Advertisement

e-Procurement ಹ್ಯಾಕ್‌: ಪಂಜಾಬ್‌ ಮೂಲದ ಆರೋಪಿ ಸೆರೆ

02:46 PM Oct 06, 2023 | Team Udayavani |

ಬೆಂಗಳೂರು: ಐಪಿಎಸ್‌ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಲ್ಲಿ ಆತಂಕ ಉಂಟು ಮಾಡಿದ್ದ ಬಿಟ್‌ಕಾಯಿನ್‌ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ತಂಡ, ಈ ಹಿಂದೆ ಇ-ಪ್ರಕ್ಯೂರ್‌ವೆುಂಟ್‌(ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್‌) ಹ್ಯಾಕ್‌ ಮಾಡಿ ವಂಚಿಸಿದ ಪ್ರಕರಣದಲ್ಲಿ ಮತ್ತೂಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

ಪಂಜಾಬ್‌ ಮೂಲದ ಅರವಿಂದರ್‌ ಸಿಂಗ್‌ (32) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದ ಕಿಂಗ್‌ಪಿನ್‌ ಹಾಗೂ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯ ಸಹಚರನಾಗಿದ್ದು, ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ವೆುಂಟ್‌ ವೆಬ್‌ ಸೈಟ್‌ ಹ್ಯಾಕ್‌ ಮಾಡಿ ವಂಚಿಸಿದ ಹಣವನ್ನು ಶ್ರೀಕಿ ಸೂಚನೆ ಮೇರೆಗೆ ಅರವಿಂದರ್‌ ಸಿಂಗ್‌ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದ.

ಬಳಿಕ ಅದನ್ನು ಹವಾಲಾ ಮೂಲಕ ಬೇರೆ ಬೇರೆ ಉದ್ಯಮಿಗಳು, ವ್ಯಾಪಾರಿಗಳ ಖಾತೆಗೆ ವರ್ಗಾವಣೆ ಮಾಡಿ ಬಳಿಕ, ಶ್ರೀಕಿಗೆ ಬಿಳಿ ಹಣವಾಗಿ ಪರಿವರ್ತಿಸಿ ವಾಪಸ್‌ ನೀಡಿದ್ದ. ಅದಕ್ಕಾಗಿ ಕಮಿಷನ್‌ ಪಡೆದುಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಟೆಂಡರ್‌ಗಳಿಂದ ಬಂದ ಹಣ ಸಿಂಗ್‌ ಖಾತೆಗೆ:

ರಾಜ್ಯ ಸರ್ಕಾರ ತನ್ನ ವ್ಯವಹಾರದ ಹಣವನ್ನು ಜಮೆ ಮಾಡಲು ಹಾಗೂ ನಿರ್ವಹಣೆಗಾಗಿ ಇ-ಪ್ರೊಕ್ಯೂರ್‌ವೆುಂಟ್‌ ವೆಬ್‌ಸೈಟ್‌ ಅಭಿವೃದ್ಧಿ ಪಡಿಸಿದೆ. ನಾಲ್ಕೂವರೆ ವರ್ಷಗಳ ಹಿಂದೆ ಇದೇ ವೆಬ್‌ಸೈಟ್‌ ಅನ್ನು ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹ್ಯಾಕ್‌ ಮಾಡಿ, ಟೆಂಡರ್‌ಗಳಿಂದ ಬಂದ ಕೋಟ್ಯಂತರ ರೂ. ಅನ್ನು ಅರವಿಂದರ್‌ ಸಿಂಗ್‌ ಖಾತೆಗಳಿಗೆ ವರ್ಗಾವಣೆ ಮಾಡಿಸಿದ್ದ. ಬಳಿಕ ಆತನಿಂದ ವಾಪಸ್‌ ಪಡೆದು ಇದೇ ಹಣದಿಂದ ತನ್ನ ಪ್ರೇಯಸಿ ಹಾಗೂ ಸ್ನೇಹಿತರ ಜತೆ ದೇಶ-ವಿದೇಶಗಳ ಪ್ರವಾಸ ಮಾಡಿ, ಐಷಾರಾಮಿ ಜೀವನಕ್ಕೆ ವ್ಯಯಿಸಿದ್ದಾನೆ ಎಂಬುದು ಗೊತ್ತಾಗಿದೆ.

Advertisement

ಉದ್ಯಮಿಗಳು, ವ್ಯಾಪಾರಿಗಳ ಆಪ್ತ:

ಇನ್ನು ಅರವಿಂದರ್‌ ಸಿಂಗ್‌, ಪಂಜಾಬ್‌ ಸೇರಿ ನೆರೆ ರಾಜ್ಯಗಳ ಉದ್ಯಮಿಗಳು, ವ್ಯಾಪಾರಿಗಳ ಆಪ್ತನಾಗಿದ್ದಾನೆ. ಅವರ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡಿಕೊಡುತ್ತಿದ್ದ. ಅದಕ್ಕೆ ಇಂತಿಷ್ಟು ಕಮಿಷನ್‌ ಪಡೆಯುತ್ತಿದ್ದ. ಹೀಗಾಗಿ ಶ್ರೀಕಿ ಈತನ ಜತೆ ಸ್ನೇಹ ಬೆಳೆಸಿದ್ದ. ತನ್ನ ಅಕ್ರಮ ವ್ಯವಹಾರಕ್ಕೆ ಅರವಿಂದರ್‌ ಸಿಂಗ್‌ನನ್ನು ಬಳಸಿಕೊಂಡಿದ್ದಾನೆ.

ಶ್ರೀಕಿಯ ಹೇಳಿಕೆ ಮೇಲೆ ಆರೋಪಿ ಸೆರೆ:

ಇ-ಪ್ರಕ್ಯೂರ್‌ವೆುಂಟ್‌ ಹ್ಯಾಕ್‌ ಪ್ರಕರಣ ಹಾಗೂ ಬಿಟ್‌ಕಾಯಿನ್‌ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿ ಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ಶ್ರೀಕಿಯ ವಿಚಾರಣೆ ವೇಳೆ ಆತನ ಹೆಸರು ಬಾಯಿಬಿಟ್ಟಿದ್ದ. ಹೀಗಾಗಿ ಆರೋಪಿಯನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಇ-ಪ್ರಕ್ಯೂರ್‌ವೆುಂಟ್‌ ವೆಬ್‌ಸೈಟ್‌ ಹ್ಯಾಕ್‌ ಹಾಗೂ ವಂಚನೆ ಕುರಿತು ಸಿಐಡಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next