Advertisement

ಮಲೆನಾಡಲ್ಲೂ ಬಸವಳಿದ ನದಿಗಳು!

10:56 AM May 21, 2019 | Suhan S |

ಶಿರಸಿ: ಮಳೆಯ ನಾಡು ಮಲೆನಾಡು. ಆದರೆ, ಈಚೆಗಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯ ಏರಿಳಿತ ಆಗುತ್ತಿರುವ ಕಾರಣದಿಂದ ಇಲ್ಲಿನ ನದಿಗಳು ಜೀವಂತಿಕೆ ಕಳೆದುಕೊಳ್ಳುವಂತಾಗಿದೆ. ವರವಾಗಿದ್ದ ನದಿಗಳು ಹರಿವು ನಿಲ್ಲಿಸಿ ನಿಧಾನವಾಗಿ ಬರದ ಛಾಯೆ ಮೂಡಿಸುತ್ತಿವೆ. ದಿನದಿಂದ ದಿನಕ್ಕೆ ನೀರಿನ ಬವಣೆ ದ್ವಿಗುಣವಾಗುವ ಲಕ್ಷಣಗಳು ದಟ್ಟವಾಗಿದೆ.

Advertisement

ಶಿರಸಿ ತಾಲೂಕಿನಲ್ಲಿ ಹರಿವ ವರದಾ, ಅಘನಾಶಿನಿ, ಶಾಲ್ಮಲಾ ನದಿಗಳು ಈ ಬಾರಿ ಬೇಸಿಗೆ ಆರಂಭದಲ್ಲೇ ನಿಧಾನವಾಗಿ ಹರಿವು ನಿಲ್ಲಿಸಿದ್ದರ ಪರಿಣಾಮ ಬಾವಿಗಳಲ್ಲೂ ಜಲ ಕೊರತೆ ಆರಂಭವಾಗಿದೆ. ಕಳೆದ ಏಪ್ರೀಲ್ ಕೊನೆ, ಮೇ ಮೊದಲ ವಾರದ ತನಕವೂ ಅಷ್ಟಾಗಿ ಕಾಡದ ನೀರು ಈಗ ಕೊರತೆಯನ್ನು ಬಳುವಳಿಯಾಗಿ ನೀಡುತ್ತಿದೆ.

ಮಳೆಗಾಲದಲ್ಲಿ ತುಂಬಿ ಹರಿವ ವರದಾ ನದಿ ಈಗ ಒಣಗಿದ್ದರೆ, ಇನ್ನೊಂದೆಡೆ ಸ್ವಲ್ಪವಾದರೂ ಹರಿವು ಉಳಿಸಿಕೊಳ್ಳುತ್ತಿದ್ದ, ಗುಂಡಿಗಳಲ್ಲೂ ತುಂಬಿದ ನೀರು ಕಾಣಿಸುತ್ತಿದ್ದ ಶಾಲ್ಮಲಾ ನದಿ ಕೂಡ ತನ್ನ ಓಟವನ್ನು ನಿಲ್ಲಿಸಿದೆ. ಆಟದ ಮೈದಾನದಂತೆ ಬೋರಲಾಗಿದೆ.

ಇನ್ನೊಂದೆಡೆ ಅಘನಾಶಿನಿ ನದಿ ಕೂಡ ತನ್ನ ಜಲದ ಓಟವನ್ನು ನಿಲ್ಲಿಸಿದೆ. ಕೆಂಗ್ರೆ ಹಳ್ಳ ಕೂಡ ಬರಿದಾಗಿದೆ. ಈ ಎರಡೂ ನದಿಗಳು ಶಿರಸಿಯ ಸುಮಾರು 70 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸುತ್ತಿದ್ದು, ಈ ಬಾರಿ ಕಳೆದ ಬಾರಿಗಿಂತ ಅಧಿಕ ತುಟಾಗ್ರತೆ ಸೃಷ್ಟಿಯ ಕಾಲ ಎಂದು ಹೇಳಲಾಗುತ್ತಿದೆ. ಮೂರು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದು, ಇದೇ ಮುಂದುವರಿದರೆ ಐದಾರು ದಿನಗಳಿಗೊಮ್ಮೆ ನೀರು ಬಿಡುವ ಸಂದರ್ಭ ಕೂಡ ಬರಲಿದೆ ಎನ್ನುತ್ತಿದ್ದಾವೆ ನಗರಸಭೆ ಮೂಲಗಳು.

