Advertisement

ಪೂರ್ವ ಮುಂಗಾರು ನಿರ್ಗಮನ; ಶೇ. 78 ಮಳೆ ಕೊರತೆ

10:34 AM Jun 02, 2019 | Team Udayavani |

ಮಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ನಿರ್ಗಮನಗೊಂಡಿದ್ದು, ಮಳೆಗಾಲ ಪ್ರಾರಂಭಕ್ಕೆ ತಾಲೀಮು ಆರಂಭ ವಾಗಿದೆ. ಈ ಬಾರಿ ಶೇಕಡಾ 78ರಷ್ಟು ಮಳೆ ಕೊರತೆಯ ಸ್ಥಿತಿ ಕರಾವಳಿಯದು. ಈ ಸಲ ಮೂರ್‍ನಾಲ್ಕು ದಿನ ತಡವಾಗಿ ಅಂದರೆ, ಜೂನ್‌ ಮೊದಲ ವಾರಾಂತ್ಯಕ್ಕೆ ರಾಜ್ಯ ಕರಾವಳಿಗೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯಿದೆ.

Advertisement

ಕಳೆದ ಬಾರಿ ಮೇ 29ಕ್ಕೇನೇ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ಬಾರಿ ನಿಧಾನವಾಗಿದೆ. ಕರಾವಳಿಯಲ್ಲಿ ಈ ಬಾರಿ ಅತೀ ಕಡಿಮೆ ಮುಂಗಾರುಪೂರ್ವ ಮಳೆಯಾಗಿದೆ. ಕಳೆದ ಬಾರಿ ಶೇ. 87ರಷ್ಟು ಮಳೆ ಹೆಚ್ಚಳವಾಗಿದ್ದರೆ, ಈ ಬಾರಿ ಶೇ. 78ರಷ್ಟು ಮಳೆ ಕೊರತೆ ಇದೆ. ಕಳೆದ ಬಾರಿ ಪೂರ್ವ ಮುಂಗಾರು ವೇಳೆ ಮೊದಲ ಎರಡು ತಿಂಗಳು ಸಾಧಾರಣ ಮಳೆಯಾಗಿದ್ದರೂ ಮೇ ಕೊನೆಯಲ್ಲಿ ಭಾರೀ ಮಳೆಯಾಗಿತ್ತು.

ಈ ಬಾರಿಯೂ ಉತ್ತಮ ಮಳೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹುಸಿ ಯಾಗಿದೆ. ಕರಾವಳಿ ಪ್ರದೇಶದಲ್ಲಿ ಮಳೆಯಿಲ್ಲ, ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಮೂರ್ನಾಲ್ಕು ದಿನಗಳಿಂದ ಉಷ್ಣಾಂಶ ಏರಿಕೆಯಾಗುತ್ತಿದ್ದು, ಮಧ್ಯಾಹ್ನ ವೇಳೆಗೆ 37 ಡಿ.ಸೆ. ವರೆಗೆ ತಲುಪುತ್ತಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ಬಾರಿ ಮುಂಗಾರು ಜೂ. 5 ಅಥವಾ 6ರಂದು ಕೇರಳ ಕರಾವಳಿ ತೀರ ತಲುಪ ಬಹುದು. ಇದಾದ ಎರಡು ದಿನಗಳ ಬಳಿಕ ಅಂದರೆ ಜೂ. 8ರ ಹೊತ್ತಿಗೆ ಮುಂಗಾರು ಕರ್ನಾಟಕದ ಕರಾವಳಿಯನ್ನು ತಲುಪಬಹುದು. ಮುಂಗಾರು ಆಗಮನದ ವರೆಗೆ ಕರಾವಳಿ ಪ್ರದೇಶದಲ್ಲಿ ಬೆಳಗ್ಗಿನ ವೇಳೆ ಮೋಡ ಮುಸುಕಿದ ವಾತಾವರಣ ಇರಲಿದ್ದು, ಕೆಲವು ಕಡೆ ಮಳೆಯೂ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯಲ್ಲೇ ಹೆಚ್ಚು ಮಳೆ ಕೊರತೆ
ಈ ಬಾರಿಯ ಪೂರ್ವ ಮುಂಗಾರು ವೇಳೆ ರಾಜ್ಯದ ಕರಾವಳಿಯಲ್ಲಿ ಅತೀ ಕಡಿಮೆ ಮಳೆಯಾಗಿದೆ. ಜ. 1ರಿಂದ ಮೇ 31ರ ವರೆಗಿನ ಅಂಕಿ-ಅಂಶದ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ. 27ರಷ್ಟು, ಉತ್ತರ ಒಳನಾಡಿನಲ್ಲಿ ಶೇ. 64ರಷ್ಟು, ಮಲೆನಾಡಿನಲ್ಲಿ ಶೇ.57ರಷ್ಟು ಮತ್ತು ಕರಾವಳಿಯಲ್ಲಿ ಶೇ. 78ರಷ್ಟು ಮಳೆ ಕೊರತೆ ಇದೆ. ಒಟ್ಟಾರೆ ರಾಜ್ಯದಲ್ಲಿ ಶೇ. 52ರಷ್ಟು ಮಳೆ ಕೊರತೆ ಇದೆ. ವಾಡಿಕೆಯಂತೆ ಈ ಅವಧಿಯಲ್ಲಿ ಒಟ್ಟು 178 ಮಿ.ಮೀ. ಮಳೆಯಾಗಬೇಕಿದ್ದರೂ ಬಂದಿರುವುದು 38 ಮಿ.ಮೀ. ಮಾತ್ರ.

Advertisement

ಕ್ಷೀಣಿಸಿದ ಪೂರ್ವ ಮುಂಗಾರು
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪೂರ್ವ ಮುಂಗಾರು ಕ್ಷೀಣಿಸಿದೆ. ಕರಾವಳಿ ಸೇರಿದಂತೆ ರಾಜ್ಯದಲ್ಲಿ ವಾಡಿಕೆಯಂತೆ ಮಳೆ ಬಂದಿಲ್ಲ. ಸದ್ಯ ಪೂರ್ವ ಮುಂಗಾರು ಋತು ಪೂರ್ಣಗೊಂಡಿದೆ. ಮುನ್ಸೂಚನೆಯ ಪ್ರಕಾರ ಜೂ. 5-6ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಅಪ್ಪಳಿಸಲಿದೆ.
ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next