Advertisement

ದಾಸ್ತಾನಿರುವ ಎಂಡೋ ಬ್ಯಾರೆಲ್‌ ಕಾಲಾವಧಿ ಪೂರ್ಣ : ಆತಂಕ ಸೃಷ್ಟಿ

03:28 PM Jun 05, 2017 | Team Udayavani |

ಕಾಸರಗೋಡು: ನೂರಾರು ಮಂದಿಯನ್ನು ಬಲಿ ತೆಗೆದುಕೊಂಡ ಹಾಗೂ ಸಾವಿರಾರು ಮಂದಿ ವಿವಿಧ ಮಾರಕ ರೋಗಗಳಿಗೆ ತುತ್ತಾಗಲು ಕಾರಣವಾದ ಮಾರಕ ಕೀಟ ನಾಶಕ ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಸಹಜವಾಗಿಯೇ ಜನರಲ್ಲಿ ಮತ್ತೆ ಆತಂಕವನ್ನು ಸೃಷ್ಟಿಸಿದೆ. 

Advertisement

ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಲ್ಲಿ ತೋಟಗಾರಿಕಾ ನಿಗಮ ಗೇರು ಮರಗಳ ರಕ್ಷಣೆಗಾಗಿ ಮಾರಕ ಎಂಡೋಸಲ್ಫಾನ್‌ ಕೀಟನಾಶಕವನ್ನು ಹೆಲಿಕಾಪ್ಟರ್‌ ಬಳಸಿ ಸಿಂಪಡಿಸಲಾಗಿತ್ತು. ಇದರ ಪರಿಣಾಮವಾಗಿ ಈ ಪಂಚಾಯತ್‌ಗಳ ಸಹಿತ ಹತ್ತಿರದ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ಹುಟ್ಟುವಾಗಲೇ ವಿವಿಧ ರೋಗಗಳಿಗೆ ತುತ್ತಾಗಿದ್ದರು. ಅಲ್ಲದೆ ನೂರಾರು ಮಂದಿ ಸಾವಿಗೀಡಾಗಿದ್ದರು. ಇನ್ನೂ ಇದರ ದುಷ್ಪರಿಣಾಮ ಮುಂದುವರಿದಿದ್ದು, ಸಾವಿರಾರು ಮಂದಿ ಅಮಾಯಕರು ವಿವಿಧ ರೋಗಗಳಿಂದ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.

ಎಂಡೋಸಲ್ಫಾನ್‌ ವಿರುದ್ಧ ನಿರಂತರ ಹಾಗೂ ತೀವ್ರ ಹೋರಾಟ ನಡೆದ ಪರಿಣಾಮವಾಗಿ ಎಂಡೋಸಲ್ಫಾನ್‌ ಸಿಂಪಡನೆ ನಿಷೇಧಿಸಲಾಗಿದ್ದರೂ, ಕಾಸರಗೋಡು ಜಿಲ್ಲೆಯ ಗೋದಾಮುಗಳಲ್ಲಿ ಉಳಿದುಕೊಂಡಿರುವ ಎಂಡೋಸಲ್ಫಾನ್‌ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. 

ಕಾಸರಗೋಡು ಜಿಲ್ಲೆಯ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ಎಂಡೋಸಲ್ಫಾನ್‌ ದಾಸ್ತಾನಿರಿಸಿರುವ ಹಾಗು ಉಳಿದುಕೊಂಡಿರುವ ಹೈಡೆನ್ಸಿಟಿ ಪೋಲಿ ಎಥೆಲಿನ್‌(ಎಚ್‌ಡಿಪಿಇ) ಬ್ಯಾರೆಲ್‌ಗ‌ಳ  ಕಾಲಾವಧಿ ಕಳೆದಿದೆ. ಈ ಕಾರಣದಿಂದ ಮತ್ತೆ ಜನರಲ್ಲಿ ಆತಂಕ ಮತ್ತು ಭಯವನ್ನು ಹುಟ್ಟಿಸಿದೆ. ವಿಶ್ವಸಂಸ್ಥೆ ಅಂಗೀಕರಿಸಿರುವ ಐದು ವರ್ಷ ಕಾಲಾವಾಧಿ ಈಗಾಗಲೇ ಮುಕ್ತಾಯಗೊಂಡಿದೆ. ಆದರೆ ಕಾಲಾವಧಿ ಮುಗಿದಿರುವ ಬ್ಯಾರೆಲ್‌ಗ‌ಳಿಂದ ಇನ್ನೊಂದು ಬ್ಯಾರೆಲ್‌ಗ‌ಳಿಗೆ ವರ್ಗಾಯಿಸುವ ಅಥವಾ ನಿಷ್ಕ್ರಿಯಗೊಳಿಸುವ ಬಗ್ಗೆ ಸರಕಾರ ಈ ವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಕಾಸರಗೋಡು ಜಿಲ್ಲೆ ಹಾಗೂ ಮಣ್ಣಾರ್‌ಕಾಡ್‌ ತೋಟಗಾರಿಕಾ ನಿಗಮದ ವಿವಿಧ ಗೋದಾಮುಗಳಲ್ಲಿ ದಾಸ್ತಾನಿರಿಸಿದ್ದ ಒಟ್ಟು 1,900 ಲೀಟರ್‌ ಎಂಡೋಸಲ್ಫಾನ್‌ ಕೀಟನಾಶಕವನ್ನು 2012ರಲ್ಲಿ ಎಚ್‌ಡಿಪಿಇ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸಲಾಗಿತ್ತು. ಅದುವರೆಗೆ ಎಂಡೋಸಲ್ಫಾನನ್ನು ಕಬ್ಬಿಣದ ಬ್ಯಾರೆಲ್‌ಗ‌ಳಲ್ಲಿ ದಾಸ್ತಾನಿರಿಸಲಾಗಿತ್ತು. ಕಬ್ಬಿಣದ ಬ್ಯಾರೆಲ್‌ಗ‌ಳು ತುಕ್ಕು ಹಿಡಿದು ಎಂಡೋಸಲ್ಫಾನ್‌ ಸೋರಿಕೆ ಕೂಡಾ ಆರಂಭಗೊಂಡಿತು. ಎಂಡೋ ಸೋರಿಕೆಯಿಂದ ಮತ್ತೆ ತೀವ್ರ ದುಷ್ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಎಚ್‌ಡಿಪಿಇ ಬ್ಯಾರೆಲ್‌ಗ‌ಳಿಗೆ ಹಸ್ತಾಂತರಿಸಲಾಗಿತ್ತು.

