Advertisement

ಕೋವಿಡ್ ಸಂಕಷ್ಟದಲ್ಲಿ ನೆರವಿಗೆ ಬಂದ ನರೇಗಾ ಯೋಜನೆ

03:41 PM May 09, 2021 | Team Udayavani |

ವರದಿ :ಕೇಶವ ಆದಿ

Advertisement

ಬೆಳಗಾವಿ: ಕೊರೊನಾದ ಎರಡನೇ ಅಲೆಯ ತೀವ್ರತೆಯ ನಡುವೆ ಬಡ ಜನರ ಜೀವನ ಮತ್ತೆ ಮೂರಾಬಟ್ಟೆಯಾಗಿದೆ. ಉದ್ಯೋಗ ಕೈಕೊಟ್ಟಿದೆ. ಕಣ್ಣ ಮುಂದೆ ಹತ್ತಾರು ಕಷ್ಟಗಳ ಸರಮಾಲೆಯೇ ಇದೆ. ಆದರೆ ಇಂತಹ ಕಷ್ಟಗಳ ನಡುವೆಯೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೂರಾರು ಕುಟುಂಬಗಳ ಕೈಹಿಡಿದಿದೆ. ಜೀವನಕ್ಕೆ ಆಸರೆಯಾಗಿ ಬಂದಿದೆ. ಇದಕ್ಕೆ ಬೆಳಗಾವಿ ಜಿಲ್ಲೆ ಒಂದು ಉತ್ತಮ ಉದಾಹರಣೆ.

ಜಿಲ್ಲೆಯಲ್ಲಿ ಕೇವಲ ಉದ್ಯೋಗ ಕೇಳಿ ಬಂದವರಿಗೆ ಕೆಲಸ ಕೊಡುವದಷ್ಟೇ ಅಲ್ಲ, ಇದರಲ್ಲೂ ದಾಖಲೆ ಮಾಡಲಾಗಿದೆ. ವಲಸೆ ಹೋಗುವುದನ್ನು ತಡೆಯಲಾಗಿದೆ. ಕೃಷಿ ಕಾಯಕದಲ್ಲಿ ಹೊಸ ರೂಪ ಕಾಣುತ್ತಿದೆ. ಪರಿಣಾಮ 2020-21 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆ ಒಂದು ಕೋಟಿಗೂ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ ನರೇಗಾದಲ್ಲಿ ಹೊಸ ದಾಖಲೆ ಬರೆದಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಈ ಪ್ರಮಾಣದಲ್ಲಿ ಉದ್ಯೋಗ ಕೊಟ್ಟಿರುವ ನಿದರ್ಶನಗಳಿಲ್ಲ. ಆದರೆ ಬೆಳಗಾವಿ ಜಿಲ್ಲೆ 1.27 ಕೋಟಿ ಜನರಿಗೆ ವಿವಿಧ ಕೆಲಸಗಳನ್ನು ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

ಸರಕಾರ ನೀಡಿದ ಪರಿಷ್ಕೃತ 1.25 ಕೋಟಿ ಮಾನವ ದಿನಗಳ ಗುರಿಯನ್ನು ಮೀರಿ ನಡೆದ ಬೆಳಗಾವಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ. 1.27 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಪ್ರತಿಶತ 101.72 ಪ್ರಗತಿ ಸಾಧಿಸಲಾಗಿದೆ. ಅದರಂತೆ 2021-22 ನೇ ಸಾಲಿನ ಏಪ್ರೀಲ್‌ ತಿಂಗಳಲ್ಲಿ 13 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ.

ಏಪ್ರೀಲ್‌ ಮತ್ತು ಮೇ ತಿಂಗಳು ಸೇರಿ 40 ಲಕ್ಷ ಮಾನವ ದಿನಗಳ ಗುರಿ ಹಾಕಿಕೊಳ್ಳಲಾಗಿದೆ. ಯಾವ ಕುಟುಂಬವೂ ನಮಗೆ ಕೆಲಸ ಇಲ್ಲ ಎನ್ನಬಾರದು ಎಂಬುದು ಜಿಲ್ಲಾ ಪಂಚಾಯತ್‌ ಉದ್ದೇಶ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಕೊರೊನಾದಿಂದಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಹಾಗೂ ನೆರೆಯ ರಾಜ್ಯಗಳಿಗೆ ಕೆಲಸಕ್ಕೆ ಹೋಗಿದ್ದ ಬಡ ಕುಟುಂಬಗಳು ಅಲ್ಲಿನ ಪರಿಸ್ಥಿತಿಯಿಂದಾಗಿ ಮರಳಿ ತಮ್ಮ ಊರಿಗೆ ಬಂದಿವೆ. ಈ ಎಲ್ಲ ಕುಟುಂಬಗಳಿಗೆ ಕೆಲಸ ಇಲ್ಲದೇ ಆತಂಕ ಉಂಟಾದಾಗ ಕಂಡಿದ್ದು ಉದ್ಯೋಗ ಖಾತ್ರಿ ಯೋಜನೆ.

Advertisement

ಜಿಲ್ಲೆಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಯೋಜನೆಗೆ ಹೆಸರು ನೋಂದಾಯಿಸಿದ್ದು ಇದಕ್ಕೆ ಸಾಕ್ಷಿ. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆ ಯಲ್ಲಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಕೆರೆಗಳ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ, ಚೆಕ್‌ ಡ್ಯಾಮ್‌ ನಿರ್ಮಾಣ, ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಲು ಗುಂಡಿಗಳ ನಿರ್ಮಾಣ ಕಾಮಗಾರಿಗಳು ನಡೆದಿವೆ. ಬರುವ ಮೂರು ವರ್ಷಗಳಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಗುರಿ ಇದ್ದು ಈ ವರ್ಷ 25 ಲಕ್ಷ ಸಸಿಗಳನ್ನು ಜಿಲ್ಲೆಯಾದ್ಯಂತ ನೆಡಲಾಗುತ್ತಿದೆ.

ಜಿಲ್ಲೆಯಲ್ಲಿ 241 ಹೊಸ ಕೆರೆಗಳ ನಿರ್ಮಾಣ ಮಾಡುವ ಗುರಿ ಇದೆ. ಅದರಲ್ಲಿ 145 ಕೆರೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 20 ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಕಾಮಗಾರಿಗಳಿಗಾಗಿ 15,147 ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗಿದೆ. 20-21 ನೇ ಸಾಲಿನಲ್ಲಿ 460.81 ಕೋಟಿ ರೂ. ಗಳ ಅರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂಬುದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್‌ ಅವರ ಹೇಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next