಿತ್ಸೆ ಕುರಿತು ವಿಶ್ಲೇಷಣೆ ಮಾಡಿದರು. ರಾಜ್ಯದಲ್ಲಿನ ಕನ್ನಡ ಮಕ್ಕಳು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ಮಕ್ಕಳ ಕೃಪೆಯಿಂದ ನಾನು ಚೆನ್ನಾಗಿದ್ದೇನೆ.

Advertisement

ನನಗೆ ಮೈಸೂರು ತುಂಬಾ ಇಷ್ಟ. ಯಾಕೆ ಅಂತಾ ಗೊತ್ತಿಲ್ಲ. ಮೈಸೂರಿನ ಜತೆ ನನಗೆ ಜನ್ಮಾಂತರದ ಋಣವಿದೆ. ಅದಕ್ಕೇ ಈ ಊರೆಂದರೆ ನನಗೆ ತುಂಬಾ ಇಷ್ಟ. ಮೈಸೂರಿನಲ್ಲೇ ವಿಶ್ರಾಂತಿ ಪಡೆಯುತ್ತೇನೆ’ ಎಂದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯ ನಿತಿನ್‌ ಮಾತನಾಡಿ, ಕಾಲು ಜಾರಿ ಬಿದ್ದು ಪೆಟ್ಟಾಗಿದ್ದರಿಂದ ಕಳೆದ ಭಾನುವಾರದಿಂದ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರಿಗೆ ಜಾಯಿಂಟ್‌ ರೀಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದ್ದು, ನಂತರ ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ. ಗಾಬರಿ ಪಡುವಂಥದ್ದು ಏನೂ ಇಲ್ಲ. ಈ ವಯಸ್ಸಿನಲ್ಲಿ ಇದು ಸಹಜ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next