Advertisement

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

06:52 PM Feb 04, 2023 | Team Udayavani |

ಹೂವಿನ ಹಡಗಲಿ: ಮಠಗಳು ಇಲ್ಲದೇ ಹೋಗಿದ್ದರೆ ರಾಜ್ಯದಲ್ಲಿ ಶಿಕ್ಷಣ ಒದಗಿಸುವುದು ಕಷ್ಟವಾಗುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಮೈಲಾರದಲ್ಲಿ ಹಮ್ಮಿಕೊಂಡಿದ್ದ 7 ಕೋಟಿ ವಸತಿ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಶಾಲೆ ಉದ್ಘಾಟಿಸಿ, ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಮಠ ಮಾನ್ಯಗಳ ಕೊಡುಗೆ ಬಹಳ ದೊಡ್ಡದು. ಎಲ್ಲಾ ಮಠಗಳು ಎಲ್ಲಾ ವರ್ಗದ ಮಕ್ಕಳಿಗೆ ಎಲ್ಲಾ ಮಠಗಳು ಅನ್ನ ದಾಸೋಹ, ಶಿಕ್ಷಣ, ಆಶ್ರಯ ಕೊಡುತ್ತಿವೆ. ಒಂದು ವೇಳೆ ಸ್ವತಂತ್ರ ನಂತರ ಮಠಗಳು ಇಲ್ಲದೇ ಹೋಗಿದ್ದರೆ ರಾಜ್ಯದ ಸಮಾಜದ ಶಿಕ್ಷಣದಿಂದ ವಂಚಿತವಾಗುತ್ತಿತ್ತು ಎಂದರು.

ಸರ್ಕಾರದ ಒಟ್ಟು ಕಾರ್ಯಕ್ರಮಗಳಲ್ಲಿ ಕೆಳಮಟ್ಟದ ಸಮುದಾಯಗಳು ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲು ಪಡೆಯಲು ಆಗದ ಕಾರಣಕ್ಕೆ ಮಠಮಾನ್ಯಗಳಿಗೆ ಅನುದಾನ ಕೊಡಬೇಕು. ಹಾಗೆ ಮಾಡಿದರೆ ಮಠಗಳು ಬಡ ಮಕ್ಕಳಿಗೆ ಶಿಕ್ಷಣ, ಅನ್ನ ದಾಸೋಹ ಮಾಡುತ್ತವೆ ಎಂದು ಅವರು ತಿಳಿಸಿದರು.

ಕುರಿಗಾಹಿಗಳಿಗೆ ಕುರಿಗಾರರ ಮನೆ ಕಟ್ಟಲು ಕಾರ್ಯಕ್ರಮ ರೂಪಿಸಿದ್ದೆವು. 354 ಕೋಟಿ ರೂ.ನಲ್ಲಿ 20 ಸಾವಿರ ಸಂಘಗಳ ಮೂಲಕ ಕುರಿಗಾಹಿಗಳಿಗೆ 20 ಕುರಿ ನೀಡುವ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದ್ದು, ಶೀಘ್ರ ಇದನ್ನು ಅನುಷ್ಠಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಾಯಕ ಸಮಾಜಗಳಿಗೆ ಹೆಚ್ಚಿನ ನೆರವು ನೀಡಿದರೆ ಸ್ವಾವಲಂಬಿ ಬದಕು ಕಟ್ಟಿಕೊಳ್ಳಲು ಸಾಧ್ಯ. ಕುರುಬರು, ಕಂಬಾರ, ಬಡಿಗೆ, ಚಮ್ಮಾರ ಸೇರಿದಂತೆ ಎಲ್ಲಾ ವೃತ್ತಿನಿರತರ ಅಭಿವೃದ್ಧಿಗೆ ಕಾಯಕ ಯೋಜನೆ ರೂಪಿಸಿದ್ದೇವೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎಂಬುದನ್ನು ಸಾಬೀತು ಮಾಡಲು ನಾವು ಸಿದ್ಧ ಎಂದು ಅವರು ತಿಳಿಸಿದರು.