ಎಚ್‌ಡಿಪಿಇ ಬ್ಯಾರೆಲ್‌ಗ‌ಳ ಸುರಕ್ಷಿತ ಕಾಲಾವಧಿ ಐದು ವರ್ಷ ಎಂಬುದಾಗಿ ವಿಶ್ವಸಂಸ್ಥೆ ಅಂಗೀಕರಿಸಿದ್ದು, ಈ ಕಾಲಾ ವಧಿ ಇದೀಗ ಮುಗಿದಿದೆ. ಈ ಕಾರಣದಿಂದ ಎಚ್‌ಡಿಪಿಇ ಬ್ಯಾರೆಲ್‌ಗ‌ಳಲ್ಲಿ ಎಷ್ಟು ಸಮಯ ಸುರಕ್ಷಿತವಾಗಿರಲು ಸಾಧ್ಯ ಎಂಬುದೇ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಈ ಎಂಡೋಸಲ್ಫಾನ್‌ ಮತ್ತೆ ಪರಿಸರ ಹಾನಿಗೊಳಿಸಬಹುದು. 

Advertisement

ಅಲ್ಲದೆ ಜನರ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಿದ್ದರೂ ಸರಕಾರ ಎಂಡೋಸಲ್ಫಾನ್‌ ಕೀಟನಾಶಕವನ್ನು ಸುರಕ್ಷಿತವಾಗಿ ಇನ್ನೊಂದು ಬ್ಯಾರೆಲ್‌ ಅಥವಾ ಇನ್ನಿತರ ವೈಜ್ಞಾನಿಕ ನಿಷಿ¢ಯ ಪ್ರಕ್ರಿಯೆಗೆ ಮುಂದಾಗಿಲ್ಲ ಎಂಬುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮಡುಗಟ್ಟಿದೆ. ಈಗ ಇರುವ ಬ್ಯಾರೆಲ್‌ಗ‌ಳು ಎಷ್ಟು ದಿನಗಳ ವರೆಗೆ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ಸ್ಪಷ್ಟ ಅರಿವಿಲ್ಲ.

ಆಪರೇಶನ್‌ ಬ್ಲಾಸಮ್‌ : ಕಾಸರಗೋಡು ಜಿಲ್ಲೆಯ ವಿವಿಧ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ಹಳೆಯ ಕಬ್ಬಿಣದ ಬ್ಯಾರೆಲ್‌ಗ‌ಳಲ್ಲಿದ್ದ ಎಂಡೋ ಸೋರಿಕೆಯಿಂದ 2012ರಲ್ಲಿ ಎಚ್‌ಡಿಪಿಐ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸಲಾಗಿತ್ತು. ಹಳೆ ಬ್ಯಾರೆಲ್‌ಗ‌ಳಿಂದ ಸುರಕ್ಷಿತವಾಗಿ ಎಚ್‌ಡಿಪಿಇ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ “ಆಪರೇಶನ್‌ ಬ್ಲಾಸಮ್‌’ ಎಂದು ಹೆಸರು ನೀಡಲಾಗಿತ್ತು.

ಇದೇ ಸಂದರ್ಭದಲ್ಲಿ ಬ್ಯಾರೆಲ್‌ಗ‌ಳನ್ನು ಬದಲಾಯಿಸಿ ನೀಡುವುದಾಗಿ ಕೊಚ್ಚಿಯ ಹಿಂದೂಸ್ತಾನ್‌ ಇನ್‌ಸೆಕ್ಟಿಸೈಡ್‌ ಲಿಮಿಟೆಡ್‌ (ಎಚ್‌ಐಎಲ್‌) ನ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಜಿಲ್ಲಾಡಳಿತ ಇನ್ನೂ ಎಂಡೋಸಲ್ಫಾನ್‌ ವರ್ಗಾಯಿಸುವುದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಹೀಗಿರುವಂತೆ ಕೊಚ್ಚಿಯ ಎಚ್‌ಐಎಲ್‌ನ ತಾಂತ್ರಿಕ ಅಧಿಕಾರಿ ಸಂತೋಷ್‌ ಅವರು ಈಗಾಗಲೇ ಎಚ್‌ಡಿಪಿಇ ಬ್ಯಾರೆಲ್‌ಗ‌ಳಲ್ಲಿ ದಾಸ್ತಾನಿರುವ ಕೀಟನಾಶಕದಿಂದ ನಿಗದಿತ ಸಮಯದ ವರೆಗೆ ಪರಿಸರಕ್ಕೆ ಯಾವುದೇ ಹಾನಿಯುಂಟಾಗದು. ಮತ್ತೆ ಸುರಕ್ಷಿತ ಕಾಲಾವಧಿಯುಳ್ಳ ಬೇರೆ ಬ್ಯಾರೆಲ್‌ಗ‌ಳಿಗೆ ಎಂಡೋಸಲ್ಫಾನ್‌ ಕೀಟನಾಶಕವನ್ನು ವರ್ಗಾಯಿಸಲು ಸಾಧ್ಯವಾಗುವುದು ಎಂದು ಹೇಳುತ್ತಾರೆ.

ನಿಷ್ಕ್ರಿಯ ಪ್ರಕ್ರಿಯೆ ವಿಳಂಬ 
ಕಾಸರಗೋಡು ಜಿಲ್ಲೆಯಲ್ಲಿ ತೋಟಗಾರಿಕಾ ನಿಗಮದ ಎಸ್ಟೇಟ್‌ಗಳಲ್ಲಿರುವ ಗೋದಾಮುಗಳಲ್ಲಿ ಎಚ್‌ಡಿಪಿಇ ಬ್ಯಾರೆಲ್‌ಗ‌ಳಲ್ಲಿರುವ ಎಂಡೋಸಲ್ಫಾನ್‌ ಕೀಟನಾಶಕವನ್ನು ವೈಜ್ಞಾನಿಕ ರೀತಿಯಲ್ಲಿ  ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಒಂದಿಲ್ಲೊಂದು ತಾಂತ್ರಿಕ ಕಾರಣಕ್ಕೆ ವಿಳಂಬವಾಗುತ್ತಿದೆ. ಇದರಿಂದ ಈಗಾಗಲೇ ಸಾಕಷ್ಟು ಯಾತನೆ ಅನುಭವಿಸಿರುವ ಜನರಿಗೆ ಇನ್ನಷ್ಟು ಆತಂಕವನ್ನು ತಂದೊಡ್ಡಿದೆ. 

ಎಂಡೋಸಲ್ಫಾನನ್ನು  ರಾಜ್ಯದಿಂದ ಹೊರಕ್ಕೆ ಸಾಗಿಸಿ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಬಗ್ಗೆ ಕರೆಯಲಾಗಿದ್ದ ಇ-ಟೆಂಡರ್‌ಗೆ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಪ್ರಸ್ತುತ ಕೊಚ್ಚಿಯ ಎಚ್‌.ಐ.ಎಲ್‌. ಸಂಸ್ಥೆ ಎಂಡೋ ನಿಷ್ಕ್ರಿಯಗೊಳಿಸಲು ಗುತ್ತಿಗೆ ವಹಿಸಿಕೊಂಡಿದೆ. ನಿಷ್ಕ್ರಿಯಗೊಳಿಸಿದ ಎಂಡೋಸಲ್ಫಾನನ್ನು ನಾಶಗೊಳಿಸಲು ಕೇರಳ ಎನ್‌ವಿಯೋ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಕೆಇಐಎಲ್‌) ಆಸಕ್ತಿ ವಹಿಸಿದ್ದರೂ ಜನರ ವಿರೋಧ ಕೇಳಿ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಚ್ಚಿ  ಜಿಲ್ಲಾಡಳಿತ ಇದಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಕಾರಣದಿಂದ ಕಾಲಾವಧಿ ಮುಗಿದ ಎಚ್‌ಡಿಪಿಇ ಬ್ಯಾರೆಲ್‌ಗ‌ಳಲ್ಲಿ ಎಂಡೋಸಲ್ಫಾನ್‌ ಉಳಿದುಕೊಂಡಿದ್ದು, ಮತ್ತೆ ಆತಂಕದ ಕರಿನೆರಳು ಆವರಿಸಿದೆ.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next