Advertisement

ಸೀತಾನದಿ ತಟದಲ್ಲಿ ಸಂಪನ್ನಗೊಂಡ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

10:45 PM Jan 26, 2021 | Team Udayavani |

ಕೋಟ:  ಸೀತಾ ನದಿ ತಟದಲ್ಲಿರುವ ಸುಂದರ ಊರು ಮಾಬುಕಳದ ಚೇತನಾ ಪ್ರೌಢಶಾಲೆಯ ಮೈದಾನದಲ್ಲಿ 14ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ  “ಇರುವಂತಿಗೆ’   ಜ. 26ರಂದು ಅತ್ಯಂತ ಸರಳವಾಗಿ ಮೂಡಿಬಂತು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲೆ  ಆಶ್ರಯದಲ್ಲಿ ಉಸಿರು ಕೋಟ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ವೈದೇಹಿಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು.

ಆರಂಭದಲ್ಲಿ ಬ್ರಹ್ಮಾವರ ತಾ.ಪಂ. ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರಿಷತ್‌ ಧ್ವಜ ಅರಳಿಸಿದರು. ಮಹಿಳಾ ಸಾಧಕಿ ಜಾನಕಿ ಹಂದೆ, ಬೆಂಗಳೂರು ಕೃಷಿ ವಿ.ವಿ. ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಕುಲಾಲ್‌  ಆವರ್ಸೆ ಜಂಟಿಯಾಗಿ ದೀಪ  ಪ್ರಜ್ವಲನೆ ಮೂಲಕ ಸಮ್ಮೇಳನ ಉದ್ಘಾಟಿಸಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಚೇತನಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್‌ ಕುಮಾರ್‌ ಶೆಟ್ಟಿ ಉದ್ಘಾಟಿಸಿದರು.  ಕಸಾಪ ಪೂರ್ವಾಧ್ಯಕ್ಷ  ಹರಿಕೃಷ್ಣ ಪುನರೂರು ಸಮ್ಮೇಳನಾಧ್ಯಕ್ಷರ  ಭಾಷಣ ಬಿಡುಗಡೆಗೊಳಿಸಿದರು.

ನನ್ನ ಕಥೆ ನಿಮ್ಮ ಜತೆ ವಿಚಾರಗೋಷ್ಠಿ, ಗ್ರಾಮ್ಯ ಭಾಷೆ ಸೊಗಡು, ರಂಗಭೂಮಿ, ಹೈನುಗಾರಿಕೆ, ಕೃಷಿ, ಪತ್ರಿಕೋದ್ಯಮದ ಸವಾಲುಗಳು ವಿಚಾರಗಳನ್ನೊಳ‌ಗೊಂಡ ನಮ್ಮ ಉಡುಪಿ ಎನ್ನುವ ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕೂಟ ಮಹಾಜಗತ್ತು ಮಹಿಳಾ ವೇದಿಕೆ ಯಿಂದ ನೃತ್ಯ ವೈಭವ, ಗೀತಾ ಗಾಯನ, ಹಿರಿಯ ಚೇತನ ಕೋಟೇಶ್ವರ ಸುಬ್ಬಣ್ಣ ಶೆಟ್ಟಿಯವರೊಂದಿಗೆ ನನ್ನ ಭಾಷೆ-ನನ್ನ ಹೆಮ್ಮೆ ಸಂವಾದ, ಬಹಿರಂಗ ಅಧಿವೇಶನ ಅತ್ಯಂತ ಸುಂದರವಾಗಿ ನೆರವೇರಿತು.

Advertisement

ಸಮ್ಮೇಳನದ ಉಪ ವೇದಿಕೆಯಲ್ಲಿ ಯುವ ಕವಿಗಳಿಂದ ಕವಿಗೋಷ್ಠಿ, ಮರೆಯಲಾಗದ ಮಹನೀಯರು ವಿಚಾರಗೋಷ್ಠಿ, ಯಕ್ಷಗಾನದ ಸ್ಥಿತ್ಯಂತರ ಗಳ ಕುರಿತು ವಿಚಾರ ವಿನಿಮಯ, ಮಹಿಳೆ ಮತ್ತು ಸಾಮಾಜಿಕ ಸವಾಲುಗಳು ಎನ್ನುವ ವಿಚಾರದ ಕುರಿತು ಚರ್ಚೆ ಹಾಗೂ ವೈದೇಹಿಯವರ ಬರಹದಲ್ಲಿ ಮಹಿಳಾ ಪ್ರಜ್ಞೆ ವಿಚಾರ ವಿನಿಮಯ ನಡೆಯಿತು.

ಉದಯವಾಣಿ ಕುರಿತು ಪ್ರಸ್ತಾವ :

ಸಮ್ಮೇಳನಾಧ್ಯಕ್ಷೆ ಲೇಖಕಿ ವೈದೇಹಿ ಯವರನ್ನು ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು ಎನ್ನುವ ಆಶಯ ವ್ಯಕ್ತಪಡಿಸಿರುವುದು ಅವರಲ್ಲಿನ ಸ್ತ್ರೀಪರ ಚಿಂತನೆಗಳು ವ್ಯಕ್ತವಾಗುತ್ತವೆ ಮತ್ತು ಸಂದರ್ಶನ ಉತ್ತಮವಾಗಿದ್ದು ಮನದ ಮಾತುಗಳು ದಾಖಲಾಗಿವೆ ಎಂದು  ಸಮ್ಮೇಳನ ಉದ್ಘಾಟಿಸಿದ ಜಾನಕಿ ಹಂದೆ ತಿಳಿಸಿದರು.

ಸರಳ ಮೆರವಣಿಗೆ  :

ಈ ಹಿಂದಿನ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ  ಮೆರವಣಿಗೆ ಕೇವಲ ಚೆಂಡೆ ನಿನಾದ, ಮಂಗಳವಾದ್ಯದೊಂದಿಗೆ, ಸಮ್ಮೇಳನದ  ವಠಾರ ದಲ್ಲಿ  ಸರಳವಾಗಿ ನಡೆಯಿತು.

ವ್ಯವಸ್ಥಿತ ಊಟೋಪಚಾರ  : ಸಮ್ಮೇಳಕ್ಕೆ ಆಗಮಿಸಿದವರಿಗೆ ಬೆಳಗ್ಗೆ ಉಪಹಾರ, ಅಪರಾಹ್ನ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಕೈಗೊಳ್ಳಲಾಗಿತ್ತು. ಊಟೋಪಚಾರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next