Advertisement

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

12:43 AM Apr 02, 2024 | Team Udayavani |

ಮೃಣಾಲ್‌ ಹೆಬ್ಬಾಳ್ಕರ್ ಎಂಜಿನಿಯರ್‌ ಪದವೀಧರರಾದರೂ ಅವರ ಆಸಕ್ತಿ ರಾಜಕೀಯ ಕ್ಷೇತ್ರದಲ್ಲಿ. ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗರಡಿಯಲ್ಲಿ ಪಳಗುತ್ತಿರುವ ಮೃಣಾಲ್‌ ಒಂದು ದಶಕದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.

Advertisement

ನಿಮ್ಮ ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ನಿರೀಕ್ಷೆ ಮಾಡಿರಲಿಲ್ಲ, ಪಕ್ಷದ ವರಿಷ್ಠರು ಯುವ ಕಾರ್ಯಕರ್ತ ಎಂಬ ಕಾರಣದಿಂದ ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್‌ ನೀಡಿದರು. ಮುಖ್ಯವಾಗಿ ನನಗೆ ಚುನಾವಣೆ ಹೊಸದೇನಲ್ಲ. ಸ್ಪರ್ಧೆ ಹೊಸದು. ಉತ್ಸಾಹ ಇದೆ. 10 ವರ್ಷಗಳಿಂದ ಚುನಾವಣೆ ಕೆಲಸ ಮಾಡುತ್ತಲೇ ಬಂದಿದ್ದೇನೆ. ನನ್ನ ತಾಯಿಯ ಚುನಾವಣೆ ಬಳಿಕ ಚನ್ನರಾಜ ಹಟ್ಟಿಹೊಳಿ ಅವರ ವಿಧಾನ ಪರಿಷತ್‌ ಚುನಾವಣೆಯಲ್ಲೂ ಕೆಲಸ ಮಾಡಿದ್ದೇನೆ.

ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿಮಗೆ ಅನ್ನಿ ಸಿದ್ದು ಯಾವಾಗ, ಯಾಕೆ ಮತ್ತು ಪ್ರೇರಣೆ ಏನು?
ಕಳೆದ ಚುನಾವಣೆಯಲ್ಲಿ ನಾವು ಸಂಘಟನೆ ಹಾಗೂ ಸಂಪರ್ಕದ ಕೊರತೆಯಿಂದ ಸ್ವಲ್ಪ ಮತಗಳ ಅಂತರ
ದಿಂದ ಸೋತಿದ್ದೆವು. ಆಗಿನಿಂದ ನನಗೆ ಪಕ್ಷದ ಸಂಘಟನೆ ಮಾಡಬೇಕು ಎನಿಸುತ್ತಿತ್ತು. ಅದಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಚುನಾವಣೆಗೆ ನಿಲ್ಲಬೇಕು ಎಂದು ಹಿರಿಯರ ಒತ್ತಾಯ ಇತ್ತು. ಯುವಕರಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಸಮಾಜ ಸೇವೆಯೇ ಪ್ರೇರಣೆ.

ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್‌ ಯಾರು ಮತ್ತು ಯಾಕೆ?
ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ನನಗೆ ಗಾಡ್‌ ಫಾದರ್‌. ಇದರಲ್ಲಿ ಎರಡು ಮಾತಿಲ್ಲ. ಅವರ ಕಾರ್ಯಶೈಲಿ, ಜನರ ಜತೆಗೆ ನಿಕಟ ಸಂಪರ್ಕ, ಕ್ಷೇತ್ರಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತ ಇದಕ್ಕೆ ಕಾರಣ.

