Advertisement

ದಕ್ಷಿಣ ಕನ್ನಡ ಅಧ್ಯಕ್ಷ ಡಾ|ಎಂ.ಪಿ. ಶ್ರೀನಾಥ್‌; ಕೊಡಗು: ಕೇಶವ ಕಾಮತ್‌ಗೆ ಜಯ

10:50 PM Nov 21, 2021 | Team Udayavani |

ಮಂಗಳೂರು: ಕನ್ನಡ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆ ಎನಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷರಾಗಿ ಉಪನ್ಯಾಸಕ, ಲೇಖಕ ಡಾ| ಎಂ.ಪಿ. ಶ್ರೀನಾಥ್‌ ಚುನಾಯಿತರಾಗಿದ್ದಾರೆ.

Advertisement

ರವಿವಾರ ಏಕಕಾಲಕ್ಕೆ ರಾಜ್ಯಾದ್ಯಂತ ಕಸಾಪ ರಾಜ್ಯ ಘಟಕ ಹಾಗೂ ಎಲ್ಲ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯಿತು. ದ.ಕ. ಜಿಲ್ಲೆಯ10 ಕೇಂದ್ರಗಳಲ್ಲಿ ಮತದಾನ ನಡೆಯಿತು.

ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಒಟ್ಟು ಶೇ 44.80 ಮತದಾನ ನಡೆದಿದೆ. ಸ್ಪರ್ಧೆಯಲ್ಲಿದ್ದ ಉಪನ್ಯಾಸಕ, ಲೇಖಕ ಡಾ| ಎಂ.ಪಿ. ಶ್ರೀನಾಥ್‌ 1,488 ಮತಗಳನ್ನು ಹಾಗೂ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ, ಲೇಖಕ ಎಂ.ಆರ್‌. ವಾಸುದೇವ 534 ಮತಗಳನ್ನು ಪಡೆದಿದ್ದಾರೆ.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ| ಶ್ರೀನಾಥ್‌ 26 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದ.ಕ. ಜಿಲ್ಲೆಯ ಕಸಾಪ ಗೌರವ ಕಾರ್ಯದರ್ಶಿಯಾಗಿ 2008ರಿಂದ 2021ರ ವರೆಗೂ ಸೇವೆ ಸಲ್ಲಿಸಿರುವ ಅವರು ಬೆಂಗಳೂರು, ಮಡಿಕೇರಿ, ಮೈಸೂರು, ಧಾರವಾಡದಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಸಮಿತಿಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನಲ್ಲಿ 10 ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ವಿವಿಧ ತುಳು ಸಾಹಿತ್ಯ, ಜಾನಪದ, ಕಂಬಳ ಸಮಿತಿಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 2011ರಿಂದ 2014ರವರೆಗೆ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದ.ಕ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ವೈಯುಕ್ತಿಕ ಆಜೀವ ಸದಸ್ಯರ ನೋಂದಣಿ ಮಾಡಿಸಿದ್ದಾರೆ.

ಕಸಾಪ ಬೆಂಗಳೂರು ಪರೀಕ್ಷಾ ಸಲಹಾ ಸಮಿತಿ ಸದಸ್ಯರಾಗಿದ್ದರು. “ಕಯ್ಯಾರ ಕಿಂಞಣ್ಣ ರೈ ಬದುಕು ಮತ್ತು ಬರಹ’ ಹಾಗೂ “ಶಿಕಾರಿ ಮತ್ತು ಬಂಡಾಯ-ಹೊಸ ಓದು’ ಎಂಬ ಕೃತಿ ರಚಿಸಿದ್ದಾರೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಬಸವ ಕೇಂದ್ರ ಮುರುಘಾ ಮಠ ಇವರಿಂದ ಶಿಕ್ಷಕ ರತ್ನ ಪ್ರಶಸ್ತಿ, ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿದ್ದಾರೆ.

ಹಿರಿಯರ ಮಾರ್ಗದರ್ಶನದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ. ಮುಖ್ಯವಾಗಿ ಶಾಲೆಗಳಲ್ಲಿ ಕನ್ನಡ ಭಾಷಾ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವುದು, ಶಾಲಾ ಕಾಲೇಜಿನಲ್ಲಿರುವ ಕನ್ನಡ ಸಂಘಗಳಿಗೆ ಮರುಚೇತನ ನೀಡುವುದು, ದತ್ತಿ ಉಪನ್ಯಾಸಗಳನ್ನು ನಿಯಮಿತವಾಗಿ ನಡೆಸಿಕೊಂಡು ಹೋಗುವುದು ಆದ್ಯತೆಯಾಗಿದೆ, ಉಳಿದಂತೆ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಡಾ| ಎಂ.ಪಿ. ಶ್ರೀನಾಥ್‌

ಒಟ್ಟು ಮತಗಳು – 4,538
ಚಲಾಯಿತ ಮತ 2033 (ಶೇ 44.80)
ಕನಿಷ್ಠ ಮತದಾನ: ಮೂಲ್ಕಿ (ಶೇ. 30.07)
ಗರಿಷ್ಠ ಮತದಾನ: ಸುಳ್ಯ (ಶೇ. 62.47)
ಡಾ| ಎಂ.ಪಿ. ಶ್ರೀನಾಥ್‌: 1488
ಎಂ.ಆರ್‌. ವಾಸುದೇವ: 534
ತಿರಸ್ಕೃತ ಮತ: 11

ಕೊಡಗು: ಕೇಶವ ಕಾಮತ್‌ಗೆ ಜಯ
ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕೊಡಗು ಲೇಖಕರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್‌ ಆಯ್ಕೆ ಯಾಗಿದ್ದಾರೆ. ಮರು ಆಯ್ಕೆ ಬಯಸಿದ್ದ ಮಾಜಿ ಅಧ್ಯಕ್ಷ ಲೋಕೇಶ್‌ ಸಾಗರ್‌ ಪರಾಭವಗೊಂಡಿದ್ದಾರೆ.

ಮಡಿಕೇರಿ, ವೀರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಕೇಂದ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಕೇಶವ ಕಾಮತ್‌ 926 ಮತಗ‌ಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಲೋಕೇಶ್‌ ಸಾಗರ್‌ 790 ಮತಗಳನ್ನು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next