Advertisement
ಹೀಗೆ ಪ್ರಾಥಮಿಕ ಶಾಲೆಯಿಂದಲೇ ಇಂತಹ ಸಾಂಪ್ರದಾಯಿಕ ಸೊಗಸಿನ ಆಚರಣೆಗಳಲ್ಲಿ ನಮ್ಮ ಬಾಲ್ಯವನ್ನು ಕಳೆದೆವು ಎನ್ನುವಾಗ ಹೆಮ್ಮೆಯೆನಿಸುತ್ತದೆ. ತರಗತಿಯಲ್ಲಿ ಪಾಠ ಮಾಡುವಾಗಲೂ ನಡುವೆ ನಮ್ಮ ಮೇಷ್ಟ್ರುಗಳು ಹಬ್ಬಗಳ ಕುರಿತು, ಅದರ ಆಚರಣೆ, ಹಬ್ಬಗಳ ವೈಶಿಷ್ಟಗಳ ಕುರಿತು ನಮಗೆ ಮನಮುಟ್ಟುವಂತೆ ಹೇಳುತ್ತಿದ್ದರು. ಮೈಸೂರು ಚರಿತ್ರೆಯ ಪಾಠ ಮಾಡುವಾಗ ದಸರಾ ಹಬ್ಬದ ಬಗ್ಗೆ ಹೇಳಿದುದು, ಅದು ನಮ್ಮ ನಾಡಹಬ್ಬ ಹೇಗೆ? ಅದಕ್ಕೆ ನವರಾತ್ರಿ ಎಂಬ ಹೆಸರು ಬರಲು ಏನು ಕಾರಣವೇನೆಂದು ಅದರ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ್ದು ನನಗೆ ಇನ್ನೂ ನೆನಪಿದೆ. ಮೇಷ್ಟು ದಸರಾ ಬಗ್ಗೆ ಹೇಳುತ್ತ¤, ದಸರಾ ನಮ್ಮ ನಾಡಹಬ್ಬ. ನವರಾತ್ರಿ ಎಂದರೆ ಚಾಮುಂಡೇಶ್ವರಿ, ದುರ್ಗಾದೇವಿಯು ಮಹಿಷಾಸುರ ಮರ್ದಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆಮೀರಿ ಎಲ್ಲೆಡೆ ಅನ್ಯಾಯವು ಅತಿಯಾಗಿ ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ಈ ದುರ್ಗಾ ಮಾತೆ. ಈ ಜಗನ್ಮಾತೆಯನ್ನು ನವವಿಧವಾಗಿ ವಿಶೇಷ ರೀತಿಯಲ್ಲಿ ಪೂಜಿಸುವುದೇ ನವರಾತ್ರಿಯ ವೈಶಿಷ್ಟéವೆಂದು ಹೇಳಿದುದು ಇನ್ನೂ ನೆನಪಿನಂಗಳದಲ್ಲಿ ಹುದುಗಿಹೋಗಿದೆ. ಅಂದಿನ ಅವರ ಆ ಕಥೆಗಳನ್ನು ಇಂದು ನಮ್ಮ ಮಕ್ಕಳಿಗೆ ಹೇಳುವ ಕೆಲಸವನ್ನು ನಾವು ಮಾಡಬೇಕಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕಗಳಾದ ಹಬ್ಬಗಳ ಆಚರಣೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾಗಿದೆ.
ಈಗ ನವರಾತ್ರಿ ಮತ್ತೆ ಬಂದಿದೆ. ಮಳೆ ಕಡಿಮೆಯಾಗಿದೆ. ಎಲ್ಲೆಲ್ಲೂ ಭೂಮಿಯು ಹಸುರಿನಿಂದ ಕಂಗೊಳಿಸಿ ಹೊಚ್ಚಹೊಸದಾಗಿ ನಳನಳಿಸುತ್ತಿರುವುದರಿಂದ ನವರಾತ್ರಿಗೆ ಒಂದು ಹೊಸ ಅರ್ಥ ಹುಟ್ಟಿಕೊಳ್ಳುತ್ತದೆ. ನವರಾತ್ರಿ ದುರ್ಗೆಯನ್ನು ಪೂಜಿಸಲು ಇದು ಪರ್ವಕಾಲ. ನವ ಎಂಬುದಕ್ಕೆ ಒಂಬತ್ತು ಎಂಬರ್ಥವಿದೆ. ಹೊಸದು ಎಂಬ ಮತ್ತೂಂದರ್ಥವೂ ಇದೆ. ಒಂಬತ್ತು ದಿನಗಳು ನಡೆಯುವ ಈ ಸಂಭ್ರಮ ನಮ್ಮ ದೇಶಾದ್ಯಂತ ಶಕ್ತಿಸ್ವರೂಪಿಣಿಯಾದ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಹಾಗೆ ನೋಡಿದರೆ, ದೇವಿಯ ಪೂಜೆಯ ಆಚರಣೆ ಹಿಂದೂ ಧರ್ಮದಲ್ಲಿ ವೇದಗಳ ಕಾಲದಿಂದಲೂ ಬಂದಿದ್ದರೂ ನವರಾತ್ರಿಯಲ್ಲಿ ಅವಳ ಪೂಜೆ-ಆರಾಧನೆ ವಿಶೇಷವಾದುದೆನ್ನಬಹುದು. ಶ್ರೀ ದುರ್ಗಾಪೂಜೆ, ದೀಪ ನಮಸ್ಕಾರ, ಚಂಡಿಕಾಹವನ, ಸರಸ್ವತೀ-ಲಕ್ಷ್ಮೀಪೂಜೆಯ ವಿಶೇಷ ಆರಾಧನಾ ವಿಧಾನಗಳು. ನವರಾತ್ರಿಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ, ನಮ್ಮ ದೇಶದ ಅನೇಕ ರಾಜ್ಯಗಳಲ್ಲಿನ ಜನರು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಹಾರಾಷ್ಟ್ರ , ಗುಜರಾತ್, ನೇಪಾಳ, ಪಶ್ಚಿಮ ಬಂಗಾಲಗಳಲ್ಲಿ ಅವರದ್ದೇ ಆದ ವಿಶಿಷ್ಟ ರೀತಿಯಲ್ಲಿ ಆಚರಣೆ ನಡೆಯುತ್ತದೆ. ಗುಜರಾತಿನಲ್ಲಿ ಸಾಂಪ್ರದಾಯಿಕ ದಾಂಡಿಯಾ, ಗರ್ಭಾ ನೃತ್ಯವೂ ಅತ್ಯಂತ ಜನಪ್ರಿಯ. ಈ ನೃತ್ಯಗಳಿಗೆ ಧಾರ್ಮಿಕ ಹಾಗೂ ಭಾವಭಕ್ತಿಯ ವೈಭವ ಹೆಚ್ಚು. ನವರಾತ್ರಿಯಲ್ಲಿ ವಿಶೇಷವಾಗಿ, ತಂದೆ-ತಾಯಿ ಅಕ್ಷರ ಕಲಿಯಲು ಹೊರಟ ಮಕ್ಕಳನ್ನು ಕರೆದುಕೊಂಡು ಸರಸ್ವತಿ ಮಂದಿರಗಳಿಗೆ ತೆರಳಿ ಅಕ್ಷರಾಭ್ಯಾಸ ಮಾಡಿಸಿಕೊಂಡು ಬರುವ ವಾಡಿಕೆಯೂ ಇದೆ.
Related Articles
Advertisement
ತುಳುನಾಡಿನ ನವರಾತ್ರಿತುಳುನಾಡಿನಲ್ಲಿ ನವರಾತ್ರಿಯನ್ನು “ಮಾರ್ನೆಮಿ’ಯೆಂದು ಕರೆಯಲಾಗುತ್ತದೆ. ಹಳ್ಳಿಹಳ್ಳಿಯ ಮೂಲೆ ಮೂಲೆಯಲ್ಲಿ ಇರುವ ದೇವಿಯ ದೇವಾಲಯಗಳಲ್ಲಿ ದುರ್ಗಾಮಾತೆಯ ಆರಾಧನೆ ನಡೆಯುತ್ತದೆ. ಕೆಲವರ ಮನೆಗಳಲ್ಲಿ ಒಂಬತ್ತು ದಿನಗಳಲ್ಲಿ ಒಂದು ದಿನ ಅಥವಾ ಎಲ್ಲಾ ದಿನಗಳಲ್ಲಿ ದೇವಿಯ ವಿಗ್ರಹವಿಟ್ಟು ಪೂಜಿಸುವುದಿದೆ. ಪ್ರತಿ ಸಂಜೆ ಕುಟುಂಬಸ್ಥರನ್ನು, ನೆರೆಹೊರೆಯವರನ್ನು ಕರೆದು ಭಜನೆ ಮಾಡುತ್ತಾರೆ. ನವರಾತ್ರಿಯನ್ನು ಹೀಗೇ ಆಚರಿಸಬೇಕೆಂದೇನೂ ನಿಯಮವಿಲ್ಲ. ಭಕ್ತಿಯಿಂದ ದೇವಿಯನ್ನು ಪೂಜಿಸಿದರೆ ಸಾಕು, ಮನಸ್ಸಿನಲ್ಲೇ ನೆನೆದರೂ ಅಷ್ಟೇ ಸಾಕು. ಆಕೆ ನಮ್ಮನ್ನು ಕಾಪಾಡುತ್ತಾಳೆ. ಇಲ್ಲಿ ನಂಬಿಕೆ ಮುಖ್ಯ. ಇವತ್ತು ನಾವು ವಿಚಿತ್ರವಾದ ಕಾಲಘಟ್ಟದಲ್ಲಿದ್ದೇವೆ. ಹೆಣ್ಣಿನ ಮೇಲೆ ಅತ್ಯಾಚಾರವಿಲ್ಲದ ದಿನವೇ ಇಲ್ಲ. ಕಾಲ ಇಷ್ಟೊಂದು ಮುಂದುವರಿದರೂ ಮನುಷ್ಯತ್ವಕ್ಕೆ ಮಸುಕು ಕವಿದಿರುವುದು ಸಂಕಟದ ಸಂಗತಿ. ಹೆಣ್ಣುಮಕ್ಕಳು ಭಯದಿಂದ ಸಂಚರಿಸುವ ದಿನಗಳಿವು. ಮತ್ತೂಂದೆಡೆ, ಶಬರಿಮಲೆಗೆ ಹೆಣ್ಣಿನ ಪ್ರವೇಶ ಪ್ರವೇಶ ತಪ್ಪೋ ಸರಿಯೋ ಎಂಬ ಚರ್ಚೆ ನಡೆಯುತ್ತಿದೆ. ಸುಪ್ರೀಂಕೋರ್ಟಿನ ಪ್ರವೇಶವಾಗಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿ ಮೂರು ಸಂಗತಿಗಳಿವೆ. ಒಂದು, ಹೆಣ್ಣು ಕೂಡ ಮನುಷ್ಯಳೇ ಆಗಿರುವುದರಿಂದ ಆಕೆಗೆ ದೇವಸ್ಥಾನಕ್ಕೆ ಪ್ರವೇಶ ತಪ್ಪಲ್ಲ ಎಂಬುದು. ಹೆಣ್ಣಿನಂಥ ದೇಹದಲ್ಲಾಗುವ ಬದಲಾವಣೆಗಳಂತೆಯೇ ಗಂಡಿನಲ್ಲಿಯೂ ಬದಲಾವಣೆಗಳಾಗುವುದಿಲ್ಲವೆ ಎಂಬುದು ಒಂದು ಪ್ರಶ್ನೆ. ಎರಡನೆಯದಾಗಿ, ದೇವಸ್ಥಾನ ಎಂಬುದು ನಂಬಿಕೆಯ ಮೇಲೆ ನಿಂತಿರುವ ಜಾಗವಾಗಿರುವುದರಿಂದ ಅಲ್ಲಿ ನಂಬಿಕೆಗೆ ದ್ರೋಹ ಬಗೆಯಬಾರದು. ಹೆಣ್ಣುಗಳು ತಾವೇ ದೇವಸ್ಥಾನಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಿದಲ್ಲಿ ಕೋರ್ಟಿನ ತೀರ್ಪಿಗೆ ಏನು ಬೆಲೆಯಿದೆ? ಮೂರನೆಯದಾಗಿ, ದೇವಸ್ಥಾನವೇ ದೇವರ ತಾಣವೆಂದು ಏಕೆ ಭಾವಿಸಬೇಕು? ನೀವು ನಿಂತಲ್ಲಿಯೇ ನಮಸ್ಕಾರ ಮಾಡಿದರೆ ಅದು ದೇವರಿಗೆ ತಲುಪುತ್ತದೆ. ಹಾಗಿರುವಾಗ ದೇವಸ್ಥಾನಕ್ಕೆ ಹೋಗಲೇಬೇಕೆಂಬ ಹಠ ಹೆಣ್ಣುಮಕ್ಕಳಿಗೇಕೆ? ತಾವು ನಾವಿದ್ದಲ್ಲಿಯೇ ದೇವರಿಗೆ ನಮಸ್ಕರಿಸುತ್ತೇವೆ ಎಂದು ಭಾವಿಸುವ ಹೆಣ್ಣುಮಕ್ಕಳನ್ನು ಮತ್ತೆ ಅಪನಂಬಿಕೆಯ ಕೂಪಕ್ಕೆ ತಳ್ಳಿದಂತಾಗಲಿಲ್ಲವೆ, ಈ ತೀರ್ಪಿನಿಂದ? ನವರಾತ್ರಿ ಎಂದರೆ ಹೆಣ್ಣುದೇವರ ಪೂಜೆ. ಹೆಣ್ಣಿನ ಕುರಿತ ಸಮಕಾಲೀನ ಚರ್ಚಾಸಂಗತಿಗಳೆಲ್ಲ ನವರಾತ್ರಿ ಕಾಲದಲ್ಲಿ ಮುನ್ನೆಲೆಗೆ ಬಂದಿರುವುದು ಅನುಚಿತವೇನೂ ಅಲ್ಲ. ಏನೇ ಇರಲಿ, ಮಹಿಳೆ ಸ್ವಾಭಿಮಾನದ ಬದುಕನ್ನು ನಡೆಸಲು ನವರಾತ್ರಿ ಪ್ರೇರಣೆ ನೀಡಲಿ. ಸ್ವಾತಿ ಎನ್.