Advertisement

ವಿವಿಧೆಡೆ ಈದ್‌ ಮಿಲಾದ್‌ ಸಂಭ್ರಮ

11:29 AM Nov 22, 2018 | |

ಬೀದರ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮದಿನದ ಪ್ರಯುಕ್ತ ಮುಸ್ಲಿಂ ಬಾಂಧವರು ಬುಧವಾರ ಈದ್‌ ಮಿಲಾದ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ನಿಮಿತ್ತ ಹೊಸ ನಗರದ ಜಮಿಯಾ ಮಸೀದಿಯಲ್ಲಿ ಕೇಂದ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿದರು.

Advertisement

ಹಬ್ಬದ ನಿಮಿತ್ತ ನಗರದ ಗವಾನ್‌ ವೃತ್ತದಿಂದ ಆರಂಭವಾದ ಮೆರವಣಿಗೆ ಶಹಾಗಂಜ್‌, ಅಂಬೇಡ್ಕರ್‌ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ್‌ ಮಾರ್ಗವಾಗಿ ಚೌಬಾರ್‌ ಸಮೀಪದದಲ್ಲಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು. ಮೆಕ್ಕಾ ಮದೀನಾ ಸ್ತಬ್ಧಚಿತ್ರದ ಮೆರವಣಿಗೆ ನಡೆಯಿತು. ಯುವಕರು ಬೈಕ್‌ಗಳಿಗೆ ಧಾರ್ಮಿಕ ಧ್ವಜ ಕಟ್ಟಿಕೊಂಡು ನಗರದ ಸಂಚಾರ ನಡೆಸಿದರು. ನಗರದ ವಿವಿಧಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಪ್ರವಾದಿ ಮಹ್ಮದ್‌ ಪೈಗಂಬರ್‌ ಜಯಂತಿ 
ಔರಾದ: ಪ್ರವಾದಿ ಮಹ್ಮದ್‌ ಪೈಗಂಬರ್‌ ಜಯಂತಿ ನಿಮಿತ್ತ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆ ನಡೆಸಿದರು. ಜಯಂತಿ ಅಂಗವಾಗಿ ಪ್ರಮುಖ ಬೀದಿ ಬೀದಿಗಳಲ್ಲಿ ಗಂಧದ ಮೆರವಣಿಗೆ ನಡೆಯಿತು.

ಪಟ್ಟಣದ ಕನ್ನಡಾಂಬೆ ವೃತ್ತದಿಂದ ಆರಂಭವಾದ ಮರೆವಣಿಗೆ ಮುಖ್ಯ ರಸ್ತೆ ಮಾರ್ಗವಾಗಿ ತಾಪಂ ಕಚೇರಿ ಹಿಂಭಾಗದಲ್ಲಿನ ವೇದಿಕೆಗೆ ಕರೆದ್ಯೊಯಲಾಯಿತು. ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಿಂದ ಬಂದ ಮುಸ್ಲಿಂ ಬಾಂಧವರು ಹಾಗೂ ಶಾಲೆ ಕಾಲೇಜಿನ ಮಕ್ಕಳು ಮತ್ತು ಯುವಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿದ್ದರು. ಕುದುರೆ ಹಾಗೂ ಒಂಟೆಗಳ ಮೆರವಣಿಗೆ ಆಕರ್ಷಣೆಯಾಗಿತ್ತು. ಮಸೀದಿಯಲ್ಲಿ ಖಾಜಿಸಾಬ್‌ ಮಾತನಾಡಿ, ವಿಶ್ವಕ್ಕೆ ಶಾಂತಿ ಸಿಗಲಿ. ಪರಸ್ಪರ ಜಾತಿ, ಜನಾಂಗದ ಮಧ್ಯೆ ಪ್ರೀತಿ, ವಿಶ್ವಾಸ, ವೃದ್ಧಿಸಲು ಅಲ್ಲಾ ದಯೇ  ತೋರುವಂತೆ ಪ್ರಾರ್ಥನೆ ಮಾಡಿದರು. 

