Advertisement

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

09:56 AM Mar 10, 2020 | sudhir |

ವಿದ್ಯಾ ಸಾಲವನ್ನು ವಿದ್ಯಾರ್ಥಿಯೂ ಪಡೆಯಬಹುದು, ಆತನ ಹೆತ್ತವರೂ ಪಡೆಯಬಹುದು. ಆದರೂ ತೆರಿಗೆಯ ಲಾಭವನ್ನು ನೋಡಿಕೊಂಡು ವಿದ್ಯಾರ್ಥಿ ಹಾಗೂ ಹೆತ್ತವರೊಳಗೆ ಮನೆಯಲ್ಲಿ ಯಾರಿಗೆ ಭವಿಷ್ಯತ್ತಿನಲ್ಲಿ ಆದಾಯ ವಿನಾಯಿತಿಯ ಅಗತ್ಯ ಬೀಳುವುದೋ ಆತನೇ ಸಾಲಕ್ಕೆ ಅರ್ಜಿ ಹಾಕುವುದು ಉತ್ತಮ.

Advertisement

ಕರ ವಿನಾಯಿತಿಗೆ ಅರ್ಹವಾದ ಹೂಡಿಕೆ/ವೆಚ್ಚಗಳ ಬಗ್ಗೆ ಮಾತನಾ ಡುವಾಗ ವಿದ್ಯಾ ಸಾಲದ ಮೇಲೆ ಪಾವತಿಸಿದ ಬಡ್ಡಿಯನ್ನು ಮರೆಯು ವಂತಿಲ್ಲ. ಎಷ್ಟೋ ಮಂದಿ ಕಷ್ಟಪಟ್ಟು ತೀರಿಸುವ ಈ ಸಾಲದ ಅಸಲು ಭಾಗದ ಮರು ಪಾವತಿಯ ಮೇಲೆ ಯಾವುದೇ ಕರ ವಿನಾಯಿತಿ ಇಲ್ಲವಾದರೂ ಬಡ್ಡಿಯ ಮೇಲೆ ಇದೆ. ಈ ವಾರ ವಿದ್ಯಾ ಸಾಲದ ಬಡ್ಡಿ ಮತ್ತು ಕರವಿನಾಯಿತಿಯ ಬಗ್ಗೆ ಒಂದಿಷ್ಟು ಕೊರೆತ.

ವಿದ್ಯಾ ಸಾಲ ಎಲ್ಲಿ?: ಸರಕಾರಿ ಸ್ವಾಮ್ಯದ ಬ್ಯಾಂಕುಗಳು (ಸ್ಟೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡ ಇತ್ಯಾದಿ) ಇಂದು ವಿದ್ಯಾ ಸಾಲವನ್ನು ಸುಲಭವಾಗಿ ನೀಡುತ್ತಿವೆ. ಸರಕಾರಿ ಬ್ಯಾಂಕುಗಳಲ್ಲದೆ ಕೆಲವು ಖಾಸಗಿ ಬ್ಯಾಂಕುಗಳು (ಆ್ಯಕ್ಸಿಸ್‌, ಎಚ್‌ಡಿ ಎ ಫ್ಎಫ್ಸಿ ಬ್ಯಾಂಕ್‌) ಈ ಕ್ಷೇತ್ರದಲ್ಲಿ ಇವೆಯಾದರೂ ಇನ್ನು ಕೆಲವೊಂದು ಖಾಸಗಿ ಬ್ಯಾಂಕುಗಳು ಅಷ್ಟೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಹೇಳಬಹುದು.

ಯಾರಿಗೆ ಸಾಲ?: ಐಬಿಎ ಅಥವಾ ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಶನ್‌ ಮಾರ್ಗದರ್ಶಿಯ ಅನುಸಾರ ಭಾರತದಲ್ಲಿ ವಿದ್ಯಾ ಸಾಲವನ್ನು ಪಡೆಯಲು ಈ ಕೆಳಗಿನವರು ಅರ್ಹರಾಗಿರುತ್ತಾರೆ.
– ಈ ಸಾಲ ಪಡೆಯುವವನು ಓರ್ವ ಭಾರತೀಯ ಪ್ರಜೆಯಾಗಿ ಇರಬೇಕಾದದ್ದು ಮುಖ್ಯ.
– ಹತ್ತನೆಯ ತರಗತಿಯ ಬಳಿಕ 2 ವರ್ಷ ಕಲಿತ (ಪ್ಲಸ್‌ ಟು ಅಥವಾ ಪಿಯುಸಿ) ವಿದ್ಯಾರ್ಥಿಗಳು ಇದಕ್ಕೆ ಅರ್ಹರು. ಹತ್ತನೆಯ ತರಗತಿಯ ಬಳಿಕ ಮಾಡುವ ವೃತ್ತಿಕೌಶಲ ತರಬೇತಿ (ವೊಕೇಶನಲ್‌ ಟ್ರೈನಿಂಗ್‌) ಅದರದ್ದೇ ಆದ ವಿದ್ಯಾ ಸಾಲ ಮಾರ್ಗದರ್ಶಿಯನ್ನು ಅನುಸರಿಸುತ್ತದೆ.
– ಮೆರಿಟ್‌ ಆಧಾರದಲ್ಲಿ ಪೊ›ಫೆಶನಲ…/ತಾಂತ್ರಿಕ ಕೋರ್ಸುಗಳಿಗೆ ಪ್ರವೇಶಾತಿ ಪರೀಕ್ಷೆ/ಆಯ್ಕೆ ವಿಧಾನಗಳ ಮೂಲಕ ಪ್ರವೇಶ ಪಡೆದಿರಬೇಕು. ಆದರೂ ಕೆಲ ಸಂದರ್ಭಗಳಲ್ಲಿ ಮೆರಿಟ್‌/ಪ್ರವೇಶಾತಿ ಪರೀಕ್ಷೆ ಸೀಟ್‌ ಹಂಚಿಕೆಯ ಮಾನದಂಡವಾಗಿರದಿದ್ದಲ್ಲಿ ಬ್ಯಾಂಕುಗಳು ಅಂತಹ ಸಂದರ್ಭಗಳಲ್ಲಿ ವಿದ್ಯಾ ಸಂಸ್ಥೆಯ ಪ್ರತಿಷ್ಠೆ ಮತ್ತು ನೌಕರಿಯ ಸಾಧ್ಯತೆಗಳನ್ನು ಗಮನಿಸಿ ಸಾಲ ನೀಡಬಹುದು.
– ಹೊಸ ಸೂಚನೆಯ ಪ್ರಕಾರ ಮೆರಿಟ್‌ ಕೋಟಾದಲ್ಲಿ ಸೀಟ್‌ ಸಿಗುವ ಯೋಗ್ಯತೆಯುಳ್ಳ ಆದರೆ ಮ್ಯಾನೇಜುಮೆಂಟ್‌ ಕೋಟದಡಿಯಲ್ಲಿ ಸೀಟು ಪಡಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ವಿದ್ಯಾ ಸಾಲ ಸಿಗಬಹುದಾಗಿದೆ.
– ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬಹುದು.
– ಒಬ್ಟಾತ ವಯಸ್ಕ (ಮೇಜರ್‌) ಅಥವಾ ಒಬ್ಬ ಅಪ್ರಾಪ್ತ ವಯಸ್ಕನನ್ನು ಪ್ರತಿನಿಧಿಸುವ ಹೆತ್ತವರು/ರಕ್ಷಕರು.

ಯಾವ ಕೋರ್ಸು?: ಐಬಿಎ ಮಾರ್ಗದರ್ಶಿ ಅನುಸಾರ ಪಿಯುಸಿ ಅಥವ ತತ್ಸಮ ವಿದ್ಯಾಭ್ಯಾಸ ಹೊಂದಿದ ಬಳಿಕ ಹೆಚ್ಚು ಕಡಿಮೆ ಟೆಕ್ನಿಕಲ…/ಪ್ರೊಫೆಶನಲ್‌ ಸಹಿತ ಯಾವುದೇ ಡಿಗ್ರಿ/ಪಿ.ಜಿ. ಕೋರ್ಸುಗಳಿಗೆ ವಿದ್ಯಾಸಾಲ ದೊರೆಯುತ್ತದೆ. ವಿದ್ಯಾ ಸಾಲಕ್ಕೆ ಅರ್ಹವಾದ ಕೆಲ ಮುಖ್ಯ ಕೋರ್ಸುಗಳ ವಿವರ ಈ ಕೆಳಗಿನಂತಿದೆ:

Advertisement

ಭಾರತದಲ್ಲಿ: ಯುಜಿಸಿ/ ಸರಕಾರ/ಎಐಸಿಟಿಇ/ಎಐಬಿಎಂಎಸ್‌/ಐಸಿಎಂಆರ್‌ ಗುರುತಿಸಿರುವ ಯಾವುದೇ ಕಾಲೇಜು/ಯುನಿವರ್ಸಿಟಿ ಶಿಕ್ಷಣ. ರಾಷ್ಟೀಯ ಇನ್ಸ್‌ಸ್ಟಿಟ್ಯೂಟ್‌ಗಳು/ಪ್ರತಿಷ್ಟಿತ ಖಾಸಗಿ ಇನ್ಸ್‌ ಸ್ಟಿಟ್ಯೂಟ್‌ಗಳು ನೀಡುವ ಶಿಕ್ಷಣ. ಬಿಎ/ಬಿಕಾಂ/ಬಿಎಸ್ಸಿ ಇತ್ಯಾದಿ ಡಿಗ್ರಿಗಳು, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿಗಳು, ವೃತ್ತಿಪರ ಶಿಕ್ಷಣ (ಪ್ರೊಫೆಶನಲ್‌ ಕೋರ್ಸುಗಳು)- ಇಂಜಿನಿಯರಿಂಗ್‌, ಮೆಡಿಕಲ್, ಎಗ್ರಿ, ಡೆಂಟಲ್, ವೆಟರಿನರಿ, ಕಾನೂನು, ಕಂಪ್ಯೂಟರ್‌ ಶಿಕ್ಷಣ ಇತ್ಯಾದಿ. ಸಿಎ, ಐಸಿಡಬ್ಲ್ಯುಎ, ಸಿಎಫ್ಎ ಇತ್ಯಾದಿ.

ಐಐಎಂ, ಐಐಟಿ, ಐಐಎಸ್‌ಸಿ, ಎಕ್ಸ್‌ಎಲ್ಆರ್‌ಐ, ಅನ್‌ಐಎಫ್ಟಿ,
ಎನ್‌ಐಡಿ ಇತ್ಯಾದಿ ಇನ್‌ಸ್ಟಿಟ್ಯೂಟ್‌ಗಳು ನಡೆಸುವ ಕೋರ್ಸುಗಳು. ದೇಶದೊಳಗೆ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳು ನಡೆಸುವ ಕೋರ್ಸುಗಳು.

ವಿದೇಶದಲ್ಲಿ: ಪ್ರತಿಷ್ಠಿತ ಯುನಿವರ್ಸಿಟಿಗಳು ನೀಡುವ ವೃತ್ತಿಪರ/ತಾಂತ್ರಿಕ ಶಿಕ್ಷಣಗಳು. ಸ್ನಾತಕೋತ್ತರ ಪದವಿಗಳು – ಎಂಸಿಎ/ಎಂಬಿಎ/ಎಂಎಸ್‌ ಇತ್ಯಾದಿ. ಸಿಐಎಂಎ-ಲಂಡನ್‌, ಸಿಪಿಎ-ಯುಎಸ್‌ಎಗಳು ನಡೆಸುವ ಕೋರ್ಸುಗಳು. ಉತ್ತಮ ಉದ್ಯೋಗಾವಕಾಶವಿರುವ ಏರೋನಾಟಿಕಲ…/ಶಿಪ್ಪಿಂಗ್‌/ಪೈಲಟ್‌ ತರಬೇತಿ.

