Advertisement

Election 2023: ವರುಣಾ ಚಕ್ರವ್ಯೂಹದಲ್ಲಿ ಸಿಲುಕಿದರೇ ಸಿದ್ದರಾಮಯ್ಯ?

12:20 AM Apr 20, 2023 | Team Udayavani |

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಅವರು ಪ್ರಾರಂಭದಲ್ಲಿ ಅಂದುಕೊಂಡಂತೆ ನಾಮಪತ್ರ ಸಲ್ಲಿಸಿ ರಾಜ್ಯ ಸುತ್ತುವ ಪರಿಸ್ಥಿತಿ ಅವರ ಪಾಲಿಗೆ ಇಲ್ಲ. ಅವರನ್ನು ಕ್ಷೇತ್ರದಲ್ಲಿ ಕಟ್ಟಿ ಹಾಕಿ ಚಕ್ರವ್ಯೂಹದಲ್ಲಿ ಸಿಲುಕಿಸಲು ರಾಜಕೀಯ ಎದುರಾಳಿಗಳು ತಂತ್ರಗಳನ್ನು ಹೆಣೆಯುತ್ತಿದ್ದಾರೆ.

Advertisement

ವರುಣಾ ಕ್ಷೇತ್ರವು  ದಿನ ಕಳೆದಂತೆ ಸಿದ್ದರಾಮಯ್ಯ ಅವರ ಪಾಲಿಗೆ ಬಿಗಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಸಿದ್ದರಾಮಯ್ಯ ಅವರಿಗೂ ಅರ್ಥವಾಗಿದೆ. ಇದು ಅವರ ನಡೆ, ನುಡಿಗಳಿಂದಲೇ ಸ್ಪಷ್ಟವಾಗಿ ಕಂಡು ಬರುತ್ತದೆ.

ವರುಣಾ ಕ್ಷೇತ್ರದಲ್ಲಿ  ಸಿದ್ದರಾಮಯ್ಯ ಅವರ ಸ್ಪರ್ಧೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ರಾಜಕೀಯ ಎದುರಾಳಿಗಳು ಅವರನ್ನು ಸುತ್ತುವರಿದಂತೆ ಕಂಡು ಬರುತ್ತದೆ. ಅವರ ಪ್ರಮುಖ ಎದುರಾಳಿ ಬಿಜೆಪಿ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದೆ. ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮಾಜದ ಪ್ರಭಾವಿ ಮುಖಂಡ, ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದಾಗಲೇ ಸಿದ್ದರಾಮಯ್ಯ ಅವರನ್ನು ಕ್ಷೇತ್ರದಲ್ಲಿ ಕಟ್ಟಿ ಹಾಕುವ ಬಿಜೆಪಿ ತಂತ್ರ ಸ್ಪಷ್ಟವಾಗಿತ್ತು. ಸೋಮಣ್ಣ ಒಲ್ಲದ ಮನಸ್ಸಿನಿಂದಲೇ ಕಣಕ್ಕೆ ಇಳಿದರೂ ಈಗ ಅವರು ಮತ ಬೇಟೆಗೆ ಅಸ್ತ್ರಗಳೊಂದಿಗೆ ಗಂಭೀರವಾಗಿಯೇ ಸಾಗಿದ್ದಾರೆ.