ಯುವಕರಿಂದ ಬೈಕ್‌ ರ್ಯಾಲಿ
ಭಾಲ್ಕಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಮುಸ್ಲಿಂ ಬಾಂಧವರು ಈದ್‌ ಮಿಲಾದ್‌ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಿದರು. ಪವಿತ್ರ ಈದ್‌ ಮಿಲಾದ್‌ ಅಂಗವಾಗಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಿಯ ಮಾಡಿಕೊಂಡರು. ಮಿಲಾದ್‌ ಕಮಿಟಿ ವತಿಯಿಂದ ಮೆರವಣಿಗೆ ನಡೆಯಿತು. ಹಳೇ ಪಟ್ಟಣದ ಮೌಲಾಲಿ ಅಲಿ ಅಶೂರ ಖಾನಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ನಾನಾ ರಸ್ತೆ, ಬೀದಿಗಳಲ್ಲಿ ಸಂಚರಿಸಿತು. ಪವಿತ್ರ ಮೆಕ್ಕಾ ಮದೀನಾ ಪ್ರತಿಕೃತಿ ತಯಾರಿಸಿ ಅಲಂಕರಿಸಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

Advertisement

ಈದ್‌ ಮಿಲಾದ್‌: ಭವ್ಯ ಮೆರವಣಿಗೆ 
ಬಸವಕಲ್ಯಾಣ: ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಿಂದ ಬುಧವಾರ ನಗರದಲ್ಲಿ ಮೆರವಣಿಗೆ (ಝುಲುಸ್‌) ಕಾರ್ಯಕ್ರಮ ನಡೆಯಿತು. ನಗರದ ಕೋಟೆಯಿಂದ ಆರಂಭವಾದ ಮೆರವಣಿಗೆ ವಿವಿಧ ವೃತ್ತಗಳ ಮೂಲಕ ನಗರದ ಗಾಂಧಿ ವೃತ್ತಕ್ಕೆ ಬಂದು ಕೊನೆಗೊಂಡಿತು. ಶಾಸಕ ಬಿ.ನಾರಾಯಣರಾವ್‌, ಹಜರತ್‌ ಪೀರಪಾಶಾ ಸಾಹೇಬ್‌ ಖಾದೀರ್‌, ಹಜರತ್‌ ಶೇಖ್‌ ಅಹ್ಮದ್‌ ಅಲಿ ಸಾಹೇಬ್‌, ಹಜರತ್‌ ಸುಲ್ತಾನ್‌ ಅಲಿಷಾ ಸಾಹೇಬ್‌, ಹಜರತ್‌ ಖುರ್ಷಿದ್‌ ಅಲಿಶಾ ಸಾಹೇಬ್‌ ಇದ್ದರು.

ಐಎಂಐಯಿಂದ ರಕ್ತದಾನ ಶಿಬಿರ ಭಾಲ್ಕಿ: ಪವಿತ್ರ ಈದ್‌ ಮಿಲಾದ್‌ ಅಂಗವಾಗಿ ಪಟ್ಟಣದ ಜಾಧವ ಆಸ್ಪತ್ರೆಯಲ್ಲಿ ಬುಧವಾರ ರಕ್ತದಾನ ಶಿಬಿರ ನಡೆಯಿತು. ಎಂಐಎಂ ಸಂಘಟನೆ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಯುವಕರು ರಕ್ತದಾನ ಮಾಡುವ ಮೂಲಕ ಮಹ್ಮದ್‌ ಪೈಗಂಬರ್‌ ಅವರ ಜನ್ಮದಿನಕ್ಕೆ ವಿಶೇಷ ಕಾಣಿಕೆ ನೀಡಿದರು. ಇದೇ ವೇಳೆ ಜಾಧವ ಆಸ್ಪತ್ರೆಯ ಡಾ| ರಾಜೆಂದ್ರಜಾಧವ ಮಾತನಾಡಿ, ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಮುಸ್ಲಿಂ ಸಮುದಾಯದ ಯುವಕರು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು. ಎಂಐಎಂ ಸಂಘಟನೆ ತಾಲೂಕು ಅಧ್ಯಕ್ಷ ಮಹ್ಮದ್‌ ರಫಿಕ್‌ ಇನಾಮದಾರ್‌, ಶೇಖ್‌ ಅಜರ್‌, ಸಂಜುಕುಮಾರ ಜೋಲದಾಪಕೆ, ಶೇಖ್‌ಖಾಜಾ, ಎಂಡಿ. ಖಲೀಲ್‌, ಶೇಖ್‌ ತಾರುಕಡಾ, ನಾಗೇಶ ಟೊಪಾರೆ, ಸಂಗಶೆಟ್ಟಿ ಟೊಪಾರೆ, ಶೇಖ್‌ ಶಫಿಯೋದ್ದಿನ್‌, ಮಹ್ಮದ್‌ ಹುಸೇನ್‌ ಇನಾಮದಾರ್‌, ಮಹ್ಮದ್‌ ಇರ್ಫಾನ್‌ ಇನಾಮದಾರ್‌, ನರಸಿಂಗರಾವ ತೋರಣೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next