ಈ ಪಟ್ಟಿ ಪರಿಪೂರ್ಣವಲ್ಲ, ಕೇವಲ ಸೂಚಕವಾಗಿದೆ. ಬ್ಯಾಂಕುಗಳು ಕೋರ್ಸುಗಳ ಪ್ರತಿಷ್ಠೆ ಮತ್ತು ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ಈ ಪಟ್ಟಿಯಲ್ಲಿಲ್ಲದ ಕೋರ್ಸುಗಳಿಗೂ ವಿದ್ಯಾ ಸಾಲ ನೀಡಬಹುದಾಗಿದೆ.

ಬ್ಯಾಂಕಿನಿಂದ ಬ್ಯಾಂಕಿಗೆ ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು.

ಅರ್ಹ ವೆಚ್ಚ:
ಅರ್ಹ ವೆಚ್ಚದಡಿಯಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಎÇÉಾ ವೆಚ್ಚಗಳನ್ನೂ – ಹಾಸ್ಟೆಲ್‌ ವೆಚ್ಚ ಸಹಿತ ಸೇರಿಸಲಾಗಿದೆ. ಈ ಕೆಳಗಿನ ವೆಚ್ಚಗಳು ವಿದ್ಯಾ ಸಾಲಕ್ಕೆ ಅರ್ಹವಾಗಿವೆ:
1.ಟ್ಯೂಷನ್‌/ಲೈಬ್ರರಿ/ಎಗಾÕಮಿನೇಷನ್‌/ಲ್ಯಾಬ್‌ ಫೀಸ್‌
2.ಹಾಸ್ಟೆಲ್‌ ವೆಚ್ಚ
3.ಪುಸ್ತಕಗಳು, ಕಂಪ್ಯೂಟರ್‌, ಯುನಿಫಾರ್ಮ್ ಇತರ ಕಲಿಕಾ ಪರಿಕರಗಳು
4.ಪ್ರಾಜೆಕ್ಟ್ ವರ್ಕ್‌/ಸ್ಟಡಿ ಟೂರ್‌ (ಒಂದು ಮಿತಿಯೊಳಗೆ)
5.ವಿದೇಶಿ ವಿದ್ಯಾ ಸಂಸ್ಥೆಯಾದರೆ ಹೋಗಿ ಬರುವ ಪ್ರಯಾಣ ವೆಚ್ಚ
6.ಭದ್ರತಾ ಠೇವಣಿ (ಒಂದು ಮಿತಿಯೊಳಗೆ)
7.ವಿದ್ಯಾರ್ಥಿಯ ಅನುಕೂಲಕ್ಕಾಗಿ ಒಂದು ಟು-ವೀಲರನ್ನು ಕೂಡಾ ಕೆಲವು ಬ್ಯಾಂಕುಗಳು ನೀಡುವುದನ್ನು ಕಾಣಬಹುದು.

ಕರ ವಿನಾಯತಿ
ಗೃಹ ಸಾಲದಂತೆಯೇ ವಿದ್ಯಾಸಾಲದಲ್ಲೂ ಆದಾಯ ಕರ ವಿನಾಯಿತಿ ಇದೆ. ಸೆಕ್ಷನ್‌ 80ಇ ಅನುಸಾರ ಒಬ್ಟಾತ ವಿದ್ಯಾ ಸಾಲದ ಮೇಲೆ ಕಟ್ಟುವ ಬಡ್ಡಿಯಂಶವನ್ನು ಯಾವುದೇ ಮಿತಿಯಿಲ್ಲದೆ ನೇರವಾಗಿ ಆ ವರ್ಷದ ಆದಾಯದಿಂದ ಕಳೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಸ್ಲಾಬಾನುಸಾರ ಆದಾಯ ತೆರಿಗೆಯಲ್ಲಿ ರಿಯಾಯಿತಿ ದೊರಕೀತು. ಈ ರೀತಿ ಕರಲಾಭವನ್ನು ಒಟ್ಟು 8 ವರ್ಷಗಳ ಕಾಲ ಮಾತ್ರ ಪಡೆಯಬಹುದಾಗಿದೆ. ಸಾಲದ ಮರುಪಾವತಿ 8 ವರ್ಷಕ್ಕಿಂತ ಜಾಸ್ತಿಯಿದ್ದರೂ ಕರಲಾಭ ಕೇವಲ 8 ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನೆನಪಿರಲಿ.

ಅಂದರೆ ಬಡ್ಡಿಯ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆಯುವುದು. ಕರಾರ್ಹರಲ್ಲದವರಿಗೆ ಯಾವುದೇ ಕರಲಾಭ ಸಿಗಲಿಕ್ಕಿಲ್ಲ. ಆ ಬಳಿಕ ಶೇ.5, ಶೇ. 20 ಹಾಗೂ ಶೇ.30 ತೆರಿಗೆ ಸ್ಲಾಬ್ನಲ್ಲಿರುವವರಿಗೆ ಅದೇ ಕ್ರಮಾನುಸಾರ ತೆರಿಗೆಯಲ್ಲಿ ಉಳಿತಾಯ ಸಿಗಬಹುದು.

ಆದರೆ, ಇದರಲ್ಲಿ ಕಟ್ಟುವ ಅಸಲಿನ ಭಾಗಕ್ಕೆ ಯಾವುದೇ ಸೆಕ್ಷನ್‌ನಲ್ಲಿ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ. ವಿನಾಯಿತಿ ಸಿಗುವುದು ಬಡ್ಡಿಗೆ ಮಾತ್ರ ಎಂಬುದು ನೆನಪಿರಲಿ. ಬ್ಯಾಂಕಿಗೆ ಮರುಪಾವತಿ ಮಾಡುವ ಇಎಂಐ ಮೊತ್ತ ಅಸಲು ಹಾಗೂ ಬಡ್ಡಿ ಎರಡನ್ನೂ ಹೊಂದಿರುತ್ತದೆ. ಇಎಂಐ ಕಂತಿನ ಅಸಲು ಮತ್ತು ಬಡ್ಡಿಯನ್ನು ಪ್ರತ್ಯೇಕವಾಗಿ ಬ್ಯಾಂಕು ತನ್ನ ಹೇಳಿಕೆಯಲ್ಲಿ ನಮೂದಿಸುತ್ತದೆ.

ಅಲ್ಲದೆ ಈ ಸೌಲಭ್ಯವನ್ನು ಜನಪ್ರಿಯ ಸೆಕ್ಷನ್‌ 80 ಸಿ ಜೊತೆ ಗೊಂದಲ ಮಾಡಿಕೊಳ್ಳಬೇಡಿ. (80 ಸಿ ಯಲ್ಲಿ 1.5 ಲಕ್ಷದವರೆಗೆ ಹಲವು ಹೂಡಿಕೆಗಳಲ್ಲಿ ಹಾಕಿದ ಹಣವನ್ನು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ಉದಾ, ಜೀವ ವಿಮೆ, ಪಿಪಿಎಫ್, ಇ.ಎಲ….ಎಸ್‌.ಎಸ್‌.) ವಿದ್ಯಾ ಸಾಲದಲ್ಲಿ ಕಟ್ಟುವ ಬಡ್ಡಿಯ ಮೊತ್ತವನ್ನು ಯಾವುದೇ ಮಿತಿಯಿಲ್ಲದೆ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ವಿದ್ಯಾ ಸಾಲದ 80 ಇ, ಸೆಕ್ಷನ್‌ 80 ಸಿ ಸೆಕ್ಷನ್‌ನಿಂದ ಸಂಪೂರ್ಣವಾಗಿ ಹೊರತಾಗಿದೆ. ಇವೆರಡೂ ಸೌಲಭ್ಯಗಳು ಬೇರೆ ಬೇರೆ ಹಾಗೂ ಇವೆರಡನ್ನೂ ಒಟ್ಟಿಗೇ ಪಡೆಯಬಹುದು.