ಮೊದಲ ಪ್ರಯತ್ನದಲ್ಲೇ ನೀವು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ಇದು ಹಿರಿಯ ನಾಯಕರ ಒತ್ತಾಸೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡ ಬೇಕು ಎಂಬ ಉದ್ದೇಶ ಇದೆ. ನನ್ನ ಕಾರ್ಯವೂ ಪಕ್ಷದ ನಾಯಕರಿಗೆ ಹಿಡಿಸಿದೆ. ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ಯುವಜನತೆ ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ಉತ್ಸಾಹದಿಂದ ಕೆಲಸ ಮಾಡುತ್ತೇನೆ ಎಂಬ ಕಾರಣಕ್ಕೆ. ಕಳೆದ 10-12 ವರ್ಷಗಳಿಂದ ಪಕ್ಷದ ಸಂಘಟನೆಗೆ ಕೆಲಸ ಮಾಡುತ್ತ ಬಂದಿದ್ದೇನೆ. ಜನರ ವಿಶ್ವಾಸ ಗಳಿಸಿದ್ದೇನೆ. ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದೇನೆ.

ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ 5 ಕಾರಣ ತಿಳಿಸಿ.
ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಹಿಂದಿನ ಸಂಸದರು ಏನು ಮಾಡಿದ್ದಾರೆ ಎಂಬುದು ಜನರಿಗೆ ಅರಿವಾಗಿದೆ. ನಮ್ಮ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ಇದರ ಜತೆಗೆ ಮುಖ್ಯಮಂತ್ರಿಗಳ ಜನಪ್ರಿಯತೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬದ್ಧತೆ. ಐದು ಗ್ಯಾರಂಟಿ ಯೋಜನೆಗಳು ಎಲ್ಲಕ್ಕಿಂತ ಮುಖ್ಯವಾಗಿ ಮನೆ ಮಗ ಎಂಬುದು ನನ್ನ ಗೆಲುವಿಗೆ ನೆರವಾಗಲಿವೆ.

ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕೆಂದು ಇದ್ದೀರಿ?
ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ವಿಷಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವುದು. ಎರಡನೇ ರಾಜಧಾನಿ ಎಂಬ ಹೆಸರಿಗೆ ತಕ್ಕಂತೆ ಇದರ ಸ್ವರೂಪ ಬದಲಾವಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಕನಸಿದೆ.

ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಯುವಕರಿಗೆ ಉದ್ಯೋಗ ಸೃಷ್ಟಿ. ರಾಜ್ಯದಲ್ಲಿ ನಮ್ಮದೇ ಸರಕಾರ ಇರುವುದರಿಂದ ಹೆಚ್ಚಿನ ಯೋಜನೆ ಗಳನ್ನು ಕ್ಷೇತ್ರಕ್ಕೆ ತರಲು ಅನುಕೂಲವಾಗಲಿದೆ.

ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಜಿಲ್ಲೆಯಲ್ಲಿ ಎಂಟು ಎಂಜಿನಿಯರಿಂಗ್‌ ಕಾಲೇಜು ಗಳು, ಮೂರು ಮೆಡಿಕಲ್‌ ಕಾಲೇಜುಗಳಿದ್ದರೂ ನಮ್ಮ ಯುವಕರು ಕೆಲಸಕ್ಕಾಗಿ ಬೆಂಗಳೂರು ಇಲ್ಲವೇ ಪುಣೆಗೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ನಮ್ಮಲ್ಲೇ ಉದ್ಯೋಗ ಸೃಷ್ಟಿ ಮಾಡಬೇಕಿದೆ. ಪ್ರತಿ ತಾಲೂಕಿಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಿದ್ದೇನೆ. ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಅನುದಾನ ತರಲು ವಿಶೇಷ ಪ್ರಯತ್ನ ಮಾಡುತ್ತೇನೆ.

ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಪ್ರಚಾರದ ವೇಳೆ ಎಲ್ಲ ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುತ್ತಿದ್ದೇನೆ. ಹಿರಿಯ ನಾಯಕರ ಆಶೀರ್ವಾದ ಇರುವುದರಿಂದ ಎಲ್ಲಿಯೂ ಸಮಸ್ಯೆ ಆಗುವದಿಲ್ಲ ಎಂಬ ವಿಶ್ವಾಸ ಇದೆ.

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next