Advertisement

ಸರ್ಕಾರಕ್ಕೆ ವಿದ್ಯುತ್‌ ದರ ಪತ್ರ

10:44 AM Jan 22, 2020 | Suhan S |

ಹುಬ್ಬಳ್ಳಿ: ಅತಿವೃಷ್ಟಿಯಿಂದ ರೈತರಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ದರ ಹೆಚ್ಚಿಸದಂತೆ ಗ್ರಾಮಸ್ಥರು ಮನವಿ ಮಾಡಿದ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು ಹೇಳಿದರು.

Advertisement

ನವನಗರದ ಹೆಸ್ಕಾಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಹಕರ ಸಭೆಯಲ್ಲಿ ಕುಂದು-ಕೊರತೆ ಆಲಿಸಿದ ನಂತರ ಮಾತನಾಡಿದ ಅವರು, ಹೆಸ್ಕಾಂ ವ್ಯಾಪ್ತಿಯ ವಿವಿಧೆಡೆ ರೈತರು ವಿದ್ಯುತ್‌ ದರ ಹೆಚ್ಚಿಸದಂತೆ ಮನವಿ ಮಾಡಿದ್ದಾರೆ. ಕೆಇಆರ್‌ಸಿಗೆ ಬೆಲೆ ಹೆಚ್ಚಿಸದಂತೆ ಅರ್ಜಿ ಸಲ್ಲಿಸಬೇಕಿದೆ. ಕೆಇಆರ್‌ಸಿ ಆಕ್ಷೇಪಣೆಗಳಿಗೆ 1 ತಿಂಗಳ ಕಾಲಾವಧಿ ನೀಡಿದ್ದು, ಯಾರಿಗಾದರೂ ಆಕ್ಷೇಪಗಳಿದ್ದರೆ ದೂರು ಸಲ್ಲಿಸಬೇಕು ಎಂದರು.

ಶಿರಸಿಯ ರೈತ ಎಸ್‌.ಎಂ. ಹೆಗಡೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ರೈತರು ಜಲವಿದ್ಯುತ್‌ ಯೋಜನೆಗೆ ತಮ್ಮ ಭೂಮಿ ನೀಡಿದ್ದಾರೆ. ಆದ್ದರಿಂದ ಈ ಭಾಗದ ಜನರಿಗೆ ಸಮರ್ಪಕ ವಿದ್ಯುತ್‌ ನೀಡಬೇಕು. ಟ್ರಾನ್ಸ್‌ಫಾರ್ಮರ್‌ಗಳು ಹಾಳಾದಾಗ ತ್ವರಿತಗತಿಯಲ್ಲಿ ದುರಸ್ತಿ ಮಾಡಬೇಕು. ಗಾಳಿ, ಮಳೆಯಿಂದ ವಿದ್ಯುತ್‌ ಕಂಬಗಳು ಬಿದ್ದಾಗ ಬೇರೆ ಕಂಬಗಳನ್ನು ನೆಡಬೇಕು. ಸೋರಿಕೆ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಮರ್ಪಕ ವಿದ್ಯುತ್‌ ಪೂರೈಸಲಾಗದಿದ್ದರೆ ಮೆಸ್ಕಾಂ ವ್ಯಾಪ್ತಿಗೆ ಸೇರಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು, ಉತ್ತರ ಕನ್ನಡ ಜಿಲ್ಲೆಗೆ ನಿರಂತರ 24/7 ಮೂರು ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿದ್ದರೆ ತ್ವರಿತವಾಗಿ ಮಾಡಲಾಗುವುದು. ದೊಡ್ಡ ಕಾಮಗಾರಿಗಳನ್ನು ಬಜೆಟ್‌ಗೆ ಅನುಗುಣವಾಗಿ ಮಾಡಲಾಗುವುದು ಎಂದರು. ಲೈನ್‌ ತೆರವಿಗೆ ಮನವಿ: ರಾಮದುರ್ಗ ತಾಲೂಕಿನ ತುರನೂರದಲ್ಲಿ ಹೊಲದ ಮಧ್ಯೆ 33 ಕೆವಿಯ 2 ವಿದ್ಯುತ್‌ ಲೈನ್‌ ಹಾಗೂ 11 ಕೆವಿಯ 2 ವಿದ್ಯುತ್‌ ಲೈನ್‌ ಎಳೆದಿದ್ದರಿಂದ ಕೃಷಿ ಮಾಡಲು ದುಸ್ತರವಾಗುತ್ತಿದೆ. ಕೂಡಲೇ ಇಲ್ಲಿನ ಲೈನ್‌ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹನಮಂತಪ್ಪ ಗರಡಿಮನಿ ಮನವಿ ಮಾಡಿದರು.

