ಮುಂಬಯಿ: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಎನ್ಕೌಂಟರ್ ದಯಾ ನಾಯಕ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಚೇತನ್ ಚಂದು ಪಾಟೀಲ್ (29) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯನ್ನು ಪಡೆದ ದಯಾ ನಾಯಕ್ ನೇತೃತ್ವದ ತಂಡವು ಆರೋಪಿಯನ್ನು ಪಶ್ಚಿಮ ವಿಭಾಗದ ಖಾರ್ ರೈಲ್ವೇ ನಿಲ್ದಾಣದ ಸಮೀಪದಲ್ಲಿ ಬಂಧಿಸಿದೆ.
ಆರೋಪಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 2 ದೇಶಿ ನಿರ್ಮಿತ ಪಿಸ್ತೂಲ್, 6 ಜೀವಂತ ಕಾಡತೂಸುಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೊರಿವಲಿ ಪೂರ್ವದ ಕಾಜುಪಾಡಾ, ಅಂಬೆಮಾತಾ ಮಂದಿರ ಸಮೀಪದ, ಜಮುನ್ದಾಸ್ ಬುಡಿಯಾ ಚಾಳ್ ನಿವಾಸಿಯಾಗಿರುವ ಆರೋಪಿಯನ್ನು ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜತೆ ಸಿಪಿ ವಿನಯ್ ಚುಬೆ, ಅಡಿಷನಲ್ ಕಮಿಷನರ್ ಮನೋಜ್ ಕುಮಾರ್ ಶರ್ಮಾ, ವಲಯದ ಡಿಸಿಪಿ ಪರಮ್ಜಿತ್ ಸಿಂಗ್ ದಹೀಯಾ, ಎಸಿಪಿ ದಿಲೀಪ್ ಕಾಲೆ ಮೊದಲಾದವರಿದ್ದರು. ಮುಂಬಯಿಯಲ್ಲಿ 4ನೇ ಹಂತದ ಚುನಾವಣೆಯು ಎ 29ರಂದು ನಡೆಯಲಿರುವುದರಿಂದ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಅಪರಾಧಗಳನ್ನು ತಡೆಗಟ್ಟುವ ದೃಷ್ಟಿಯಿಂದ ನಗರ ಪೊಲೀಸರು ಹದ್ದಿನಗಣ್ಣಿಟ್ಟಿದ್ದಾರೆ.