Advertisement

ಕಾಗಿನೆಲೆ ಸ್ವಾಮೀಜಿ ನಿರಂಜನಾನಂದ ಪುರಿ ಸ್ವಾಮೀಜಿ ಸಮಾಜದ ಏಳಿಗೆ ಶ್ರಮಿಸುತ್ತಿದ್ದು ಸಮುದಾಯ ಭವನಕ್ಕೆ ಐದು ಕೋಟಿ ರೂ. ಅನುದಾನ ನೀಡುವೆ. ಭಕ್ತ ಕನಕದಾಸರ ನಾಡಿನಿಂದ ನಾನು ಬಂದಿದ್ದೇನೆ. ನಮ್ಮ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 40 ಕೋಟಿ ರೂ. ಖರ್ಚುಮಾಡಿ ಕಾಗಿನೆಲೆಯಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಮೈಲಾರದಲ್ಲಿ ಶಾಲೆ ಕಟ್ಟಲು ಬೇಕಾದ ಅನುದಾನ ಕೊಡಿಸುವಲ್ಲಿ ಮಾಜಿ, ಹಾಲಿ ಸಿಎಂ ಇಬ್ಬರೂ ಉದಾರವಾದ ಮನಸ್ಸು ಮಾಡಿದರು. ಈ ಶಾಲೆ ಕಟ್ಟಲು 5 ಕೋಟಿ ನಿರೀಕ್ಷೆಯಲ್ಲಿದ್ದ ನಮಗೆ ಅಂದಿನ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು 10 ಕೋಟಿ ರೂ. ಬರೆದರು. 10 ಕೋಟಿ ರೂ. ಮಂಜೂರು ಮಾಡಿ ಎಂದು ಪತ್ರ ಬರೆದ ಕೂಡಲೇ ಇಂದು ಇರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಆ ಪತ್ರವನ್ನು ತೆಗೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದು ಅಗತ್ಯ ಕ್ರಮ ವಹಿಸಿ, ಅನುದಾನ ಒದಗಿಸುವಂತೆ ಮಾಡಿದರು ಎಂದು ಸ್ಮರಿಸಿದರು.

ಇದನ್ನೂ ಓದಿ:ಕೆಪಿಪಿಸಿ ನಕಲಿ ವೆಬ್ ಸೈಟ್ ಮಾಡಿ ಅಪಪ್ರಚಾರ; ಪೊಲೀಸ್ ಆಯುಕ್ತರಿಗೆ ದೂರು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರ ಮೈಲಾರ. ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಆರಂಭಿಸಿರುವುದು ಅತ್ಯುತ್ತಮ ಕೆಲಸವಾಗಿದೆ. ಇಲ್ಲಿನ ಇತರೆ ಅಭಿವೃದ್ದಿಗೆ ಸರ್ಕಾರ ಸಹಕಾರ ನೀಡಲಿದೆ. ಮಠ, ಮಾನ್ಯಗಳು ಶಿಕ್ಷಣ ಸೇರಿದಂತೆ ಇತರೆ ಸೇವೆ ಒದಗಿಸುವ ಮಠಗಳಿಗೆ ಅನುದಾನ ನೀಡುವುದು ತಪ್ಪಲ್ಲ ಎಂದರು.

ಹೈದರಾಬಾದ್ ಗಾದಿ ನಿರ್ವಹಣಾ ಸಂಘದ ಡಾ. ಸಾಯಿಕುಮಾರ ಬಾಬಾ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಗೋವಿಂದ ಕಾರಜೋಳ, ಎಂ.ಟಿ.ಬಿ. ನಾಗರಾಜ, ಬೈರತಿ ಬಸವರಾಜ, ಸಿ.ಸಿ.ಪಾಟೀಲ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ವೈ. ದೇವೇಂದ್ರಪ್ಪ, ಶಾಸಕ ನೆಹರು ಓಲೇಕಾರ್, ಮುಖಂಡರಾದ ಓದೋ ಗಂಗಪ್ಪ, ವೈ. ಗೋವಿಂದಪ್ಪ, ವಿರುಪಾಕ್ಷಪ್ಪ, ಜಲಜಾನಾಯ್ಕ ಇತರರು ವೇದಿಕೆಯಲ್ಲಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next