Advertisement

ಕೆರೆಗಳ ಒತ್ತುವರಿ ತೆರವಿಗೆ “ಗ್ರಹಣ’

07:27 AM Feb 18, 2019 | Team Udayavani |

ಮುಳಬಾಗಿಲು: ತಾಲೂಕಿನ ಆವಣಿ ಹೋಬಳಿ ದೇವರಾಯಸಮುದ್ರ ಗ್ರಾಪಂ ವ್ಯಾಪ್ತಿಯ ದೇವರಾಯಸಮುದ್ರ ದೊಡ್ಡ ಕೆರೆ ಮತ್ತು ಶ್ಯಾಮಯ್ಯನೂರು ಕೆರೆ ಸುತ್ತಮುತ್ತ ಹಲವರು ಸಾಕಷ್ಟು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಲು ಜಿಲ್ಲೆ ಮತ್ತು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Advertisement

ಆದೇಶ: ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ವರದಿಗಳ ಅನ್ವಯ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿ ಸಂರಕ್ಷಣೆ ಮತ್ತು ಒತ್ತುವರಿ ಜಮೀನು ತೆರವಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್‌ 2013ರ ಮೇ.27 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.

ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ರಾಜ್ಯ ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು 192ಎ ಅನ್ವಯ ಒತ್ತುವರಿದಾರರನ್ನು ಶಿಕ್ಷೆಗೆ ಗುರಿ ಪಡಿಸಲು ಕಾಯ್ದೆಯಲ್ಲಿ  ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮುಳಬಾಗಿಲು ತಾಲೂಕಿನ ಮೂಲಭೂತವಾಗಿ ಕಂದಾಯ ಇಲಾಖೆ ಸರ್ಕಾರದ ಭೂಮಿ ಗುರ್ತಿಸಿ ಅದರ ವಿಸ್ತೀರ್ಣ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. 

81 ಮಂದಿ ವಿರುದ್ಧ ಪ್ರಕರಣ: ಅದರಂತೆ ಅಂದಿನ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಂದಿನ ಮುಳಬಾಗಿಲು ತಹಶೀಲ್ದಾರ್‌ ಎಂ.ಗಂಗಪ್ಪ ತಾಲೂಕಿನ ಆವಣಿ, ಕಸಬಾ, ತಾಯಲೂರು, ಬೈರಕೂರು, ದುಗ್ಗಸಂದ್ರ ಸೇರಿ 5 ಹೋಬಳಿಯಲ್ಲಿನ 433 ಕೆರೆ, ಸ್ಮಶಾನ, ಗುಂಡು ತೋಪು ಒತ್ತುವರಿ ತೆರವುಗೊಳಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿ ತಾವೂ ಕಾರ್ಯಪ್ರವೃತ್ತರಾಗಿದ್ದರು. ಅಲ್ಲದೇ, ತೆರವು ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಅದರಂತೆ ಇದುವವರೆಗೂ 211 ಕೆರೆಗಳಲ್ಲಿನ 366 ಎಕರೆ  ತೆರವುಗೊಳಿಸಿ 81 ಮಂದಿ ವಿರುದ್ಧ ಕ್ರಿಮಿನಲ್‌ ಮೊಕದೊಮ್ಮೆ ದಾಖಲಿಸುವ ಮೂಲಕ ಶೇ.75 ಕಾರ್ಯಾಚರಣೆ ಮುಗಿಸಿದ್ದರು. ಉಳಿದ ಶೇ.25 ಕೆಲಸ ಬಾಕಿ ಉಳಿದಿತ್ತು.

ಅಕ್ರಮ ಮರಳು ಕೇಂದ್ರ: ನಂತರ ಜಿಲ್ಲಾಧಿಕಾರಿ ತ್ರಿಲೋಕ್‌ಚಂದ್ರ ಅವರು ಒತ್ತುವರಿ ತೆರವು ಕಾರ್ಯಾಚರಣೆ ವರದಿಯನ್ನು ಕಳೆದ ಫೆ.15ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದರಿಂದ ಎಲ್ಲಾ ಕೆರೆ ತೆರವುಗೊಳಿಸಲು ಸೂಚಿಸಿದ್ದರು. ಅದರಂತೆ ಹಿಂದಿನ ತಹಶೀಲ್ದಾರ್‌ ಉಳಿದ 83 ಕೆರೆಗಳ ಸರ್ವೆಗೆ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದರು.  

