Advertisement

ಉದ್ಯೋಗ ಖಾತ್ರಿ ರೈತರಿಗೆ ವರದಾನ

11:52 AM Feb 15, 2020 | Suhan S |

ಬಾಗಲಕೋಟೆ: ಕೆಲಸ ಅರಿಸಿ ದೂರದ ಮಂಗಳೂರು ಮತ್ತು ಗೋವಾಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ಮತ್ತು ಉತ್ತಮ ಕೂಲಿ ಪಡೆದುಕೊಂಡು ಸಂತೃಪ್ತ ಜೀವನ ನಡೆಸುತ್ತಿರುವುದನ್ನು ಕಂಡು ಸಿಇಒ ಗಂಗೂಬಾಯಿ ಮಾನಕರ ಹರ್ಷ ವ್ಯಕ್ತಪಡಿಸಿದರು.

Advertisement

ಬಾದಾಮಿ ತಾಲೂಕಿನ ತೋಗುಣಶಿ ಮತ್ತು ಕೋಟೆಕಲ್ಲ ಗ್ರಾಮದಲ್ಲಿ ಶುಕ್ರವಾರ ಉದ್ಯೋಗ ಖಾತರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ ಹಮ್ಮಿಕೊಂಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ ಕಾರ್ಯಕ್ರಮದಅಂಗವಾಗಿ ಆಗಮಿಸಿದ ವೇಳೆ ಕೋಟೆಕಲ್ಲ ಗ್ರಾಮ ವ್ಯಾಪ್ತಿಯಲ್ಲಿ ನಾಲಾ ಸಂರಕ್ಷಣೆಗಾಗಿ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ದೂರದ ಊರುಗಳಿಗೆ ಉದ್ಯೋಗ ಅರಿಸಿ ಹೋಗಬೇಡಿ. ಸ್ಥಳೀಯವಾಗಿಯೇ ನಿಮಗೆ ಉದ್ಯೋಗ ನೀಡಲಾಗುತ್ತದೆ. ನರೇಗಾ ಯೋಜನೆಯಡಿ ಜಾಬ್‌ ಕಾರ್ಡ್‌ ಹೊಂದಿದವರಿಗೆ 100 ದಿನ ಹಾಗೂ ಬರಗಾಲದಲ್ಲಿ 150 ದಿನ ಕೂಲಿ ನೀಡಲಾಗುತ್ತಿದೆ. ದಿನಕ್ಕೆ 249 ರೂ.ಗಳ ಕೂಲಿ ನೀಡುತ್ತಿದ್ದು, ಗಂಡು, ಹೆಣ್ಣು ಎನ್ನದೇ ಸಮಾನ ಕೂಲಿ ನೀಡಲಾಗುತ್ತಿದೆ. ಅಂಗವಿಕಲತೆ ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ತೋಗುಣಶಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಲ್ಲಿಯೂ 350ಕ್ಕೂ ಹೆಚ್ಚು ಜನ ಕೂಲಿ ಮಾಡುತ್ತಿದ್ದರು. ಕೂಲಿ ಕೆಲಸದಲ್ಲಿ ಹೆಚ್ಚಾಗಿ ಮಹಿಳೆಯರು ಇದ್ದದ್ದನ್ನು ಕಂಡು ಗ್ರಾಮೀಣೋಪಾಯದಡಿ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನ ಸಾಲದ ಸೌಲಭ್ಯಗಳ ಒದಗಿಸಲಾಗುವುದು. ನರೇಗಾದಿಂದ ಕೋಳಿ, ಕುರಿ, ದನದ ತೊಟ್ಟಿ ನಿರ್ಮಾಣ ಹಾಗೂ ಎಸ್‌ ಎಚ್‌ಜೆ ಕಟ್ಟಡಕ್ಕು ಅವಕಾಶವಿದೆ. ದುಡಿಯುವ ಕೈಗಳಿಗೆ ಮಾತ್ರವಲ್ಲದೇ ರೈತರಿಗೂ ಸಹ ನರೇಗಾ ವರದಾನವಾಗಿದೆ ಎಂದು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಪ್ರದೇಶ ಅಭಿವೃದ್ಧಿಗೆ ನಮ್ಮ ಹೊಲ ನಮ್ಮ ದಾರಿ ನಿರ್ಮಾಣಕ್ಕೆ ನರೇಗಾದಡಿ ಸಾಕಷ್ಟು ಅವಕಾಶಗಳಿವೆ. ಈ ಯೋಜನೆಯ ಲಾಭವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಮೀನುಗಾರಿಕೆ, ಕೃಷಿ ಹೊಂಡ ನಿರ್ಮಾಣಕ್ಕೆ ವರದಾನವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ರಾಜ್ಯಕ್ಕೆ 5ನೇ ಸ್ಥಾನದಲ್ಲಿದೆ ಎಂದರು.

