Advertisement

ಮದ್ಯಕ್ಕೆ ಮುಗಿಬಿದ್ದ ಜನ ಅಸಡ್ಡೆಯ ಪರಮಾವಧಿ

02:13 AM May 06, 2020 | Hari Prasad |

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೂರ್ಣ ಲಾಕ್‌ ಡೌನ್‌ನಲ್ಲಿ ತುಸು ವಿನಾಯಿತಿ ನೀಡಿ ಸಾರ್ವಜನಕರಿಗೆ ಅನುಕೂಲ ಮಾಡಿಕೊಟ್ಟಿರುವುದು ಮೆಚ್ಚುವಂಥ ಸಂಗತಿಯೇ.

Advertisement

ಆದರೆ ಇದೇ ವೇಳೆಯಲ್ಲೇ ಅನೇಕ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಪ್ರಮಾಣವು ವೇಗವಾಗಿ ಬೆಳೆಯುತ್ತಿರುವ ರೀತಿ ಬೆಚ್ಚಿಬೀಳಿಸುವಂತಿದೆ.

ದೇಶಾದ್ಯಂತ ಕಳೆದ 5 ದಿನಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು, ಈ ರೋಗದ ವೇಗ ಕಡಿಮೆಯಾಗುತ್ತಿಲ್ಲ ಎನ್ನುವುದಕ್ಕೆ ಪುಷ್ಟಿಯಾಗಿದೆ.

ಇದು ಸಾಲದೆಂಬಂತೆ, ಸೋಮವಾರ ಮತ್ತು ಮಂಗಳವಾರ ದೇಶಾದ್ಯಂತ ಜನರು ಮದ್ಯಕ್ಕಾಗಿ ಎಲ್ಲಾ ಸುರಕ್ಷತಾ ನಿಯಮಗಳನ್ನು ಮರೆತು ಮುಗಿಬಿದ್ದ ರೀತಿ ನಿಜಕ್ಕೂ ಕಳವಳ ಹುಟ್ಟಿಸುವಂತಿತ್ತು. ಜನರ ವರ್ತನೆಯನ್ನು ಗಮನಿಸಿದರೆ, ಇಲ್ಲಿಯವರೆಗೂ ದೇಶವು ನಡೆಸಿದ ಪ್ರಯತ್ನಕ್ಕೆಲ್ಲ ದೊಡ್ಡ ಪೆಟ್ಟು ಬೀಳಲಿದೆಯೇನೋ ಎಂಬ ಆತಂಕ ಕಾಡುತ್ತಿದೆ.

ಇದನ್ನೆಲ್ಲ ಗಮನಿಸಿದಾಗ, ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿತರ ಅಂಕಿಸಂಖ್ಯೆ ಮತ್ತಷ್ಟು ವೇಗವಾಗಿ ಬೆಳೆಯಬಹುದು ಎನ್ನುವ ಮಾತನ್ನು ಅಲ್ಲಗಳೆಯುವುದಕ್ಕಂತೂ ಸಾಧ್ಯವಿಲ್ಲ. ಆದಾಗ್ಯೂ, ಗಮನಾರ್ಹ ಸಂಗತಿಯೆಂದರೆ, ಭಾರತದಲ್ಲಿ ಕೋವಿಡ್ ವೈರಸ್ ನ ಮೃತ್ಯುದರವು ಪ್ರಪಂಚದಲ್ಲಿ ಅತಿ ಕಡಿಮೆ ಇದೆ.

Advertisement

ಅಲ್ಲದೇ ಸೋಂಕಿತರ ಸಂಖ್ಯೆಯ ವಿಷಯದಲ್ಲೂ ಭಾರತದಲ್ಲಿ ಸ್ಥಿತಿ ಅಷ್ಟು ವಿಷಮವಾಗಿ ಬದಲಾಗಿಲ್ಲ. ಆದರೆ, ರೋಗ ನಿಯಂತ್ರಣಕ್ಕೆ ಆಡಳಿತಗಳಿಗೆ, ಸಾರ್ವಜನಿಕರ ಸಹಕಾರ ಅತ್ಯಗತ್ಯ. ತಿಳಿದೂ ತಿಳಿದೂ ಪರಿಸ್ಥಿತಿಯನ್ನು ಜನರೇ ವಿಷಮಗೊಳಿಸಿಬಿಡುತ್ತಾರೇನೋ ಎನಿಸುತ್ತಿದೆ.

ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣದಲ್ಲಿ; ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಕೈಮೀರದೇ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ದಿಲ್ಲಿ, ಮಹಾರಾಷ್ಟ್ರ, ಗುಜರಾತ್‌, ಪಂಜಾಬ್‌, ಉತ್ತರಪ್ರದೇಶ ಹಾಗೂ ತಮಿಳುನಾಡಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಸಾಗುತ್ತಿದೆ.

ಈ ರಾಜ್ಯಗಳಲ್ಲಿನ ಆಡಳಿತ ಪಕ್ಷಗಳೂ ಪರಿಸ್ಥಿತಿ ನಿಭಾಯಿಸಲು ಶತಪ್ರಯತ್ನ ನಡೆಸಿರುವುದು ದಿಟವಾದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಮಹಾರಾಷ್ಟ್ರದ ಪರಿಸ್ಥಿತಿಯಂತೂ ಕಳವಳಗೊಳಿಸುವಂತಿದೆ.

ಮಂಗಳವಾರದ ಹೊತ್ತಿಗೆ ಅಲ್ಲಿ ಸೋಂಕಿತರ ಸಂಖ್ಯೆ 14 ಸಾವಿರ ದಾಟಿದ್ದರೆ, ಮೃತಪಟ್ಟವರ ಸಂಖ್ಯೆ 580ಕ್ಕೂ ಅಧಿಕವಾಗಿದೆ. ಒಂದೇ ದಿನದಲ್ಲೇ 771 ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿವೆ.

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ದೇಶದಲ್ಲಿ ಕೋವಿಡ್ ಸೋಂಕಿತ ಪ್ರದೇಶಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, ಅದಕ್ಕೆ ತಕ್ಕಂತೆ ವಿನಾಯಿತಿ ನೀಡಲಾಗಿದೆಯಾದರೂ, ಸೋಮವಾರ ಮತ್ತು ಮಂಗಳವಾರವೊಂದೇ ದಿನ ಜನ ತೋರಿಸಿದ ಅಸಡ್ಡೆಯು ಗಾಬರಿಗೊಳಿಸುವಂತಿದೆ.

ಅದರಲ್ಲೂ ಮದ್ಯ ಖರೀದಿಗಾಗಿ ದೇಶಾದ್ಯಂತ ಜನರು ಮುಗಿಬಿದ್ದ ರೀತಿಯಂತೂ ಚಿಂತೆಯ ಗೆರೆ ಹುಟ್ಟುಹಾಕಿದೆ. ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಪಾಲಿಸುವ ನಿಯಮಗಳನ್ನೆಲ್ಲ ಜನ ಕಡೆಗಣಿಸಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಪಾಯ ಎಷ್ಟೋ ಪಟ್ಟು ಹೆಚ್ಚಾಗಲಿದೆ. ಜನರು ಹೀಗೆ ಬೇಜವಾಬ್ದಾರಿ ಮೆರೆಯುತ್ತಾ ಹೋದರೆ, ಆಡಳಿತಗಳು ಮತ್ತಷ್ಟು ಅಸಹಾಯಕವಾಗುತ್ತವಷ್ಟೆ. ಅಲ್ಲದೇ, ಇಲ್ಲಿಯವರೆಗಿನ ಪ್ರಯತ್ನವೆಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next