Advertisement

ಕೆಲವು ಕೆರೆಗಳನ್ನು ಸರ್ವೇ ಮಾಡಿದ್ದರೂ ತೆರವು ಕಾರ್ಯಾಚರಣೆ ಮಾಡದ ಕಾರಣ ಕೆ.ಬೈಯಪಲ್ಲಿ ಕೆರೆ, ಸಂಗಸಂದ್ರ ಕೆರೆ, ನಂಗಲಿ, ಮಿಂಡಹಳ್ಳಿ ಕೆರೆ, ಕಪ್ಪಲಮಡಗು, ಸೇರಿ ದೇವರಾಯಸಮುದ್ರ ದೊಡ್ಡ ಕೆರೆ ಹಲವಾರು ಕೆರೆಗಳ ಸಾಕಷ್ಟು ಜಮೀನು ಒತ್ತುವರಿಯಾಗಿದೆ. ಅದರಲ್ಲೂ ಶ್ಯಾಮಯ್ಯನೂರು ಕೆರೆಯಲ್ಲಂತೂ 20-30ಎಕರೆ ಜಮೀನು ಒತ್ತುವರಿಯಾಗಿ ಅಕ್ರಮ ಮರಳು ಗಣಿಗಾರಿಕೆ ಕೇಂದ್ರವಾಗಿದೆ.

ಆದರೂ ಒತ್ತುವರಿ ತೆರವು ಕಾರ್ಯಾಚರಣೆಗೆ 4 ವರ್ಷದಿಂದ ಗ್ರಹಣ ಹಿಡಿದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ 2016ರ ಮಾರ್ಚ್‌ನಲ್ಲಿ ತಹಶೀಲ್ದಾರ್‌ ಎಂ.ಗಂಗಪ್ಪ ವರ್ಗಾವಣೆಯಾದ ನಂತರ ತಹಶೀಲ್ದಾರ್‌ ಆಗಿ ಬಂದ ಬಿ.ಎನ್‌.ಪ್ರವೀಣ್‌ ತಕ್ಕಮಟ್ಟಿಗೆ ಕೆಲ ಕೆರೆಗಳನ್ನು ತೆರವುಗೊಳಿಸಿ ಹೋಗಿದ್ದರು.

ಆ ನಂತರ ತಹಶೀಲ್ದಾರ್‌ ಕಾಂತವೀರಯ್ಯ ಆಗಲೀ ಅಥವಾ ಸೋಮಶೇಖರಯ್ಯ ಅವರಾಗಲೀ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಗಮನಹರಿಸಲಿಲ್ಲ. ಉಳಿದ ಕೆರೆ ಮತ್ತು ಒತ್ತುವರಿ ತೆರವು ಕಾಯಾಚರಣೆ ಸ್ಥಗಿತಗೊಂಡಿದೆ. ಇದರಿಂದ ಕೆರೆ ಮತ್ತಿತರ ಸರ್ಕಾರಿ ಜಮೀನುಗಳಲ್ಲಿ ಮತ್ತಷ್ಟು ಒತ್ತುವರಿ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್‌  ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆರೆಗಳ ಒತ್ತುವರಿ ತೆರವುಗೊಳಿಸಿ: ಮುಳಬಾಗಿಲು ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಬಹುತೇಕ ಕೆರೆಗಳನ್ನು ಸರ್ವೇ ಮಾಡಿಸಿದ್ದರೂ ಅವುಗಳಿಗೆ ಆಗಲೇ ಕಾಲುವೆ ತೋಡಿ ಪೆನ್ಸಿಂಗ್‌ ಹಾಕದೇ ಬಿಟ್ಟಿದ್ದರು. ಅಲ್ಲದೇ, ಉಳಿದಿರುವ ಕೆರೆಗಳನ್ನು ಸರ್ವೇ ಮಾಡಿಸದೇ ಬಿಟ್ಟಿರುವ ಕಾರಣ ಬಹುತೇಕ ಕೆರೆಗಳಲ್ಲಿನ ಸಾಕಷ್ಟು ಜಮೀನು ಒತ್ತುವರಿಯಾಗಿದೆ. ತಾಲೂಕು ಆಡಳಿತ ಶೀಘ್ರ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕೆಂದು ಮುಖಂಡ ಗಣೇಶಪಾಳ್ಯ ಕೃಷ್ಣ ಒತ್ತಾಯಿಸಿದ್ದಾರೆ.

* ಎಂ.ನಾಗರಾಜಯ್ಯ 

Advertisement

Udayavani is now on Telegram. Click here to join our channel and stay updated with the latest news.

Next