ನಾನು ಹೊಲದ ಬದುವಿನಲ್ಲಿ ವಿದ್ಯುತ್‌ ಲೈನ್‌ ಎಳೆಯಲು ಅನುಮತಿ ನೀಡುತ್ತೇನೆ. ಆದರೆ ಮಧ್ಯದಲ್ಲಿ 4 ಲೈನ್‌ ಎಳೆದಿದ್ದರಿಂದ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೊಲದ ಎರಡೂ ಬದಿಗಳಲ್ಲಿ ಗುಡ್ಡವಿರುವುದರಿಂದ ನಮ್ಮ ಹೊಲದಲ್ಲಿ ಕಂಬಗಳನ್ನು ಹಾಕಲಾಗಿದೆ. ನಮ್ಮ ತಂದೆಯವರು ಹಲವು ವರ್ಷ ಕಂಬಗಳ ತೆರವಿಗೆ ಯತ್ನಿಸಿ 4 ವರ್ಷಗಳ ಹಿಂದೆ ತೀರಿ ಹೋದರು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಗುತ್ತಿಲ್ಲ. ಹಿರಿಯರ ಹೊಲದಲ್ಲಿ ಕೃಷಿ ಮಾಡಲು ಅವಕಾಶ ಮಾಡಿಕೊಡಬೇಕೆಂದು ಹನಮಂತಪ್ಪ ಮನವಿ ಮಾಡಿದರು. ಇದು ಹಲವು ವರ್ಷಗಳ ಸಮಸ್ಯೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಲೈನ್‌ ಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಎಂಡಿ ಸುಂದರೇಶ ಬಾಬು ಹೇಳಿದರು.

Advertisement

ನವಲೂರಿನ ಜೆ.ಕೆ. ಪಾರ್ಕ್‌ ನಿವಾಸಿಗಳು ತಮ್ಮ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವಂತೆ ಮನವಿ ಮಾಡಿದರು. ಬಡಾವಣೆಯಲ್ಲಿ ಶೇ.25 ಮನೆಗಳಿದ್ದರೆ ಮಾತ್ರ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಹೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಶೇ.25 ಮನೆಗಳಾಗದಿದ್ದರೆ ಸಾಲ ಮಾಡಿ ಮನೆ ಕಟ್ಟಿಕೊಂಡವರು ಏನು ಮಾಡಬೇಕೆಂದು ಪ್ರಶ್ನಿಸಿದರು. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಂಡಿ ಭರವಸೆ ನೀಡಿದರು. ಹೆಚ್ಚುವರಿ ವಿದ್ಯುತ್‌ ಬಿಲ್‌ ಮರಳಿ ಪಾವತಿಸುವಂತೆ ನವನಗರದ ಕೆ.ವಿ. ಜಮಖಂಡಿ ಮನವಿ ಮಾಡಿದರು.

ರೈತರ ಸುಲಿಗೆ ಆರೋಪ: ರಾಯಬಾಗ ಭಾಗದ ಗ್ರಾಹಕರು ಮಾತನಾಡಿ, ನಮ್ಮ ಭಾಗದಲ್ಲಿ ಹೆಸ್ಕಾಂ ಸಿಬ್ಬಂದಿಯಿಂದ ರೈತರ ಸುಲಿಗೆ ನಡೆದಿದೆ. ಕುಡಚಿ, ರಾಯಬಾಗ, ಹಾರೋಗೇರಿ ವಿಭಾಗದಲ್ಲಿ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಕ್ಷ ಅಧಿಕಾರಿಗಳನ್ನು ನೇಮಿಸಿ ಎಂದು ಮನವಿ ಮಾಡಿದರು.

ತಾಂತ್ರಿಕ ನಿರ್ದೇಶಕ ಆರ್‌. ರಾಜಪ್ಪ ಮಾತನಾಡಿ, ಹೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯಿದೆ. ಶೇ.60 ಹುದ್ದೆಗಳ ನೇಮಕವಾಗಬೇಕಿದೆ. ಶೇ.40ಸಿಬ್ಬಂದಿ ಉಳಿದ ಶೇ.60 ಸಿಬ್ಬಂದಿ ಕೆಲಸವನ್ನೂ ಮಾಡಬೇಕಿದೆ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಇದ್ದ ಸಿಬ್ಬಂದಿಯಲ್ಲೇ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next