ಈ ಮಧ್ಯೆ ಕೆಂಗ್ರೆಯಲ್ಲಿ, ಅಘನಾಶಿನಿ ಮಾರಿಗದ್ದೆ ಸಮೀಪ ನೀರು ನಿಲ್ಲಿಸಲು ಕಟ್ಟು ಹಾಕತ್ತಿದ್ದ ರೈತರ ಒಡ್ಡುಗಳನ್ನೂ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಈ ಒಡ್ಡು ತೆರವು ಮಾಡಿದ್ದರಿಂದ ನಮ್ಮ ಬಾವಿಗಳಲ್ಲಿ ನೀರು ಕಡಿಮೆ ಆಗಿದೆ ಎನ್ನುವುದು ಕೆಂಗ್ರೆ ಭಾಗದ ನಿವಾಸಿಗಳ ಅಳಲು. ನಗರಸಭೆ ಮಾತ್ರ ಒಡ್ಡು ಕಟ್ಟಲು ಅಡ್ಡಿಯಿಲ್ಲ, ನಮಗೆ ಆಗದಾ ಎಂಬ ಪ್ರಶ್ನೆ ಎತ್ತಿದ್ದಾರೆ. ಶಾಲ್ಮಲಾ ಹರಿವು ನಿಲ್ಲಿಸಿದ್ದರಿಂದ ನದಿಯೊಳಗೇ ಇರುವ ಸಹಸ್ರಲಿಂಗದ ಶಿವನ ಬಳಿಯೂ ನೀರಿಲ್ಲದಂತಾಗಿದೆ.

Advertisement

ಶಿರಸಿಯಲ್ಲಿ ಜೀವಜಲ ಕಾರ್ಯಪಡೆ ನೀರು ಉಳಿಸುವ ಕೆರೆ ಅಭಿವೃದ್ಧಿ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲೇ ಶ್ರೀನಿವಾಸ ಹೆಬ್ಟಾರ ನೇತೃತ್ವದಲ್ಲಿ ನಡೆಸಿದ್ದಾರೆ. ಬಾವಿಗಳ ನೀರು ಬಳಸಿ ಮಿತವಾಗಿ ಇರಲಿ ನೀರಿನ ವ್ಯಯ ಎಂಬ ಮಾತುಗಳೂ ವ್ಯಕ್ತವಾಗಿದೆ.

ಶಿರಸಿ ನೀರ್ನಳ್ಳಿ ಜನತಾ ಕಾಲನಿಯಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಬನವಾಸಿ ಹೋಬಳಿಯ ಐದಾರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತಾತ್ಕಾಲಿಕವಾಗಿ ಪೂರೈಕೆಗೆ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಕಾಡಿನಲ್ಲಿರುವ ವನ್ಯಮೃಗಗಳಿಗೆ ತೊಂದರೆ ಆಗಬಾರದು ಎಂದು ಅರಣ್ಯ ಇಲಾಖೆ ಬನವಾಸಿ ವಲಯದಲ್ಲಿ ನೀರಿನ ಟಾಕಿ ಇಡಲೂ ಮುಂದಾಗಿದ್ದಾರೆ. ಉಳಿದ ಭಾಗದ ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಅವುಗಳಿಗೆ ಏನು ಮಾಡಬೇಕು ಎಂಬುದೂ, ಉಭಯ ವಾಸಿಗಳು, ಜಲಚರಗಳಿಗೂ ಈಗ ಜಲ ಸಂಕಷ್ಟ ಕಾಡುತ್ತಿದೆ.

ಶಿರಸಿಯ ಉಷ್ಣಾಂಶ ಮಾಧ್ಯಾಹ್ನ 1 ಗಂಟೆ ಸುಮಾರಿಗೆ 39ರಿಂದ 41 ಡಿಗ್ರಿ ಸೆಲ್ಸಿಯಸ್‌ ಸರಾಸರಿ ಇದ್ದು, ಮಳೆಯೂ ಬಾರದೇ ಕಂಗಾಲಾಗುವಂತೆ ಮಾಡಿದೆ. ಉಷ್ಣಾಂಶ ರಾತ್ರಿ 18:20ಕ್ಕೆ ಬರುತ್ತಿರುವುದರಿಂದ ಅಡಕೆ ಬೇಸಾಯದ ಭವಿಷ್ಯದ ಬೆಳೆಯ ಮೇಲೂ ಪರಿಣಾಮ ಉಂಟು ಮಾಡುವಂತೆ ಆಗಿದೆ.

ಜೀವಜಲ ಕಾರ್ಯಪಡೆ ಎಂಟತ್ತು ಕೆರೆಗಳನ್ನು ಮಾದರಿಯಾಗಿ ಮಾಡಿದೆ. ಮನು ವಿಕಾಸ ಸಂಸ್ಥೆ ಕೆಲವನ್ನು ಮಾಡಿದೆ. ಇನ್ನೂ ಕೆರೆಗಳ ಅಭಿವೃದ್ಧಿ ಆಗಬೇಕಾದ್ದು ಸಾಕಷ್ಟು ಇದೆ. ಎಲ್ಲರೂ ಒಟ್ಟಾಗಿ ಕೆರೆಯ, ಕಾಡಿನ ಉಳಿವಿಗೆ ಪಣ ತೊಡದೇ ಇದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟ ಎಂಬುದಂತೂ ಸುಳ್ಳಲ್ಲ.

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next