Advertisement

ಕೊರೊನಾ ಬಳಿಕ ಉದ್ಯೋಗವೇ ಬಹುದೊಡ್ಡ ಚಾಲೆಂಜ್‌

07:29 PM Aug 16, 2020 | Karthik A |

ಜಗತ್ತಿನಾದ್ಯಂತ ಕೊರೊನಾ ಎಬ್ಬಿಸಿದ ಆತಂಕ, ಮಾಡಿದ ಹಾನಿ ಅಷ್ಟಿಷ್ಟಲ್ಲ.

Advertisement

ಎರಡನೇ ಮಹಾಯುದ್ಧದಲ್ಲೂ ಜಗತ್ತು ಈ ಪ್ರಮಾಣದ ನಷ್ಟಕ್ಕೆ ಒಳಗಾಗಿರಲಿಲ್ಲ.

ಚೀನದ ವುಹಾನ್‌ ಪಟ್ಟಣದಿಂದ ಆರಂಭವಾದ ಈ ವೈರಸ್‌ನ ಸವಾರಿ, ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಹಬ್ಬಿ, ಇಡೀ ಮನುಕುಲವನ್ನು ತನ್ನ ಕಬಂಧ ಬಾಹುವಿನಲ್ಲಿಟ್ಟು ಕೊಂಡಿತು.

ಈಗ ಕೊರೊನಾ ಸೋಂಕಿತರ ಸಂಖ್ಯೆಯು 21 ದಿನಗಳಲ್ಲಿ 10 ಲಕ್ಷದಿಂದ 20 ಲಕ್ಷವನ್ನು ತಲುಪಿದೆ.

ಇನ್ನೊಂದೆಡೆ ಅತ್ಯಧಿಕ ಸಂಖ್ಯೆಯ ಸೋಂಕಿತರು ಇರುವ ಅಮೆರಿಕ, ಬ್ರೆಜಿಲ್‌ ಬಳಿಕ ಹೆಚ್ಚಿನ ಕೊರೊನಾ ಪೀಡಿತರು ಭಾರತದಲ್ಲಿ ಕಂಡುಬರುತ್ತಿರುವುದು ಆಂತಕಕ್ಕೀಡುಮಾಡಿದೆ.

Advertisement

ಇದೆಲ್ಲದರ ನಡುವೆ ಕೊರೊನಾ ತಂದೊಡ್ಡಿರುವ ಸಮಸ್ಯೆ ಹಾಗೂ ಸಂಕಷ್ಟಗಳು ಹಲವು ಆಯಾಮಗಳಲ್ಲಿ ನಮ್ಮನ್ನೆದುರುಗೊಳ್ಳುತ್ತದೆ.

ಮೊದಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದ ಭಾರತಕ್ಕೆ ಕೊರೊನಾ ಗಾಯದ ಮೇಲೆ ಬರೆ ಎಳೆದಿದೆ. ಇತ್ತೀಚೆಗೆ ಮುಂಬಯಿ ಮೂಲದ ವಿಚಾರ ಚಾವಡಿ ಸಂಸ್ಥೆ ಸೆಂಟರ್‌ ಫಾರ್‌ ಮಾನಿಟಿರಿಂಗ್‌ ಇಂಡಿಯನ್‌ ಎಕಾನಾಮಿ ನೀಡಿದ ವರದಿಯಂತೆ ಈ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡ 122 ಮಿಲಿಯನ್‌ ಜನರಲ್ಲಿ 60 ಮಿಲಿಯನ್‌ ಉದ್ಯೋಗಿಗಳು 40 ವರ್ಷಕ್ಕಿಂತ ಕೆಳಗಿನವರಿದ್ದಾರೆ ಎಂದು ತಿಳಿಸಿದೆ.

ಇದರಲ್ಲಿ 20-24 ವಯೋಮಾನದವರು 13 ಮಿಲಿಯನ್‌ರಷ್ಟಿದ್ದರೆ, 25-29 ವಯೋಮಾನದ 14 ಮಿಲಿಯನ್‌ರಷ್ಟಿದ್ದಾರೆ. ಇನ್ನು 27 ಮಿಲಿಯನ್‌ಗಿಂತ ಹೆಚ್ಚಿನ ಯುವಕರು ತಮ್ಮ 20ನೇ ವಯಸ್ಸಿನಲ್ಲೇ ಉದ್ಯೋಗ ಕಳೆದುಕೊಂಡಿದ್ದು, ಈ ದೇಶವನ್ನು ರೂಪಿಸಬೇಕಾದ ಯುವಶಕ್ತಿ, ತಮ್ಮ ಕಿರಿವಯಸ್ಸಿನಲ್ಲೇ ಅಂದರೆ, ಔದ್ಯೋಗಿಕ ಜೀವನಕ್ಕೆ ಕಾಲಿಟ್ಟ ತತ್‌ಕ್ಷಣವೇ ಇಂತಹದ್ದೊಂದು ಸ್ಥಿತಿಯನ್ನು ಎದುರಿಸಬೇಕಾಗಿರುವುದು ವಿಷಾದನೀಯ ಸಂಗತಿ. ಇದು ನಿರುದ್ಯೋಗಿ ಯುವಕರ ಸಾಲ ಹೆಚ್ಚಾಗುವುದರ ಜತೆಗೆ ಉಳಿತಾಯದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎಂಬುದಾಗಿ ವರದಿ ತಿಳಿಸಿದೆ.