ಸೋಮಣ್ಣ ಅವರಿಗಿಂತಲೂ ಬಿಜೆಪಿ ಹೈಕಮಾಂಡ್‌ ವರುಣಾ ಕ್ಷೇತ್ರವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದೆ ಎಂದೇ ಹೇಳಬೇಕು.  ಬಿಜೆಪಿ ದಿಲ್ಲಿಯ ವೀಕ್ಷಕರು ಕ್ಷೇತ್ರದಲ್ಲಿ ಅಲೆದಾಡಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಲೋಪದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಗ್ರಾಮ ಪಂಚಾಯತ್‌ ಮಟ್ಟದ ಸ್ಥಳೀಯ ಮುಖಂಡರನ್ನು ಪಕ್ಷಕ್ಕೆ ಸೆಳೆಯುತ್ತಿದ್ದಾರೆ. ವರುಣಾ ಕ್ಷೇತ್ರದ ಯಾವುದೇ ಭಾಗದಲ್ಲಿ  ಸ್ವಲ್ಪ ಪ್ರಭಾವವಿರುವ ಮುಖಂಡರಿದ್ದರೂ ಅವರನ್ನು ಪಕ್ಷಕ್ಕೆ ಸೆಳೆಯಬೇಕೆಂಬ ಸೂಚನೆಯನ್ನು ಸ್ಥಳೀಯ ಬಿಜೆಪಿ ಮುಖಂಡರಿಗೆ ವರಿಷ್ಠರು ನೀಡಿದ್ದಾರೆ. ಸಿದ್ದರಾಮಯ್ಯ ಅವರೂ ಗ್ರಾಮ ಪಂಚಾಯತ್‌ ಮಟ್ಟದ ಮುಖಂಡರ ಜೊತೆ ಪ್ರತ್ಯೇಕವಾಗಿ ಸಭೆಗಳನ್ನು  ನಡೆಸಿ ಗೆಲುವು ಸಾಧಿಸುವ ಬಗೆಯನ್ನು ಚರ್ಚಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಮಣಿಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಬಿಜೆಪಿ ಹೈಕಮಾಂಡ್‌ ಇಲ್ಲಿ ತಂತ್ರಗಳನ್ನು ರೂಪಿಸುತ್ತಿದೆ. ಸಿದ್ದರಾಮಯ್ಯ ಅವರು ಮಂಗಳವಾರ ಈಗ ಬಿಜೆಪಿಯಲ್ಲಿರುವ ಒಂದು ಕಾಲದ ಅವರ ಜನತಾ ಪರಿವಾರದ ಒಡನಾಡಿ, ವರುಣಾ ಕ್ಷೇತ್ರದಲ್ಲಿ ಪ್ರಭಾವವಿರುವ  ಸಿ.ಬಸವೇಗೌಡರನ್ನು ಅವರ ಮೈಸೂರಿನ ಮನೆಯಲ್ಲಿಯೇ ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಇದು ಗೊತ್ತಾಗಿದ್ದೇ ತಡ ಕೆಲವೇ ಗಂಟೆಗಳಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ, ಸಂಸದ ಪ್ರತಾಪ ಸಿಂಹ ಅವರು ಬಸವೇಗೌಡರ ನಿವಾಸಕ್ಕೆ ತೆರಳಿ ಪಕ್ಷ ಬಿಡದಂತೆ ಮನವೊಲಿಕೆ ಮಾಡಿದ್ದಾರೆ. ಬಸವೇಗೌಡರು ಈಗ ತಳೆಯುವ ನಿಲುವು ಕುತೂಹಲಕಾರಿಯಾಗಿದೆ.

Advertisement

ವರುಣಾ ಕ್ಷೇತ್ರದಲ್ಲಿ ಚಕ್ರವ್ಯೂಹ ರಚಿಸಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಬೇಕೆಂಬ ಉಮೇದು ಬಿಜೆಪಿಗಿದೆ. ಇದಕ್ಕೆ ಸಾಥ್‌ ಎಂಬಂತೆ ಜೆಡಿಎಸ್‌ ಇಲ್ಲಿ ಮಾಜಿ ಶಾಸಕ, ಪರಿಶಿಷ್ಟ ಜಾತಿಯ ಡಾ| ಭಾರತಿ ಶಂಕರ್‌ ಅವರನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್‌ ಮತಗಳನ್ನು ವಿಭಜಿಸುವ ತಂತ್ರ ಹೆಣೆದಿದೆ. ಇದನ್ನು ಕಂಡು ಸಿದ್ದರಾಮಯ್ಯ  ಬಿಜೆಪಿ-ಜೆಡಿಎಸ್‌ ಮಧ್ಯೆ ಒಳ ಒಪ್ಪಂದವಾಗಿದೆ ಎಂದು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೂ ಈ ಬಾರಿಯ ಸ್ಪರ್ಧೆಯ ತೀವ್ರತೆ ಅರಿವಾಗಿದೆ. ಈ ಹಿಂದಿನಂತೆ ಅತಿಯಾದ ಆತ್ಮವಿಶ್ವಾಸ ಈ ಬಾರಿ ಸಲ್ಲದು ಎಂಬುದು ಅವರಿಗೆ ಮನವರಿಕೆ ಆದಂತಿದೆ. ಚಾಮುಂಡೇಶ್ವರಿಯ ಸೋಲಿನಿಂದ ಅವರು ಎಚ್ಚೆತ್ತುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ನುಡಿಯಲ್ಲಿಯೇ ಅವರು ಎಷ್ಟು ಗಂಭೀರವಾಗಿ ಈ ಚುನಾವಣೆಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಪ್ರಾರಂಭದಲ್ಲಿ ನಾಮಪತ್ರ ಸಲ್ಲಿಸಿ ತೆರಳಿದ ಮೇಲೆ ಮತ್ತೆ ಕೊನೆಯ ದಿನವೇ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಬರಿ¤àನಿ ಎಂದಿದ್ದರು. ಕೆಲವು ದಿನಗಳ ಹಿಂದೆ ಒಂದು ದಿನ ಮಾತ್ರ ಕ್ಷೇತ್ರದ ನಾಲ್ಕು ಕಡೆ ಪ್ರಚಾರ ಸಭೆಗಳನ್ನು ನಡೆಸುತ್ತೇನೆ ಅಂದರು. ನಾಮಪತ್ರ ಸಲ್ಲಿಸಿದ ಬುಧವಾರದಂದು  ಎರಡು ದಿನಗಳ ಕಾಲ ಪ್ರಚಾರ ಬರುವೆ ಎಂದಿದ್ದಾರೆ. ಅಂದರೆ, ಸಿದ್ದರಾಮಯ್ಯ ಅವರ ಮಾತಿನಲ್ಲಿಯೇ ಕ್ಷೇತ್ರವು ದಿನ ಕಳೆದಂತೆ ಅವರಿಗೆ ಹೇಗೆ ಬಿಗಿಯಾಗುತ್ತಿದೆ ಎಂಬುದು ಅರ್ಥವಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಸ್ವಕ್ಷೇತ್ರ ವರುಣಾ ಒಂದರಲ್ಲಿಯೇ ಟಿಕೆಟ್‌ ನೀಡಿರುವುದು ಅವರನ್ನು ಇನ್ನೂ ಹೆಚ್ಚು  ಕಠಿನ ಪರಿಸ್ಥಿತಿಗೆ ದೂಡಿದೆ.

ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಪುತ್ರ ರಾಕೇಶ್‌ ಅವರ ಮಗ 17 ವರ್ಷದ  ಧವನ್‌ ರಾಕೇಶ್‌ ಅವರನ್ನು ಕರೆದೊಯ್ದು ಚುನಾವಣ ಪ್ರಚಾರ ನಡೆಸಿದ್ದಾರೆ. ರಾಕೇಶ್‌ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸಿದ್ದರಾಮಯ್ಯ ಅವರು ಅನುಕಂಪದ ಮತಕ್ಕೆ ಮೊರೆ ಹೋದರೆ ಎಂಬ ಪ್ರಶ್ನೆ ಎದುರಾಗಿದೆ. ಧವನ್‌ ರಾಕೇಶ್‌ ಅವರನ್ನು ಕ್ಷೇತ್ರದ ಮತದಾರರಿಗೆ ಪರಿಚಯಿಸುವ ಉದ್ದೇಶವೂ ಇದರ ಹಿಂದಿದೆ. ರಾಕೇಶ್‌ ಅವರ ಮೇಲಿದ್ದ ಪ್ರೀತಿ, ವಿಶ್ವಾಸ ಧವನ್‌ ರಾಕೇಶ್‌ ಅವರ ಮೇಲೆಯೂ ಇರಲಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದು ವಿಶೇಷವಾಗಿದೆ.

ಸಿದ್ದರಾಮಯ್ಯ ನೆಟಿವಿಟಿಯ ದಾಳ ಉರುಳಿಸಿದ್ದಾರೆ. ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಇಲ್ಲಿನ ಮಣ್ಣಿನ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಬಿಜೆಪಿ ಅಭ್ಯರ್ಥಿ ಸೋಮಣ್ಣ ರಾಮನಗರ ಮೂಲದವರು. ಬೆಂಗಳೂರಿನಲ್ಲಿ ರಾಜಕೀಯ ಮಾಡಿಕೊಂಡಿದ್ದವರು. ಬಿಜೆಪಿಯ ಹರಕೆಯ ಕುರಿ ಮತ್ತು ವರುಣದ ಮನೆ ಮಗನ ನಡುವಿನ ಚುನಾವಣೆ ಇದು ಎಂದು ಭಾವನಾತ್ಮಕ ಅಸ್ತ್ರವನ್ನು ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಎಂಬ ಹಳೆಯ ಅಸ್ತ್ರವನ್ನು ಹರಿತಗೊಳಿಸಿದ್ದಾರೆ.

ಮೈಸೂರು, ನಂಜನಗೂಡು, ತಿ.ನರಸೀಪುರ ತಾಲೂಕುಗಳ ಕೆಲವು ಪ್ರದೇಶಗಳನ್ನು ಒಳಗೊಂಡ ಕ್ಷೇತ್ರ ವರುಣಾ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಇಲ್ಲಿ ನೆಲೆ ಇದೆ. ಜೆಡಿಎಸ್‌ಗೂ ಅದರದ್ದೇ ಆದ ಸ್ವಲ್ಪ ಮತಗಳಿವೆ. ಕ್ಷೇತ್ರ ರಚನೆಯಾಗಿ

ಕಳೆದ ಮೂರು ಚುನಾವಣೆಗಳಿಂದಲೂ  ಕಾಂಗ್ರೆಸ್‌ ಹಾಗೂ ಬಿಜೆಪಿ ನೇರ ಎದುರಾಳಿಗಳು. ಸತತ ಮೂರು ಬಾರಿಯೂ ಕಾಂಗ್ರೆಸಿಗೆ ಗೆಲುವು. ಬಿಜೆಪಿಗೆ ಎರಡನೇ ಸ್ಥಾನ ದಕ್ಕಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ನಡೆದ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಈ ಕ್ಷೇತ್ರದ ಕೆಲವು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿದ ಇತಿಹಾಸವಿದೆ.

~ ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next