Advertisement

ವಿಕಲಚೇತನ ಕೂಲಿ ಕಾರ್ಮಿಕರಾದ ಯಮನವ್ವ ಪೂಜಾರಿ ಮಾತನಾಡಿ, ನರೇಗಾ ಯೋಜನೆಯಿಂದ ನಮಗೆ ವರದಾನವಾಗಿದೆ. ಉದ್ಯೋಗ ಅರಿಸಿ ವಲಸೆ ಹೋಗುವದನ್ನು ತಪ್ಪಿಸಿದೆ. ತಿಂಗಳು ಗಟ್ಟಲೇ ಬೇರೆ ರಾಜ್ಯಕ್ಕೆ ಕೆಲಸಕ್ಕೆ ಹೋಗಬೇಕಾಗುತ್ತಿತ್ತು. ಹೊಲದ ಕೆಲಸ ಇಲ್ಲದ ಸಮಯದಲ್ಲಿ ತುಂಬಾ ತೊಂದರೆಯಾಗುತ್ತಿತ್ತು. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಜೀವನ ನಡೆಸಲು ತೊಂದರೆಯಾಗುತ್ತಿತ್ತು. ವಿಕಲತೆ ಹೊಂದಿದರು ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಿಕೊಂಡರು. ಕಾರ್ಮಿಕ ಯಲ್ಲಪ್ಪ ಉಪ್ಪಾರ ಮಾತನಾಡಿ, ನರೇಗಾ ಯೋಜನೆ ನಮಗೆ ಅನ್ನ ಹಾಕುತ್ತಿದೆ. ಕೆಲಸಕ್ಕೆಂದು ಬೇರೆಯವರ ಜಮೀನುಗಳಿಗೆ ಹೋಗಿಕೆಲವೇ ದಿನಗಳ ವರಗೆ ಕೂಲಿ ಮಾಡಬೇಕಾಗುವ ಸಂದರ್ಭ ಒದಗಿಬರುತ್ತಿತ್ತು. ಆದರೆ ನರೇಗಾದಿಂದ 150 ದಿನಗಳ ಕೆಲಸ ದೊರೆಯುತ್ತಿರುವುದು ಅನುಕೂಲವಾಗಿದೆ ಎಂದರು.

ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ: ಕೋಟಿಕಲ್ಲ ಗ್ರಾಮ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಸ್ಥಳದಲ್ಲಿ ಆರೋಗ್ಯ ಶಿಬಿರ ನಡೆಸಲಾಯಿತು. ಕೆಲಸದಲ್ಲಿ ತೊಡಗಿದ್ದ ಒಟ್ಟು 350 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಸ್ಥಳದಲ್ಲಿಯೇ ಔಷಧಿ ನೀಡಲಾಯಿತು. ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಸವರಾಜ ಕಾರ್ಮಿಕರ ತಪಾಸಣೆ ಮಾಡಿದರು.

ಈ ವೇಳೆ ಡಿಎಚ್‌ಒ ಡಾ| ಅನಂತ ದೇಸಾಯಿ, ಬಾದಾಮಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಡಾ| ಪುನಿತ್‌, ತೋಗುಣಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಲ್‌.ಜಿ. ಶಾಂತಗೇರಿ, ಎಡಿಪಿಸಿ ನಾಗರಾಜ ರಾಜನಾಳ, ಜಿಲ್ಲಾ ಐಇಸಿ ಸಂಯೋಜಕ ಪವನ ಕುಲಕರ್ಣಿ, ಜಿಲ್ಲಾ ಡಿಎಂಐಎಸ್‌ ಉಜ್ವಲ ಸಕ್ರಿ, ತಾಲೂಕು ಐಇಸಿ ಸಂಯೋಜಕ ಸಮೀರ ಉಮರ್ಜಿ, ಈರಣ್ಣ ಮಾಸ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next