ಉದಾಹರಣೆಗಾಗಿ, ಒಬ್ಟಾತ ರೂ. 10 ಲಕ್ಷದ ವಿದ್ಯಾಸಾಲ ತೆಗೆದುಕೊಂಡನೆಂದು ಇಟ್ಟುಕೊಳ್ಳಿ. 4 ವರ್ಷದ ಕಲಿಕೆಯ ಬಳಿಕ ಆತನ ಮರುಪಾವತಿ ಒಟ್ಟು 10 ವರ್ಷಗಳ ಇಎಂಐ ಮೂಲಕ ನಡೆಯುತ್ತದೆ ಎಂದಿಟ್ಟುಕೊಳ್ಳಿ. ಆತನ ಲೋನ್‌ ಖಾತೆ, ಇಎಂಐ ಮತ್ತು ಕರ ವಿನಾಯತಿಯ ಲಾಭ ಟೇಬಲ್‌ನಲ್ಲಿ ಕೊಡಲಾಗಿದೆ. ಇಲ್ಲಿ ಆದಾಯ ತೆರಿಗೆ ಸ್ಲಾಬ್‌ ಅನುಸಾರ ಶೇ.5, ಶೇ.20 ಅಥವಾ ಶೇ.30 ಲೆಕ್ಕದಲ್ಲಿ ಉಳಿತಾಯವಾಗುತ್ತದೆ.

ಯಾರಿಗೆ ಕರವಿನಾಯತಿ?
ಕರ ನೀತಿಯ ಪ್ರಕಾರ ಯಾರು ಈ ವಿನಾಯಿತಿಯನ್ನು ಪಡಕೊಳ್ಳಬಹುದು ಎಂಬುದಕ್ಕೆ ಅದರದ್ದೇ ಆದ ವ್ಯಾಖ್ಯೆ ಇದೆ. ಕರ ನೀತಿ ಪ್ರಕಾರ ಯಾರ ಹೆಸರಿನಲ್ಲಿ ಸಾಲವಿದೆಯೋ ಆ ವ್ಯಕ್ತಿ ಮಾತ್ರ ಆದಾಯ ಕರ ವಿನಾಯಿತಿಯನ್ನು ಪಡಕೊಳ್ಳಬಹುದು.

ಆದರೆ ಬ್ಯಾಂಕುಗಳ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ತನ್ನ, ತನ್ನ ಪತ್ನಿ/ಪತಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಸಾಲ ಪಡೆಯಬಹುದಾಗಿದೆ. ಅಂದರೆ, ವಿದ್ಯಾ ಸಾಲವನ್ನು ವಿದ್ಯಾರ್ಥಿಯೂ ಪಡೆಯಬಹುದು,

ಆತನ ಹೆತ್ತವರೂ ಪಡೆಯಬಹುದು. ಆದರೂ ತೆರಿಗೆಯ ಲಾಭವನ್ನು ನೋಡಿಕೊಂಡು ವಿದ್ಯಾರ್ಥಿ ಹಾಗೂ ಹೆತ್ತವರೊಳಗೆ ಮನೆಯಲ್ಲಿ ಯಾರಿಗೆ ಭವಿಷ್ಯತ್ತಿನಲ್ಲಿ ಆದಾಯ ವಿನಾಯಿತಿಯ ಅಗತ್ಯ ಬೀಳುವುದೋ ಆತನೇ ಸಾಲಕ್ಕೆ ಅರ್ಜಿ ಹಾಕುವುದು ಉತ್ತಮ.

ಇದರ ಅರಿವಿಲ್ಲದೆ ಆ ಸಮಯಕ್ಕೆ ತೋಚಿದಂತೆ ಅರ್ಜಿ ಹಾಕಿ ಬಳಿಕ ಅಗತ್ಯವಿದ್ದವರಿಗೆ ತೆರಿಗೆ ವಿನಾಯಿತಿ ಸಿಗದೆ ತೊಂದರೆಗೀಡಾದವರು ಹಲವರಿ¨ªಾರೆ. ಹೆತ್ತವರ ಹೆಸರಿನಲ್ಲಿ ಮಕ್ಕಳಿಗಾಗಿ ಸಾಲ ಪಡಕೊಂಡರೆ ಮರುಪಾವತಿಯ ಸಮಯದಲ್ಲಿ ಹೆತ್ತವರಿಗೆ ಮಾತ್ರವೇ ಆದಾಯ ತೆರಿಗೆಯ ಲಾಭ ಸಿಕ್ಕೀತು.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next