ಕೊರೊನಾದಿಂದ ಒಂದೆಡೆ ಸಾವಿರ ಸಾವಿರ ಹೆಣಗಳು ಉರುಳುತ್ತಿದ್ದರೆ, ಇನ್ನೊಂದೆಡೆ ಹಸಿವು ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ವರ್ಷದ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಭಾರತವನ್ನು ಗಂಭೀರ ಮಟ್ಟದ ಹಸಿವು ಹೊಂದಿರುವ ದೇಶವೆಂದು ವರ್ಗೀಕರಿಸಲಾಗಿದೆ.
ಕೊರೊನಾ ತಂದೊಡ್ಡಿರುವ ವಿಪ್ಲವಗಳ ಪಟ್ಟಿಯಲ್ಲಿ ಪ್ರಸ್ತುತ ನಮ್ಮನ್ನು ಕಾಡುವ ಇನ್ನೊಂದು ಜ್ವಲಂತ ಸಮಸ್ಯೆ, ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಔಪಚಾರಿಕ ಶಿಕ್ಷಣವನ್ನು ಮುಗಿಸಿ ಉದ್ಯೋಗ ಮಾರುಕಟ್ಟೆಗೆ ಆಗಮಿಸಿದರೆ, ಅವರ ಶಿಕ್ಷಣಕ್ಕನುಗುಣವಾದ ಯಾವುದೇ ಉದ್ಯೋಗಗಳಿಲ್ಲ. ಈ ಸಮಸ್ಯೆ ಮೊದಲೇ ಸಮಾಜದಲ್ಲಿರುವ ನಿರುದ್ಯೋಗದ ಪೆಡಂಭೂತವನ್ನು ಇನ್ನಷ್ಟು ಸದೃಢ‌ಗೊಳಿಸಬಲ್ಲದ ಹೊರತು ಆಶಾದಾಯಕ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿಲ್ಲ.

ಅಲ್ಲದೆ ಹೆಚ್ಚಿನ ವಿದ್ಯಾರ್ಥಿಗಳು ಬ್ಯಾಂಕ್‌ ಸಾಲದ ನೆರೆವಿನಿಂದ ಶಿಕ್ಷಣವನ್ನು ಮುಗಿಸಿರುತ್ತಾರೆ, ಆದರೆ ಬ್ಯಾಂಕ್‌, ಶಿಕ್ಷಣ ಸಂಪೂರ್ಣಗೊಳಿಸಿದ ಕೆಲವೇ ತಿಂಗಳುಗಳ ಅನಂತರ ಬಡ್ಡಿಯನ್ನು ಪ್ರಾರಂಭಿಸುವುದರಿಂದ, ಉದ್ಯೋಗವಿಲ್ಲದ ಒಂದು ಹೊರೆಯಾದರೆ, ಬಡ್ಡಿ ಕಟ್ಟುವ ಚಿಂತೆ ಈ ಸಮುದಾಯವನ್ನು ಕಾಡದಿರದು. ಕೊರೊನಾ ಸೋಂಕಿಗೆ ಬೆದರಿ ಲಕ್ಷಾಂತರ ಜನರು ಹಳ್ಳಿಯ ಕಡೆ ಮುಖ ಮಾಡಿದ್ದಾರೆ. ಆದರೆ ಇಷ್ಟು ದಿನ ಪಟ್ಟಣದಲ್ಲಿ ಅಷ್ಟೇನು ದೈಹಿಕ ಸಾಮರ್ಥ್ಯದ ಕೆಲಸವನ್ನು ಮಾಡದವರಿಗೆ, ಕೃಷಿ ದುಡಿಮೆಯ ಶಕ್ತಿಯಾದರೂ ಇದೆಯೇ? ಖಂಡಿತ ಇರಲಾರದು.
ಆದರೆ ಕೊರೊನಾ ಮಹಾಮಾರಿ ಯಾವುದೇ ಒಂದು ಭಾಗಕ್ಕೆ ಸೀಮಿತವಾಗಿಲ್ಲ, ಮನುಕುಲವನ್ನೇ ಬಿಟ್ಟುಬಿಡದಂತೆ ಕಾಡುತ್ತಿದೆ.

ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಯಾರೂ ಧೃತಿಗೆಡದೆ ತಾಳ್ಮೆಯಿಂದ ಸನ್ನಿವೇಶವನ್ನು ಒಗ್ಗಟ್ಟಾಗಿ ಎದುರಿಸಬೇಕು. ಈಗ ಮಾಸ್ಕೋದ ಗಮಲೇಯ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸಿದ ಸ್ಪಟ್‌ನಿಕ್‌ವಿ ಲಸಿಕೆ ಕೊರೊನಾ ಮಹಾಮಾರಿಯನ್ನು ಮೆಟ್ಟಿ ನಿಲ್ಲುವ ನೆಲೆಯಲ್ಲಿ ಸಫ‌ಲತೆಯತ್ತ ಸಾಗುತ್ತಿದೆ. ಆ ಹಿನ್ನೆಲೆಯಲ್ಲಿ ಯುವ ಜನತೆ ಈ ದಿನಗಳಿಗೆ ಅಗತ್ಯವಾದ ಕೌಶಲಗಳನ್ನು ಈ ಸಮಯದಲ್ಲಿ ಅಭಿವೃದ್ಧಿ ಪಡಿಸಿಕೊಳ್ಳುವತ್ತ ದೃಷ್ಟಿ ಹಾಯಿಸಬೇಕಾಗಿದೆ.

ಪ್ರಸಾದ ಶೆಟ್ಟಿ , ಮಡಿರ್‌, ಉಪನ್ಯಾಸಕರು, ಆಳ್ವಾಸ್‌ ಕಾಲೇಜು ಮೂಡುಬಿದಿರೆ

 

 

Advertisement

Udayavani is now on Telegram. Click here to join our channel and stay updated with the latest news.

Next