ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಶನಿವಾರ (ಮಾರ್ಚ್ 30) ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿದ್ದು, ಅಧಿಕಾರಿಗಳು ಈ ಸಂದರ್ಭದಲ್ಲಿ ವಿಚಾರಣೆಗೊಳಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Gadag; ಎಲೆಕ್ಟ್ರೋಲ್ ಬಾಂಡ್ ವಿಷಯವಾಗಿ ಮೋದಿ ಶ್ವೇತ ಪತ್ರ ಹೊರಡಿಸಲಿ: ಎಚ್.ಕೆ ಪಾಟೀಲ
ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಅಬಕಾರಿ ನೀತಿ ಸಿದ್ಧಪಡಿಸುವ ಸಂದರ್ಭದಲ್ಲಿ ಗೆಹ್ಲೋಟ್ ಅವರು ತಮ್ಮ ಅಧಿಕೃತ ನಿವಾಸವನ್ನು ಬಳಸಲು ಆಪ್ ನ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರಿಗೆ ಅನುಮತಿ ನೀಡಿರುವುದಾಗಿ ತನಿಖಾ ಸಂಸ್ಥೆ ಆರೋಪಿಸಿದೆ.
ಅಲ್ಲದೇ ಗೆಹ್ಲೋಟ್ ಅವರು ಪದೇ, ಪದೇ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಈ ಮೊದಲು ದೂರಿದ್ದರು. ಸಿಎಂ ಕೇಜ್ರಿವಾಲ್ ಏಪ್ರಿಲ್ 1ರವರೆಗೆ ಇ.ಡಿ. ಕಸ್ಟಡಿಯಲ್ಲಿರಲಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಸೇರಿದಂತೆ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದ್ರ ಜೈನ್, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಕೂಡಾ ಜಾರಿ ನಿರ್ದೇಶನಾಲಯ ಈ ಮೊದಲು ಬಂಧಿಸಿತ್ತು.