Advertisement

ಕಿಶೋರ್‌ ಜೆಡಿಯು ಉತ್ತರಾಧಿಕಾರಿ: ಬಿಹಾರ ಸಿಎಂ ನಿತೀಶ್‌ 

09:58 AM Sep 17, 2018 | Team Udayavani |

ಪಟ್ನಾ: ಹಿಂದಿನ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಚುನಾವಣಾ ರಣತಂತ್ರ ಸಿದ್ಧಪಡಿಸಿ, ಗೆಲ್ಲಿಸಿದ್ದ ಪ್ರಶಾಂತ್‌ ಕಿಶೋರ್‌ (41) ಈಗ ಜೆಡಿಯು ಸೇರ್ಪಡೆಗೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಮುನ್ನವೇ ಈ ಬೆಳವಣಿಗೆ ನಡೆದಿದೆ. ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಪ್ರಶಾಂತ್‌ ಕಿಶೋರ್‌ ಅವರೇ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂಬ ಘೋಷಣೆಯನ್ನೂ ಮಾಡಿದ್ದಾರೆ ಬಿಹಾರ ಸಿಎಂ. ಪಕ್ಷಗಳಲ್ಲಿ ಉತ್ತರಾಧಿಕಾರ ಪಡೆದುಕೊಳ್ಳಲು ಹಿಂಸಾತ್ಮಕ ಹೋರಾಟವೇ ನಡೆಯುತ್ತಿರುವ ಸಂದರ್ಭದಲ್ಲಿ ನಿತೀಶ್‌ ವಿವಾದವಿಲ್ಲದೆ ಮುಂದಿನ ನಾಯಕನನ್ನೂ ಘೋಷಣೆ ಮಾಡಿದ್ದಾರೆ. ಜತೆಗೆ ಪಕ್ಷ ಸೇರ್ಪಡೆ ಸಂದರ್ಭದಲ್ಲಿಯೇ ಅದರ ಮುಂದಿನ ಹಂತದ ನಾಯಕತ್ವ ಪಡೆದುಕೊಂಡ ಮೊದಲ ನಾಯಕರೂ ಕಿಶೋರ್‌ ಆಗಿದ್ದಾರೆ.

Advertisement

ನಿತೀಶ್‌ ಅವರ ಪಟ್ನಾದ ನಿವಾಸದಲ್ಲಿ ರವಿವಾರ ನಡೆದ ಜೆಡಿಯು ಬಿಹಾರ ಕಾರ್ಯಕಾರಿಣಿಯಲ್ಲಿ ಪ್ರಶಾಂತ್‌ ಕಿಶೋರ್‌ರನ್ನು ಶಾಲು ನೀಡಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಬಳಿಕ ಅವರು ಸಿಎಂ ನಿತೀಶ್‌ ಪಕ್ಕವೇ ಆಸೀನರಾದರು. ಇದಕ್ಕೂ ಮೊದಲು ಟ್ವೀಟ್‌ ಮಾಡಿದ್ದ ಪ್ರಶಾಂತ್‌ “ಬಿಹಾರದಿಂದಲೇ ಹೊಸ ಜೀವನ ಆರಂಭಿಸುತ್ತಿದ್ದೇನೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತಿದೆ’ ಎಂದು ಬರೆದುಕೊಂಡಿದ್ದರು. ಸದ್ಯಕ್ಕೆ ಅವರಿಗೆ ಯಾವುದೇ ಹೊಣೆ ನೀಡದೇ ಇದ್ದರೂ ಬಿಹಾರದ ಬಕ್ಸಾರ್‌ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದೆ.

ಮುಂದಿನ ಜೆಡಿಯು ನಾಯಕ?: ಗಮನಾರ್ಹ ಅಂಶವೆಂದರೆ ಪ್ರಶಾಂತ್‌ ಕಿಶೋರ್‌ ಜೆಡಿಯುನ ಮುಂದಿನ ನಾಯಕ ಎಂದು ನಿತೀಶ್‌ ಘೋಷಿಸಿದ್ದಾರೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಕ್ತ ಸಂಬಂಧ ಹೊರತಾಗಿರುವ ವ್ಯಕ್ತಿಯೊಬ್ಬರಿಗೆ ಪಕ್ಷದ ನಾಯಕತ್ವ ಸುಲಲಿತವಾಗಿ ಘೋಷಣೆಯಾಗಿದ್ದು ಇದೇ ಮೊದಲು.

ಗೌರವಯುತ ಸ್ಥಾನ ಹಂಚಿಕೆ: ನಿತೀಶ್‌
ಲೋಕಸಭೆ ಚುನಾವಣೆಗಾಗಿ ಬಿಜೆಪಿ-ಜೆಡಿಯು ನಡುವೆೆ ಗೌರವಯುತ ಸ್ಥಾನ ಹಂಚಿಕೆ ನಡೆದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಈ ಮೂಲಕ ಅವರು ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲವಿದೆ ಎಂಬ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಬಿಜೆಪಿ 20, 12 ಸ್ಥಾನ ಜೆಡಿಯು, 6 ಎಲ್‌ಜೆಪಿ, ಕೇಂದ್ರ ಸಚಿವ ಉಪೇಂದ್ರ ಖುಶ್ವಾಹ ಪಕ್ಷಕ್ಕೆ 2 ಸ್ಥಾನ ಎಂದು ನಿಗದಿಯಾಗಿದ್ದ ಬಗ್ಗೆ ಕೆಲ ಸಮಯದ ಹಿಂದೆ ಹಲವು ಸುದ್ದಿವಾಹಿನಿಗಳು ವರದಿ ಮಾಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next