Advertisement

2 ದಿನಗಳೊಳಗೆ ಎಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ : ಸುರೇಶ್‌ ಕುಮಾರ್‌ 

04:01 AM Feb 28, 2021 | Team Udayavani |

ಮಂಗಳೂರು: ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆದಿದ್ದು, ಅಂತಿಮ ವೇಳಾಪಟ್ಟಿ 2 ದಿನಗಳ ಒಳಗೆ ಪ್ರಕಟಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿ. ಪಂಚಾಯತ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕುದು¾ಲ್‌ ರಂಗರಾವ್‌ ಪುರಭವನದಲ್ಲಿ ಶನಿವಾರ ನಡೆದ ಪ್ರೌಢಶಾಲಾ ಶಿಕ್ಷಕರೊಂದಿಗಿನ ಸಂವಾದ, 2020ನೇ ಸಾಲಿನ ಎಸೆಸಲ್ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಮತ್ತು ಸರಕಾರಿ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆ ಪೂರ್ಣ ಆರಂಭಕ್ಕೆ ಕೇರಳ, ಮಹಾರಾಷ್ಟ್ರ ಭೀತಿ!
ಒಂದನೇ ತರಗತಿಯಿಂದಲೇ ಪೂರ್ಣ ಪ್ರಮಾಣದ ತರಗತಿಗಳು ಈಗಾಗಲೇ ಆರಂಭಗೊಳ್ಳಬೇಕಿತ್ತು. ಆದರೆ ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೊನಾ ಹೆಚ್ಚಾದ ಪರಿಣಾಮ ಹಿನ್ನಡೆಯಾಗಿದೆ. ಶಾಲೆಗಳಲ್ಲಿರುವ ಅಗ್ನಿ ಸುರಕ್ಷೆ ಮತ್ತು ದೃಢತಾ ಪ್ರಮಾಣ ಪತ್ರ ಸರಳೀಕರಣ, ಅವಧಿ ವಿಸ್ತರಣೆ ಕುರಿತಂತೆ ಮಾ. 3ರಂದು ಅಧಿಕಾರಿಗಳ ಸಭೆ ನಡೆಸಲಾಗುವುದು. ಮುಖ್ಯೋಪಾಧ್ಯಾಯರ ಸಮಸ್ಯೆ ಗಳನ್ನು ಬಗೆಹರಿಸಲು ಮುಂದಿನ ವಾರ ಆಯುಕ್ತರಿಗೆ ಜಿಲ್ಲೆಗೆ ಭೇಟಿ ನೀಡಲು ಸೂಚಿಸುವುದಾಗಿ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಪುತ್ತೂರಿನಲ್ಲಿ ಕೇಂದ್ರ
ಸುಳ್ಯ, ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಶಿಕ್ಷಕರಿಗೆ ಉತ್ತರಪತ್ರಿಕೆಗಳ ಮೌಲ್ಯಮಾಪನಕ್ಕೆ ಮಂಗಳೂರು ಕೇಂದ್ರಕ್ಕೆ ಬರಲು ಸಮಸ್ಯೆ ಆಗುತ್ತಿದ್ದು, ಪುತ್ತೂರಿನಲ್ಲಿ ಮೌಲ್ಯಮಾಪನ ಕೇಂದ್ರ ಆರಂಭಿಸಬೇಕು ಎಂದು ಪ್ರೌಢಶಾಲಾ ಶಿಕ್ಷಕರು ಸಚಿವರಲ್ಲಿ ಮನವಿ ಮಾಡಿದರು. ಈ ಕುರಿತು ಈಗಾಗಲೇ ಚರ್ಚೆ ನಡೆದಿದೆ. ಸಾಧ್ಯಾಸಾಧ್ಯತೆ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಕೂಡಲೇ ಬಿಸಿಯೂಟ
ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಯೋಜನೆಯನ್ನು ಮತ್ತೆ ಆರಂಭಿಸಲು ಕೇಂದ್ರದ ಅನುಮತಿ ಕೋರಿದ್ದು, ಒಪ್ಪಿಗೆ ದೊರೆತ ಕೂಡಲೇ ಆರಂಭಿಸಲಾಗುವುದು ಎಂದರು.

Advertisement

ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಭೋಜೇಗೌಡ, ಪಾಲಿಕೆ ಮೇಯರ್‌ ದಿವಾಕರ ಪಾಂಡೇಶ್ವರ, ಉಪ ಮೇಯರ್‌ ವೇದಾವತಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ರೋಟರಿ ಜಿಲ್ಲೆ 3181 ಗವರ್ನರ್‌ ರಂಗನಾಥ ಭಟ್‌, ಕೇಶವ ಎಚ್‌.ಆರ್‌., ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ, ವಿಷಯ ಪರಿವೀಕ್ಷಣಾಧಿಕಾರಿ ಶಮಂತ್‌, ಶಿಕ್ಷಣ ಇಲಾಖೆ ಸಹ ನಿರ್ದೇಶಕ ಸಿಪ್ರಿಯನ್‌ ಮೋಂತೆರೋ, ರೋಟರಿ ಪ್ರಮುಖರಾದ ಶಿವಪ್ರಸಾದ್‌, ಆನಂದ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಏಕನಾಥ ದಂಡಕೇರಿ ಉಪಸ್ಥಿತರಿದ್ದರು.

ಹೆಚ್ಚು ಅಂಕಪಡೆದ ಕನ್ನಡ ಮಾಧ್ಯಮದ 11 ಹಾಗೂ ಆಂಗ್ಲ ಮಾಧ್ಯಮದ 14 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಪುರಸ್ಕಾರ ವಿತರಿಸಲಾಯಿತು. ಎನ್‌ಟಿಎಸ್‌ಇ ಪೂರ್ವಭಾವಿ ತಯಾರಿ ಪರೀಕ್ಷೆಯಲ್ಲಿ ಸಾಧನೆಗೈದ ಜಿಲ್ಲೆಯ ಮೂವರಿಗೆ ಪುರಸ್ಕಾರ, 10ನೇ ತರಗತಿಯ 91 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ವಿತರಣೆ ನಡೆಯಿತು.

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆ್ಯಪ್‌
ಶಾಲೆ, ಶಿಕ್ಷಕರು, ಶಿಕ್ಷಕಿಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಆ್ಯಪ್‌ ತಯಾರಾಗುತ್ತಿದೆ ಎಂದು ತಿಳಿಸಿದ ಶಿಕ್ಷಣ ಸಚಿವರು, ಬೆಳಗಾವಿ ವಿಭಾಗಕ್ಕೆ ಸಂಬಂಧಪಟ್ಟಂತೆ ಶಿಕ್ಷಕರಿಗೆ ಸಂಬಂಧಿಸಿದ ಕಡತ ವಿಲೇವಾರಿ ಮಾ. 1ರಂದು ನಡೆಯಲಿದ್ದು, ಬಳಿಕ ಮೈಸೂರು ವಿಭಾಗ ಮಟ್ಟದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಕಡತ ವಿಲೇವಾರಿ ಮಾಡುವುದಾಗಿ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next