Advertisement

Education department: ಖಾಸಗಿ ಬಸ್‌ಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಶಿಕ್ಷಣ ಇಲಾಖೆ ಬ್ರೇಕ್‌

03:36 PM Nov 26, 2023 | Team Udayavani |

ಚಿಕ್ಕಬಳ್ಳಾಪುರ: ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಶಾಲಾ, ಕಾಲೇಜುಗಳ ಶೈಕ್ಷಣಿಕ ಪ್ರವಾಸಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಇದರ ನಡುವೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಖಾಸಗಿ ವಾಹನಗಳ ಬಳಸಿ ಪ್ರವಾಸ ಹೊರಡುವುದಕ್ಕೆ ರಾಜ್ಯದ ಶಿಕ್ಷಣ ಇಲಾಖೆ ಬ್ರೇಕ್‌ ಹಾಕಿದೆ.

Advertisement

ಹೌದು, ಶಾಲಾ ಶೈಕ್ಷಣಿಕ ಪ್ರವಾಸವನ್ನು ಕಡ್ಡಾಯವಾಗಿ ಕೆಎಸ್‌ಆರ್‌ಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ವಾಹನಗಳಲ್ಲಿ ಮಾತ್ರ ತೆರಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ಹಾಗು ಖಾಸಗಿ ವಾಹನಗಳಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಮಾಡಬಾರದೆಂದು ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಹತ್ವದ ಸುತ್ತೋಲೆ ಹೊರಡಿಸಿ ಆದೇಶಿಸಿದೆ.

ಪ್ರವಾಸದ ಸಂದರ್ಭದಲ್ಲಿ ಸಂಭವಿಸುವ ಅವಘಡಗಳಿಗೆ ಆಯಾ ಶಾಲೆಗಳ ಮುಖ್ಯಸ್ಥರು ನೇರ ಹೊಣೆ ಆಗಿರುತ್ತಾರೆ. ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂದು ತಿಳಿಸಿರುವ ಶಿಕ್ಷಣ ಇಲಾಖೆ ಆಯಕ್ತರು, ಪ್ರವಾಸ ಕೈಗೊಳ್ಳುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಕಡ್ಡಾಯವಾಗಿ ನಿಯೋಜಿತ ಮಹಿಳಾ ಶಿಕ್ಷಕರೇ ನೋಡಿಕೊಳ್ಳಬೇಕೆಂದು ಸೂಚಿಸಿದೆ.

ಶಾಲಾ ಪ್ರವಾಸ ಕಲಿಕೆಗೆ ಪೂರಕವಾದ ಸ್ಥಳಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕೆಂದು ಸೂಚಿಸಿದ್ದು ಶೈಕ್ಷಣಿಕ ಪ್ರವಾಸ ಶಾಲಾ ದಿನಗಳಲ್ಲಿ ಕೈಗೊಂಡಿದ್ದಲ್ಲಿ ಕೊರತೆ ಆಗುವ ಪಠ್ಯದ ಚಟುವಟಿಕೆಗಳನ್ನು ಶನಿವಾರ ಅಥವ ಭಾನುವಾರ ನಡೆಸಿ ಸರಿದೂಗಿಸುವಂತೆ ಶಿಕ್ಷಕರಿಗೆ ಇಲಾಖೆ ನಿರ್ದೇಶನ ನೀಡಿದೆ. ಪ್ರವಾಸ ಹೊರಡುವ ಮುನ್ನ ಇಲಾಖೆ ಅದರಲ್ಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆಯಬೇಕು, ಶಿಕ್ಷಕರ ಹಾಗೂ ವಿದ್ಯಾರ್ಥಿಗಳು ಪಟ್ಟಿಯನ್ನು ಇಲಾಖೆಯಿಂದ ಅನುಮೋದನೆ ಪಡೆಯಬೇಕೆಂದು ಹೇಳಿದೆ.

ರೈಲುಗಳಲ್ಲಿ ಪ್ರವಾಸ ಹೊರಡಬಹುದು: ಇನ್ನೂ ಶಿಕ್ಷಣ ಇಲಾಖೆ ಪ್ರವಾಸಕ್ಕೆ ರೈಲುಗಳಲ್ಲಿ ಕೂಡ ತೆರಳಬಹುದೆಂದು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ರಾಜ್ಯ ಮಾತ್ರವಲ್ಲದೇ ದೇಶದ ಯಾವುದೇ ಮೂಲೆಗೆ ಶೈಕ್ಷಣಿಕ ಪ್ರವಾಸವನ್ನು ಕೂಗೊಳ್ಳಬಹುದೆಂದು ಹೇಳಿದ್ದು, ಇಲಾಖೆ ತಿಳಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಶೈಕ್ಷಣಿಕ ಪ್ರವಾಸ ಹೊರಡುವ ಶಾಲೆಗಳಿಗೆ ಸೂಚಿಸಿದೆ.

Advertisement

ಡಿಸೆಂಬರ್‌ ಒಳಗೆ ಪ್ರವಾಸ ಮುಗಿಸಬೇಕು:  ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಡಿಸೆಂಬರ್‌ ಅಂತ್ಯದೊಳಗೆ ಮುಗಿಸಬೇಕು, ಯಾವುದೇ ಕಾರಣಕ್ಕೂ ಡಿಸೆಂಬರ್‌ ಬಳಿಕ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳದಂತೆ ರಾಜ್ಯದ ಎಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಶೈಕ್ಷಣಿಕ ಪ್ರವಾಸದ ಕುರಿತು ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ರಾಜ್ಯದ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ.ಕಾವೇರಿ, ಪೋಷಕರ ಒಪ್ಪಿಗೆ ಇರುವ ಮಕ್ಕಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕೆರೆದೊಯ್ಯವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ದುಬಾರಿ ಶುಲ್ಕ ವಸೂಲಿ ಆರೋಪ:  ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಡಿಸೆಂಬರ್‌ ಪ್ರವೇಶಕ್ಕೆ ಕೇವಲ ದಿನಗಳು ಬಾಕಿ ಇವೆ. ಇದರ ನಡುವೆ ಪ್ರವಾಸದ ಹೆಸರಲ್ಲಿ ಕೆಲ ಖಾಸಗಿ ಹಾಗೂ ಅನುದಾನಿತ ಶಾಲೆಗಳು ಮಕ್ಕಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆಯೆಂಬ ಆರೋಪ ಕೇಳಿ ಬರುತ್ತಿವೆ. ಕೆಲ ಮಕ್ಕಳ ಪೋಷಕರು ಪ್ರವಾಸಕ್ಕೆ ಸುತಾರಂ ಒಪ್ಪದೇ ಇದ್ದರೂ ಪ್ರವಾಸಕ್ಕೆ ಕಳುಹಿಸುವಂತೆ ಪೋಷಕರ ಮೇಲೆ ಆಡಳಿತ ಮಂಡಳಿಗಳು ಒತ್ತಡ ತರುತ್ತಿವೆ.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next