Advertisement

ಡಿಜಿಪಿ ನೀಲಮಣಿ ರಾಜುಗೆ ತುರ್ತು ನೋಟಿಸ್‌

12:21 PM Apr 10, 2018 | Team Udayavani |

ಬೆಂಗಳೂರು: ಸಿವಿಲ್‌ ನ್ಯಾಯಾಂಗ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಹಾಗೂ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ಗೆ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ.

Advertisement

ಪೊಲೀಸ್‌ ಕಾಲೋನಿಗಳಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಪರ ಪ್ರಚಾರ ನಡೆಸಲು ಅನುಮತಿ ನೀಡುವ ಸಂಬಂಧ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಡಿಜಿಪಿ ಹಾಗೂ ಪೊಲೀಸ್‌ ಆಯುಕ್ತರ ವಿರುದ್ಧ ರಕ್ಷಕ ಸೇನೆ ( ಪೊಲೀಸ್‌ ಮಹಾಸಂಘದ ಅಧ್ಯಕ್ಷ ಶಶಿಧರ್‌ ನೇತೃತ್ವದ ಪಕ್ಷ ) ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧಿಸಿದಂತೆ ನ್ಯಾ.ಬಿ.ಎಸ್‌.ಪಾಟೀಲ್‌ ಹಾಗೂ ನ್ಯಾ.ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿಗಳಾದ ಡಿಜಿಪಿ ಹಾಗೂ ನಗರ ಪೊಲೀಸ್‌ ಆಯುಕ್ತರಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಏ. 24ಕ್ಕೆ ಮುಂದೂಡಿದೆ.

ರಕ್ಷಕ ಸೇನೆ ಪಕ್ಷ ಚುನಾವಣಾ ಆಯೋಗದಿಂದ ನೋಂದಣಿಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಪೊಲೀಸ್‌ ಸಿಬ್ಬಂದಿ ಕಲ್ಯಾಣದ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಈ ಪಕ್ಷ ಕೋರಮಂಗಲ, ಆಡುಗೋಡಿ, ಮೈಸೂರು ರಸ್ತೆಯಲ್ಲಿರುವ ಪೊಲೀಸ್‌ ಕಾಲೋನಿಗಳಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಪ್ರಚಾರ ನಡೆಸಲು ಮುಂದಾಗಿತ್ತು.

ಆದರೆ, ಪೊಲೀಸ್‌ ಇಲಾಖೆ ರಕ್ಷಕ ಸೇನೆಯ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ನಿರ್ಬಂಧ ತೆರವು ಕೋರಿ ರಕ್ಷಕ ಸೇನೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ್ದ ಹೈಕೋರ್ಟ್‌, ಆರು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶಿಸಿ ಜನವರಿ 23ರಂದು ಆದೇಶಿಸಿತ್ತು. ಆದರೆ, ರಕ್ಷಕ ಸೇನೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿರುವ ಮನವಿ ಸಂಬಂಧ ಡಿಜಿಪಿ ಹಾಗೂ ಆಯುಕ್ತರು ಇದುವರೆಗೆ ರ್ಧಾರ ತಿಳಿಸಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next