Advertisement

ಚುನಾವಣೆ ಫ‌ಲಿತಾಂಶ: ಪ್ರವಾಸಿಗರ ಸಂಖ್ಯೆ ಕ್ಷೀಣ

10:29 PM May 23, 2019 | Team Udayavani |

ಮೈಸೂರು: ಲೋಕಸಭಾ ಚುನಾವಣೆ ಫ‌ಲಿತಾಂಶ ಹಿನ್ನೆಲೆ ನಗರದಲ್ಲಿ ತಮ್ಮ ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಕೆಲವೇ ಕೆಲವು ಮಂದಿ ಪಾಲ್ಗೊಂಡಿದ್ದು, ಉಳಿದವರು ತಮ್ಮ ಮನೆಯ ಟೀವಿಗಳ ಮೊರೆಹೋಗಿದ್ದರು.

Advertisement

ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆ ಕೇಂದ್ರದ ಬಳಿ ಭಾರೀ ಜನದಟ್ಟಣೆ ಇಲ್ಲದ ವಾತಾವರಣ ಶಾಂತವಾಗಿತ್ತು. ಮುಂಜಾನೆಯಿಂದ ಆರಂಭವಾದ ಮತ ಎಣಿಕೆ ವೇಳೆ ಬೆರಳಣಿಕೆಯಷ್ಟು ಮಂದಿ ಸುಳಿದಾಡಿದರೂ, ಮಧ್ಯಾಹ್ನದ ನಂತರ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಸಿಹಿ ಹಂಚಿ ಸಂತೋಷ ವಿನಿಮಯ ಮಾಡಿಕೊಂಡರು.

ಕೊಡಗಿನಿಂದಲೂ ಜನ: ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಬಸ್‌, ವ್ಯಾನ್‌ಗಳನ್ನು ಬಾಡಿಗೆಗೆ ಪಡೆದು ಬಂದಿದ್ದರೆ, ಮತ್ತೆ ಕೆಲವರು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ ಬಂದು ತಾಲೂಕುವಾರು ಮತ ಚಲಾವಣೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ನಂತರ ತಮ್ಮ ಪಕ್ಷದ ಅಭ್ಯರ್ಥಿ ಸೋಲುವುದು ಖಚಿತ ಎಂದು ತಿಳಿದು ಕೆಲವರು ಬಂದ ಹಾದಿಗೆ ಸುಂಕವಿಲ್ಲ ಎಂಬಂತೆ ವಾಪಾಸ್‌ ಆದರು.

ಬಿಸಿಲಲ್ಲೂ ಮಂಡ್ಯದ್ದೇ ಚರ್ಚೆ: ಬಿಸಿಲ ತಾಪ ಹೆಚ್ಚಾದಂತೆಲ್ಲಾ ನಗರದ ಹಲವು ಟೀ-ಸ್ಟಾಲ್‌, ಫ‌ುಟಾ³ತ್‌, ಬಸ್‌ ನಿಲ್ದಾಣ, ಅಂಗಡಿ ಮುಂಗಟ್ಟು ಸೇರಿದಂತೆ ಉದ್ಯಾನದ ನೆರಳಿನ ಪ್ರದೇಶಗಳಲ್ಲಿ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ, ಮಂಡ್ಯದಲ್ಲಿ ಈ ಭಾರಿ ಸುಮಲತಾನೇ ಗೆಲ್ಲೋದು ಬುಡ್ಲಾ ಎಂಬ ಮಾತುಗಳು ಸಾಮಾನ್ಯವಾಗಿದ್ದವು. ಅವಮ್ಮಂಗೆ ಎಷ್ಟೆಲ್ಲಾ ಮೋಸ ಮಾಡುದ್ರು, ದೇವ್ರು ಕೈ ಹಿಡಿದ ಎಂದು ಮಂಡ್ಯದ ಬಗ್ಗೆಯೂ ಚರ್ಚೆ ಸಾಗಿತ್ತು.

ಸ್ಕ್ರೀನ್‌ ಪ್ಲೇನಲ್ಲಿ ವೀಕ್ಷಣೆ: ಚುನಾವಣಾ ಫ‌ಲಿತಾಂಶ ವೀಕ್ಷಿಸುವ ಸಲುವಾಗಿ ಬಿಜೆಪಿ ಕಾರ್ಯಕರ್ತರು ನಜರ್‌ಬಾದ್‌ನ ವಿಕೆ ಫ‌ಂಕ್ಷನ್‌ ಹಾಲ್‌ನಲ್ಲಿ ಸ್ಕ್ರೀನ್‌ ಪ್ಲೇಯಲ್ಲಿ ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಬಿಜೆಪಿ ಫ‌ಲಿತಾಂಶವನ್ನು ಕಾತುರದಿಂದ ವೀಕ್ಷಿಸಿದರು. ಜೊತೆಗೆ ತಮ್ಮ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದಾಗ ಚಪ್ಪಾಳೆ, ಸಿಳ್ಳೆ ಹೊಡೆದು ಸಂಭ್ರಮಿಸಿ, ಖುಷಿಪಟ್ಟರು.

Advertisement

ಮದುವೆಗೆ ಬಾರದ ಜನ: ನ‌ಗರದ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆ ಕೇಂದ್ರದ ಪಕ್ಕದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯ ನಡೆಯುತ್ತಿತ್ತು. ಆದರೆ, ಮತ ಎಣಿಕೆ ಕೇಂದ್ರದ ಸುತ್ತ ನೂರು ಮೀಟರ್‌ ನಿಷೇಧಾಜ್ಞೆ ಇದ್ದ ಕಾರಣ, ಸುತ್ತಲಿನ ಎಲ್ಲಾ ರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದರಿಂದ ಮದುವೆಗೆ ಬರುವ ವಾಹನಗಳಿಗೆ ಸಮಸ್ಯೆ ಎದುರಾಗಿತ್ತು.

ಜೊತೆಗೆ ಸಾಕಷ್ಟು ಮಂದಿ ಚುನಾವಣೆ ಫ‌ಲಿತಾಂಶದ ಕಾರಣದಿಂದ ಮದುವೆ ಮನೆಯಿಂದ ದೂರ ಉಳಿದಿದ್ದರು. ಒಂದೂವರೆ ಸಾವಿರ ಮಂದಿಗೆ ಅಡುಗೆ ಮಾಡಿಸಿದ್ದರೂ, ಇನ್ನೂ ಸಾವಿರ ಮಂದಿ ಊಟ ಮಾಡುವಷ್ಟು ಆಹಾರ ಹಾಗೆಯೇ ಉಳಿದಿತ್ತು.

ಪ್ರವಾಸಿಗರ ಸಂಖ್ಯೆ ಕ್ಷೀಣ: ಗುರುವಾರ ಲೋಕಸಭಾ ಚುನಾವಣೆ ಫ‌ಲಿತಾಂಶವಿದ್ದ ಕಾರಣ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ನಗರದ ಎಲ್ಲಾ ರಸ್ತೆ, ಉದ್ಯಾನ, ಪ್ರಾಣಿ ಸಂಗ್ರಹಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ ಸೇರಿ ಅನೇಕ ಪ್ರವಾಸಿ ತಾಣಗಳು ಜನರಿಲ್ಲದೇ ಬಣಗುಡುತ್ತಿದ್ದವು. ಫ‌ಲಿತಾಂಶ ಹೊರಬರುವ ಮುನ್ನವೇ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next